"ಬಿಜೆಪಿ ಸರಕಾರ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದು ನಾವು ರೈತ ಪರ ಎಂದಂತೆ, ಮುಸ್ಲಿಮ್ ವಿರೋಧಿ ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೆ ತಂದು ನಾವು ಮುಸ್ಲಿಮರ ಪರ ಎನ್ನುತ್ತಿದೆ"
ವಕ್ಫ್ ತಿದ್ದುಪಡಿ ಕಾಯ್ದೆ ಹಿಂದೆ ಮುಸ್ಲಿಮ್ ಸಮುದಾಯವನ್ನು ದಮನಿಸುವ ಷಡ್ಯಂತ್ರ ಜೊತೆಗೆ ಬಂಡವಾಳಶಾಹಿಗಳ ಹಿತಾಶಕ್ತಿಯನ್ನು ಕಾಪಾಡುವ ಹಿಡನ್ ಅಜೆಂಡವೂ ಅಡಗಿದೆ ಎಂದು ಸಿಐಟಿಯು ರಾಷ್ಟ್ರೀಯ ಕಾರ್ಯದರ್ಶಿ ಕೆ.ಎನ್.ಉಮೇಶ್ ಹೇಳಿದ್ದಾರೆ.
ಬೆಂಗಳೂರಿನ ಬಸವನಗುಡಿಯಲ್ಲಿ ಇನ್ಸಾಫ್ ಕರ್ನಾಟಕ ಬೆಂಗಳೂರು ವತಿಯಿಂದ ಭಾನುವಾರ ನಡೆದ ‘ವಕ್ಫ್ ಮಸೂದೆ ತಿದ್ದುಪಡಿ – 2025 ಉದ್ದೇಶ – ಪರಿಣಾಮಗಳು- ಒಂದು ಅವಲೋಕನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದ ಭೂಮಿಯನ್ನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಬಂಡವಾಳಶಾಹಿಗಳಿಗೆ ಮಾರಾಟ ಮಾಡುವ ಪ್ರಕ್ರಿಯೆ 1991ರಿಂದ ಆರಂಭವಾಗಿದ್ದು ಕಳೆದ ಒಂದು ದಶಕದಲ್ಲಿ ಇದರ ಪ್ರಮಾಣ ಭಾರೀ ಏರಿಕೆ ಕಂಡಿದೆ. ಮುಂಬೈ, ಬೆಂಗಳೂರಿನಂತಹ ಮಹಾ ನಗರಗಳಲ್ಲಿರುವ ಭಾರೀ ಬೆಲೆಬಾಳುವ ವಕ್ಫ್ ಭೂಮಿಯ ಮೇಲೆ ಬಂಡವಾಳಶಾಹಿಗಳ ಕಣ್ಣು ಬಿದ್ದಿದ್ದು ಇದನ್ನು ತಮ್ಮ ವಶಕ್ಕೆ ಪಡೆಯಲು ವಕ್ಫ್ ತಿದ್ದುಪಡಿ ಕಾಯ್ದೆ ಅವರಿಗೆ ನೆರವಾಗಲಿದೆ ಎಂದು ಎಚ್ಚರಿಸಿದರು.
ತ್ರಿವಳಿ ತಲಾಖ್, ವಕ್ಫ್ ತಿದ್ದುಪಡಿ ಮೊದಲಾದ ಮಾರಕ ಕಾಯ್ದೆಯನ್ನು ಜಾರಿ ಮಾಡುವ ಮೂಲಕ ಕೇಂದ್ರ ಸರಕಾರ ಮುಸ್ಲಿಮರ ಧಾರ್ಮಿಕ ಹಕ್ಕುಗಳನ್ನು ಕಸಿಯುತ್ತಿದೆ. ಸರಕಾರದ ನೀತಿಯ ವಿರುದ್ಧ ಮುಸ್ಲಿಮರು ನಡೆಸುವ ಸಂವಿಧಾನ ಬದ್ಧ ಹೋರಾಟವನ್ನು ದೇಶ ಮತ್ತು ಹಿಂದೂಗಳ ವಿರುದ್ಧ ನಡೆಯುತ್ತಿರುವ ಹೋರಾಟ ಎಂದು ಬಿಂಬಿಸಲಾಗುತ್ತಿದೆ. ಈ ಮೂಲಕ ಹಿಂದೂ ಮುಸ್ಲಿಮರನ್ನು ವಿಭಜಿಸಿ ಓಟ್ ಬ್ಯಾಂಕ್ ಮಾಡುವುದರಲ್ಲಿ ಬಿಜೆಪಿ ಯಶಸ್ವಿಯಾಗಿದೆ ಎಂದರು.
