ಇಲ್ಲಿ ನಡೆಯುತ್ತಿರುವ ಪ್ರತಿಭಟನೆ, ಹೋರಾಟ, ಕಾರ್ಯಕ್ರಮಗಳು ಸಂವಿಧಾನ, ಪ್ರಜಾಪ್ರಭುತ್ವಕ್ಕೆ ಅನುಗುಣವಾಗಿಯೇ ಇದ್ದರೂ, ಅನುಮತಿ ನಿರಾಕರಿಸಿರುವ ಪೊಲೀಸರ ಕ್ರಮ ದಮನಕಾರಿಯಂತೆ ಕಾಣುತ್ತಿದೆ. ತುರ್ತು ಪರಿಸ್ಥಿತಿಯನ್ನು ನೆನಪಿಗೆ ತರುತ್ತಿದೆ.
‘ಕಥೆ, ಕಾವ್ಯ, ನಾಟಕ, ಸಂಗೀತ ಮುಂತಾದ ಸೃಜನಶೀಲ ಅಭಿವ್ಯಕ್ತಿಗಳಿಗೆ ನಮ್ಮ ಬೆಂಬಲವಿರಲಿದೆ. ಕೆಳಹಂತದ ಪೊಲೀಸ್ ಅಧಿಕಾರಿಗಳ ತಪ್ಪು ತಿಳಿವಳಿಕೆಯ ಕಾರಣಕ್ಕಾಗಿ ಅನಾವಶ್ಯಕ ಗೊಂದಲ ನಿರ್ಮಾಣವಾಗಿರುವ ವಿಚಾರ ನನ್ನ ಗಮನಕ್ಕೆ ಬಂದಿದ್ದು, ಮುಂದೆ ಇಂತಹ ಗೊಂದಲಗಳಿಗೆ ಅವಕಾಶ ಮಾಡಿಕೊಡಬಾರದು ಎಂದು ಪೊಲೀಸ್ ಮಹಾನಿರ್ದೇಶಕರಿಗೆ ಸ್ಪಷ್ಟ ಸೂಚನೆ ನೀಡಿದ್ದೇನೆ. ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಕೆಲಸಗಳ ಜೊತೆ ನಮ್ಮ ಸರ್ಕಾರ ನಿಲ್ಲಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ಪಷ್ಟನೆ ನೀಡಿದ್ದಾರೆ.
ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸರ್ಕಾರದಿಂದ ಅಡ್ಡಿಯಾದಾಗ ಮಧ್ಯಪ್ರವೇಶ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಕೆಲಸಗಳ ಜೊತೆ ನಮ್ಮ ಸರ್ಕಾರ ನಿಲ್ಲಲಿದೆ ಎಂದಿರುವುದು ಕೊಂಚ ಸಮಾಧಾನದ ಸಂಗತಿಯಾಗಿರಬಹುದು. ಆದರೆ, ಈ ನಡೆ, ಚುನಾವಣೆ ನಡೆದು ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ, ಗೃಹ ಖಾತೆ ಬದಲಾಗಿಲ್ಲ ಎನ್ನುವುದನ್ನು ಸರ್ಕಾರವೇ ಸ್ಪಷ್ಟಪಡಿಸಿದಂತಿದೆ. ರಾಜ್ಯ ಪೊಲೀಸರು ಬಿಜೆಪಿಯ ಹಿಡಿತದಿಂದ ಬಿಡಿಸಿಕೊಂಡಿಲ್ಲ, ಬಲಪಂಥೀಯ ಮನಸ್ಥಿತಿಯಿಂದ ಹೊರಬಂದಿಲ್ಲ ಎನ್ನುವುದನ್ನು ಒಪ್ಪಿಕೊಂಡಂತಿದೆ.
ಇಸ್ರೇಲ್-ಹಮಾಸ್ ನಡುವಿನ ಯುದ್ಧ ಶುರುವಾಗಿ ಐವತ್ತು ದಿನಗಳ ಮೇಲಾಯಿತು. ಯುದ್ಧನೀತಿಗಳನ್ನು ಬದಿಗಿಟ್ಟ ಎರಡು ದೇಶಗಳು, ನಾಗರಿಕರು ವಾಸ ಮಾಡುವ ಪ್ರದೇಶಗಳ ಮೇಲೆ ದಾಳಿ ಮಾಡಿದ್ದಲ್ಲದೇ, ಹೆಂಗಸರು ಮತ್ತು ಮಕ್ಕಳನ್ನು ಟಾರ್ಗೆಟ್ ಮಾಡಿ ಹತ್ಯೆ ಮಾಡುತ್ತಿವೆ. ಗಾಝಾ ಪಟ್ಟಿ ಈಗ ಸ್ಮಶಾನ ಭೂಮಿಯಾಗಿದೆ. ನರಮೇದ ಕಂಡ ಜಗತ್ತು ಬೆಚ್ಚಿಬಿದ್ದಿದೆ. ಮಾರಣಹೋಮ ಕುರಿತು ಪ್ರಪಂಚದ ನಾನಾ ಭಾಗಗಳಿಂದ ವಿರೋಧ ವ್ಯಕ್ತವಾಗಿದೆ. ಬಹಳ ದೊಡ್ಡ ಮಟ್ಟದ ಪ್ರತಿಭಟನೆಗಳೂ ಜರುಗಿವೆ. ಅಷ್ಟೇ ಅಲ್ಲ, ಮನುಷ್ಯಪ್ರೇಮಿಗಳಾದ ಇಸ್ರೇಲ್ ಮತ್ತು ಪ್ಯಾಲೆಸ್ತೇನಿಯರೇ ಈ ಕೃತ್ಯವನ್ನು ಖಂಡಿಸುತ್ತಿದ್ದಾರೆ. ಶಾಂತಿ-ನೆಮ್ಮದಿ-ಸಹಬಾಳ್ವೆಗಾಗಿ ಕಾತರಿಸುತ್ತಿದ್ದಾರೆ.
