“ರಾಜಕೀಯಕ್ಕೆ ಹೋಗುತ್ತೇನೆ ಎನ್ನುವ ಒಬ್ಬರೇ ಒಬ್ಬ ವಿದ್ಯಾರ್ಥಿಗಳು ಸಿಗುತ್ತಿಲ್ಲ. ಯಾಕೆಂದರೆ, ‘ರಾಜಕೀಯದಲ್ಲಿ ಇರುವುದೆಲ್ಲವೂ ಭ್ರಷ್ಟಾಚಾರ, ರೌಡಿಗಳು’ ಎನ್ನುತ್ತಾರೆ ವಿದ್ಯಾರ್ಥಿಗಳು. ಅವರಿಗೆ ನಾನು ಹೇಳಬಯಸುವುದು; ‘ನೀವು ಹೋಗದೆ ಇದ್ದರೆ, ಇನ್ನೂ ಹೆಚ್ಚು ರೌಡಿಗಳೇ ರಾಜಕೀಯದಲ್ಲಿ ತುಂಬಿಕೊಳ್ಳುತ್ತಾರೆ.’ ಯುವಜನರು, ವಿದ್ಯಾರ್ಥಿಗಳು ರಾಜಕೀಯದಲ್ಲಿ ಸಕ್ರಿಯವಾಗಬೇಕು” ಎಂದು ನಿವೃತ್ತ ಪ್ರಾಧ್ಯಾಪಕ ಚಂದ್ರ ಪೂಜಾರಿ ಹೇಳಿದರು.
ಬೆಂಗಳೂರಿನಲ್ಲಿ ಭಾರತ ಉಳಿಸಿ ಸಮಿತಿ ಆಯೋಜಿಸಿದ್ದ ‘ಗಣರಾಜ್ಯ ಭಾರತ @75 – ಪ್ರಸಕ್ತ ಸವಾಲುಗಳು’ ಚಿಂತನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಗಣರಾಜ್ಯ ವ್ಯವಸ್ಥೆ ಮೂಲಕ ಪ್ರಜಾಪ್ರಭುತ್ವ ಜಾರಿಗೆ ಬರುತ್ತದೆ. ಅಮೆರಿಕದಲ್ಲಿ ರಾಜ್ಯಗಳು ಸೇರಿ ದೇಶವಾಗಿವೆ. ಆದರೆ, ನಮ್ಮಲ್ಲಿ ದೇಶ ನಂತರ ರಾಜ್ಯ. ರಾಜ್ಯಗಳು ಮತ್ತು ಕೇಂದ್ರದ ನಡುವೆ ತೆರಿಗೆ ಹಂಚಿಕೆಯಲ್ಲಿ ಅಸಮಾನತೆ ಇದೆ. ಜನರಿಗೆ ಮೂಲಸೌಕರ್ಯಗಳನ್ನು ಒದಗಿಸುವುದರಲ್ಲಿ ಮೂರನೇ ಎರಡರಷ್ಟು ಜವಾಬ್ದಾರಿ ರಾಜ್ಯಕ್ಕೂ, ಮೂರನೇ ಒಂದರಷ್ಟು ಜವಾಬ್ದಾರಿ ಕೇಂದ್ರಕ್ಕೂ ಇದೆ. ಆದರೆ, ತೆರಿಗೆ ಸಂಗ್ರಹದಲ್ಲಿ ಕೇಂದ್ರಕ್ಕೆ ಮೂರನೇ ಎರಡರಷ್ಟು, ರಾಜ್ಯಕ್ಕೆ ಮೂರನೇ ಒಂದರಷ್ಟು ಹಕ್ಕು ಮಾತ್ರ ಇದೆ. ಇದರಿಂದ, ಹಲವು ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ” ಎಂದು ಆರೋಪಿಸಿದರು.
