ಬೆಂಗಳೂರು ಸ್ವಚ್ಛವಾಗಿ ಕಾಣಿಸಲು ದುಡಿಯುತ್ತಿರುವ ಪೌರಕಾರ್ಮಿಕರು ಕೆಲಸದ ಸ್ಥಳದಲ್ಲಿ ತಮ್ಮ ಮೇಲಾಗುತ್ತಿರುವ ಹಿಂಸಾಚಾರ, ಜಾತಿ ಹಾಗೂ ಲಿಂಗಾಧಾರಿತ ದೌರ್ಜನ್ಯದ ವಿರುದ್ಧ ಸಿಡಿದೆದ್ದಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೇಂದ್ರ ಕಚೇರಿ ಎಂದು ಪ್ರತಿಭಟನಾ ಧರಣಿ ನಡೆಸಿದ್ದಾರೆ. ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಎಫ್ಐಆರ್ ದಾಖಲಿಸಿದ್ದರೂ ಆರೋಪಿಗಳನ್ನು ಬಂಧಿಸಲಾಗಿಲ್ಲ. ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ತಳೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“2024ರ ಸೆಪ್ಟೆಂಬರ್ 11ರಂದು 72ನೇ ವಾರ್ಡ್ನಲ್ಲಿ ಕೆಲಸ ಮಾಡುತ್ತಿದ್ದ ಆರು ಜನ ಮಹಿಳಾ ಪೌರಕಾರ್ಮಿಕರ ಮೇಲೆ ಸ್ಥಳೀಯರು ಭೀಕರವಾಗಿ ಹಲ್ಲೆ ಮಾಡಿದ್ದರು. ಪೌರಕಾರ್ಮಿಕರಿಗೆ ವಾರ್ಡ್ನ ನಿವಾಸಿ ಚಂದ್ರು ಮತ್ತು ಅವರ ತಾಯಿ ಜಾತಿ ನಿಂದನೆ ಮಾಡಿ, ಹಲ್ಲೆಗೈದಿದ್ದರು. ಆ ಘಟನೆಯನ್ನು ಫೋನಿನಲ್ಲಿ ರೆಕಾರ್ಡ್ ಮಾಡುತ್ತಿದ್ದ ಮತ್ತೊಬ್ಬ ಪೌರಕಾರ್ಮಿಕರ ಮೇಲೂ ಹಲ್ಲೆ ಮಾಡಿ, ಮೊಬೈಲ್ಅನ್ನು ಹೊಡೆದುಹಾಕಿದ್ದರು. ಅವರ ವಿರುದ್ಧ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಎಫ್ಐಆರ್ ದಾಖಲಿಸಿದ್ದರೂ ಆರೋಪಿಗಳನ್ನು ಇದುವರೆಗೂ ಬಂಧಿಸಿಲ್ಲ. ಇಂತಹ ಘಟನೆಗಳ ವಿಚಾರದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯತನದಿಂದ ವರ್ತಿಸುತ್ತಿದ್ದಾರೆ” ಎಂದು ಪೌಕಕಾರ್ಮಿಕರು ಆರೋಪಿಸಿದ್ದಾರೆ.
“ಪೌರಕಾರ್ಮಿಕರ ಕೆಲಸದ ಪರಿಸ್ಥಿತಿಯನ್ನು ಈ ಘಟನೆಯು ಎತ್ತಿತೋರಿಸುತ್ತದೆ. ಅವರ ಜಾತಿ, ಲಿಂಗ ಮತ್ತು ವರ್ಗದ ಮೇರೆಗೆ ಅವರುಗಳು ದಿನನಿತ್ಯ ಮುಪ್ಪಟ್ಟು ಶೋಷಣೆಯನ್ನು ಅನುಭವಿಸುತ್ತಾರೆ. ಸಾರ್ವಜನಿಕ ಅರೋಗ್ಯ ಸೇವೆಯಲ್ಲಿ ಅವರು ಅಗತ್ಯ ಸೇವೆ ಒದಗಿಸುತ್ತಿದ್ದರೂ ಸಹ, ತಾರತಮ್ಯ ಮತ್ತು ಹಿಂಸೆ ಇವರಿಗೆ ಮೀರಿದ್ದಲ್ಲ. ಇದನ್ನು ತುರ್ತಾಗಿ ಸರಿಪಡಿಸುವ ಅವಕ್ಷ್ಯಕತೆ ಇದೆ” ಎಂದು ಬಿಬಿಎಂಪಿ ಪೌರಕಾರ್ಮಿಕರ ಸಂಘದ ಅಧ್ಯಕ್ಷೆ ನಿರ್ಮಲಾ ಒತ್ತಾಯಿಸಿದ್ದಾರೆ.
