ಹೋಳಿ ಹಬ್ಬದ ರಜೆಯ ಖುಷಿಯಲ್ಲಿದ್ದ ಕಾರ್ಮಿಕರ ನಡುವೆ ನಡೆದ ಗಲಾಟೆ ಮೂವರ ಕೊಲೆಯಲ್ಲಿ ಅಂತ್ಯವಾದ ಘಟನೆ ಸರ್ಜಾಪುರ – ಬಾಗಲೂರು(ತಮಿಳುನಾಡು) ಮುಖ್ಯ ರಸ್ತೆಯ ತಿಂಡ್ಲು ಅಪಾರ್ಟ್ಮೆಂಟ್ವೊಂದರಲ್ಲಿ ಶನಿವಾರ ನಡೆದಿದೆ.
ಬಿಹಾರ ಮೂಲದ ರಾಧೆಶ್ಯಾಮ್, ಕನ್ಸರ್ ಸೇರಿ ಮೂವರು ಕೊಲೆಯಾಗಿದ್ದಾರೆ. ಇನ್ನು ಮೃತ ರಾಧೆಶ್ಯಾಮ್ ತಮ್ಮ ಬಿರಾದಾರ್ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡಿದ್ದಾನೆ. ಸೋನು ಮತ್ತು ಅವನ ಸ್ನೇಹಿತ ಕೊಲೆ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತಿಂಡ್ಲು ಬಳಿಯ ಟಿವಿಎಸ್ ಕಲ್ಯಾಣ ಮಂಟಪದ ಹಿಂದಿನ ನಿರ್ಮಾಣ ಹಂತದ ಫೋರ್ ವಾಲ್ ಅವಿನ್ಯೂ ಕಟ್ಟಡದ ಮೂರನೇ ಮಹಡಿಯಲ್ಲಿ ಕೊಲೆ ನಡೆದಿದೆ. ಇವರು ವಿವಿಧ ಗುತ್ತಿಗೆದಾರರ ಬಳಿ ಮರದ ಕೆಲಸಮಾಡುವ ಕಾರ್ಮಿಕರಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಭಾರತಕ್ಕೆ ಬೇಕಿರುವುದು ಬಣ್ಣಗಳ ಸಂಗಮ, ಸಂಘರ್ಷದ ಸಂಭ್ರಮವಲ್ಲ!
ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪರಾರಿಯಾದ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಹೋಳಿ ಹಬ್ಬದ ಸಂಭ್ರಮವಾದ ಕಾರಣ ಶನಿವಾರ ರಾತ್ರಿ ಆರು ಮಂದಿ ಸ್ನೇಹಿತರು ಪಾರ್ಟಿ ಮಾಡಿದ್ದರು. ಪಾರ್ಟಿಯ ಮತ್ತಿನಲ್ಲಿ ಸ್ನೇಹಿತರ ನಡುವೆ ಗಲಾಟೆ ನಡೆದಿದೆ, ರಾಡ್ನಿಂದ ಮೂವರು ಉಳಿದ ಮೂವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಅವರಲ್ಲಿ ಓರ್ವ ತಪ್ಪೊಸಿಕೊಂಡು ಆಚೆಗೆ ಓಡಿ ಬಂದು ಜನರಿಗೆ ವಿಷಯ ತಿಳಿಸಿದ್ದಾನೆ. ಜನ ಮಹಡಿಗೆ ಹೋಗುವಷ್ಟರಲ್ಲಿ ಮೂವರು ಹತ್ಯೆಯಾಗಿ ಇಬ್ಬರು ಆರೋಪಿಗಳು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಗಾಯಗೊಂಡ ಬಿರಾದಾರ್ ಸರ್ಜಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ವರದಿಯಾಗಿದೆ.
