ರಾಜ್ಯ ರಾಜಧಾನಿ ಬೆಂಗಳೂರಿನ ಮಲ್ಲೇಶ್ವರದಲ್ಲಿ ಕಾಡುಮಲ್ಲೇಶ್ವರ ಗೆಳೆಯರ ಬಳಗವು ಮುಜರಾಯಿ ಇಲಾಖೆಯ ಸಹಕಾರದಲ್ಲಿ 7ನೇ ವರ್ಷದ ಕಡಲೆಕಾಯಿ ಪರಿಷೆ ಆಯೋಜನೆ ಮಾಡಿದ್ದು, ಈ ಪರಿಷೆ ಡಿ.2 ರಿಂದ ಡಿ.4 ರವರೆಗೆ ನಡೆಯಲಿದೆ.
ಬೆಂಗಳೂರಿನ ಮಲ್ಲೇಶ್ವರಂ 15ನೇ ಕ್ರಾಸ್ನಲ್ಲಿರುವ ಶ್ರೀ ಕಾಡುಮಲ್ಲೇಶ್ವರ ದೇವಾಲಯದಲ್ಲಿ ಕಾರ್ತಿಕ ಮಾಸದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಮೂರು ದಿನ ಕಡಲೆಕಾಯಿ ಪರಿಷೆ ಮತ್ತು ಬಯಲು ರಂಗ ಮಂಟಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ನ.27 ರಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಕಾಡು ಮಲ್ಲೇಶ್ವರ ಗೆಳೆಯರ ಬಳಗದ ಅಧ್ಯಕ್ಷ ಬಿ.ಕೆ. ಶಿವರಾಂ ಮಾತನಾಡಿ, ”ಮೂರು ದಿನಗಳ ಕಾಲ ಅಂದರೇ, ಡಿ.2 ರಿಂದ ಡಿ.4 ರವರಗೆ ಮಲ್ಲೇಶ್ವರಂನ ಕಾಡುಮಲ್ಲೇಶ್ವರದಲ್ಲಿ 7ನೇ ವರ್ಷದ ಕಡಲೆಕಾಯಿ ಪರಿಷೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. 800 ಕೆಜಿ ಕಡಲೆಕಾಯಿಗಳಿಂದ ಶೃಂಗರಿಸಿದ 20 ಎತ್ತರ 20 ಉದ್ದದ ನಂದಿಯನ್ನು ಇಡಲಾಗುತ್ತದೆ” ಎಂದು ಹೇಳಿದರು.
”ಮಲ್ಲೇಶ್ವರಂ ಕಡಲೆಕಾಯಿ ಪರಿಷೆಗೆ ತಮಿಳುನಾಡು, ಆಂಧ್ರ, ತೆಲಂಗಾಣ ಹಾಗೂ ನಮ್ಮ ರಾಜ್ಯದಿಂದ ನೂರಾರು ರೈತರು ಕಡಲೆಕಾಯಿ ಪರಿಷೆಯಲ್ಲಿ ಭಾಗವಹಿಸಲಿದ್ದಾರೆ. 200 ಮಳಿಗೆಗಳಲ್ಲಿ ರೈತರು ಬೆಳೆದ ಕಡಲೆಕಾಯಿ ಮತ್ತು ತರಕಾರಿ ಕರಕುಶಲ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಪ್ಲಾಸ್ಟಿಕ್ ಮುಕ್ತಕ್ಕೆ ಜನರು ಸಹಕಾರ ನೀಡಬೇಕು” ಎಂದು ತಿಳಿಸಿದರು.
”ಪರಿಷೆಗೆ ಬಂದ ಜನರಿಗೆ ಪ್ರಸಾದದ ರೂಪದಲ್ಲಿ ಕಡಲೆಕಾಯಿ ವಿತರಿಸಲಾಗುವುದು. ಈ ವರ್ಷದ ಕಡಲೆಕಾಯಿ ಪರಿಷೆಯಲ್ಲಿ ಸರಿಸುಮಾರು 8 ಲಕ್ಷ ಜನ ಪಾಲ್ಗೊಳ್ಳಲಿದ್ದಾರೆ” ಎಂದು ಹೇಳಿದರು.
