- 2008 ರಿಂದ ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಮುನಿರತ್ನ
- ಕಾಂಗ್ರೆಸ್ ಸರ್ಕಾರವು ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳದೆ ಶಾಸಕರನ್ನು ವಿಚಾರಣೆಗೆ ಒಳಪಡಿಸಬೇಕು
ರಾಜರಾಜೇಶ್ವರಿ ನಗರದ ₹118 ಕೋಟಿ ನಕಲಿ ಬಿಲ್ ಪಾವತಿ ಹಗರಣದಲ್ಲಿ ಶಾಸಕ ಮುನಿರತ್ನ ಅವರ ಪಾತ್ರದ ಬಗ್ಗೆ ತನಿಖೆ ನಡೆಸಲು ಕೂಡಲೇ ಶಾಸಕರನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕೆಂದು ಆಮ್ ಆದ್ಮಿ ಪಕ್ಷದ ಕಾರ್ಯಾಧ್ಯಕ್ಷ ಮೋಹನ್ ದಾಸರಿ ಒತ್ತಾಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “2008 ರಿಂದ ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಮುನಿರತ್ನ ಇಷ್ಟೆಲ್ಲ ಕೋಟ್ಯಂತರ ರೂಪಾಯಿಗಳ ಅಕ್ರಮದ ಹಿಂದೆ ನೇರ ಪಾತ್ರವಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಶಾಸಕರ ನೇರ ಹಸ್ತಕ್ಷೇಪವಿಲ್ಲದೆ ಕೇವಲ ಅಧಿಕಾರಿಗಳು ಮಾತ್ರ ಇಷ್ಟೆಲ್ಲ ಹಗರಣಗಳು ಮಾಡಲು ಸಾಧ್ಯವಿಲ್ಲ” ಎಂದು ಹೇಳಿದರು.
“ಈ ಹಿಂದೆ ಲೋಕಾಯುಕ್ತ ವರದಿಯಲ್ಲಿ ಶಾಸಕ ಮುನಿರತ್ನ ಹೆಸರು ಕೈ ಬಿಟ್ಟಿರುವುದರ ಹಿಂದೆ ಸಹ ಈ ಹಿಂದಿನ ಬಿಜೆಪಿ ಸರ್ಕಾರದ ನೇರ ಷಡ್ಯಂತ್ರವಿತ್ತು. ಈ ಹಗರಣದ ಹಿಂದೆ ಮುನಿರತ್ನ ಕೈವಾಡವಿದೆಯೆಂದು, ಇವರನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕೆಂದು ಈ ಹಿಂದೆ ಆಮ್ ಆದ್ಮಿ ಪಕ್ಷವು ಒತ್ತಾಯಿಸಿತ್ತು” ಎಂದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಕೆಲವೇ ಗಂಟೆಗಳಲ್ಲಿ ಸ್ಥಗಿತ
“ನೂತನ ಕಾಂಗ್ರೆಸ್ ಸರ್ಕಾರವು ಕೇವಲ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಂಡು ಪ್ರಕರಣವನ್ನು ತಿಪ್ಪೆ ಸಾರಿಸುವ ಕೆಲಸ ಮಾಡಬಾರದು. ಶಾಸಕ ಮುನಿರತ್ನರವರನ್ನು ಬಿಜೆಪಿಯವರಂತೆ ರಕ್ಷಿಸುವುದನ್ನು ಬಿಟ್ಟು ಕೂಡಲೇ ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು” ಎಂದು ಮೋಹನ್ ದಾಸರಿ ಒತ್ತಾಯಿಸಿದರು.