ಚನ್ನಪಟ್ಟಣದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ವೇದಿಕೆಯ ಮೇಲೆ ಪ್ರಧಾನಿ ನರೇಂದ್ರ ಮೋದಿ ಜೊತೆ ಕೊಲೆ ಅರೋಪಿ, ರೌಡಿಶೀಟರ್ ಮುದ್ದುಕೃಷ್ಣ ಕಾಣಿಸಿಕೊಂಡಿದ್ದಾರೆ. ರೌಡಿಶೀಟರ್ಗಳನ್ನು ವೇದಿಕೆ ಮೇಲೆ ಕೂರಿಸಿಕೊಳ್ಳತ್ತಿರುವ ಮೋದಿ ವಿರುದ್ಧ ಕಾಂಗ್ರೆಸ್ ಮತ್ತು ಜೆಡಿಎಸ್ ಕಿಡಿಕಾರಿದ್ದು, ಟೀಕೆ ಮಾಡುತ್ತಿವೆ.
ಇತ್ತೀಚೆಗೆಷ್ಟೇ, ಮಂಡ್ಯದಲ್ಲಿ ಮೋದಿ ರೋಡ್ ಶೋ ನಡೆಸಿದ್ದಾಗ, ಪೈಟರ್ ರವಿಗೆ ಮೋದಿ ಕೈಮುಗಿದಿದ್ದರು. ಅವರ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಟೀಕೆಗೂ ಗುರಿಯಾಗಿತ್ತು. ಇದೀಗ, ಭಾನುವಾರ ಚನ್ನಪಟ್ಟಣದಲ್ಲಿ ಸಮಾವೇಶ ನಡೆಸಿದ್ದ ಮೋದಿ, ರೌಡಿಶೀಟರ್ ಮುದ್ದುಕೃಷ್ಣ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ.
ಮೋದಿ ಮತ್ತು ಮುದ್ದುಕೃಷ್ಣ ವೇದಿಕೆಯಲ್ಲಿರುವ ಫೋಟೋವನ್ನು ಹಂಚಿಕೊಂಡಿರುವ ಜೆಡಿಎಸ್ ಪ್ರಧಾನಿ ವಿರುದ್ಧ ಕಿಡಿಕಾರಿದೆ. “ಈ ಹಿಂದೆ ರೌಡಿಶೀಟರ್ಗೆ ಕೈ ಮುಗಿದಿದ್ದ ;ಚುನಾವಣಾ ಜೀವಿ; ನರೇಂದ್ರ ಮೋದಿ, ಇದೀಗ ಮತ್ತೊಬ್ಬ ರೌಡಿಶೀಟರ್ ಜೊತೆಗೆ ವೇದಿಕೆ ಹಂಚಿಕೊಂಡಿದ್ದಾರೆ. ಅವರು ಪ್ರಧಾನಿ ಹುದ್ದೆಯ ಎಲ್ಲ ಘನತೆಯನ್ನು ಮಣ್ಣುಪಾಲು ಮಾಡುತ್ತಿದ್ದಾರೆ. ಪ್ರಧಾನಿಯ ಗಮನಕ್ಕೆ ಬರದೆ ರೌಡಿಯೊಬ್ಬ ಇಷ್ಟೊಂದು ಹತ್ತಿರ ಸುಳಿಯಲು ಸಾಧ್ಯವೆ?” ಎಂದು ವ್ಯಂಗ್ಯವಾಡಿದೆ.
“ಬಿಜೆಪಿ ರೌಡಿ ಮೋರ್ಚಾದಿಂದ ರಾಜ್ಯಕ್ಕೆ ಏನು ಅಪಾಯ ಕಾದಿದಿಯೊ. ಕ್ರಿಮಿನಲ್ಗಳನ್ನು ಈ ರೀತಿಯಾಗಿ ಗುಡ್ಡೆ ಹಾಕುತ್ತಿರುವ ಬಿಜೆಪಿಯ ಬಗ್ಗೆ ಡಿಜಿಪಿ ಕರ್ನಾಟಕ ಪೊಲೀಸ್ ಎಚ್ಚರವಾಗಿರಲಿ. ಚುನಾವಣೆ ಗೆಲ್ಲಲು ಬಿಜೆಪಿ ಯಾವ ಮಟ್ಟಕ್ಕೆ ಇಳಿಯಲು ಹೇಸುವುದಿಲ್ಲ ಎಂಬುವುದು ಇಡೀ ಕರುನಾಡಿಗೆ ತಿಳಿದಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಈ ಸುದ್ದಿ ಓದಿದ್ದೀರಾ?: ಬೇಲೂರು | 20 ಸೀಟುಗಳಿಂದ ರಾಜ್ಯದ ಲೂಟಿಯಲ್ಲಿ ಪಾಲು ಬಯಸುತ್ತಿದೆ ಜೆಡಿಎಸ್: ಮೋದಿ
“ರೌಡಿಶೀಟರ್ಗಳು, ಕೊಲೆ ಆರೋಪಿಗಳು ಪ್ರಧಾನಿಯೊಂದಿಗೆ ವೇದಿಕೆ ಏರುವ ಅವಕಾಶ ಇರುವುದು ಬಿಜೆಪಿಯಲ್ಲಿ ಮಾತ್ರ. ಇಲ್ಲಿ ಪ್ರಧಾನಿ ಮೋದಿಯವರಿಗೆ ಸನ್ಮಾನ ಮಾಡುತ್ತಿರುವುದು ರೌಡಿಶೀಟರ್, ಡಬಲ್ ಮರ್ಡರ್ ಆರೋಪಿ ಮುದ್ದು ಕೃಷ್ಣ ಅಲಿಯಾಸ್ ಮುದ್ದು. ಮೋದಿಯವರ ಕಿರೀಟಕ್ಕೆ ಬಿಜೆಪಿಯ ಮತ್ತೊಬ್ಬ ರೌಡಿಶೀಟರ್ ಗರಿ ಸೇರ್ಪಡೆ” ಎಂದು ಕಾಂಗ್ರೆಸ್ ಕೆಂಡಕಾರಿದೆ.