”ಡಿ.2ರಂದು ಬೆಳಗ್ಗೆ 11 ಗಂಟೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಮುಜರಾಯಿ ಮತ್ತು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಶಾಸಕರಾದ ಮುನಿರತ್ನ, ಡಾ.ಸಿ.ಎನ್. ಅಶ್ವತ್ಥ್ ನಾರಾಯಣ್ ಅವರು ಕಡಲೆಕಾಯಿ ಪರಿಷೆ ಉದ್ಘಾಟಿಸಲಿದ್ದಾರೆ. ಮಲ್ಲೇಶ್ವರಂ ಕಡಲೆಕಾಯಿ ಪರಿಷೆಯಲ್ಲಿ ಪರಿಸರ ಉಳಿಸಿ, ಬೆಳಸಲು ಹಸಿರು ಚೈತನ್ಯೋತ್ಸವ ಮೂಲಕ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ” ಎಂದರು.
ಡಿ.2 ರಂದು ಸಾಯಂಕಾಲ ಜಿತ್ವಾವನ ಮಹಿಳಾ ಯಕ್ಷಗಾನ ಮಂಡಳಿ ಶೈಲಜಾ ಜೋಶಿ ಮತ್ತು ತಂಡದವರಿಂದ ಯಕ್ಷಗಾನ ನಡೆಯಲಿದೆ.
ಡಿಸೆಂಬರ್ 3ರಂದು ಬೆಳಗ್ಗೆ 11.30ಕ್ಕೆ ಪಂಚಮ ಸಂಗೀತ ತಂಡ ಎಲ್. ಶಿವಕುಮಾರ್ ಮತ್ತು ತಂಡದವರಿಂದ ಸುಗಮ ಸಂಗೀತ ಇರಲಿದೆ. ಸಾಯಂಕಾಲ ಮಧು ಮನೋಹರ್ ಮತ್ತು ಕಾರ್ತಿಕ್ ಪಾಂಡವಪುರ ತಂಡದವರಿಂದ ಗಾನ ಗಂಧರ್ವ ಕರ್ನಾಟಕ ರತ್ನ ಡಾ.ರಾಜ್ ಕುಮಾರ್ ಸವಿ ನೆನಪಿನಲ್ಲಿ ಮಧುರ ನೆನಪಿನಗಾನ ನಡೆಯಲಿದೆ. ನವಯುವ ಹೋಟೆಲ್ ಮಾಲೀಕರಾದ ಮೋಹನ್ ರಾವ್ ಮುಖ್ಯ ಅತಿಥಿಗಳಾಗಿ ಉಪಸ್ಥಿತಿ ಇರಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ನ.27 ರಿಂದ ನ.29ರವರೆಗೆ ರಾಜ್ಯದ ನಾನಾ ಕಡೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ
ಡಿ.4 ರಂದು ಬೆಳಗ್ಗೆ 9.30ಕ್ಕೆ ಕಾಡುಮಲ್ಲಿಕಾರ್ಜುನ ಸ್ವಾಮಿಗೆ ಕಡಲೆಕಾಯಿ ಅಭಿಷೇಕ ಹಾಗೂ ಪ್ರಸಾದ ವಿನಿಯೋಗ ಇರಲಿದೆ. ಸಂಜೆ 6.30ಕ್ಕೆ ಭವಾನಿ ಗಾನ ವೃಂದದವರಿಂದ ವಿದೂಷಿ ಶೈಲಜ ಶ್ರೀನಾಥ್ ಮತ್ತು ತಂಡದವರಿಂದ ಶಿವ ವೀಣಾ ಗಾನ ಸಂಗಮ ನಡೆಯಲಿದೆ. ವಿದ್ಯಾಮಂದಿರ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎನ್. ಬಾಬು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ವೇಳೆ, ಕಾಂಗ್ರೆಸ್ ಪಕ್ಷದ ಮುಖಂಡರಾದ ಅನೂಪ್ ಅಯ್ಯಂಗಾರ್, ಸಮಾಜ ಸೇವಕ ಚಂದ್ರಶೇಖರ್ ನಾಯ್ಡು, ಹಿಮಾಂಶು ಶಾಲೆಯ ಪ್ರಾಂಶುಪಾಲರಾದ ಚಂದ್ರಮೌಳಿ, ಅರ್ಚಕರಾದ ಗಂಗಾಧರ್ ದೀಕ್ಷಿತ್, ಶಶಿಧರ್ ರವರು ಉಪಸ್ಥಿತರಿದ್ದರು.