- ಹೈಕಮಾಂಡ್ ನಾಯಕ ಮನವೊಲಿಸುವ ಯತ್ನ ವಿಫಲ
- ಪ್ರಧಾನಿ ಮೋದಿ ನಿರ್ದೇಶನದ ಮೇರೆಗೆ ಮಾತುಕತೆ
ಬಿಜೆಪಿ ಟಿಕೆಟ್ ನಿರಾಕರಣೆ ವಿರುದ್ಧ ಬಂಡಾಯ ಸಾರಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸಿತ್ತು. ಆದರೆ, ಬಿಜೆಪಿ ನಾಯಕರ ‘ಆಫರ್’ಗಳನ್ನು ಶೆಟ್ಟರ್ ತಿರಸ್ಕರಿಸಿ ಪಕ್ಷ ಬಿಟ್ಟು ಹೊರನಡೆದಿದ್ದಾರೆ.
ಹುಬ್ಬಳಿ – ಧಾರವಾಡ ಸೆಂಟ್ರಲ್ ಕ್ಷೇತ್ರದ ಟಿಕೆಟ್ಗಾಗಿ ಜಗದೀಶ್ ಶೆಟ್ಟರ್ ಕಾದು ಕುಳಿತಿದ್ದರು. ಆದರೆ, 212 ಅಭ್ಯರ್ಥಿಗಳ ಎರಡು ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ ಈ ಕ್ಷೇತ್ರದ ಹೆಸರನ್ನು ಮಾತ್ರ ಗೌಪ್ಯವಾಗಿ ಇರಿಸಿತ್ತು.
ಜಗದೀಶ್ ಶೆಟ್ಟರ್ ಅವರಿಗೆ ಬಿಜೆಪಿ ಟಿಕೆಟ್ ತಪ್ಪಿಸುವ ಎಲ್ಲ ಲಕ್ಷಣಗಳ ಬೆನ್ನಲ್ಲೇ ಅವರು ದೆಹಲಿ ಹೈಕಮಾಂಡ್ ಕದವನ್ನೂ ತಟ್ಟಿದರು. ಆದರೆ, ಯಾವುದೇ ಫಲಿಕಾರಿಯಾಗದ ಹಿನ್ನೆಲೆ ಬಿಜೆಪಿಯೊಂದಿಗೆ ಶೆಟ್ಟರ್ ಮುನಿಸಿಕೊಂಡಿದ್ದರು.
ಜಗದೀಶ್ ಶೆಟ್ಟರ್ ಅವರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳಬೇಕು ಎಂದು ಬಿಜೆಪಿ ಹೈಕಮಾಂಡ್ ಕೆಲವು ‘ಆಫರ್’ಗಳನ್ನು ಮುಂದಿಟ್ಟಿತ್ತು. ಆದರೆ, ಶೆಟ್ಟರ್ ಮಾತ್ರ ಬಿಜೆಪಿ ಆಯ್ಕೆಗಳನ್ನು ತಿರಸ್ಕರಿಸಿ ಹೊರನಡೆದಿದ್ದಾರೆ.
ಶೆಟ್ಟರ್ ಟಿಕೆಟ್ ಕಗ್ಗಾಂಟಾದ ಹಿನ್ನೆಲೆ ಬಿಜೆಪಿ ಹೈಕಮಾಂಡ್ ಸರ್ವತಂತ್ರ, ಸ್ವತಂತ್ರ ಆಯ್ಕೆಗಳನ್ನು ಜಗದೀಶ್ ಶೆಟ್ಟರ್ ಮುಂದಿಟ್ಟಿತ್ತು. ಪ್ರಧಾನಿ ಮೋದಿ ಅವರ ನಿರ್ದೇಶನದ ಮೇರೆಗೆ ‘ಆಫರ್’ ನೀಡಲಾಗಿತ್ತು.
ಹೈಕಮಾಂಡ್ ಸಂದೇಶವನ್ನ ಖುದ್ದು ಧರ್ಮೇಂದ್ರ ಪ್ರಧಾನ್ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಶೆಟ್ಟರ್ ನಿವಾಸಕ್ಕೆ ತೆರಳಿ ಶೆಟ್ಟರ್ ಮನವೊಲಿಸುವ ಪ್ರಯತ್ನ ನಡೆಸಿದ್ದರು.
