ಇದುವರೆಗೆ ಒಟ್ಟು ನಾಲ್ವರು ಮಹಿಳೆಯರು ಅಧ್ಯಕ್ಷರಾಗಿದ್ದಾರೆ. 2022ರ ತನಕ ಅಧ್ಯಕ್ಷರಾದವರಲ್ಲಿ ಪರಿಶಿಷ್ಟ ಜಾತಿ, ಕ್ರೈಸ್ತ ಮತ್ತು ಮುಸ್ಲಿಂ ಸಮುದಾಯದಿಂದ ಅಧ್ಯಕ್ಷರಾಗಿದ್ದು ತಲಾ ಒಬ್ಬರು. ಈ ಅಸಮಾನತೆ ಬಹಳ ಅಪಾಯಕಾರಿ.
ನಾಲ್ವಡಿ ಕೃಷ್ಣರಾಜ ಒಡೆಯರ್ ರಿಂದ ಸ್ಥಾಪಿಸಲ್ಪಟ್ಟ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ನಮ್ಮ ಮಂಡ್ಯ ಜಿಲ್ಲೆಯಲ್ಲಿ ನಡೆಯಲಿದೆ. ಈ ಸಮ್ಮೇಳನವು ಕನ್ನಡದ ಏಕೀಕರಣ, ಸಾಹಿತ್ಯ, ಸಂಸ್ಕೃತಿ, ಭಾಷೆ ಇವುಗಳ ಉಳಿವಿಗಾಗಿ ಮತ್ತು ಏಳಿಗೆಗಾಗಿ ಹೋರಾಡುವ ಉದ್ದೇಶವನ್ನು ಹೊಂದಿದೆ. ಇಲ್ಲಿ ಕನ್ನಡದ ಕವಿಗಳು, ಸಾಹಿತಿಗಳು, ಕಲಾವಿದರಿಗೆ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ದೊರೆತಂತಾಗುತ್ತದೆ. ಪುಸ್ತಕ ಪ್ರೇಮಿಗಳಿಗಂತೂ ಬಯಸಿದ ಪುಸ್ತಕ ದೊರಕುವ ಒಳ್ಳೆಯ ಅವಕಾಶ. ಒಟ್ಟಾರೆ ಸಾಹಿತ್ಯ ಪ್ರೇಮಿಗಳ ದೊಡ್ಡದೊಂದು ಹಬ್ಬ ಇದಾಗಿದೆ.
ಯಾವುದೇ ಕ್ಷೇತ್ರದ ಕಾರ್ಯಕ್ರಮವಿರಲಿ ಅದರ ಅಧ್ಯಕ್ಷತೆ ವಹಿಸುವವರು ಆ ಕ್ಷೇತ್ರದಲ್ಲಿ ಪರಿಣಿತರು ಇರಲೇಬೇಕು. ಹಾಗಾದರೆ ಮಾತ್ರ ಈ ಕ್ಷೇತ್ರದ ಉದ್ದಾರ ಸಾಧ್ಯವಾಗುವುದು ಮತ್ತು ಆ ಸ್ಥಾನದ ಗೌರವ ಹೆಚ್ಚಾಗುವುದು. ಕನ್ನಡ ಭಾಷೆ, ಸಾಹಿತ್ಯದ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸುವವರಿಗೆ ಸಾಹಿತ್ಯದ ಜ್ಞಾನವಿರಬೇಕು ಮತ್ತು ಅದರ ಬಗೆಗೆ ಅಪಾರ ಕಾಳಜಿ ಇರಬೇಕು. ಅದಕ್ಕಾಗಿ ಸಾಹಿತಿಗಳೇ ಸಮ್ಮೇಳನದ ಅಧ್ಯಕ್ಷರಾಗಬೇಕೇ ಹೊರತು ಮಠದ ಸ್ವಾಮಿಗಳಾಗಲಿ, ರಾಜಕೀಯ ವ್ಯಕ್ತಿಗಳಾಗಲಿ ಆಸ್ಥಾನಕ್ಕೆ ಅರ್ಹರಲ್ಲ. ಅದು ಮಾತ್ರವಲ್ಲದೆ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಆಗುವವರು ದೂರ ದೃಷ್ಟಿಯುಳ್ಳವರಾಗಿರಬೇಕು. ಪ್ರಗತಿಪರ ಆಲೋಚನೆ ಉಳ್ಳವರು ಮಾತ್ರವಲ್ಲ ಜಾತೀವಾದ, ಕೋಮುವಾದಗಳಿಂದ ಹೊರತಾಗಿ ಇರುವವರು ಆಗಿರಬೇಕು.
