ನಮ್ಮ ಕರ್ನಾಟಕದಲ್ಲಿ ಸಾಕ್ಷರತೆಯ ಪ್ರಮಾಣ 2011ರ ಜನಗಣತಿಯ ಆಧಾರದ ಮೇಲೆ 75.36ರಷ್ಟಿತ್ತು. ಸಾಕ್ಷರತೆ ಎಂಬ ಪದವನ್ನು ಓದುವ, ಬರೆಯುವ, ಮಾತನಾಡುವ ಮತ್ತು ಕೇಳುವ ಸಾಮರ್ಥ್ಯವೆಂದು ವ್ಯಾಖ್ಯಾನಿಸಲಾಗಿದೆ. 13 ವರ್ಷಗಳ ಬಳಿಕ ಅಂದರೆ ಈಗ ಕರ್ನಾಟಕದಲ್ಲಿ ಸಾಕ್ಷರತೆ ಪ್ರಮಾಣದಲ್ಲಿ ಹೇಳಿಕೊಳ್ಳುವ ಸಾಧನೆಯಾಗಿದೆಯಾ ಎಂಬ ಪ್ರಶ್ನೆಗೆ, ಇಲ್ಲ ಎಂಬುದೇ ಉತ್ತರ.
ಈ ವಿಷಯ ಕೇಳಿದ ಹಲವರು ವಾದಕ್ಕಿಳಿದು ಈಗಿರುವ ಖಾಸಗಿ ಶಾಲೆ ಕಾಲೇಜುಗಳಲ್ಲಿ ಬಹುಮಹಡಿಯ ಕಟ್ಟಡಗಳು ಶಾಲೆಯ ಆವರಣದಲ್ಲಿ ಆಡಿಟೋರಿಯಂ, ಆಟದ ಮೈದಾನ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿದ್ಯಾರ್ಥಿಗಳನ್ನು ಮನೆಯಿಂದ ಶಾಲಾ-ಕಾಲೇಜಿಗೆ ಕರೆದೊಯ್ಯಲು ಶಾಲಾ-ಕಾಲೇಜಿನ ವಾಹನಗಳು ಬರುತ್ತವೆ. ಖಾಸಗಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ರ್ಯಾಂಕ್ ಬಂದಾಗ ಅವರ ಭಾವಚಿತ್ರಗಳನ್ನು ಪತ್ರಿಕೆಗಳಲ್ಲಿ ಮತ್ತು ಶಾಲೆಯ ಮುಂಭಾಗದಲ್ಲಿ, ಆವರಣದಲ್ಲಿ ಪ್ರದರ್ಶಿಸುವುದು, ಶಾಲಾ-ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಡುವ ಉಡುಗೆ ತೊಡುಗೆಗಳನ್ನು ನೋಡಿದರೆ ಸಾಕು ಶಿಕ್ಷಣ ಕ್ಷೇತ್ರದಲ್ಲಿ ಅಗಾಧವಾದ ಸಾಧನೆಯಾಗಿದೆ ಎಂಬುದು ಗೊತ್ತಾಗುವುದಿಲ್ಲವೇ ಎನ್ನುತ್ತಾರೆ.
