- ಲಿಂಗಾಯತ ಹೇಳಿಕೆ ವಿವಾದದ ಕುರಿತು ಸರಣಿ ಟ್ವೀಟ್
- ನನಗೆ ಲಿಂಗಾಯತರ ಮೇಲೆ ಗೌರವವಿದೆ: ಸಿದ್ದರಾಮಯ್ಯ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭ್ರಷ್ಟ ಮುಖ್ಯಮಂತ್ರಿ ಎಂದು ಹೇಳಿದ್ದೆ. ಲಿಂಗಾಯತರೆಲ್ಲ ಭ್ರಷ್ಟರು ಎಂದು ನಾನು ಹೇಳಿಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲಿಂಗಾಯತರ ಕುರಿತ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.
ಸಿದ್ದರಾಮಯ್ಯ ಅವರು ಸುದ್ದಿ ಮಾಧ್ಯಮವೊಂದರ ಜೊತೆಗೆ ಮಾತನಾಡಿ, ಬಿಜೆಪಿಯಿಂದ ಲಿಂಗಾಯತ ಸಿಎಂ ಅಸ್ತ್ರ ಪ್ರಯೋಗ ಮಾಡಿರುವ ಬಗ್ಗೆ ತಿರುಗೇಟು ನೀಡಿದ್ದರು. “ಈಗಾಗಲೇ ಲಿಂಗಾಯತರೇ ‘ಚೀಫ್ ಮಿನಿಸ್ಟರ್’ ಇದ್ದಾರೆ ಅಲ್ವಾ ಅವರೇ ಎಲ್ಲ ಭ್ರಷ್ಟಾಚಾರ ಮಾಡಿ ರಾಜ್ಯವನ್ನು ಹಾಳು ಮಾಡಿದ್ದಾರೆ” ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಅವರ ಈ ಹೇಳಿಕೆ ಲಿಂಗಾಯತ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. ಸಹಜವಾಗಿಯೇ ಬಿಜೆಪಿ ಇದನ್ನು ಚುನಾವಣಾ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ. ಸಿದ್ದರಾಮಯ್ಯ ಅವರನ್ನು ಲಿಂಗಾಯತ ವಿರೋಧಿ ಎಂದು ಬಿಂಬಿಸಲು ಯತ್ನಿಸುತ್ತಿದೆ.
ವಿವಾದದ ಕುರಿತು ವಿಡಿಯೋ ಹಂಚಿಕೊಂಡಿರುವ ಸಿದ್ದರಾಮಯ್ಯ, “ಬಿಜೆಪಿಯವರು ನನ್ನ ಹೇಳಿಕೆಯ ವಿಡಿಯೋವನ್ನು ತಮಗೆ ಬೇಕಾದಂತೆ ತಿರುಚಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.
“ಲಿಂಗಾಯತರೆಲ್ಲ ಭ್ರಷ್ಟರೆಂದು ಹೇಳಿದ್ದೇನೆ ಎಂಬಂತೆ ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಚುನಾವಣಾ ಲಾಭ ಪಡೆಯುವ ಬಿಜೆಪಿಯ ಇಂಥ ಷಡ್ಯಂತ್ರಗಳಿಗೆ ನಾಡಿನ ಲಿಂಗಾಯತ ಸಮುದಾಯ ಕಿವಿಗೊಡುವುದಿಲ್ಲ ಎಂಬ ನಂಬಿಕೆ ನನಗಿದೆ” ಎಂದಿದ್ದಾರೆ.
“ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸುವಾಗ ಬಿಜೆಪಿಯವರು ಲಿಂಗಾಯತ ಅಸ್ತ್ರವನ್ನು ಪ್ರಯೋಗ ಮಾಡುತ್ತಿದ್ದಾರೆ, ಸಿಎಂ ಬೊಮ್ಮಾಯಿ ಭ್ರಷ್ಟ ಮುಖ್ಯಮಂತ್ರಿ ಎಂದು ಹೇಳಿದ್ದೆ. ಲಿಂಗಾಯತರೆಲ್ಲ ಭ್ರಷ್ಟರು ಎಂದು ನಾನು ಹೇಳಿಯೇ ಇಲ್ಲ. ಅದೆಲ್ಲ ಬಿಜೆಪಿ ಸೃಷ್ಟಿಸಿದ ಸುಳ್ಳುಗಳಷ್ಟೆ” ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ನನ್ನನ್ನು ಸೋಲಿಸಲು ಪಣತೊಟ್ಟಿರುವುದು ಬಿಜೆಪಿಯಲ್ಲ, ಬಿಎಲ್ ಸಂತೋಷ್ : ಸಿದ್ದರಾಮಯ್ಯ
“ವೀರೇಂದ್ರ ಪಾಟೀಲರು, ನಿಜಲಿಂಗಪ್ಪನವರು, ಜೆ ಎಚ್ ಪಟೇಲರು, ಬಿ ಡಿ ಜತ್ತಿ, ಎಸ್ ಆರ್ ಕಂಠಿ ಇಂಥ ಅನೇಕ ಪ್ರಾಮಾಣಿಕ ಮುಖ್ಯಮಂತ್ರಿಗಳನ್ನು ಲಿಂಗಾಯತ ಸಮುದಾಯ ಈ ನಾಡಿಗೆ ನೀಡಿದೆ. ಈ ಎಲ್ಲ ನಾಯಕರ ಬಗೆಗೆ ನನಗೆ ವಿಶೇಷ ಪ್ರೀತಿ, ಅಭಿಮಾನವಿದೆ” ಎಂದು ತಿಳಿಸಿದ್ದಾರೆ.
“ವೀರಶೈವ – ಲಿಂಗಾಯತರ ಬಗ್ಗೆ ನಮಗೆ ಗೌರವ ಇರುವುದರಿಂದಲೇ ಹೆಚ್ಚು ಟಿಕೆಟನ್ನು ಅವರಿಗೆ ನೀಡಿದ್ದೇವೆ. ಕಳೆದ ಬಾರಿ 47 ಲಿಂಗಾಯತ ಅಭ್ಯರ್ಥಿಗಳಿಗೆ ಪಕ್ಷದ ಟಿಕೆಟ್ ನೀಡಿದ್ದರೆ, ಈ ಬಾರಿ ಅದಕ್ಕಿಂತ ಹೆಚ್ಚು ಅಂದರೆ ಸುಮಾರು 52 – 53 ಕ್ಷೇತ್ರಗಳಲ್ಲಿ ಟಿಕೇಟ್ ನೀಡಿದ್ದೇವೆ” ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
“ನಮ್ಮಲ್ಲಿ ಜಾತಿ ಆಧಾರದ ಮೇಲೆ ಮುಖ್ಯಮಂತ್ರಿ ಯಾರಾಗಬೇಕೆಂದು ತೀರ್ಮಾನ ಮಾಡುವುದಿಲ್ಲ, ಶಾಸಕರ ಅಭಿಪ್ರಾಯ ಪಡೆದು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಇದು ನಮ್ಮಲ್ಲಿ ನಡೆದುಕೊಂಡುಬಂದ ಪದ್ಧತಿ” ಎಂದು ಹೇಳಿದ್ದಾರೆ.
“ಬಿಜೆಪಿಯವರು ಜಾತಿ ಮೇಲೆ ಮಾಡಿದರೆ ಅದು ಅವರ ಪಕ್ಷದ ವಿಚಾರ. ಅದಕ್ಕೆ ನಮ್ಮ ತಕರಾರಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.