- ಮೋದಿ, ಅಮಿತ್ ಶಾ ನೂರು ಬಾರಿ ರಾಜ್ಯಕ್ಕೆ ಬಂದರೂ ಕಾಂಗ್ರೆಸ್ಗೆ ಭಯವಿಲ್ಲ
- ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಇಟ್ಟಿದ್ದ ಭಾರಿ ನಿರೀಕ್ಷೆ ಸುಳ್ಳಾಗಿದೆ
ಕರ್ನಾಟಕದಲ್ಲಿ ಮೂರುವರೆ ವರ್ಷಗಳ ಕಾಲ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ಬರೀ 40% ಕಮಿಷನ್ ಹೊಡೆದಿದೆ. ಅದೇ ಅವರ ಸಾಧನೆ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ವಾಗ್ದಾಳಿ ನಡೆಸಿದರು.
ಬೀದರ್ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಖೇಣಿ ಪರ ಪ್ರಚಾರ ಕೈಗೊಂಡು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. “ಅಶೋಕ್ ಖೇಣಿ 2013ರಲ್ಲಿ ಕರ್ನಾಟಕ ಮಕ್ಕಳ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಈ ಬಾರಿಯೂ ಪುನರಾಯ್ಕೆ ಆಗುವುದು ಖಚಿತ” ಎಂದು ವಿಶ್ವಾಸವ್ಯಕ್ತಪಡಿಸಿದರು.
ಕಾಂಗ್ರೆಸ್, ತನ್ನ ಸರ್ಕಾರದ ಅವಧಿಯಲ್ಲಿ ಈಡೇರಿಸಿದ ಭರವಸೆಗಳು ಪ್ರಚಾರದ ವೇಳೆ ಜನರ ಮುಂದಿಟ್ಟು ಮತ ಕೇಳುತ್ತದೆ. ಆದರೆ, ಬಿಜೆಪಿ ಅವರ ಬಳಿ ಇಂಥ ಯಾವುದೇ ಜನಪರ ಸಾಧನೆಗಳು ಇಲ್ಲ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕರೆತಂದು ಮತ ಕೇಳುತ್ತಿದ್ದಾರೆ. ಬಿಜೆಪಿ ಸರ್ಕಾರದ ಸಾಧನೆ ಜನರಿಗೆ ತೋರಿಸಲು ಸಾಧ್ಯವಿಲ್ಲ” ಎಂದು ಟೀಕಿಸಿದರು.
ಮೋದಿಯಿಂದ ಕಾಂಗ್ರೆಸ್ಗೆ ಭಯವಿಲ್ಲ
“ಕರ್ನಾಟಕಕ್ಕೆ ಪ್ರಧಾನಿ ಮೋದಿ, ಅಮಿತ್ ಶಾ ನೂರು ಬಾರಿ ಬಂದು ಪ್ರಚಾರ ನಡೆಸಿದರೂ ಕಾಂಗ್ರೆಸ್ಗೆ ಭಯವಿಲ್ಲ. ಯಾವುದೇ ಬದಲಾವಣೆ ಆಗಲ್ಲ. ಭ್ರಷ್ಟ ಬಿಜೆಪಿ ಸರ್ಕಾರದ ದುರಾಡಳಿತದಿಂದ ರಾಜ್ಯದ ಜನತೆ ಬೇಸತ್ತು ಕಾಂಗ್ರೆಸ್ ಗೆಲ್ಲಿಸಲು ತೀರ್ಮಾನಿಸಿದ್ದಾರೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ” ಎಂದು ಹೇಳಿದರು.
ನರೇಂದ್ರ ಮೋದಿ ಮೇಲಿನ ನಿರೀಕ್ಷೆ ಸುಳ್ಳಾಗಿದೆ
“ನಾವು ಕಾಂಗ್ರೆಸ್ ಪಕ್ಷದವರಾದರೂ ದೇಶಕ್ಕೆ ಏನಾದರೂ ಒಳ್ಳೆಯದು ಮಾಡ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಭಾರಿ ನಿರೀಕ್ಷೆಯಿತ್ತು. ಆದರೆ, ಕಪ್ಪು ಹಣ, ರೂ. 15 ಲಕ್ಷ ಕೊಡುವೆ ಎಂದು ಸುಳ್ಳು ಭರವಸೆ ಕೊಟ್ಟು ಜನತೆಗೆ ಮೋಸ ಮಾಡಿದ್ದಾರೆ. ಅಷ್ಟೇ ಅಲ್ಲದೆ ಪೆಟ್ರೋಲ್ ಡೀಸೆಲ್ ಗ್ಯಾಸ್ ಬೆಲೆ ಗಗನಕ್ಕೇರಿಸಿ ಬಡಜನರು ತತ್ತರಿಸಿ ಹೋಗುವಂತೆ ಮಾಡಿದ್ದಾರೆ” ಎಂದು ಅಸಮಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಕೊಲೆ ಆರೋಪಿ, ರೌಡಿಶೀಟರ್ ವೇದಿಕೆ ಹಂಚಿಕೊಂಡ ಪ್ರಧಾನಿ; ಮೋದಿ ವಿರುದ್ಧ ಕಿಡಿ
“ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಡವರಿಗೆ ಅನ್ನ ಭಾಗ್ಯ, ಇಂದಿರಾ ಕ್ಯಾಂಟೀನ್ ಸೇರಿದಂತೆ ಭರವಸೆ ನೀಡಿದ ಬಹುತೇಕ ಜನೋಪಯೋಗಿ ಯೋಜನೆ ಜಾರಿಗೊಳಿಸಿತು. ಆದರೆ ಕಾಂಗ್ರೆಸ್ ಕೊಟ್ಟ 7 ಕೆಜಿ ಅನ್ನಭಾಗ್ಯ ಯೋಜನೆ 4 ಕೆಜಿಗೆ ಕಡಿತಗೊಳಿಸಿದರು. ಬಿಜೆಪಿಯವರಿಗೆ ಬಡವರ ಕಾಳಜಿ ಇದ್ದಿದ್ದರೆ ಅಕ್ಕಿ ಕೊಡುವ ಯೋಜನೆಗೆ ಕತ್ತರಿ ಹಾಕುತ್ತಿರಲಿಲ್ಲ. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಮೇಲೆ 10 ಕೆಜೆ ಅಕ್ಕಿ ಕೊಡುವುದಾಗಿ ಘೋಷಣೆ ಮಾಡಿದ್ದು, ಬಿಜೆಪಿಯವರಿಗೆ ಹೊಟ್ಟೆಕಿಚ್ಚು ಆಗುತ್ತಿದೆ” ಎಂದು ಕುಟುಕಿದರು.