“ಸಾಮಾಜಿಕ ಚಳುವಳಿಗಾರ, ಚಿಂತಕ ದಿ. ಜಿ. ರಾಜಶೇಖರ್ ಅವರ ಚಿಂತನಾಶೀಲ ಕಾರ್ಯಚಟುವಟಿಕೆಗಳಿಗೆ ಸೂಕ್ತ ಗೌರವ ಸಲ್ಲಿಸಲು ಅವರ ಹುಟ್ಟಿದ ಹಬ್ಬದ ದಿನವಾದ ಸೆ.16 ರಂದು ‘ಜಿ. ರಾಜಶೇಖರ್ ಸ್ಮಾರಕ ಜ್ಞಾನ ವೇತನ 2023’ ಪ್ರಾರಂಭಿಸಲಾಗುತ್ತಿದೆ” ಎಂದು ಜ್ಞಾನ ವೇತನ ಕಾರ್ಯಕಾರಿ ಸಮಿತಿ ಹೇಳಿದೆ.
“ಜಿ. ರಾಜಶೇಖರ್ ಅವರು ತೀರಿಕೊಂಡು ಒಂದು ವರ್ಷ ಕಳೆದಿದೆ. ರಾಜಶೇಖರ್ ಅವರಿಗೆ ವೈಯಕ್ತಿಕ ಸಂಭ್ರಮಗಳ ಬಗ್ಗೆ ಯಾವ ಅಕ್ಕರೆಯೂ ಇರಲಿಲ್ಲ. ಆದರೂ, ಅವರ ಅಚ್ಚಳಿಯದ ಚಿಂತನಾಶೀಲ ಕಾರ್ಯಚಟುವಟಿಕೆಗಳಿಗೆ ಸೂಕ್ತ ಗೌರವ ಸಲ್ಲಿಸಲು ಇದೇ ಅವಕಾಶ ಎಂದು ಭಾವಿಸಿ ಮೊದಲ ‘ಜಿ. ರಾಜಶೇಖರ್ ಸ್ಮಾರಕ ಜ್ಞಾನವೇತನ 2023’ ಪ್ರಾರಂಭಿಸಲಾಗುತ್ತಿದೆ” ಎಂದು ತಿಳಿಸಿದೆ.
“ಜಿ. ರಾಜಶೇಖರ್ ಅವರಿಗೆ ‘ಕಾಗೋಡು ಸತ್ಯಾಗ್ರಹ’ ದಂತಹ ಕೃತಿಗಳನ್ನು ಪ್ರಕಟಿಸಲು ಯು ಆರ್ ಅನಂತಮೂರ್ತಿ ಹಾಗೂ ಕೆ ವಿ ಸುಬ್ಬಣ್ಣ ಅವರಂತಹ ದಿಗ್ಗಜರ ಬೆಂಬಲವಿತ್ತು. ಈ ಕೃತಿಯು ಸ್ವಾತಂತ್ರ್ಯೋತ್ತರ ಕಾಲದ ಐತಿಹಾಸಿಕ ಜನ ಚಳುವಳಿಯ ಪ್ರಮುಖ ದಾಖಲೆಯಾಗಿದೆ. ಚಾರಿತ್ರಿಕ ಆಕರ ಹಾಗೂ ಪತ್ರಿಕಾ ವರದಿಗಳ ವಿಸ್ತಾರವಾದ, ನಿಖರವಾದ ಆಧ್ಯಯನದ ಫಲವಾಗಿದೆ” ಎಂದು ಹೇಳಿದೆ.
“ಕಾಗೋಡು ಸತ್ಯಾಗ್ರಹದಂತಹ ಕೃತಿಗಳನ್ನು ಕಟ್ಟಲು ಕನ್ನಡದ ಯುವ ಬರಹಗಾರರು, ಸಂಶೋಧಕರು ಹಾಗೂ ಪತ್ರಕರ್ತರಿಗೆ ಸ್ಪೂರ್ತಿದಾಯಕವಾಗಲಿ ಎಂಬ ಸದುದ್ದೇಶದೊಂದಿಗೆ ‘ಜಿ ರಾಜಶೇಖರ್ ಸ್ಮಾರಕ ಜ್ಞಾನ ವೇತನ 2023’ ಪ್ರಾರಂಭಿಸಲಾಗುತ್ತಿದೆ” ಎಂದು ಸಮಿತಿ ಮಾಹಿತಿ ನೀಡಿದೆ.
