- ಹಾಸನ ಕ್ಷೇತ್ರದ ಟಿಕೆಟ್ ಯಾರಿಗೆಂದು ಜನವರಿಯಲ್ಲಿಯೇ ನಿರ್ಧಾರ
- ʼಗೌಡರ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆʼ
ದೇವೇಗೌಡ್ರು ನಮಗೆ ಸರ್ವೋಚ್ಚ ನಾಯಕರು. ಅವರು ಏನು ಹೇಳುತ್ತಾರೋ ಅದನ್ನೇ ಕೇಳುತ್ತೇವೆ. ಹಿಂದೇನೂ ಕೇಳಿದ್ದೆ, ಈಗಲೂ ಕೇಳುತ್ತೇವೆ. ಮುಂದೆಯೂ ಕೇಳುತ್ತೇವೆ. ಅವರ ಮಾತನ್ನ ತಿರಸ್ಕರಿಸೋ ಮಾತೇ ಇಲ್ಲ. ಹಾಸನದ ಟಿಕೆಟ್ ಯಾರಿಗೆಂದು ಅವರೇ ನಿರ್ಧಾರ ಮಾಡಿದ್ದಾರೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಆನೆಕೆರೆಯಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, “ಹಾಸನದ ಟಿಕೆಟ್ ಯಾರಿಗೆ ನೀಡಬೇಕು, ಅಭ್ಯರ್ಥಿ ಯಾರಾಗಬೇಕೆಂದು ದೇವೇಗೌಡರು ಜನವರಿಯಲ್ಲಿಯೇ ತೀರ್ಮಾನ ಮಾಡಿದ್ದಾರೆ. ಅವರ ಮಾತು ಅಂತಿಮ. ಅವರು ನಮ್ಮ ಪಕ್ಷಕ್ಕೆ ಸರ್ವೋಚ್ಚ ನಾಯಕರು. ಅವರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾವು ಬದ್ಧರಾಗಿರುತ್ತೇವೆ. ಯಾಕೆಂದರೆ ನಮ್ಮ ಜನ ಉಳಿಬೇಕು ಅಷ್ಟೇ. ಶಕುನಿಗಳು ನಮ್ಮ ಕುಟುಂಬವನ್ನು ಮುಗಿಸಲು ಹೊರಟಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಹುಬ್ಬಳ್ಳಿ | ಭವಾನಿ ರೇವಣ್ಣ ಹಾಸನದಲ್ಲಿ ಸ್ಪರ್ಧಿಸಿದರೆ ಗೆಲ್ಲಲ್ಲ: ಎಚ್ ಡಿ ಕುಮಾರಸ್ವಾಮಿ
“ದೇವೇಗೌಡರಿಗೆ 60 ವರ್ಷದ ರಾಜಕೀಯ ಅನುಭವವಿದೆ. ಎಲ್ಲ ಕ್ಷೇತ್ರಗಳ ಟಿಕೆಟ್ ದೇವೇಗೌಡರೇ ನಿರ್ಧರಿಸುತ್ತಾರೆ. ಅಷ್ಟೇ ಅಲ್ಲದೆ ಹಾಸನದ ಅಭ್ಯರ್ಥಿ ಯಾರಾಗಬೇಕು ಅಂತ ಜನವರಿಯಲ್ಲಿಯೇ ನಿರ್ಧಾರ ಮಾಡಿದ್ದಾರೆ. ಸಾಮಾನ್ಯ ಕಾರ್ಯಕರ್ತ ಅಂದರೆ ಯಾರು? ಪಕ್ಷದಿಂದ ಯಾವ ಫಲವನ್ನೂ ಪಡೆಯದೇ ಇರುವವನು ಸಾಮಾನ್ಯ ಕಾರ್ಯಕರ್ತ. ಆದರೆ, ಹಾಸನಕ್ಕೆ ಸ್ಪರ್ಧಿಸಲು ಬಯಸಿರುವ ಎಚ್ ಪಿ ಸ್ವರೂಪ್ ಅವರು ಈ ಹಿಂದೆ ಜಿಪಂ ಸದಸ್ಯರಾಗಿ ಮತ್ತು ಹಾಸನ ಜಿಪಂ ಉಪಾಧ್ಯಕ್ಷರಾಗಿ ಅಧಿಕಾರ ಅನುಭವಿಸಿದ್ದರು” ಎಂದರು.
“ಶಕುನಿಗಳ ಆಟಕ್ಕೆ ಪಕ್ಷದ ಕಾರ್ಯಕರ್ತರು ಮತ್ತು ಜನರು ತಕ್ಕ ಉತ್ತರ ಕೊಡುತ್ತಾರೆ. ನಮ್ಮ ಜನವನ್ನು ಉಳಿಸಿಕೊಳ್ಳಲು ಪಕ್ಷವನ್ನು ಉಳಿಸಿಕೊಳ್ಳಲು ನಾವು ಹೋರಾಟ ಮಾಡುತ್ತಿದ್ದೇವೆ ಅಷ್ಟೇ” ಎಂದು ತಿಳಿಸಿದ್ದಾರೆ.