ಲಕ್ಷ್ಮೇಶ್ವರ ಪುರಸಭೆಗೆ ಕರ ತುಂಬದೆ ಬಾಕಿ ಉಳಿಸಿಕೊಂಡವರ ಮನೆ, ಅಂಗಡಿ, ಫ್ಯಾಕ್ಟರಿಗಳಿಗೆ ಭೇಟಿ ನೀಡುತ್ತಿರುವ ಪುರಸಭೆ ಸಿಬ್ಬಂದಿ ಕರ ವಸೂಲಿ ಮಾಡುತ್ತಿದ್ದಾರೆ. ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ನೇತೃತ್ವದಲ್ಲಿ ಕರವಸೂಲಿ ಕೆಲಸ ನಡೆಯುತ್ತಿದೆ.
ಜಿನ್ನಿಂಗ್ ಫ್ಯಾಕ್ಟರಿ, ಶೇಂಗಾ ಮಿಲ್, ಎಪಿಎಂಸಿ ಉಗ್ರಾಣ, ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ನಿವಾಸಗಳು, ಪ್ರವಾಸಿ ಮಂದಿರ, ಕೆಎಸ್ಆರ್ಟಿಸಿ ಸಿಬ್ಬಂದಿ ನಿವಾಸಗಳು, ಕಲ್ಯಾಣ ಮಂಟಪಗಳು ಸೇರಿದಂತೆ ಮತ್ತಿತರ ಮೂಲಗಳಿಂದ ಒಂದು ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಕರ ಬರುವುದು ಬಾಕಿ ಇದೆ.
ಇದಕ್ಕಾಗಿ ಸಿಬ್ಬಂದಿ ಪ್ರತಿದಿನ ಸಂಬಂಧಿಸಿದವರನ್ನು ಭೇಟಿ ಆಗುತ್ತಿದ್ದಾರೆ. ಆದ್ದರಿಂದ ಎಲ್ಲರೂ ಸರಿಯಾದ ಸಮಯಕ್ಕೆ, ಸರಿಯಾಗಿ ಕರ ತುಂಬಿ ಊರಿನ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ತಿಳಿಸಿದ್ದಾರೆ.