ಆ ನಿಟ್ಟಿನಲ್ಲಿ ರಾಜ್ಯದ ನಾನಾ ಭಾಗಗಳಲ್ಲಿ ಎಚ್ಚೆತ್ತ ಪ್ರಜ್ಞಾವಂತರು ಹಾಗೂ ಸಂವಿಧಾನ ಪ್ರಜ್ಞೆಯುಳ್ಳ ನಾಗರಿಕರಿಂದ, ನರಮೇಧ ನಿಲ್ಲಿಸಬೇಕು ಹಾಗೂ ಅಲ್ಲಿ ನ್ಯಾಯಾಧಾರಿತ ಶಾಂತಿ ಸ್ಥಾಪಿಸಬೇಕೆಂದು ಒತ್ತಾಯಿಸಿ ಶಾಂತಿ ಪ್ರದರ್ಶನ, ಕವಿಗೋಷ್ಠಿ, ಪ್ರತಿಭಟನೆ, ಸಭೆ ನಡೆಸುವ ಪ್ರಯತ್ನಗಳಾಗಿವೆ. ಇವೆಲ್ಲವೂ ಮನುಷ್ಯಸಹಜ ಪ್ರಯತ್ನಗಳು. ಶಾಂತಿ-ಸಹಬಾಳ್ವೆಗಾಗಿ ಕಾತರಿಸುವ ಮಾನವೀಯ ನಡೆಗಳು. ಆದರೆ, ಮನುಷ್ಯಪ್ರೇಮಿಗಳ ಪ್ರಯತ್ನಗಳಿಗೆ ರಾಜ್ಯ ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳಿಂದ ವಿರೋಧ ವ್ಯಕ್ತವಾಗಿದೆ, ಅನುಮತಿ ನಿರಾಕರಿಸಲಾಗಿದೆ. ಅಷ್ಟೇ ಅಲ್ಲ, ಅಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡವರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗಿದೆ.
ಮುಂದುವರೆದು, ರಂಗಶಂಕರದಲ್ಲಿ ಪ್ಯಾಲೆಸ್ತೀನ್ ಪರವಾದ ಹಾಡು ಮತ್ತು ನಾಟಕ ಕಾರ್ಯಕ್ರಮಕ್ಕೂ ಪೊಲೀಸರು ಅಡ್ಡಿಪಡಿಸಿದ್ದಾರೆ. ಪ್ರಶ್ನಿಸಿದವರಿಗೆ ‘ಇದು ಅಂತಾರಾಷ್ಟ್ರೀಯ ಸಮಸ್ಯೆ’, ‘ಶಾಂತಿ ಭಂಗಕ್ಕೆ ಕಾರಣವಾಗುತ್ತದೆ’ ಹಾಗೂ ‘ಸರ್ಕಾರದ ನೀತಿಗಳಿಗೆ ವಿರುದ್ಧವಾಗಿದೆ’ ಎಂಬ ಕಾರಣಗಳನ್ನು ನೀಡಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ನಿರಾಕರಣೆಗೆ ಕಾರಣಗಳನ್ನು ಲಿಖಿತವಾಗಿ ಬರೆದುಕೊಟ್ಟಿದ್ದಾರೆ.
ಕಾಂಗ್ರೆಸ್ ಸರ್ಕಾರದ ಸೂಚನೆಯ ಮೇರೆಗೆ ಪೊಲೀಸ್ ಇಲಾಖೆ ಹೀಗೆ ವರ್ತಿಸುತ್ತಿದೆಯೇ ಅಥವಾ ಗೃಹ ಸಚಿವರಿಗೆ ಈ ಬಗ್ಗೆ ಮಾಹಿತಿ ಇಲ್ಲವೇ ಎಂಬ ಅನುಮಾನ ರಾಜ್ಯದ ಜನತೆಯನ್ನು ಕಾಡಲಾರಂಭಿಸಿದೆ. ಇದನ್ನು ಹೀಗೆಯೇ ಬಿಡುವುದು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಅಷ್ಟು ಸರಿಯಾದ ನಡೆಯಲ್ಲ ಎನಿಸಿ, ನಾಡಿನ ಪ್ರಜ್ಞಾವಂತರು, ಡಿಸೆಂಬರ್ 2ರಂದು ಪ್ಯಾಲೆಸ್ತೀನ್ ನಲ್ಲಿ ಶಾಂತಿ ಕೋರಿ ಮತ್ತು ಕಾಂಗ್ರೆಸ್ ಸರ್ಕಾರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿರುವುದನ್ನು ವಿರೋಧಿಸಿ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆಯನ್ನು ಆಯೋಜಿಸಲಾಗಿದೆ.