ಘಟನೆಯಲ್ಲಿ ನೊಂದ ಪೌರಕಾರ್ಮಿಕರಾದ ಲಕ್ಷ್ಮಿ ಮಾತನಾಡಿ, “ಈ ಘಟಬೆಯು ನಮ್ಮ ಘನತೆಗೆ ಕುಂದುಂಟಾಗಿದೆ, ಅಧಿಕಾರಿಗಳು ಯಾವುದೇ ರೀತಿಯ ಜವಾಬ್ದಾರಿ ವಹಿಸಿರುವುದಿಲ್ಲ” ಎಂದು ಬೇಸರ ಹೊರಹಾಕಿದರು. “ಸಾರ್ವಜನಿಕವಾಗಿ ನನ್ನ ಘನತೆಗೆ ಧಕ್ಕೆಯನ್ನುಂಟು ಮಾಡಲಾಗಿದೆ. ಹೀಗಿದ್ದರೂ ಸಹ ಅಧಿಕಾರಿಗಳು ಯಾವುದೇ ರೀತಿ ಕ್ರಮ ಜರುಗಿಸದ ಕಾರಣ ನಮ್ಮಂತಹ ಕಾರ್ಮಿಕರ ಕುರಿತು ಅಧಿಕಾರಿಗಳಿಗಿರುವ ನಿರ್ಲಕ್ಷ್ಯವನ್ನು ಮತ್ತೆ ತೋರಿಸುತ್ತಿದ್ದಾರೆ” ಎಂದು ಹೇಳಿದರು.
ಇದೇ ಘಟನೆಯಲ್ಲಿ ಗಾಯಗೊಂಡಿರುವ ಮತ್ತೊಬ್ಬ ಪೌರಕಾರ್ಮಿಕರಾದ ಮುನಿರತ್ನ ಅವರು, “ನಮಗೆ ನ್ಯಾಯ ದೊರಕಬಾರದೇ? ನಾವು ದಲಿತ ಸಮುದಾಯದವರು ಮತ್ತು ಬಡ ಜನರು ಎಂದು ನಿರ್ಲಕ್ಷ್ಯ ತೋರಲಾಗುತ್ತಿದೆಯೇ? ನಮಗೂ ಸಮಾನವಾದ ನ್ಯಾಯ ದೊರಕಬೇಕು” ಎಂದರು.
“ಇದೊಂದೇ ಘಟನೆಯಲ್ಲ. ನಾವು ದಿನನಿತ್ಯ ಅಸ್ಪೃಶ್ಯತೆಯನ್ನು ಅನುಭವಿಸುತ್ತೇವೆ. ಮನೆಗಳ ಗೇಟ್ ಗಳನ್ನು ನಾವು ಮುಟ್ಟಬಾರದು, ನಾವು ಕುಡಿಯಲು ನೀರು ಕೇಳಿದಾಗ ಬಾತ್ರೂಮ್ ಚೊಂಬಿನಲ್ಲಿ ನೀರು ಕೊಡುತ್ತಾರೆ. ಈ ರೀತಿಯಲ್ಲಿ ನಾವು ತಾರತಮ್ಯ ಅನುಭವಿಸುತ್ತೇವೆ” ಎಂದು ಪೌರಕಾರ್ಮಿಕರಾದ ರಂಗಮ್ಮ ಹೇಳಿದರು.
