ಕೋಟ್ಯಂತರ ರೂ. ತೆರಿಗೆ ವಂಚಿಸಿ ಬೆಂಗಳೂರು ನಗರದಲ್ಲಿ ಓಡಾಡಿಕೊಂಡಿದ್ದ ಐಷಾರಾಮಿ ಕಾರು ಮಾಲೀಕನಿಗೆ ಆರ್ಟಿಓ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. 1.58 ಕೋಟಿ ರೂ. ಬಾಕಿ ತೆರಿಗೆ ಪಾವತಿಸಲು ಸೂಚನೆ ನೀಡಿದ್ದು, ನಿಗದಿತ ಅವಧಿಯೊಳಗೆ ತೆರಿಗೆ ಪಾವತಿಸದಿದ್ದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ.
ಸುಮಾರು ಏಳುವರೆ ಕೋಟಿ ರೂ. ಮೌಲ್ಯದ ಫೆರಾರಿ ಕಾರು ಖರೀಸಿದಿದ್ದ ಮಾಲೀಕನೊಬ್ಬ ತೆರಿಗೆ ಪಾವತಿಸದೇ ಓಡಾಡಿಕೊಂಡಿದ್ದ. ಮಹಾರಾಷ್ಟ್ರ ನೋಂದಣಿ ಹೊಂದಿದ ಕಾರು ಇದಾಗಿದೆ.
ಮಹಾರಾಷ್ಟ್ರದಲ್ಲಿ 20 ಲಕ್ಷ ರೂ. ತೆರಿಗೆ ಪಾವತಿಸಿ 2023ರ ಸೆಪ್ಟೆಂಬರ್ನಿಂದಲೂ ರಾಜ್ಯದಲ್ಲಿ ಅನಧಿಕೃತವಾಗಿ ಓಡಾಟ ನಡೆಸುತ್ತಿದ್ದ. ಕಾರಿನ ಅನಧಿಕೃತ ಓಡಾಟದ ಬಗ್ಗೆ ಆರ್ಟಿಓಗೆ ಸಂಚಾರಿ ಪೊಲೀಸರು ಮಾಹಿತಿ ನೀಡಿದ್ದರು. ಬುಧವಾರ (ಜು.2) ಬೆಂಗಳೂರಿನ ಲಾಲ್ ಬಾಗ್ ಬಳಿ ಕಾರನ್ನು ತಡೆಹಿಡಿದ ಆರ್ಟಿಓ ಅಧಿಕಾರಿಗಳು ತಪಾಸಣೆ ನಡೆಸಿದಾಗ ತೆರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿತ್ತು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಅಪಾಯಕಾರಿ ಸೈಬರ್ ಅಪರಾಧ ಕುರಿತು ಜನ ಜಾಗೃತರಾಗಬೇಕಿದೆ
ನಂತರ ಕಾರನ್ನು ವಶಕ್ಕೆ ಪಡೆದ ಅಧಿಕಾರಿಗಳು ಜಯನಗರ 5ನೇ ಬ್ಲಾಕ್ನಲ್ಲಿರುವ ಮಾಲೀಕನ ನಿವಾಸದ ಮುಂದೆಯೇ ಮನೆ ಮುಂದೆಯೇ ಕಾರು ನಿಲ್ಲಿಸಿದ್ದಾರೆ. ಅಧಿಕಾರಿಗಳು ಸ್ಥಳದಲ್ಲೇ ಇದ್ದು ತೆರಿಗೆ ಪಾವತಿಸಲು ಸಂಜೆ ವರೆಗೆ ಕಾಲಾವಕಾಶ ನೀಡಲಾಗಿದೆ.
ಟ್ಯಾಕ್ಸ್ ಕಟ್ಟಲು ಕಾರು ಮಾಲೀಕರು ಸಮಯಾವಕಾಶ ಕೇಳಿದ ಹಿನ್ನೆಲೆ ಗಡುವು ನೀಡಿದ್ದಾರೆ. ಆದಷ್ಟು ಬೇಗ 1.58 ಕೋಟಿ ತೆರಿಗೆ ಪಾವತಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅಲ್ಲಿಯ ತನಕ ಕಾರು ಆರ್ಟಿಓ ಅಧಿಕಾರಿಗಳ ಸುಪರ್ದಿಯಲ್ಲೇ ಇರಲಿದೆ ಎಂದು ಆರ್ಟಿಓ ಅಧಿಕಾರಿಗಳು ತಿಳಿಸಿದ್ದಾರೆ.