ಸರ್ಕಾರ ನಡೆಸುವವರು ಮತ್ತು ಪೊಲೀಸ್ ಇಲಾಖೆಯಲ್ಲಿರುವವರು, ಜನರ ನಡುವಿನಿಂದಲೇ ಎದ್ದು ಹೋದವರು. ಜನರಿಂದ ಆಯ್ಕೆಯಾದ ಸರ್ಕಾರಗಳು ಜನರ ಪ್ರತಿಭಟನೆಗಳನ್ನು ಸಹನೆಯಿಂದ ಸ್ವೀಕರಿಸಬೇಕು. ಸರ್ಕಾರದ ನಡೆ ಮತ್ತು ನೀತಿ ಜನವಿರೋಧಿಯಾಗಿದ್ದರೆ; ಸಮಾಜದಲ್ಲಿ ಯಾವುದೇ ಅನ್ಯಾಯ, ಶೋಷಣೆ, ದಬ್ಬಾಳಿಕೆ, ದೌರ್ಜನ್ಯ ಘಟಿಸಿದರೆ ಅವುಗಳ ವಿರುದ್ಧ ಹೋರಾಟ ಮಾಡುವುದು, ಪ್ರತಿಭಟಿಸುವುದು ಜನರ ಮೂಲಭೂತ ಹಕ್ಕು. ಅದನ್ನು ನಮ್ಮ ದೇಶದ ಸಂವಿಧಾನವೇ ಜನರಿಗೆ ದಯಪಾಲಿಸಿದೆ. ಅಕಸ್ಮಾತ್, ಹೋರಾಟ, ಪ್ರತಿಭಟನೆ ಸಾಂವಿಧಾನಿಕ ಚೌಕಟ್ಟನ್ನು ಮೀರಿದರೆ, ಕ್ರಮ ಕೈಗೊಳ್ಳುವ ಅಧಿಕಾರ ಪೊಲೀಸರಿಗಿದೆ. ಆದರೆ ಇಲ್ಲಿ ನಡೆಯುತ್ತಿರುವ ಪ್ರತಿಭಟನೆ, ಹೋರಾಟ, ಕಾರ್ಯಕ್ರಮಗಳು ಸಂವಿಧಾನ, ಪ್ರಜಾಪ್ರಭುತ್ವಕ್ಕೆ ಅನುಗುಣವಾಗಿಯೇ ಇದ್ದರೂ, ಅನುಮತಿ ನಿರಾಕರಿಸಿರುವ ಪೊಲೀಸರ ಕ್ರಮ ದಮನಕಾರಿಯಂತೆ ಕಾಣುತ್ತಿದೆ. ತುರ್ತು ಪರಿಸ್ಥಿತಿಯನ್ನು ನೆನಪಿಗೆ ತರುತ್ತಿದೆ.
ಸಂವಿಧಾನ ಬಲ್ಲ, ಅದರ ಬಲದಿಂದಲೇ ಅಧಿಕಾರದ ಸ್ಥಾನಕ್ಕೆ ಏರಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಸರ್ಕಾರವು ಸಂವಿಧಾನದ ಮೂಲಸ್ಫೂರ್ತಿಗೆ ವಿರುದ್ಧವಾಗದಂತೆ ನಡೆಯುವ ಎಲ್ಲಾ ಅಭಿವ್ಯಕ್ತಿಗಳ ಹಾಗೂ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಕೆಲಸಗಳ ಜೊತೆ ಇರುತ್ತೇವೆಂದು ಭರವಸೆ ನೀಡಿದ್ದಾರೆ. ಎದುರಾಗಬಹುದಾದ ಸಂಘರ್ಷವನ್ನು ಅರಿತು ನಿವಾರಿಸಲು ಮುಂದಾಗಿದ್ದಾರೆ. ಆದರೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರಿಂದ ಇಲ್ಲಿಯವರೆಗೆ ಯಾವ ಸ್ಪಷ್ಟನೆಯೂ ಬಂದಿಲ್ಲದಿರುವುದು, ಸಂವಿಧಾನಕ್ಕೆ ಎಸಗುವ ಅಪಚಾರದಂತೆಯೂ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಎದುರಾಗಲಿರುವ ಸವಾಲಿನಂತೆಯೂ ಕಂಡರೆ ಆಶ್ಚರ್ಯವಿಲ್ಲ.