“ಯುಜಿಸಿ ನಿಯಮ ಬದಲಾಯಿಸಲು ಕೇಂದ್ರ ಹೊರಟಿದೆ. ರಾಜ್ಯಪಾಲರ ಕಚೇರಿ ಬಳಸಿಕೊಂಡು, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಶಾಸಕರನ್ನು ಬ್ಲಾಕ್ಮೇಲ್ ಮಾಡಿ ರಾಜ್ಯ ಸರ್ಕಾರಗಳನ್ನು ಉರುಳಿಸುವ ಕುತಂತ್ರವನ್ನು ಬಿಜೆಪಿ ಮಾಡುತ್ತಲೇ ಇದೆ. ಒಂದು ದೇಶ – ಒಂದು ಚುನಾವಣೆ, ಒಂದು ಭಾಷೆ, ಒಂದು ಸಂಸ್ಕೃತಿ ಎನ್ನುತ್ತಲೇ ಕೇಂದ್ರವು ಗಣರಾಜ್ಯ ವ್ಯವಸ್ಥೆಯನ್ನು ಹಾಳುಮಾಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“2022ರ ವರದಿಯಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಪಠ್ಯ ಕ್ರಮಗಳು ಹಿಂದಿಯಲ್ಲಿ ಇರಬೇಕು. ಪ್ರವೇಶ ಪರೀಕ್ಷೆಗಳು ಹಿಂದಿಯಲ್ಲಿಯೇ ನಡೆಯಬೇಕು ಎಂದು ಶಿಫಾರಸ್ಸು ಮಾಡಲಾಗಿದೆ. ಈ ಮೂಲಕ ಹಿಂದಿಯನ್ನು ಹೇರಲು ಸಿದ್ದತೆ ನಡೆಸಲಾಗುತ್ತಿದೆ. ಜಿಎಸ್ಟಿಯನ್ನು ತಮಿಳುನಾಡು ವಿರೋಧಿಸಿತ್ತು. ಜಿಎಸ್ಟಿಯಿಂದಾಗಿ 80% ತೆರಿಗೆ ಸಂಗ್ರಹ ಮಾಡುವ ಅಧಿಕಾರ ಕೇಂದ್ರ ಸರ್ಕಾರದ ಪಾಲಾಗಿದೆ. ರಾಜ್ಯಕ್ಕೆ ಬರ ಬಂದರೆ ಪರಿಹಾರ ಕೊಡಿ ಎಂದು ಕೇಂದ್ರದ ಬಳಿ ಭಿಕ್ಷೆ ಬೇಡಬೇಕಾದ ಪರಿಸ್ಥಿತಿ ಇದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲಿನ ನಂಬಿಕೆ ಕುಸಿದಿದೆ: ಜಸ್ಟಿಸ್ ಗೋಪಾಲಗೌಡ
“ಒಂದು ದೇಶ ಒಂದು ಚುನಾವಣೆ ಬರಬೇಕು ಅಂದರೆ ರಾಜ್ಯಗಳ ಒಪ್ಪಿಗೆ ಬೇಕು. ಸಂವಿಧಾನದಲ್ಲಿ ತಿದ್ದುಪಡಿ ಆಗಬೇಕು. ಇದು ದೊಡ್ಡ ಕೆಲಸ. ಸಂವಿಧಾನದಲ್ಲಿ ತಿದ್ದುಪಡಿ ಮಾಡುವುದು ಒಂದು ಸವಾಲಾದರೆ, ಮತ್ತೊಂದು ಅಪಾಯವೂ ಇದೆ. ಅದೇನೆಂದರೆ, ಮತಕ್ಷೇತ್ರಗಳ ಮರುವಿಂಗಡಣೆ. 1971ರಲ್ಲಿ ಕೊನೆಯ ಡಿಲಿಮಿಟೇಶನ್ ಆಗಿತ್ತು. 2002ರಲ್ಲಿ ಡಿಲಿಮಿಟೇಶನ್ ಮಾಡಬೇಕಿತ್ತು. ಆದರೆ, ಅಂದಿನ ವಾಜಪೇಯಿ ಸರ್ಕಾರ ಕ್ಷೇತ್ರ ಮರುವಿಂಗಣೆಯನ್ನು ಮುಂದಕ್ಕೆ ಹಾಕಿದರು. ಈಗ ಕ್ಷೇತ್ರ ಮರುವಿಂಗಡಣೆಗೆ ಮೋದಿ ಸರ್ಕಾರ ಎದುರು ನೋಡುತ್ತಿದೆ. ಬಿಜೆಪಿಗೆ ಅನುಕೂಲವಾಗುವಂತೆ ಡಿಲಿಮಿಟೇಷನ್ ಮಾಡಲಾಗುತ್ತದೆ. ಅದರಂತೆ, ಬಿಜೆಪಿ ಅಧಿಕಾರದಲ್ಲಿರುವ ಉತ್ತರ ಪ್ರದೇಶದಲ್ಲಿ ಈಗ 80 ಲೋಕಸಭಾ ಕ್ಷೇತ್ರಗಳಿವೆ. ಅದನ್ನು 140 ಕ್ಷೇತ್ರಗಳಿಗೆ ಹೆಚ್ಚಿಸಲಾಗುತ್ತದೆ. ದಕ್ಷಿಣ ಭಾತರದ ಆಂದ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕರ್ನಾಟಕ, ಕೇರಳ – ಈ ಐದು ರಾಜ್ಯಗಳ ಒಟ್ಟು ಸ್ಥಾನಗಳು 159 ಆಗಬಹುದು. ಇದು ಉತ್ತರವು ದಕ್ಷಿಣದ ಮೇಲೆ ಸವಾರಿ ಮಾಡಲು ಅವಕಾಶ ನೀಡುತ್ತದೆ. ಅದರ ಲಾಭವನ್ನು ಸಂಸತ್ತಿನಲ್ಲಿ ಬಿಜೆಪಿ ಪಡೆದುಕೊಳ್ಳುತ್ತದೆ” ಎಂದು ಆರೋಪಿಸಿದರು.