ಮಂಡ್ಯದಲ್ಲಿ ಇದು ಮೂರನೇ ಸಮ್ಮೇಳನ. 1915ರಲ್ಲಿ ನಡೆದ ಮೊದಲ ಸಮ್ಮೇಳನದಿಂದ 1974ರಲ್ಲಿ ಮಂಡ್ಯದಲ್ಲಿ ನಡೆದ 48ನೇ ಸಮ್ಮೇಳನದ ತನಕ ಒಬ್ಬರೇ ಒಬ್ಬರು ಮಹಿಳಾ ಸಾಹಿತಿಯನ್ನು ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಕಸಾಪವು ಪರಿಗಣಿಸಿರಲಿಲ್ಲ. ಜಯದೇವಿತಾಯಿ ಲಿಗಾಡೆ ಮೊದಲ ಅಧ್ಯಕ್ಷೆಯಾದರು. ಇದುವರೆಗೆ ಒಟ್ಟು ನಾಲ್ವರು ಮಹಿಳೆಯರು ಅಧ್ಯಕ್ಷರಾಗಿದ್ದಾರೆ. 2022ರ ತನಕ ಅಧ್ಯಕ್ಷರಾದವರಲ್ಲಿ ಡಾ ಸಿದ್ದಲಿಂಗಯ್ಯ ಒಬ್ಬರೇ ಪರಿಶಿಷ್ಟ ಜಾತಿಯವರು! ಕ್ರೈಸ್ತ ಮತ್ತು ಮುಸ್ಲಿಂ ಸಮುದಾಯದಿಂದ ಅಧ್ಯಕ್ಷರಾಗಿದ್ದು ತಲಾ ಒಬ್ಬರು (ನಾ ಡಿಸೋಜಾ ಮತ್ತು ನಿಸಾರ್ ಅಹಮದ್). ಈ ಅಸಮಾನತೆ ಬಹಳ ಅಪಾಯಕಾರಿ. ಕಸಾಪ ಎಲ್ಲರನ್ನೂ ಸಮಾನವಾಗಿ ಕಾಣಬೇಕಿದೆ.
ಕನ್ನಡ ಸಾಹಿತ್ಯದ ಏಳಿಗೆಗಾಗಿ ಅನೇಕರು ಸೇವೆ ಸಲ್ಲಿಸಿದ್ದಾರೆ. ಸಮ್ಮೇಳನದ ಅಧ್ಯಕ್ಷತೆ ಎಂಬುದು ಒಂದು ದೊಡ್ಡ ಜವಾಬ್ದಾರಿ. ಅದು ಒಂದು ಧರ್ಮ, ಜಾತಿ, ಲಿಂಗಕ್ಕೆ ಸೀಮಿತವಾದುದಲ್ಲ. ಅನೇಕ ಮುಸ್ಲಿಂ ಬರಹಗಾರ್ತಿಯರು ಕನ್ನಡ ಸಾಹಿತ್ಯದಲ್ಲಿ ತಮ್ಮದೇ ಛಾಪು ಉಳಿಸಿದ್ದಾರೆ. ಮುಸ್ಲಿಂ ಸಮುದಾಯದಿಂದ ನಿಸಾರ್ ಅಹಮದ್ ಒಬ್ಬರೇ ಆ ಗೌರವ ಪಡೆದಿದ್ದಾರೆ. ಸಾರಾ ಅಬೂಬಕ್ಕರ್ ಆ ಸ್ಥಾನಕ್ಕೆ ಅರ್ಹರಾಗಿದ್ದರೂ ಅವಕಾಶ ದೊರೆಯಲಿಲ್ಲ. ಕಳೆದ ವರ್ಷ ಅವರು ತೀರಿಕೊಂಡರು. ಈಗ ಮುಸ್ಲಿಂ ಸಮುದಾಯದ ಹಿರಿಯ ಬರಹಗಾರ್ತಿಯರಾದ ಬಾನು ಮುಷ್ತಾಕ್, ಕೆ ಷರೀಫ ಮುಂತಾದವರಿದ್ದಾರೆ. ಸಮಿತಿಯು ಪುರುಷ ಸಾಹಿತಿಗಳನ್ನು ಪರಿಗಣಿಸುವುದಿದ್ದರೂ ಮುಸ್ಲಿಂ ಸಮುದಾಯದ ಬೊಳುವಾರು ಮಹಮ್ಮದ್ ಕುಂಞಿ, ರಂಜಾನ್ ದರ್ಗಾ, ಡಾ ರಹಮತ್ ತರೀಕೆರೆ ಇವರೆಲ್ಲರೂ ಅಧ್ಯಕ್ಷ ಸ್ಥಾನಕ್ಕೆ ಅರ್ಹರಾಗಿದ್ದಾರೆ.
ಮಂಡ್ಯ ಸಮ್ಮೇಳನ ಕುರಿತ ವಿಶೇಷ ಲೇಖನಗಳು ಈ ಲಿಂಕ್ನಲ್ಲಿ ಸಿಗುತ್ತವೆ. https://eedina.com/tag/mandya-sahitya-sammelana/

ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
jayakumarcsj@gmail.com
ತಾವು ಸೂಚಿಸುವ ಜಾತಿ, ಧರ್ಮ ಮತ್ತು ಲಿಂಗ ದ ಆಧಾರದ ಮೇಲೆ ಅವಕಾಶ ಸಿಗಲಿ ಅನ್ನೋದು ಯಾವ ಪ್ರಗತಿ ಪರ ಆಲೋಚನೆಯೋ? ಹೆಸರುಗಳು ಬೇರೆ ಹೇಳಿ ಒತ್ತಾಯಿಸೋದು ಕೂಡ ಅಷ್ಟೆ ಅಪಾಯಕಾರಿ ಮತ್ತು ದಮನಕಾರಿ ನೀತಿ.
ಯಾವುದೇ ಸಾಹಿತ್ಯ ಸಮ್ಮೇಳನಾಗಲಿ ಅಧ್ಯಕ್ಷರ ಆಯ್ಕೆ ಮಾಡುವುದು ಅವರ ಪ್ರತಿಭೆಯನ್ನು ಆಧರಿಸಿ ಹಾಗೂ ಕನ್ನಡ ಸೇವೆಯನ್ನು ಪರಿಗಣಿಸಿ ಆಗಬೇಕಾದದ್ದು ಧರ್ಮ ಅದನ್ನು ಹೊರತುಪಡಿಸಿ ಧರ್ಮ ಲಿಂಗ ಪ್ರದೇಶ ಜಾತಿ ಸಂಸ್ಕೃತಿ ಇವುಗಳನ್ನು ಆದರಿಸಿ ಆಗಬಾರದು. ಸಾಧನೆಯೇ ಅದರ ಮೂಲ ಅರ್ಹತೆಯಾಗಬೇಕು ಜಾತಿ ಲಿಂಗ ಧರ್ಮವನ್ನು ಆಧರಿಸಿದ ಆಯ್ಕೆ ಅಷ್ಟು ಸಮಂಜಸವಾಗಲಾರದು. ಅದೊಂದು ಕೇವಲ ಮೀಸಲಾತಿಗಾಗಿ ಎಣಿಸಬಹುದೇನೋ? ಇದು ನನ್ನ ವೈಯಕ್ತಿಕ ಅಭಿಪ್ರಾಯ.