ಹೂವಿನ ಬೆಲೆ ಕುಸಿತ ಹಾಗೂ ವ್ಯಾಪಾರಿಗಳು ಬೇರೆ ಜಿಲ್ಲೆಯಿಂದ ಹೂವು ಖರೀದಿಸುತ್ತಿದ್ದಾರೆ ಎಂಬ ಕಾರಣಕ್ಕೆ ಆಕ್ರೋಶಗೊಂಡ ಸ್ಥಳೀಯ ಹೂವು ಬೆಳೆಗಾರರು ಜಿಲ್ಲಾಸ್ಪತ್ರೆ ಎದುರು ಸೋಮವಾರ(ಅ.30) ರಸ್ತೆ ಮೇಲೆ ಹೂವು ಸುರಿದು ಪ್ರತಿಭಟಿಸಿದ್ದಾರೆ.
ಸೂಕ್ತ ಬೆಲೆ ಸಿಗದ ಕಾರಣ ಕಣ್ಣೀರು ಸುರಿಸುತ್ತಿದ್ದು, ಜಿಲ್ಲೆಯಲ್ಲೇ ರೈತರ ಹೂವು ಇದ್ದರೂ ದಲ್ಲಾಳಿಗಳು ಅವರ ಲಾಭಕ್ಕೋಸ್ಕರ ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ, ವಿಜಯಪುರದಿಂದ ಹೂವು ಖರೀದಿಸುತ್ತಿದ್ದಾರೆ. ಇದರಿಂದ ಸ್ಥಳೀಯ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬರದ ನಡುವೆಯೂ ಕಷ್ಟಪಟ್ಟು ಬೆಳೆದ ಹೂವು ಮಾರಾಟವಾಗದೇ ಬೀದಿ ಪಾಲಾಗುವಂತಾಗಿದೆ ಎಂದು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.
ಕೇವಲ 10, 15 ರೂಪಾಯಿಗೆ ಕೆಜಿ ಕೊಟ್ಟರೂ ಹೂವು ಖರೀದಿಸಲು ವ್ಯಾಪಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಜಿಲ್ಲೆಯ ರೈತರಿಗೆ ಅನ್ಯಾಯ ಆಗಲು ಬಿಡಲ್ಲ. ಸೂಕ್ತ ಬೆಲೆಗೆ ಸ್ಥಳೀಯ ರೈತರ ಮಾಲು ಮೊದಲು ಖರೀದಿಸಬೇಕು. ಈ ಬಗ್ಗೆ ಸರ್ಕಾರ ಗಮನಹರಿಸಬೇಕು. ಇಲ್ಲದಿದ್ದರೆ ಹೋರಾಟ ಚುರುಕುಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
ಕಳೆದ ವರ್ಷ ಸೇವಂತಿ ಹೂವು ಕೆಜಿಗೆ 100, 200 ರೂ.ಗೆ ಮಾರಾಟವಾಗಿತ್ತು. ಹಾಗಾಗಿ, ಒಂದು ಎಕರೆ ಹೂವು ಬೆಳೆಯುವ ರೈತರು ಮೂರು, ಐದು ಎಕರೆ ಹೂವು ಬೆಳೆದಿದ್ದಾರೆ. ಆದ್ದರಿಂದ ಈ ಸಲ ಬೆಲೆ ಕಡಿಮೆಯಾಗಿದೆ ಎನ್ನುತ್ತಿದ್ದಾರೆ ಹೂವಿನ ವ್ಯಾಪಾರಿಗಳು.