ಬಿಜೆಪಿ ಸರ್ಕಾರ ಇಟ್ಟಿರುವ ಹೆಜ್ಜೆಗಳು ಇತಿಹಾಸದಲ್ಲಿ ರಕ್ತದ ಕಲೆಗಳನ್ನು ಬಿಟ್ಟು ಹೋಗುತ್ತವೆಯೇ ಹೊರತು, ಮಾನವೀಯತೆಯ ಮಮತೆಯನ್ನು ದಾಖಲಿಸುವುದಿಲ್ಲ
ನಕ್ಸಲ್ ನಿಗ್ರಹದ ಹೆಸರಲ್ಲಿ ಛತ್ತೀಸಗಡದಲ್ಲಿ ನಡೆಯುತ್ತಿರುವುದೇನು? ಭಾನುವಾರ ಒಂದೇ ದಿನ ಇಲ್ಲಿನ ಬಿಜಾಪರ್ ಜಿಲ್ಲೆಯಲ್ಲಿ 31 ನಕ್ಸಲರನ್ನು ಹೊಡೆದುರುಳಿಸಿದೆ ಸರ್ಕಾರ. ಗುಂಡಿನ ಚಕಮಕಿಯಲ್ಲಿ ಜಿಲ್ಲಾ ಮೀಸಲು ಪಡೆ ಮತ್ತು ವಿಶೇಷ ಕಾರ್ಯ ಪಡೆಯ ತಲಾ ಒಬ್ಬ ಸಿಬ್ಬಂದಿ ಕೊನೆಯುಸಿರೆಳೆದಿದ್ದಾರೆ. ಈ ವರ್ಷ 81 ನಕ್ಸಲರನ್ನು ಛತ್ತೀಸಗಡದಲ್ಲಿ ಕೊಲ್ಲಲಾಗಿದೆ. ಭಾನುವಾರ ಹರಿಸಿದ ನೆತ್ತರ ಕೋಡಿ ಖಂಡನೀಯ.
“ನಕ್ಸಲರನ್ನು 2026ರ ಮಾರ್ಚ್ 31ರೊಳಗೆ ಪೂರ್ಣ ನಿರ್ಮೂಲನೆ ಮಾಡುತ್ತೇವೆ. ಆ ಬಳಿಕ ಈ ಪಿಡುಗಿನಿಂದ ಜೀವಹಾನಿ ಆಗುವುದಿಲ್ಲ. ನಕ್ಸಲ್ ಮುಕ್ತ ಭಾರತ ನಿರ್ಮಾಣ ಗುರಿ ಸಾಧನೆಯ ದಿಸೆಯಲ್ಲಿ ಛತ್ತೀಸಗಡದಲ್ಲಿ ಭದ್ರತಾ ಪಡೆಗಳು ದೊಡ್ಡ ಯಶಸ್ಸು ಸಾಧಿಸಿವೆ” ಎಂದಿದ್ದಾರೆ ಕೇಂದ್ರ ಗೃಹ ಸಚಿವ ಅಮಿತ್ ಶಾ. ಈ ಕ್ರಮದ ಬಗ್ಗೆ ಅವರು ಹೆಮ್ಮೆಯಿಂದ ತಮ್ಮ ಬೆನ್ನನ್ನು ತಾವೇ ಚಪ್ಪರಿಸಿಕೊಂಡಿದ್ದಾರೆ.
‘ನಕ್ಸಲರ ನಿರ್ಮೂಲನೆ ಮಾಡುತ್ತೇವೆ’ ಎಂದು ಅಮಿತ್ ಶಾ ಘೋಷಿಸಿಯಾಗಿದೆ. ಇದು ಅಪಾಯಕಾರಿಯೂ ಆಘಾತಕಾರಿಯೂ ಆತ್ಮಘಾತಕವೂ ಆಗಿದೆ. ಒಂದೇ ದಿನ ನಮ್ಮದೇ ನಾಗರಿಕರ 31 ಜೀವಗಳನ್ನು ಅಳಿಸಿ ಹಾಕುವ ನಮ್ಮ ವ್ಯವಸ್ಥೆ ಮನುಷ್ಯ ವಿರೋಧಿ.
ಬಿಜೆಪಿ ಸರ್ಕಾರ ಇಟ್ಟಿರುವ ಹೆಜ್ಜೆಗಳು ಇತಿಹಾಸದಲ್ಲಿ ರಕ್ತದ ಕಲೆಗಳನ್ನು ಬಿಟ್ಟು ಹೋಗುತ್ತವೆಯೇ ಹೊರತು, ಮಾನವೀಯತೆಯ ಮಮತೆಯನ್ನು ದಾಖಲಿಸುವುದಿಲ್ಲ. ನಕ್ಸಲೀಯರ ವಿಚಾರದಲ್ಲಿ ಕಳೆದ ಹಲವು ವರ್ಷಗಳ ಹಿಂದೆ ಮತ್ತು ಮೊನ್ನೆ ಮೊನ್ನೆ ಕರ್ನಾಟಕ ಇಟ್ಟ ಹೆಜ್ಜೆಗಳು ಪ್ರಜಾತಂತ್ರ ವ್ಯವಸ್ಥೆಗೆ ಬಹುದೊಡ್ಡ ಮಾದರಿ.