ಜ್ಞಾನವೇತನದ ವಿವರ
- ‘ಜಿ ರಾಜಶೇಖರ್ ಸ್ಮಾರಕ ಜ್ಞಾನ ವೇತನ 2023’ ಒಟ್ಟು ₹80,000 ಮೊತ್ತದ ಜ್ಞಾನ ವೇತನವನ್ನು ನೀಡಲಾಗುತ್ತದೆ.
- 23 ರಿಂದ 35ರ ವಯಸ್ಸಿನಲ್ಲಿ ಬರುವ ಆಯ್ದ ಒಬ್ಬ ಅಭ್ಯರ್ಥಿಗೆ, ಆರು ತಿಂಗಳ ಅವಧಿಯಲ್ಲಿ ಹಂತ ಹಂತವಾಗಿ ಹಣವನ್ನು ವಿತರಿಸಲಾಗುತ್ತದೆ.
- ‘ಜಿ. ರಾಜಶೇಖರ್ ಸ್ಮಾರಕ ಜ್ಞಾನ ವೇತನ ಪಡೆಯಲು ಬಯಸುವ ಅಭ್ಯರ್ಥಿಗಳು ಸಂಶೋಧನೆಯ ವಿಷಯ ಹಾಗೂ ಸಂಶೋಧನಾ ವಿಧಾನವನ್ನು ಒಳಗೊಂಡ ಸಂಶೋಧನಾ ಪ್ರಸ್ತಾವನೆಯನ್ನು ಸಲ್ಲಿಸಲು ಅಕ್ಟೋಬರ್ 16 ಕೊನೆಯ ದಿನಾಂಕವಾಗಿದೆ.
- ಶೈಕ್ಷಣಿಕ ಕ್ಷೇತ್ರದಲ್ಲಿ ನುರಿತರಾಗಿರುವವರು, ಅನುಭವಿ ಲೇಖಕರನ್ನು ಒಳಗೊಂಡ ಸಲಹಾ ಮಂಡಳಿಯು ಒಬ್ಬ ಅಭ್ಯರ್ಥಿಯನ್ನು ವೇತನಕ್ಕೆ ಆಯ್ಕೆ ಮಾಡುತ್ತದೆ.
- ಆಯ್ಕೆಯಾದ ಅಭ್ಯರ್ಥಿಯು ಸಂಶೋಧನೆಗೆ ಆಯ್ದುಕೊಂಡ ಚಾರಿತ್ರಿಕ ವಿಷಯದ ಮೇಲೆ, ಸಾಕ್ಷಿ- ಪುರಾವೆ ಹಾಗೂ ಆಳ – ಅಗಲ ಇರುವ ವರದಿಗಳ ಆಧಾರದಲ್ಲಿ ಸಂಶೋಧನೆ ನಡೆಸಬೇಕು.
- ಸಲಹಾ ಮಂಡಳಿಯು ಸಂಶೋಧನಾ ಕಾರ್ಯದಲ್ಲಿ ಆಯ್ಕೆಯಾದ ಅಭ್ಯರ್ಥಿಗೆ ಮಾರ್ಗದರ್ಶನ ನೀಡುತ್ತದೆ.
- ಮಹಿಳೆ, ಕಡೆಗಣಿತ ಜಾತಿ ಪಗಂಡ ಹಾಗೂ ಅಲ್ಪ ಸಂಖ್ಯಾತ ವರ್ಗದ ಅಭ್ಯರ್ಥಿಗಳಿಗೆ ಪ್ರಥಮ ಪ್ರಾಶಸ್ತ್ಯವಿರುತ್ತದೆ.
