ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹೆಡಿಯಾಲ ಅರಣ್ಯ ವಲಯದ ಬಳ್ಳೂರುಹುಂಡಿಯಲ್ಲಿ ಮಹಿಳೆಯನ್ನು ಬಲಿ ಪಡೆದಿದ್ದ 10 ವರ್ಷದ ಗಂಡು ಹುಲಿ ಮಂಗಳವಾರ ಬೆಳಿಗ್ಗೆ ಸೆರೆಯಾಗಿದೆ.
ಬಳ್ಳೂರುಹುಂಡಿ ಗ್ರಾಮದ ಕಲ್ಲಹಾರಖಂಡಿ ಎಂಬ ಸ್ಥಳದಲ್ಲಿ ಹಸುವಿನ ಕಳೇಬರ ತಿನ್ನಲು ಬಂದಾಗ ಅರಿವಳಿಕೆ ತಜ್ಞ ಡಾ.ವಾಸೀಂ ಅವರು ನೀಡಿದ ಅರಿವಳಿಕೆಗೆ ಹುಲಿ ಬಿದ್ದಿದೆ. ಬಲೆ ಹಾಕಿ ಹಿಡಿದು, ಮೈಸೂರಿನ ಪುನರ್ ವಸತಿ ಕೇಂದ್ರಕ್ಕೆ ರವಾನೆ ಮಾಡಿದ್ದಾರೆ.
ಎರಡು ದಿನಗಳ ಹಿಂದಷ್ಟೇ ಹಸುವನ್ನು ಕೊಂದಿದ್ದ ಜಾಗದಲ್ಲಿ ಅರಣ್ಯ ಇಲಾಖೆ ಕ್ಯಾಮೆರಾ ಅಳವಡಿಸಿತ್ತು. ಕೊಂದಿದ್ದ ಹಸುವನ್ನು ತಿನ್ನಲು ಹುಲಿ ಬರುವ ನಿರೀಕ್ಷೆಯಲ್ಲಿ ಬೋನು ಇರಿಸಿದ್ದರು. ಅದರಲ್ಲಿ ಡಾ. ವಾಸೀಂ ಹಾಗೂ ಅರಣ್ಯ ಸಿಬ್ಬಂದಿ ಬೋನಿನ ಒಳಗೆ ಕಾಯ್ದು ಕುಳಿತಿದ್ದರು.
“ಸತ್ತ ಜಾನುವಾರು ತಿನ್ನಲು ಬಂದಾಗ ಅರೆವಳಿಕೆ ನೀಡಿ ಸೆರೆ ಹಿಡಿಯಲಾಗಿದೆ” ಎಂದು ಕಾರ್ಯಾಚರಣೆ ನೇತೃತ್ವ ವಹಿಸಿದ್ದ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ರಮೇಶ್ ಕುಮಾರ್ ತಿಳಿಸಿದ್ದಾರೆ.
ಹುಲಿಯ ಸೆರೆಗೆ ಅರಣ್ಯ ಇಲಾಖೆಯು ಮೂರು ದಿನಗಳಿಂದ ಕೂಂಬಿಂಗ್ ಕಾರ್ಯಾಚರಣೆ ನಡೆಸಿತ್ತು. ಸಾಕಾನೆಗಳಾದ ಪಾರ್ಥಸಾರಥಿ, ರೋಹಿತ, ಹಿರಣ್ಯ ಜೊತೆಗೆ ಅರಣ್ಯ ಇಲಾಖೆಯ 12 ಅಧಿಕಾರಿಗಳು ಹಾಗೂ 195 ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ನಾಗಣಾಪುರ, ಡೋರನಕಟ್ಟೆ, ವೆಂಕಟಗಿರಿ ಹಾಗೂ ವಡೆಯನಪುರ ಕಾಲನಿಗಳ ತಲಾ 25 ಮಂದಿ ಗಿರಿಜನರೂ ನರಹಂತಕ ಹುಲಿಯ ಸೆರೆಗೆ ಶ್ರಮಿಸಿದ್ದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಅಕ್ರಮವಾಗಿ ನಿವೇಶನ ಮಾರಾಟ; ಖಾಲಿ ಜಾಗದಲ್ಲಿ ಗುಡಿಸಲು ಹಾಕಿ ಸ್ಥಳೀಯರ ಧರಣಿ
ವಿಶೇಷ ಹುಲಿ ಸಂರಕ್ಷಣಾ ದಳ, ಚಿರತೆ ಕಾರ್ಯಪಡೆ ಹಾಗೂ ಆನೆ ಕಾರ್ಯಪಡೆಗಳ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿದ್ದರು. 50 ಸಿ–1 ಕ್ಯಾಮೆರಾ ಹಾಗೂ 5 ಜಿಎಸ್ಎಂ ಕ್ಯಾಮೆರಾಗಳು, ಅಗತ್ಯ ಔಷಧಿ, 10 ವಾಹನಗಳನ್ನು ಬಳಸಲಾಗಿತ್ತು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಕೆ. ಪರಮೇಶ್, ಕೆ ಆರ್ ನಾರಾಯಣ, ಡಿ ಶ್ರೀನಿವಾಸ, ಅಮೃತ ಮಾಯಪ್ಪನವರ ಹಾಗೂ ಪಶು ವೈದ್ಯಾಧಿಕಾರಿ ವಾಸೀಂ ಇದ್ದರು.