ಬೀದರ್ ನಗರದ ನೌಬಾದನ ಆಟೊ ನಗರದಲ್ಲಿ ತಾತ್ಕಾಲಿಕ ಜೋಪಡಿಗಳಲ್ಲಿ ವಾಸಿಸುತ್ತಿರುವ ಅಲೆಮಾರಿ / ಅರೆ ಅಲೆಮಾರಿ ಜನಾಂಗಕ್ಕೆ 2017ರಲ್ಲಿ ಜಿಲ್ಲಾಡಳಿತ ವಸತಿಗಾಗಿ ನಿವೇಶನ ಮಂಜುರಾತಿ ಮಾಡಿದರೂ ಇಲ್ಲಿಯವರೆಗೂ ನಿವೇಶನ ಹಂಚಿಕೆ ಮಾಡದೆ ನಿರ್ಲಕ್ಷಿಸುತ್ತಿದೆ, ಕೂಡಲೇ ವಸತಿ ವಂಚಿತ ಅಲೆಮಾರಿ ಸಮುದಾಯಕ್ಕೆ ನಿವೇಶನ ಹಂಚಿಕೆ ಮಾಡಿ ಮೂಲಭೂತ ಸೌಲಭ್ಯ ಒದಗಿಸಬೇಕೆಂದು ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆ ನಡೆಸಿತು.
ವಿಶ್ವಕ್ರಾಂತಿ ದಿವ್ಯಪೀಠ ನೇತ್ರತ್ವದಲ್ಲಿ ಅಲೆಮಾರಿ ಸಮುದಾಯ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಭಗತ್ ಸಿಂಗ್ ವೃತ್ತ, ತಹಸೀಲ್ ಕಚೇರಿ ಮುಖಾಂತರ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿಶ್ವಕ್ರಾಂತಿ ದಿವ್ಯಪೀಠದ ಅಧ್ಯಕ್ಷ ಓಂಪ್ರಕಾಶ ರೊಟ್ಟೆ ಮಾತನಾಡಿ, “ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳು ಕಳೆದರೂ ಬೀದರ್ ನಗರದ ಬೀದಿ ಬದಿಯಲ್ಲಿ ವಾಸಿಸುತ್ತಿರುವ ನೂರಾರು ಅಲೆಮಾರಿ ಕುಟುಂಬಗಳಿಗೆ ಕನಿಷ್ಟ ಮೂಲಭೂತ ಸೌಕರ್ಯ ಒದಗಿಸಲು ಸಾಧ್ಯವಾಗಿಲ್ಲ. ಸಮಾಜದ ಮಧ್ಯೆ ದೈನ್ಯಾತಿ ದೈನ್ಯ ಸ್ಥಿತಿಯಲ್ಲಿ ನರಕ ಸದೃಶ್ಯವಾಗಿ ಬದುಕುತ್ತಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಪರಿಸ್ಥಿತಿ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಎಲ್ಲಾ ಸರ್ಕಾರಗಳು ದೇಶದ ಎಲ್ಲಾ ಜನಾಂಗಗಳಿಗೆ ಸಮಾಜದ ಮುಖ್ಯ ವಾಹಿನಿಗೆ ತರಲು ಹಲವು ಯೋಜನೆಗಳು ರೂಪಿಸಿದೆ, ಆದರೆ ಅಧಿಕಾರಿಗಳ ನಿರ್ಲಕ್ಷ, ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯಿಂದ ಇಂದು ಬೀದರ್ ನಗರದ ಅಲೆಮಾರಿ ಜನಾಂಗ ಸಮಾಜದ ಎಲ್ಲಾ ಸೌಕರ್ಯಗಳಿಂದ ವಂಚಿತರಾಗಿ ಜೀವಿಸುತ್ತಿರುವುದು ನಾಗರಿಕ ಸಮಾಜಕ್ಕೆ ನಾಚಿಕೆಯ ವಿಷಯವಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
“ನೌಬಾದನಲ್ಲಿ ವಾಸಿಸುತ್ತಿರುವ ಅಲೆಮಾರಿ ಜನಾಂಗದವರಿಗೆ ವಸತಿ ಸೌಲಭ್ಯ ಕಲ್ಪಿಸಲು 2017 ರಲ್ಲಿ ಪ್ರಕ್ರಿಯೆ ಆರಂಭವಾಗಿದ್ದು, 2017 ರ ಎಪ್ರಿಲ್ 17 ರಂದು ಬೀದರ ನಗರಸಭೆ ನಡಾವಳಿಯಲ್ಲಿ ಠರಾವು ಪಾಸು ಮಾಡಿ ಆಶ್ರಯ ಸಮಿತಿ ಸಭೆಯಲ್ಲಿ ಬೀದರ್ ತಾಲೂಕಿನ ಗೋರನಳ್ಳಿ ಸಮೀಪ ವಸತಿಗಾಗಿ ಜಮೀನು ನೀಡಲು ಆದೇಶಿಸಿದ್ದರು. ಈ ಠರಾವಿನಂತೆ ನಗರಸಭೆಯವರು ಹಿಂದುಳಿದ ವರ್ಗಗಳ ತಾಲುಕಾ ಅಧಿಕಾರಿಗಳಿಗೆ ಜಮೀನು ಹಸ್ತಾಂತರಿಸಬೇಕಾಗಿತ್ತು. ಆದರೆ, ಆರು ವರ್ಷ ಕಳೆದರೂ ಇಲ್ಲಿಯವರೆಗೆ ಜಮೀನು ಹಸ್ತಾಂತರವಾಗಿಲ್ಲ, ಈ ಬಗ್ಗೆ ಕೇಳಿದರೆ ಸಮಜಾಯಿಸಿ ಕೊಟ್ಟು ದಿನಗಳೆಯುತ್ತಿದ್ದಾರೆ. ಸರ್ಕಾರದ, ಜಿಲ್ಲಾಡಳಿತದ ಆದೇಶ ಕಾರ್ಯಾನುಷ್ಠಾನ ಆಗುವುದಿಲ್ಲ ಎಂದರೆ ಆಡಳಿತ ಯಂತ್ರ ತುಕ್ಕು ಹಿಡಿದಿದೆ ಎಂದರ್ಥ” ಎಂದು ಕಿಡಿಕಾರಿದರು.