ಸೂಚಿತ ಸಂಶೋಧನಾ ವಲಯಗಳು
- ಮತೀಯ ದ್ವೇಷ/ ಕೂಡುಕಟ್ಟು/ ಸಹಬಾಳ್ವೆ – ಇವುಗಳ ಸಾಮಾಜಿಕ- ಸಾಂಸ್ಕತಿಕ ಬೇರುಗಳು; ಇಂದಿನ ವಾಸ್ತವಿಕ ಸ್ಥಿತಿಗತಿ- ಸ್ಥಳ-ವಿದ್ಯಮಾನ ಅಧ್ಯಯನ
- ಜಾತಿ ಯಜಮಾನಿಕೆ, ಅಸಮಾನತೆ, ಅನ್ಯಾಯಗಳ ಮುಂದುವರಿಕೆಯ ಸಾಮಾಜಿಕ – ರಾಜಕೀಯ ಕಾರಣಗಳು – ಸ್ಥಳ – ವಿದ್ಯಮಾನ ಅಧ್ಯಯನ
- ಕಡೆಗಣಿತ ಸಮುದಾಯಗಳ ( ಸ್ಥಳ, ಸಮುದಾಯ ನಿರ್ದಿಷ್ಟತೆ ಇರಬೇಕು) ಪ್ರತಿರೋಧ ಚರಿತ್ರೆ ಮತ್ತು ಪ್ರಸ್ತುತ ಪರಿಸ್ಥಿತಿಯ ನೈಜತೆ
- ಆಧುನಿಕ ಸಾಂಸ್ಥಿಕ ವ್ಯವಸ್ಥೆಗಳ (ಕಾನೂನು, ನ್ಯಾಯಿಕ, ಆರೋಗ್ಯ, ಶಿಕ್ಷಣ, ಮಹಿಳೆ – ಮಕ್ಕಳ ಕಲ್ಯಾಣ ಇತ್ಯಾದಿ) ವೈಫಲ್ಯದ ಕಾರ್ಯ-ಕಾರಣ -ಪರಿಣಾಮ
- ಶ್ರಮಿಕರ ಆಂತರಿಕ ವಲಸೆ: ಸಾಮಾಜಿಕ ಕಾರ್ಯ-ಕಾರಣ, ವಲಸೆಯ ನಕ್ಷೆ, ಪ್ರದೇಶ ಭಿನ್ನತೆ, ಹೊರಗಿಡುವಿಕೆ, ಕಡೆಗಣಿಸುವಿಕೆ, ಸಾಮಾಜಿಕ ಪರಿಣಾಮಗಳು.
- ಕಡೆಗಣಿತ ಸಮುದಾಯಗಳ ಕಲ್ಯಾಣಕ್ಕಾಗಿ ವಿಜ್ಞಾನ ತಂತ್ರಜ್ಞಾನ- ವರ್ತಮಾನದ ಸ್ಥಿತಿಗತಿ, ಎದುರಿಸಬೇಕಾದ ಸವಾಲುಗಳು, ಸಾಗಬೇಕಾದ ಹಾದಿ.
- ಜೀವಸಂಕುಲ, ಪರಿಸರ ಮತ್ತು ಮಾನವ ಅಸ್ತಿತ್ವದ ಸಮಸ್ಯೆಗಳು
- ಈ ಸೂಚಿತ ವಿಷಯಗಳಲ್ಲದೆ ಸಂಶೋಧನೆಗೆ ಅರ್ಹವಾದ ಸಾಮಾಜಿಕ ಕಾಳಜಿಯ /ಕುತೂಹಲಕರ ವಿಷಯಗಳಿಗೂ ಅವಕಾಶವಿದೆ
ಅಭ್ಯರ್ಥಿಯ ಆಯ್ಕೆಯಲ್ಲಿ ಸಲಹಾ ಸಮಿತಿಯ ಆಯ್ಕೆಯೇ ಅಂತಿಮವಾಗಿರಲಿದೆ ಎಂದು ಹೇಳಿದೆ.
ಅಭ್ಯರ್ಥಿಗಳು grskksv@gmail.com ಮೂಲಕ ಪ್ರಸ್ತಾವನೆ ಕಳುಹಿಸಬಹುದು.
ಬರಹಗಾರರಾದ ಎಚ್ ಎಸ್ ಅನುಪಮಾ, ಬರಹಗಾರರು, ವಿಶ್ರಾಂತ ಪ್ರಾಧ್ಯಾಪಕರಾದ ರಹಮತ್ ತರೀಕೆರೆ, ಕವಿ, ರಂಗ ನಿರ್ದೇಶಕರಾದ ರಘುನಂದನ, ಮಾಧ್ಯಮ ತಜ್ಞ, ಬರಹಗಾರರಾದ ಎನ್ಎಎಂ ಇಸ್ಮಾಯಿಲ್, ಹಿರಿಯ ಪತ್ರಕರ್ತ, ಬರಹಗಾರರಾದ ಡಿ ಉಮಾಪತಿ, ಋತುಮಾನ ಸಹ-ಸಂಪಾದಕರಾದ ಕುಂಟಾಡಿ ನಿತೇಶ್ ಹಾಗೂ ಸಾಮಾಜಿಕ ಹೋರಾಟಗಾರ, ಬರಹಗಾರರಾದ ಕೆ ಫಣಿರಾಜ್ ಅವರು ಸಲಹಾ ಮಂಡಳಿಯಲ್ಲಿದ್ದಾರೆ.
👍👍🙏