“ಈ ಘಟನೆಯು ಬಿಬಿಎಂಪಿಯಲ್ಲಿರುವ ಆಳವಾದ ಮತ್ತು ವ್ಯವಸ್ಥಿತವಾದ ಸಮಸ್ಯೆಯನ್ನು ಎತ್ತಿತೋರಿಸುತ್ತದೆ. ದಲಿತ ಪೌರಕಾರ್ಮಿಕರ, ಅದರಲ್ಲೂ ಮಹಿಳಾ ಕಾರ್ಮಿಕರ, ಶೋಷಣೆಯುಕ್ತ ಕೆಲಸದ ವಾತಾವರಣ ಯಾವ ರೀತಿಯಲ್ಲಿ ಪ್ರತಿಪಾದಿಸಲಾಗುತ್ತಿದೆ ಮತ್ತು ಹೇಗೆ ಇದ್ದಕ್ಕಿದ್ದಂತೆ ಕೆಲಸದಿಂದ ವಜಾಗೊಳಿಸುವ ವ್ಯವಸ್ಥೆಯನ್ನು ನಡೆಸಲಾಗುತ್ತಿದೆ ಎಂದು ತೋರಿಸುತ್ತದೆ. ಬಿಬಿಎಂಪಿ ಮತ್ತು ರಾಜ್ಯ ಸರ್ಕಾರವು ಈ ಕೂಡಲೇ ಎಲ್ಲ ಪೌರಕಾರ್ಮಿಕರಿಗೆ ನ್ಯಾಯಯುತ ಮತ್ತು ಘನತೆಯುಕ್ತ ಕೆಲಸದ ವಾತಾವರಣವನ್ನು ರೂಪಿಸಬೇಕು” ಎಂದು ಎಐಸಿಸಿಟಿಯು ರಾಜ್ಯ ಕಾರ್ಯದರ್ಶಿ ಅಪ್ಪಣ್ಣ ಹೇಳಿದರು.
ಪೌರಕಾರ್ಮಿಕರ ಹಕ್ಕೊತ್ತಾಯಗಳು
- ಬ್ಯಾಡರಹಳ್ಳಿ ಪೊಲೀಸರು ಶೀಘ್ರ ಕ್ರಮ ಕೈಗೊಂಡು ಆರೋಪಿಗಳನ್ನು ತಡಮಾಡದೆ ಬಂಧಿಸಬೇಕು.
- ಅನ್ಯಾಯವಾಗಿ ಹಲ್ಲೆ ಹಾಗೂ ದೌರ್ಜನ್ಯಕ್ಕೆ ಒಳಗಾದ ಪೌರಕಾರ್ಮಿಕರಿಗೆ ತಲಾ ₹10 ಲಕ್ಷ ಪರಿಹಾರ ದೊರಕಿಸಿಕೊಡಬೇಕು.
- ಪೌರಕಾರ್ಮಿಕರು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಾಗ ಅವರ ಸುರಕ್ಷತೆ ಮತ್ತು ಘನತೆಯನ್ನು ಖಾತ್ರಿಪಡಿಸುವುದಕ್ಕಾಗಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಬೇಕು.
- ಸಾರ್ವಜನಿಕರಿಂದ ಇಂತಹ ಹಿಂಸಾತ್ಮಕ ದಾಳಿಗಳು ಮತ್ತು ಕಿರುಕುಳದಿಂದ ಪೌರ ಕಾರ್ಮಿಕರನ್ನು ರಕ್ಷಿಸುವುದು ಬಿಬಿಎಪಿಯ ಆದ್ಯ ಕರ್ತವ್ಯವಾಗಬೇಕು.
- ಪೌರಕಾರ್ಮಿಕರ ಮೇಲಾಗುವ ದೌರ್ಜನ್ಯಗಳನ್ನು ತಡೆಯಲು ಕಟ್ಟುನಿಟ್ಟಾದ ಕ್ರಮಗಳನ್ನು ರೂಪಿಸಲು ಪೌರಕಾರ್ಮಿಕರ ಸಂಘಟನೆಯೊಂದಿಗೆ ತುರ್ತು ಸಭೆ ಕರೆಯಬೇಕು.
- ಬಿಬಿಎಂಪಿ, ಸರ್ಕಾರ ಈ ಘಟನೆಯ ಗಂಭೀರತೆಯನ್ನು ಪರಿಗಣಿಸಬೇಕು ಮತ್ತು ಸಾರ್ವಜನಿಕ ಆರೋಗ್ಯ ಮೂಲಸೌಕರ್ಯದ ಅತ್ಯಗತ್ಯ ಭಾಗವಾಗಿರುವ ಪೌರಕಾರ್ಮಿಕರನ್ನು ರಕ್ಷಿಸಲು ತ್ವರಿತವಾಗಿ ಕಾರ್ಯನಿರ್ವಹಿಸಬೇಕು.