ಸಾಮಾಜಿಕ ಕಾರ್ಯಕರ್ತ ಜಗದೀಶ್ವರ ಬಿರಾದರ ಮಾತನಾಡಿ, “ಹಲವು ವರ್ಷಗಳಿಂದ ನಗರದಲ್ಲಿ ಅಲೆಮಾರಿ ಜನಾಂಗ ಯಾವುದೇ ಸೌಲಭ್ಯವಿಲ್ಲದೆ ವಾಸಿಸುತ್ತಿದ್ದರೂ ಜಿಲ್ಲೆಯ ಜನ ಪ್ರತಿನಿಧಿಗಳ ಗಮನಕ್ಕೆ ಬರುವುದಿಲ್ಲ. ತಮ್ಮ ವೈಯಕ್ತಿಕ ಪ್ರತಿಷ್ಠೆ ಮೆರೆಯುವುದರಲ್ಲೇ ಕಾಲಹರಣ ಮಾಡುತ್ತಾರೆ. ಸ್ವಾರ್ಥ ಸಾಧಿಸಿಕೊಳ್ಳುವುದು, ಪ್ರತಿಷ್ಠೆ ಮೆರೆಯುವುದು, ಸ್ವಜನಪಕ್ಷಪಾತ, ಆಗದವರೊಂದಿಗೆ ದ್ವೇಷ ಸಾಧಿಸುವುದರಲ್ಲೇ ನಿಸ್ಸಿಮರು ಹೊರತು ಜನಪರ ಕಾಳಜಿ ಎದ್ದು ಕಾಣುವುದಿಲ್ಲ. ಕ್ಷೇತ್ರದ ಶಾಸಕ ರಹೀಂ ಖಾನ್ ಅವರರು ಪೌರಾಡಳಿತ ಸಚಿವರಾಗಿ ತಿಂಗಳುಗಳೇ ಕಳೆದಿವೆ, ಆದರೂ ತನ್ನ ಕ್ಷೇತ್ರದ ತನ್ನ ಇಲಾಖೆಯಲ್ಲಿನ ಕಾರ್ಯಗಳ ಬಗ್ಗೆ ಪರಿಶೀಲನೆ ಮಾಡುವುದಿಲ್ಲ. ಹಾಗಾದರೆ ಪ್ರತಿ ತಿಂಗಳು ಪ್ರಗತಿ ಪರಿಶೀಲನಾ ಸಭೆಯಲ್ಲಿ ಯಾವ ಪ್ರಗತಿ ಪರಿಶೀಲನೆ ಆಗುತ್ತೆ, ಅಲೆಮಾರಿ ಜನಾಂಗಕ್ಕೆ ಸಂಬಂಧಿಸಿದ ಒಂದು ಆದೇಶ 6 ವರ್ಷಗಳವರೆಗೆ ಅನುಷ್ಠಾನ ಆಗುವುದಿಲ್ಲವೆಂದರೆ ಜಿಲ್ಲಾಡಳಿತಕ್ಕೆ ಅಪಹಾಸ್ಯವಲ್ಲವೇ?” ಎಂದು ಪ್ರಶ್ನಿಸಿದರು.
ಕೂಡಲೇ ಈ ಬಗ್ಗೆ ಬೀದರ್ ಜಿಲ್ಲಾಡಳಿತ, ನಗರಸಭೆ, ಹಿಂದುಳಿದ ವರ್ಗಗಳ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸಿ 15 ದಿನಗಳ ಒಳಗಾಗಿ ಆದೇಶ ಅನುಷ್ಠಾನಗೊಳಿಸಿ ಅಲೆಮಾರಿ ಕುಟುಂಬಗಳಿಗೆ ಸಾಮಾಜಿಕ ನ್ಯಾಯ ಒದಗಿಸಬೇಕು. ವಿಳಂಬವಾದರೆ ಬೀದರ್ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ವಿಭಿನ್ನ ರೀತಿಯ ಧರಣಿ ಸತ್ಯಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ‘ಈ ದಿನ’ ಸಂಪಾದಕೀಯ | ಬಗರ್ ಹುಕುಂ ಸಮಸ್ಯೆ ಬಗೆಹರಿಸಿದರಷ್ಟೇ ಅರಣ್ಯ ಒತ್ತುವರಿ ತೆರವು ಸಲೀಸು
ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರಾದ ವಿನೋದ ರತ್ನಾಕರ್, ವಿನಯ ಮಾಳಗೆ, ರೋಹನ್ ಕುಮಾರ, ಪ್ರಕಾಶ ರಾವಣ, ಹರ್ಷವರ್ಧನ ರಾಠೋಡ್, ಮಛೇಂದ್ರ ವಾಘಮಾರೆ ಸೇರಿದಂತೆ ಅಲೆಮಾರಿ ಸಮಾಜದ ದಿಲೀಪ, ಲಕ್ಷ್ಮಣ, ಬಿಚ್ಚಪ್ಪ ಹಾಗೂ ಮಹಿಳೆಯರು, ಮಕ್ಕಳು ಇದ್ದರು.