ದೇಶದಲ್ಲಿ ಮುಸ್ಲಿಮರು ಮತ್ತು ರೈತರು, ದಮನಿತ, ಶೋಷಿತ ಜನಾಂಗದ ನಡುವೆ ಅವಿನಾಭಾವ ಸಂಬಂಧ ಇವೆ. ರೈತರ ಮತ್ತು ಶೋಷಿತರ ಭೂಮಿಯನ್ನು ವಕ್ಫ್ ಹೆಸರಿನಲ್ಲಿ ಕಿತ್ತುಕೊಳ್ಳಲಾಗುತ್ತಿದೆ ಎಂಬ ಸುಳ್ಳು ಹಬ್ಬಿಸಿ ಮುಸ್ಲಿಮರ ವಿರುದ್ಧ ಅಪನಂಬಿಕೆ ಸೃಷ್ಟಿಸುವ ಕೆಲಸವನ್ನು ಬಿಜೆಪಿ ವ್ಯವಸ್ಥಿತವಾಗಿ ಮಾಡುತ್ತಿದೆ ಎಂದು ಹರಿಹಾಯ್ದರು.
ರೈತ, ಕಾರ್ಮಿಕ, ಅಲ್ಪಸಂಖ್ಯಾತ ಕಾನೂನುಗಳಿಗೆ ತಿದ್ದುಪಡಿ ತಂದು ಪುನರ್ ರಚನೆ ಮಾಡುವ ಮೂಲಕ ಮುಂದೆ ಸಂವಿಧಾನವನ್ನೇ ಪುನರ್ ರಚನೆ ಮಾಡುವ ಹುನ್ನಾರವನ್ನು ಬಿಜೆಪಿ ಮಾಡುತ್ತಿದೆ. ಸಂವಿಧಾನದ ಮೂಲಕವೇ ಅಧಿಕಾರಕ್ಕೆ ಬಂದು ಸಂವಿಧಾನವನ್ನೇ ಬುಡಮೇಲು ಮಾಡಲು ಹೊರಟ ಬಿಜೆಪಿಯ ವಿರುದ್ಧದ ಹೋರಾಟಕ್ಕೆ ಸಂವಿಧಾನದ ಪರ, ನ್ಯಾಯದ ಪರ, ದೇಶದ ಪರ ಇರುವ ಪ್ರತಿಯೊಬ್ಬರೂ ಧ್ವನಿಗೂಡಿಸಬೇಕು ಎಂದು ಅವರು ಕರೆ ನೀಡಿದರು.
ಮಾಜಿ ಕೆಎಎಸ್ ಅಧಿಕಾರಿ ಮುಜಿಬುಲ್ಲಾ ಜಫಾರಿ ಮಾತನಾಡಿ, ವಕ್ಫ್ ತಿದ್ದುಪಡಿ ಕಾಯ್ದೆ ಒಪ್ಪುವಂತದ್ದು ಅಲ್ಲ. ಇದು ಸಂವಿಧಾನಕ್ಕೆ ವಿರುದ್ಧವಾಗಿದೆ. ಮುಸ್ಲಿಮ್ ಸಮುದಾಯಕ್ಕೆ ಈ ತಿದ್ದುಪಡಿ ಕಾಯ್ದೆಯ ದುಷ್ಪರಿಣಾಮದ ಆಳ ಅಗಲ ತಿಳಿದಿಲ್ಲ. ಈ ಕಾಯ್ದೆ ಜಾರಿಗೆ ಬಂದರೆ ಮುಸ್ಲಿಮ್ ಸಮುದಾಯ ಸಂಪೂರ್ಣ ನಿಶಕ್ತಿ ಹೊಂದಲಿದೆ ಎಂದು ಅಭಿಪ್ರಾಯಪಟ್ಟರು.