ವ್ಯವಸ್ಥೆಯ ಅಸಮಾನತೆ, ಕಿರುಕುಳ, ಹಿಂಸೆಯಿಂದ ಬೇಸತ್ತ ಮಂದಿ ಕಾಡು ಸೇರಿ ಬಂದೂಕು ಹಿಡಿದರು. ಬಂಗಾಳದ ನಕ್ಸಲ್ಬರಿ ಗ್ರಾಮದಲ್ಲಿ ಬೀಜಾಂಕುರಿಸಿದ ಕಾರಣಕ್ಕೆ ಈ ಚಳವಳಿ ನಕ್ಸಲೀಯ ಎಂಬ ಹೆಸರು ಪಡೆಯಿತು. ನಕ್ಸಲೀಯರ ಹೋರಾಟದ ಗೊತ್ತು ಗುರಿಗಳು ಸರಿಯಾದರೂ, ಹಿಡಿದ ಮಾರ್ಗವು ಪ್ರಜಾತಂತ್ರೀಯ ಆಗಿರಲಿಲ್ಲ. ಹಿಂಸೆಯ ದಾರಿ ಹಿಂಸೆಯಿಂದಲೇ ಮುಕ್ತಾಯವಾಗುತ್ತದೆ. ನಕ್ಸಲೀಯ ಹೋರಾಟವನ್ನು ಸರ್ಕಾರಗಳು ಸಾಮಾಜಿಕ-ಆರ್ಥಿಕ ಸಮಸ್ಯೆಯಾಗಿ ಮಾನವೀಯ ದೃಷ್ಟಿಯಿಂದ ನೋಡಬೇಕಾಗುತ್ತದೆ. ಕರ್ನಾಟಕ ಸರ್ಕಾರ ಅಂತಹ ಹೃದಯವಂತಿಕೆಯನ್ನು ತೋರಿತು. 2013ರಲ್ಲಿ ಸಿದ್ದರಾಮಯ್ಯನವರು ಮೊದಲ ಸಲ ಮುಖ್ಯಮಂತ್ರಿಯಾದಾಗ ಮತ್ತು 2023ರಲ್ಲಿ ಮತ್ತೆ ಸಿಎಂ ಆದಾಗ ಕೈಗೊಂಡ ಅತ್ಯಂತ ಮಹತ್ತರದ ನಿರ್ಧಾರಗಳಲ್ಲಿ ನಕ್ಸಲರನ್ನು ಮುಖ್ಯವಾಹಿನಿಗೆ ತರುವುದೂ ಒಂದು.
ಗೌರಿ ಲಂಕೇಶ್, ಎಚ್.ಎಸ್.ದೊರೆಸ್ವಾಮಿ ಅಂಥವರ ಪ್ರಯತ್ನದ ಫಲವಾಗಿ ಸಿದ್ದರಾಮಯ್ಯನವರು ನಕ್ಸಲರನ್ನು ಮುಖ್ಯವಾಹಿನಿಗೆ ಬರಮಾಡಿಕೊಳ್ಳುವ ಮಾನವೀಯತೆ ತೋರಿದರು. 2015ರಲ್ಲಿ 6 ಮಂದಿ ನಕ್ಸಲರು, 2025ರಲ್ಲಿ 8 ಮಂದಿ ನಕ್ಸಲರು ಕಾಡು ತೊರೆದು ಹೊರಬಂದರು. ಕರ್ನಾಟಕದಲ್ಲಿ ನಕ್ಸಲ್ ಚಳವಳಿ ಒಂದು ಮಟ್ಟಿಗೆ ಅಂತ್ಯವಾಯಿತೆಂದೇ ಹೇಳಲಾಗುತ್ತಿದೆ.
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಚುನಾವಣಾ ಪಾರದರ್ಶಕತೆ ನಗೆಪಾಟಲಿಗೀಡಾಯಿತೇ?
