ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಯ ಹಿರಿಯ ಅಧಿಕಾರಿಗಳ ಸಹಿ ನಕಲು ಮಾಡಿ ಕೋಟ್ಯಂತರ ರೂಪಾಯಿ ಅಕ್ರಮ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಹಲವರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಇದೀಗ ಒಬ್ಬರನ್ನು ವಿಲ್ಸನ್ ಗಾರ್ಡನ್ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಶ್ರೀರಾಮ್ ಮುಲ್ಕಾವನ್ ಬಂಧಿತ. ಅಸಿಸ್ಟೆಂಟ್ ಸೆಕ್ಯುರಿಟಿ ಅಂಡ್ ವಿಜಿಲೆನ್ಸ್ ಅಧಿಕಾರಿ ಸಿ.ಕೆ ರಮ್ಯ ನೀಡಿದ ದೂರಿನ ಮೇರೆಗೆ ಬೆಂಗಳೂರಿನ ವಿಲ್ಸನ್ ಗಾರ್ಡನ್ ಪೋಲಿಸ್ ಠಾಣೆಯಲ್ಲಿ ಏಳು ಜನ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಇದೀಗ ಪ್ರಕರಣದ ಪ್ರಮುಖ ಆರೋಪಿಯನ್ನು ವಿಲ್ಸನ್ ಗಾರ್ಡನ್ ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ರಾಮ್ ಮುಲ್ಕಾವನ್(ಅಂದಿನ ಮುಖ್ಯ ಸಂಚಾರ ವ್ಯವಸ್ಥಾಪಕರು), ಶ್ಯಾಮಲಾ ಎಸ್. ಮದ್ದೋಡಿ(ವಿಭಾಗೀಯ ಸಂಚಾರ ಅಧಿಕಾರಿ), ಮಮತಾ ಬಿ.ಕೆ, ಸಹಾಯಕ(ಸಹಾಯಕ ಸಂಚಾರ ವ್ಯವಸ್ಥಾಪಕರು), ಅನಿತಾ ಟಿ(ಸಹಾಯಕ ಸಂಚಾರ ಅಧೀಕ್ಷಕಿ), ಗುಣಶೀಲ(ಸಹಾಯಕ ಸಂಚಾರ ನಿರೀಕ್ಷಕಿ), ವೆಂಕಟೇಶ್ ಆರ್(ಕಿರಿಯ ಸಹಾಯಕ), ಪ್ರಕಾಶ್ ಕೊಪ್ಪಳ(ಕಿರಿಯ ಸಹಾಯಕ) ಈ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳು.
ಈ ಹಿಂದೆ ಬಿಎಂಟಿಸಿಯಲ್ಲಿ ಎಂಡಿಗಳಾಗಿದ್ದ ಶಿಖಾ, ರೇಜು ಹಾಗೂ ಭದ್ರತಾ ಮತ್ತು ಜಾಗೃತದಳದ ನಿರ್ದೇಶಕ ಅರುಣ್ ಕೆ ಸಹಿಯನ್ನು ಕಲರ್ ಜೆರಾಕ್ಸ್ ಮಾಡುವ ಮೂಲಕ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಕೋಟ್ಯಂತರ ಹಣವನ್ನು ವಂಚನೆ ಮಾಡಿದ್ದರು ಎಂದು ಆರೋಪಿಸಲಾಗಿದೆ.
ಕೋಟ್ಯಂತರ ಹಣವನ್ನು ವಂಚನೆ ಮಾಡಿದ ಆರೋಪ ಕೇಳಿ ಬಂದ ಹಿನ್ನೆಲೆ, ಏಳು ಜನರನ್ನು ಕಮರ್ಷಿಯಲ್ ವಿಭಾಗದಿಂದ ನಾನಾ ವಿಭಾಗಗಳಿಗೆ ವರ್ಗಾವಣೆ ಮಾಡಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರಿನ 30 ಕಡೆ ಬುಧವಾರ ಬೆಳ್ಳಂಬೆಳಗ್ಗೆ ಐಟಿ ದಾಳಿ
ಈ ಬಗ್ಗೆ ಅಸಿಸ್ಟೆಂಟ್ ಸೆಕ್ಯುರಿಟಿ ಅಂಡ್ ವಿಜಿಲೆನ್ಸ್ ಅಧಿಕಾರಿ ಸಿ.ಕೆ ರಮ್ಯ ನೀಡಿದ ದೂರಿನಲ್ಲಿ, “ಒಂದು ಕಡತದಲ್ಲಿ ₹10 ಕೋಟಿ 50 ಲಕ್ಷ ಹಾಗೂ ಮತ್ತೊಂದು ಕಡತದಲ್ಲಿ ₹6 ಕೋಟಿ 91 ಲಕ್ಷ ಹಾಗೂ ₹21 ಲಕ್ಷದ 64 ಸಾವಿರ, ₹1 ಲಕ್ಷದ 5 ಸಾವಿರ ಒಟ್ಟು ಸುಮಾರು ₹17 ಕೋಟಿ 64 ಲಕ್ಷ ರೂಪಾಯಿ ಸಂಸ್ಥೆಗೆ ನಷ್ಟ ಉಂಟು ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ ಎನ್ನಲಾಗಿದೆ.