ಅಖಿಲ ಭಾರತ ಮಿಲ್ಲಿ ಕೌನ್ಸಿಲ್ ರಾಜ್ಯ ಕಾರ್ಯದರ್ಶಿ ಸೈಯದ್ ಶಫೀಉಲ್ಲಾ ಸಾಬ್ ಮಾತನಾಡಿ, ಬಡ ಮುಸ್ಲಿಮರ ಏಳಿಗೆಗಾಗಿ ಇರುವ ವಕ್ಫ್ ಸಂಪತ್ತನ್ನು ಶ್ರೀಮಂತ ಮುಸ್ಲಿಮರು ಕಬಳಿಸುತ್ತಿದ್ದಾರೆ. ಇದರಿಂದ ಬಡ ಮುಸ್ಲಿಮರಿಗೆ ಅನ್ಯಾಯವಾಗುತ್ತಿದೆ. ಬಡ ಮುಸ್ಲಿಮರು ವಕ್ಫ್ ಸಂಪತ್ತಿನ ಫಲಾನುಭವಿಗಳಾಗಲು ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದು ಬಿಜೆಪಿ ವಾದಿಸುತ್ತಿದೆ. ಇದು ಸುಳ್ಳುನಿಂದ ಕೂಡಿದ ವಾದವಾಗಿದೆ ಎಂದರು.
ಬಡ ಮುಸ್ಲಿಮರ ಮೇಲೆ ಕಾಳಜಿ ತೋರಿಸುವ ಬಿಜೆಪಿ ಬಡ ಹಿಂದು ಮತ್ತು ಕ್ರೈಸ್ತರ ಮೇಲೆ ಯಾಕೆ ತೋರಿಸುತ್ತಿಲ್ಲ. ಮುಜರಾಯಿ ಮತ್ತು ಕ್ರೈಸ್ತ ದತ್ತಿ ಭೂಮಿಯನ್ನು ಶ್ರೀಮಂತರು ಕಬಳಿಸಿರುವ ಪ್ರಕರಣಗಳು ಕೂಡಾ ಇವೆ. ಮುಜರಾಯಿ ಮತ್ತು ಕ್ರೈಸ್ತ ದತ್ತಿ ಕಾಯ್ದೆಗೂ ತಿದ್ದುಪಡಿ ತಂದು ಆ ಧರ್ಮದಲ್ಲಿರುವ ಬಡವರ ಹಿತ ಯಾಕೆ ಕಾಪಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಬಿಜೆಪಿ ಸರಕಾರ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದು ನಾವು ರೈತ ಪರ ಎಂದಂತೆ, ಮುಸ್ಲಿಮ್ ವಿರೋಧಿ ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೆ ತಂದು ನಾವು ಮುಸ್ಲಿಮರ ಪರ ಎನ್ನುತ್ತಿದೆ. ವಕ್ಫ್ ತಿದ್ದುಪಡಿ ಕಾಯ್ದೆ ಮುಸ್ಲಿಮರ ಮೇಲೆ ನಡೆಸಿರುವ ಪ್ರಹಾರವಾಗಿದೆ. ಕಾಯ್ದೆಯ ಬಗ್ಗೆ ಹಲವು ಸುಳ್ಳುಗಳನ್ನು ಹೇಳಿ ಮುಸ್ಲಿಮರನ್ನು ಒಪ್ಪಿಸುವ ಹುನ್ನಾರ ಕೇಂದ್ರ ಸರಕಾರ ನಡೆಸುತ್ತಿದೆ. ಯಾವ ಹುನ್ನಾರ ನಡೆಸಿದರೂ ದೇಶದ ಮುಸ್ಲಿಮರು ಈ ಕಾಯ್ದೆಯ ವಿರುದ್ಧವಾಗಿದ್ದಾರೆ ಎಂದು ತಿಳಿಸಿದರು.