ಕಾಡು ಬಿಟ್ಟು ನಾಡಿಗೆ ಬಂದವರ ಸ್ಥಿತಿ ಈಗ ಹೇಗಿದೆ? ಸರ್ಕಾರ ಸರಿಯಾಗಿ ಸ್ಪಂದಿಸಿದೆಯೇ? ಇತ್ಯಾದಿ ಪ್ರಶ್ನೆಗಳು ಇದ್ದೇ ಇವೆ. ಆದರೆ ಕಾಡಿನೊಳಗೆ ಇದ್ದು ಏನೂ ಸಾಧಿಸಲಾಗದು ಎಂಬ ಸತ್ಯಕ್ಕೆ ನಕ್ಸಲರು ತೆರೆದುಕೊಳ್ಳುವುದು, ಅದಕ್ಕೆ ಸರ್ಕಾರವೂ ಸ್ಪಂದಿಸುವುದು ಪರಸ್ಪರ ಜೀವಪರವಾದ ನಡೆ. ಓರೆಕೋರೆಗಳ ನಡುವೆಯೂ ಇದು ಒಪ್ಪಿತವಾದ ಮಾರ್ಗ. ಹೊರಗೆ ಬಂದ ಹಲವರು “ಇದು ಮುಖ್ಯವಾಹಿನಿಯನ್ನು ಸೇರುವುಿದೇ ವಿನಾ ಶರಣಾಗತಿಯಲ್ಲ, ಪ್ರಜಾತಂತ್ರ ವ್ಯವಸ್ಥೆಯೊಳಗೆ ಹೋರಾಟಗಳನ್ನು ಮುಂದುವರಿಸುತ್ತೇವೆ” ಎಂದು ಹೊರಬಂದ ನಂತರವೂ ಜನಪರ ಚಳವಳಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇಡೀ ದೇಶದಲ್ಲಿ ಹೊಸ ಮಾದರಿಯನ್ನು ಹುಟ್ಟಿಹಾಕಿದ ಕೀರ್ತಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ. ಛತ್ತೀಸಗಡದ ಮಾದರಿಗೂ, ಕರ್ನಾಟಕದ ಮಾದರಿಗೂ ಇರುವ ವ್ಯತ್ಯಾಸ ಇಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತದೆ.
ನಕ್ಸಲರು ಮುಖ್ಯವಾಹಿನಿಗೆ ಬರುವ ಧೈರ್ಯ ಮಾಡಬೇಕಾದರೆ, ತಮ್ಮನ್ನು ಮುಕ್ತವಾಗಿಯೂ ನೋಡುವ ಸರ್ಕಾರವೂ ಎದುರಿಗಿರಬೇಕಾಗುತ್ತದೆ. ಸಾಮಾಜಿಕ ಆರ್ಥಿಕ ಅನ್ಯಾಯಗಳ ವಿರುದ್ಧ ಬಂಡೆದ್ದು ಕೋವಿ ಹಿಡಿದು ಕಾಡಿಗೆ ನಡೆದು ಸಮರ ಸಾರಿದವರು ನಕ್ಸಲರು. ಸಮಾಜ ಮತ್ತು ಸರ್ಕಾರಗಳಿಂದ ಗೋಚರವಾಗಿ ಮತ್ತು ಅಗೋಚರವಾಗಿ ನಡೆಯುವ ಬೆಟ್ಟದಷ್ಟು ಅವರನ್ನು ಪ್ರಭುತ್ವಗಳು ಸುಧಾರಣೆಯ ದೃಷ್ಟಿಯಿಂದ ನೋಡಬೇಕೇ ವಿನಾ ಅವರ ರಕ್ತದ ಓಕುಳಿ ಹರಿಸಿ ರಣಕೇಕೆ ಹಾಕಿ ಬೆನ್ನು ಚಪ್ಪರಿಸಿಕೊಳ್ಳುವುದು ವಿಕೃತಿಯಲ್ಲದೆ ಮತ್ತೇನೂ ಅಲ್ಲ.
ಕೋವಿ ಹಿಡಿದು ಕಾಡು ಸೇರಿರುವವರು ಬಹುಕಷ್ಟಗಳ ಬದುಕನ್ನು ಆರಿಸಿಕೊಂಡಿರುವ ತ್ಯಾಗಜೀವಿಗಳೇ ವಿನಾ ಬಹುತೇಕ ರಾಜಕಾರಣಿಗಳಂತೆ ವಿಲಾಸಪ್ರಿಯರಲ್ಲ. ಪ್ರಭುತ್ವಗಳು ಮತ್ತು ಪ್ರಭುತ್ವ ಬೆಂಬಲಿತ ಶೋಷಕರು ಈ ವ್ಯವಸ್ಥೆಯಲ್ಲಿ ಬಡವರ್ಗಗಳ ರಕ್ತ ಹೀರಿ ನಡೆಸುತ್ತಿರುವ ಸಾಗರದಷ್ಟು ಹಿಂಸೆಯ ಮುಂದೆ ನಕ್ಸಲರ ಹಿಂಸೆ ಸಾಸಿವೆಯೇ ಸರಿ. ಆದರೆ ಅದು ಸಂವಿಧಾನಬಾಹಿರ.

ಬೆಟ್ಟದಷ್ಟು ಹಳೆಯದಾದ ಸತ್ಯ.ಅರ್ಥೈಸಿಕೊಂಡು ಕಡ್ಡಾಯವಾಗಿ ನಾಗರೀಕರು ಅನುಪಾಲನೆ ಮಾಡಬೇಕಾಗಿದೆ.ಧನ್ಯವಾದಗಳು.