ಈ ಸುದ್ದಿ ಓದಿದ್ದೀರಾ? ಪಕ್ಷ ತೊರೆಯಲು ಸಜ್ಜಾದ ಜಗದೀಶ್ ಶೆಟ್ಟರ್ : ಮನವೊಲಿಸುವಲ್ಲಿ ವಿಫಲವಾದ ಪ್ರಲ್ಹಾದ್ ಜೋಶಿ
ಶೆಟ್ಟರ್ ನಿವಾಸದ ಸಭೆಯಲ್ಲಿ ಹೈಕಮಾಂಡ್ ನೀಡಿದ ಆಯ್ಕೆಗಳು
ರಾಜ್ಯದ ಎಲ್ಲ ಪ್ರಮುಖ ಸ್ಥಾನಗಳನ್ನು ಅಲಂಕರಿಸಿರುವ ಜಗದೀಶ್ ಶೆಟ್ಟರ್ ಅವರಿಗೆ ತಕ್ಷಣವೇ ರಾಜ್ಯಸಭಾ ಸದಸ್ಯ ಸ್ಥಾನವನ್ನು ನೀಡಲಾಗುವುದು ಎಂದು ನಾಯಕರು ಹೇಳಿದ್ದರು.
ರಾಜ್ಯಸಭೆಗೆ ಶೆಟ್ಟರ್ ಆಯ್ಕೆ ಮಾಡಿ ಕೇಂದ್ರದಲ್ಲಿ ಪ್ರಮುಖ ಜವಾಬ್ದಾರಿ ನೀಡಲು ಹೈಕಮಾಂಡ್ ತೀರ್ಮಾನ ಮಾಡಿತ್ತು. ದೇಶದ ಯಾವುದಾದರು ರಾಜ್ಯದ ರಾಜ್ಯಪಾಲರನ್ನಾಗಿ ಮಾಡುವ ಭರವಸೆಯನ್ನೂ ಹೈಕಮಾಂಡ್ ನಾಯಕರು ನೀಡಿದ್ದರು.
ಹುಬ್ಬಳ್ಳಿ – ಧಾರವಾಡ ಸೆಂಟ್ರಲ್ ಕ್ಷೇತ್ರದ ಟಿಕೆಟ್ ಅವರ ಕುಟುಂಬದ ಸದಸ್ಯರಿಗೆ ನೀಡುವ ಬಗ್ಗೆ, ಒಂದು ವೇಳೆ ತಮ್ಮ ಕುಟುಂಬದವರಿಗೆ ಬೇಡ ಎನ್ನುವುದಾದರೆ ಅವರು ಸೂಚಿಸುವ ಪಕ್ಷದ ಯಾವುದೇ ಕಾರ್ಯಕರ್ತಗೆ ಟಿಕೆಟ್ ನೀಡಲು ಪಕ್ಷ ಸಮ್ಮತಿಸಲಿದೆ ಎಂದು ಸಹ ‘ಆಫರ್’ ನೀಡಲಾಗಿತ್ತು.
ಮೋದಿ ಅವರ ನಿರ್ದೇಶನದ ಮೇರೆಗೆ, ಈ ನಿರ್ಧಾರ ಕೈಗೊಂಡಿರುವುದಾಗಿ ಜಗದೀಶ್ ಶೆಟ್ಟರ್ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಪ್ರಲ್ಹಾದ್ ಜೋಶಿ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೇರಿದಂತೆ ಎಲ್ಲ ಸೇರಿ ಮಾತುಕತೆ ನಡೆಸಿದ್ದರು.
ಆದರೆ, ಜಗದೀಶ್ ಶೆಟ್ಟರ್ ಅವರು ಈ ಎಲ್ಲ ಆಯ್ಕೆಗಳನ್ನು ತಿರಸ್ಕರಿಸಿದ್ದಾರೆ. ಆರು ಬಾರಿ ಶಾಸಕರಾಗಲು, ಸಚಿವರಾಗಲು, ಮುಖ್ಯಮಂತ್ರಿಯಾಗಲು ಅವಕಾಶ ನೀಡಿದ ಬಿಜೆಪಿ ತೊರೆಯುವ ತೀರ್ಮಾನದತ್ತ ಮುಖ ಮಾಡಿರುವ ಶೆಟ್ಟರ್ ನಡೆಗೆ ಬಿಜೆಪಿ ಹಿರಿಯ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.