ಪ್ರತಿ ವಿದ್ಯಾರ್ಥಿಯೂ ಸಮಾಜದ ಪ್ರಗತಿಗಾಗಿ ಚಿಂತಿಸಬೇಕು. ಸಮಾಜದಲ್ಲಿನ ಅನೇಕ ಸವಾಲುಗಳನ್ನು ಎದುರಿಸಲು ನಿರಂತರವಾದ ಅಭ್ಯಾಸ ಮತ್ತು ಹೋರಾಟವನ್ನು ಮೈಗೂಡಿಸಿಕೊಳ್ಳಬೇಕು. ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸಿದ ಅಂಬೇಡ್ಕರ ಮತ್ತು ಸಾವಿತ್ರಿಬಾಯಿ ಫುಲೆಯವರಂತವರ ಸ್ಫೂರ್ತಿ ಪಡೆಯಬೇಕು ಎಂದು ಎಸ್ಎಫ್ಐ ಮುಖಂಡೆ ರೇಣುಕಾ ಕಹಾರ ಹೇಳಿದ್ದಾರೆ.
ಹಾವೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ವಿದ್ಯಾರ್ಥಿನಿಯರ ಸಮಾವೇಶದಲ್ಲಿ ಅವರು ಮಾತನಾಡಿದರು. “ಸಾಮಾಜಿಕ ಜಾಲತಾಣಗಳಂತಹ ವ್ಯವಸ್ಥೆಗಳನ್ನು ಅವಶ್ಯಕ್ಕೆ ತಕ್ಕಂತೆ ಬಳಸಬೇಕು ಮತ್ತು ಪತ್ರಿಕೆಗಳನ್ನು ಓದುವ ಮೂಲಕ, ಮಹಿಳೆಯರು ಜಾಗೃತರಾಗಿ ಶಿಕ್ಷಣ ಪಡೆಯಿರಿ ಅದು ನಮ್ಮ ಮೂಲಭೂತ ಹಕ್ಕು. ಸಮಾನ ಶಿಕ್ಷಣಕ್ಕಾಗಿ, ಘನತೆಯ ಭವಿಷ್ಯಕ್ಕಾಗಿ ವಿದ್ಯಾರ್ಥಿನಿಯರು ಎಸ್ಎಫ್ಐ ಚಳುವಳಿ ಕಟ್ಟಬೇಕು” ಎಂದರು.
ಸ್ವಾಧರ ಸಾಂತ್ವನ ಕೇಂದ್ರದ ಅಧ್ಯಕ್ಷೆ ಪರಿಮಳ ಜೈನ ಮಾತನಾಡಿ, ಸ್ವಾತಂತ್ರ್ಯದ ನಂತರವೂ ಅನೇಕ ಮಹಿಳೆಯರು ದೌರ್ಜನ್ಯ ಮತ್ತು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈ ಕಾರಣದಿಂದ ಮಹಿಳೆಯರ ಘನತೆಗೆ ಕೊಡಲಿ ಪೆಟ್ಟು ಬೀಳುತ್ತಿದೆ. ಇಂತಹ ಅನೇಕ ಸಮಸ್ಯಗಳಿಗೆ ಜಾತಿ, ಕೌಟುಂಬಿಕ ಬಡತನವೇ ಕಾರಣ. ಹಾಗೆಯೇ, ನಮ್ಮ ಸಮಾಜದಲ್ಲಿ ಇಂದಿಗೂ ಆತ್ಯಾಚಾರ, ಸಾಮೂಹಿಕ ಹಿಂಸೆಗಳಂತಹ ಅನೇಕ ಸಮಾಜ ವಿರೋಧಿ ಘಟನೆಗಳು ತಲೆ ಎತ್ತಿ ಮೆರೆಯುತ್ತಿವೆ ಎಂಬುದು ಖೇದಕರ ಸಂಗತಿ.
ಅತ್ಯಾಚಾರಗಳಂತಹ ಹಿಂಸಾತ್ಮಕ ಚಟುವಟಕೆಗಳಲ್ಲಿ ಭಾಗಿಯಾದ ವ್ಯಕ್ತಿಗಳನ್ನು ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಹೇಳಿದರು. ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಮಹಿಳೆಯರ ವಿರುಧ್ದ ನಡೆಯುತ್ತಿರುವ ಅನೇಕ ಘಟನೆಗಳಿಗೆ ಎಸ್ಎಫ್ಐ ಸಂಘಟನೆ ಧ್ವನಿ ಎತ್ತುವ ಕೆಲಸ ಮಾಡುತ್ತಿದೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ ಎಂದರು.