ಹಿರಿಯ ಪತ್ರಕರ್ತ ಬಿ.ಎಂ.ಹನೀಫ್ ಮಾತನಾಡಿ, ತ್ರಿವಳಿ ತಲಾಖ್, ವಕ್ಫ್, ಏಕರೂಪ ನಾಗರಿಕ ಸಂಹಿತೆ ಮೊದಲಾದ ಕಾಯ್ದೆಗಳು 100 ವರ್ಷಗಳ ಹಿಂದೆ ಆರೆಸ್ಸೆಸ್ ಸಿದ್ಧಪಡಿಸಿದ ಅಜೆಂಡಾವಾಗಿದೆ. ಇವೆಲ್ಲವೂ ನಾಗಪುರದಲ್ಲಿ ತೀರ್ಮಾನವಾಗಿ ಬಿಜೆಪಿ ಮೂಲಕ ದೇಶದಲ್ಲಿ ಜಾರಿಯಾಗುತ್ತಿದೆ. ಮುಸ್ಲಿಮರ ಒಪ್ಪಿಗೆ ಇಲ್ಲದ ಕಾನೂನುಗಳು ಮುಸ್ಲಿಮ್ ಪರವಾಗಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ತ್ರಿವಳಿ ತಲಾಖ್ ಕಾಯ್ದೆಯಿಂದ ಇಂದು ದೇಶದಲ್ಲಿ ಮುಸ್ಲಿಮ್ ಮಹಿಳೆಯರು ಸಂಕಷ್ಟಕ್ಕೆ ಸಿಲುಕುತ್ತಿರುವ ಹಲವು ಘಟನೆಗಳು ವರದಿಯಾಗುತ್ತಿದೆ. ಆದರೂ ತ್ರಿವಳಿ ತಲಾಖ್ ಕಾಯ್ದೆ ಮೂಲಕ ನಾವು ಮುಸ್ಲಿಮ್ ಮಹಿಳೆಯರ ಹಕ್ಕುಗಳನ್ನು ರಕ್ಷಿಸುತ್ತೇವೆ ಎಂದು ಬಿಜೆಪಿ ಹೇಳುತ್ತಿದೆ. ವಕ್ಫ್ ತಿದ್ದುಪಡಿ ಇಡೀ ಮುಸ್ಲಿಮ್ ಸಮುದಾಯವನ್ನು ದಮನಿಸುವ ಮತ್ತು ನಿಶಕ್ತಿಗೊಳಿಸುವ ಕಾಯ್ದೆಯಾಗಿದೆ. ಆದರೂ ಬಿಜೆಪಿ ಅದನ್ನು ಬಡ ಮುಸ್ಲಿಮರ ರಕ್ಷಿಸುವ ಕಾಯ್ದೆ ಎಂದು ಹೇಳುತ್ತಿರುವುದು ದುರಂತವಾಗಿದೆ ಎಂದು ಟೀಕಿಸಿದರು.
ಖಾಸಿಂ ಸಾಬ್ ಸ್ವಾಗತಿಸಿದರು. ಕೆ.ಎಸ್.ವಿಮಲಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಎಸ್.ಲಕ್ಷ್ಮೀ ಗೀತೆ ಹಾಡಿದರು. ಜಾವೀದ್ ಅಹ್ಮದ್ ವಂದನಾರ್ಪಣೆ ಸಲ್ಲಿಸಿದರು. ಗೌರಮ್ಮ ಕಾರ್ಯಕ್ರಮ ನಿರೂಪಿಸಿದರು.
ಉಮೇಶ್ ಅವ್ರೆ ಎಲ್ಲರಿಗೂ ನಿಮ್ಮ ಹಾಗೆ ಸರಕಾರಿ ನೌಕರಿ ಸಿಗೋಲ್ಲ. ಬಂಡವಾಳ ಇರುವವರ ಬಳಿಯಲ್ಲೇ ಕೆಲಸ ಮಾಡಿ ಹೊಟ್ಟೆ ತುಂಬಿಸಬೇಕು.
Waqf ತಿದ್ದುಪಡಿಯಿಂದ ತೊಂದರೆ ಇದೆಯೇ ಇಲ್ಲವೇ ಬೇರೆ ವಿಷಯ. Aadre ತ್ರಿವಳಿ ತಲಾಕ್ ನಿಂದ ತೊಂದರೆ ಯಾರಿಗೆ ಮುಸ್ಲಿಂ ಪುರುಷರಿಗೋ ಅಥವಾ ಮಹಿಳೆಯರಿಗೋ.
ಸ್ಪಷ್ಟ ಪಡಿಸಿ