ಶಿಕ್ಷಣದ ಗುಣಮಟ್ಟವನ್ನು ರಚಿಸಲು ಈ ತೋರಿಕೆಗಳಷ್ಟೇ ಸಾಕೆ. ಒಮ್ಮೆ ಅವಲೋಕಿಸಿ ಸರ್ಕಾರಿ ಶಾಲಾ ಕಾಲೇಜಿನ ಸ್ಥಿತಿಗತಿ ಹೇಗಿದೆ ಎಂಬುದನ್ನು ತಿಳಿಯೋಣ
ಕರ್ನಾಟಕದ ಸರ್ಕಾರಿ ಶಾಲೆಯ ಸಾಕಷ್ಟು ಕಟ್ಟಡಗಳು ದುಃಸ್ಥಿತಿಯಲ್ಲಿವೆ. ಅಂದರೆ ಕಟ್ಟಡಗಳೇ ಬೀಳುವ ಸ್ಥಿತಿಯಲ್ಲಿವೆ. ಎಷ್ಟೋ ಶಾಲೆಗಳಿಗೆ ವಿದ್ಯುತ್, ಕುಡಿಯುವ ನೀರು, ಶೌಚಾಲಯಗಳ ಸೌಲಭ್ಯವೇ ಇರುವುದಿಲ್ಲ. ಇವನ್ನು ಹೊರತುಪಡಿಸಿ ನೋಡುವುದಾದರೆ ಸರ್ಕಾರಿ ಶಾಲೆಗಳಲ್ಲಿ ಕಿಟಕಿ ಬಾಗಿಲುಗಳಲ್ಲದೆ ವಿದ್ಯಾರ್ಥಿಗಳು ಕೂರಲು ಡೆಸ್ಕ್ಗಳೂ ಸಹ ಇರುವುದಿಲ್ಲ.

ಸಾಕಷ್ಟು ಸರ್ಕಾರಿ ಶಾಲೆಗಳಲ್ಲಿ ಕೇವಲ ಒಬ್ಬರು ಇಬ್ಬರಷ್ಟೇ ಶಿಕ್ಷಕರು ಇರುತ್ತಾರೆ. ಅವರೇ ಎಲ್ಲ ವಿಷಯಗಳನ್ನು ಬೋಧಿಸಬೇಕು. ಶಿಕ್ಷಕರ ಕೊರತೆಯೂ ಇದೆ. ಈ ಕಾರಣದಿಂದ ಸರ್ಕಾರಿ ಶಾಲೆಗಳಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆಯೂ ಬಹು ವಿರಳ ಮತ್ತು ಸರ್ಕಾರಿ ಶಾಲೆಗಳಲ್ಲಿ ಉತ್ತಮ ವ್ಯವಸ್ಥೆಯಲ್ಲಿಲ್ಲದ ಕಾರಣ ಸಾಕಷ್ಟು ಪೋಷಕರು ಹೇಗೋ ಕಷ್ಟಪಟ್ಟು ಸಾಲ ಮಾಡಿಯಾದರೂ ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುತ್ತಿದ್ದಾರೆ. ಇನ್ನು ಕಡುಬಡವರಂತು 6 ರಿಂದ 14 ವಯಸ್ಸಿನವರೆಗೆ ಕಡ್ಡಾಯ ಶಿಕ್ಷಣ ನೀಡಬೇಕೆಂಬ ಕಾನೂನಿದ್ದರೂ ಕೂಡಾ ಬಡತನದ ಕಾರಣದಿಂದಾಗಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದೆ ಬಾಲಕಾರ್ಮಿಕರನ್ನಾಗಿ ಮಾಡುತ್ತಿದ್ದಾರೆ. ಇದು ಕರ್ನಾಟಕದಲ್ಲಿರುವ ಶಾಲೆಗಳಲ್ಲಿನ ಪರಿಸ್ಥಿತಿ.
1956ರಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಕೆ ಕಾಮರಾಜ್ ಅವರು ಸಾಕ್ಷರತೆ ಪ್ರಮಾಣವನ್ನು ಹೆಚ್ಚಿಸಲು ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಜಾರಿಗೆ ತರುತ್ತಾರೆ. ಈ ಯೋಜನೆ 2002ರ-03 ರಲ್ಲಿ ಕರ್ನಾಟಕದಲ್ಲಿಯೂ ಜಾರಿಗೆ ಬರುತ್ತದೆ. ಆದರೆ ಕೊರೊನಾದ ಸಮಯದಲ್ಲಿ ಖರ್ಚು ಕಡಿಮೆಯೆಂದು ಸಾವಿರಾರು ಸಂಖ್ಯೆಯ ಪ್ರಮಾಣದಲ್ಲಿ ಮದುವೆಗಳಾದವು. ಅವುಗಳಲ್ಲಿ ಬಾಲ್ಯ ವಿವಾಹಗಳದ್ದೇ ಅಗ್ರಸ್ಥಾನ. ಕೊರೊನಾದ ನಂತರ ವಿದ್ಯಾರ್ಥಿಗಳು ಶಾಲೆ ಬಿಡುವದೂ ಕೂಡಾ ಹೆಚ್ಚಾಗಿದೆ. 2022-23ರಲ್ಲಿ 18,461 ಮಂದಿ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ.