ಜಿಲ್ಲಾ ವಕೀಲರ ಸಂಘದ ಜಂಟಿ ಕಾರ್ಯದರ್ಶಿ ನಾರಾಯಣ ಕಾಳೆ ಮಾತನಾಡಿ, ಹಾವೇರಿಯಲ್ಲಿ ಅನೇಕ ದಶಕಗಳಿಂದ ಸತತವಾಗಿ ವಿದ್ಯಾರ್ಥಿಗಳ ಪರವಾಗಿ ಹೋರಾಡುತ್ತಾ ಅನೇಕ ಸಮಸ್ಯೆಗಳಿಗೆ ಧ್ವನಿಯಾಗಿ ನಿಂತ ಏಕೈಕ ಸಂಘಟನೆ ಎಸ್ಎಫ್ಐ ಎನ್ನಲು ಯಾವುದೇ ಸಂಶಯವಿಲ್ಲ. ಸರ್ಕಾರಿ ಶಾಲಾ, ಕಾಲೇಜುಗಳನ್ನು ಹೋರಾಟದ ಮೂಲಕ ಜಿಲ್ಲೆಯಲ್ಲಿ ನಿರ್ಮಿಸಲು ಪಾತ್ರವಹಿಸಿದೆ. ಇಷ್ಟೇಲ್ಲಾ ಹೋರಾಟಕ್ಕೆ ಪ್ರತಿಫಲ ಸಿಗಲು ತಾವೆಲ್ಲರೂ ಅಭ್ಯಾಸ ಹೋರಾಟವನ್ನು ಮುಂದುವರಿಸಿ ಬೇಕೆಂದು ಶುಭ ಕೋರಿದರು.
ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುಳಾ ಎಸ್. ಅಕ್ಕಿ ಮಾತನಾಡಿ, ಸಮಾಜದಲ್ಲಿ ಅನೇಕ ಸಮಸ್ಯೆಗಳ ಮಧ್ಯ ಬದುಕುತ್ತಿರುವ ವಿದ್ಯಾರ್ಥಿ ಯುವಜನರು ಜೀವನದಲ್ಲಿ ಮುನ್ನಡೆಯಲು ನಮ್ಮ ದೇಶದ ಮೂಲಭೂತ ಗ್ರಂಥ ಸಂವಿಧಾನವನ್ನು ಓದಿ. ಅದರಲ್ಲಿ ಅಡಗಿರುವ ಅನೇಕ ಕಾನೂನಿನ ಅಂಶಗಳನ್ನು ಅರಿತುಕೊಂಡು, ಸಮಾಜವನ್ನು ಮುನ್ನಡೆಸುವಂತಾಗಬೇಕೆಂದು ಸಮಾವೇಶಕ್ಕೆ ರೈತ ಸಂಘದ ಪರವಾಗಿ ಶುಭ ಕೋರಿದರು.
ಎಸ್ಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್. ಮಾತನಾಡಿ, ಜಿಲ್ಲೆಯಲ್ಲಿ ಅಂಕಿ ಅಂಶಗಳು ಸಿಗದಷ್ಟು ವಿದ್ಯಾರ್ಥಿನಿಯರು ಶಿಕ್ಷಣ ಸಿಗದೇ ವಂಚಿತರಾಗಿದ್ದಾರೆ. ಅಂತಹವರನ್ನು ಕೂಡಲೇ ಆಡಳಿತ ವರ್ಗ ಗಮನಹರಿಸಿ ಶಿಕ್ಷಣಕ್ಕೆ ಕರೆತರುವ ಕಾರ್ಯ ಮಾಡಬೇಕು. ಎನ್.ಇ.ಪಿ ವಿದ್ಯಾರ್ಥಿಗಳನ್ನು ಹಲವು ರೀತಿಯಲ್ಲಿ ಶೋಷಣೆ ಮಾಡುತ್ತಿದೆ, ಶಿಕ್ಷಣ ವರ್ಗವೂ ಕೂಡಲೇ ಇದರಿಂದ ಮುಕ್ತಿ ಪಡೆಯಬೇಕು ಎಂದು ಆಗ್ರಹಿಸಿದರು.
ಎಸ್ಎಫ್ಐ ಘಟಕದ ಅಧ್ಯಕ್ಷೆ ಸ್ವಾತಿ ಓಲೇಕಾರ್ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜ್ ಘಟಕ ಕಾರ್ಯದರ್ಶಿ ಪ್ರಗತಿ ಪಾಟೀಲ ಪ್ರಸ್ಥಾವಿಕವಾಗಿ ಮಾತನಾಡಿದರು. ಚೆನ್ನಮ್ಮ ಅತ್ತಿಗೇರಿ ವಂದನಾರ್ಪಣೆ ಮಾಡಿದರು. ಎಸ್ಎಫ್ಐ ಜಿಲ್ಲಾ ಮುಖಂಡರಾದ ರವಿ ಬಂಕಾಪುರ, ಅರ್ಜುನ ರಜಪೂತ, ವಿವೇಕ ಫನಸೆ, ಅರುಣ ಆರೇರ್, ಲಕ್ಷ್ಮೀ, ಅರುಣ ಕಡಕೋಳ ಹಾಗೂ ನೂರಾರು ವಿದ್ಯಾರ್ಥಿನಿಯರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.