ಕೇರಳದಲ್ಲಿ ಸಾಕ್ಷರತೆಯ ಪ್ರಮಾಣ ಶೇ.93.91ರಷ್ಟಿದೆ. ಇದಕ್ಕೆ ಕಾರಣ ಕೇರಳದಲ್ಲಿ ಶಿಕ್ಷಣಕ್ಕೆ ಕೊಟ್ಟ ಪ್ರಾಮುಖ್ಯತೆ ಮತ್ತು ಕೇರಳ ರಾಜ್ಯವು ತಮ್ಮ ಬಜೆಟ್ನಲ್ಲಿ ಶೇಕಡ 37ರಷ್ಟನ್ನು ಶಿಕ್ಷಣಕ್ಕೆ ಮೀಸಲಿಡುತ್ತಿದೆ. ಕರ್ನಾಟಕದಲ್ಲಿ ಶಿಕ್ಷಣಕ್ಕೆ ಸಾಕಷ್ಟು ಹಣ ಮೀಸಲಿಟ್ಟರೂ ಯಾವುದೇ ಬದಲಾವಣೆಯನ್ನು ನಿರೀಕ್ಷಿಸಲಾಗುತ್ತಿಲ್ಲ. ಕಾರಣ ಮಂತ್ರಿಗಳ ಮತ್ತು ಅಧಿಕಾರಿಗಳ ಅಸಡ್ಡೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಟಿಪ್ಪುಸುಲ್ತಾನ್ ಆಳ್ವಿಕೆಗೆ ಕೈಗನ್ನಡಿಯಾದ ಹುಣಸೂರಿನ ಕಾರಾಗೃಹಗಳು
ಕರ್ನಾಟಕದಲ್ಲಿ ಶಿಕ್ಷಣ ನೀತಿಯ ಬಗ್ಗೆ ಹೊಸ ಬಗೆಯ ಕಾನೂನುಗಳನ್ನು ಜಾರಿಗೊಳಿಸಬೇಕು. ಕರ್ನಾಟಕದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಅಂದರೆ ಗಂಡಾಗಲಿ ಹೆಣ್ಣಾಗಲಿ ತನ್ನ 25 ವರ್ಷದವರೆಗೆ ಯೂನಿವರ್ಸಿಟಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವುದು ಕಡ್ಡಾಯವೆಂದಾಗಬೇಕು. ಅವರು ಮಾಡುವ ವ್ಯಾಸಂಗವೂ ಸರ್ಕಾರದಿಂದ ಉಚಿತವಾಗಿ ದೊರಕಬೇಕೆಂಬ ಕಾನೂನು ಬರಬೇಕು. ಆಗ ಮಾತ್ರ ಸಾಕ್ಷರತೆಯ ಪ್ರಮಾಣ ಅಧಿಕವಾಗಲು ಸಾಧ್ಯವಾಗುತ್ತದೆ.
ಕರ್ನಾಟಕ ಸರ್ಕಾರ ಇನ್ನು ಮುಂದೆಯಾದರೂ ರಾಜ್ಯದ ಪ್ರಗತಿಗೆ ಸಾಕ್ಷರತೆಯು ಮುಖ್ಯವೆಂಬುದನ್ನು ಅರಿತುಕೊಂಡು ಅದರೆಡೆಗೆ ಕೆಲಸ ಮಾಡಬೇಕಿದೆ.
ಬರಹ : ದರ್ಶನ್ ದಡದಪುರ