- ಮೇ 10ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆದ ಮತದಾನ
- ಮತದಾನದ ಉತ್ತೇಜನಕ್ಕಾಗಿ ಮತದಾನ ಮಾಡಿದವರಿಗೆ ಉಚಿತ ತಿಂಡಿ ನೀಡಿದ ಹೋಟೆಲ್ಗಳು
ಕರ್ನಾಟಕದಲ್ಲಿ 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಮತದಾನ ಯಶಸ್ವಿಯಾಗಿ ಮುಗಿದಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಶೇ. 54.53ರಷ್ಟು ಮತದಾನವಾಗಿದೆ. ಕಳೆದ ಬಾರಿಗಿಂತ ಕಡಿಮೆ ಮತದಾನವಾಗಿದ್ದು, ಮತದಾರರು ಭಾರೀ ನಿರಾಸೆ ಉಂಟುಮಾಡಿದ್ದಾರೆ.
ಮೇ 10ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆದಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಶೇ.83.76 ಮತದಾನವಾಗಿದೆ. ಬೆಂಗಳೂರು ನಗರದಲ್ಲಿ ಶೇ.56.82 ಮತದಾನವಾಗಿದೆ. ಈ ಪೈಕಿ, ಬೆಂಗಳೂರು ಸೆಂಟ್ರಲ್ನಲ್ಲಿ ಶೇ.55.33 ಮತ ಚಲಾವಣೆಯಾಗಿದೆ. ಬೆಂಗಳೂರು ದಕ್ಷಿಣದಲ್ಲಿ 52.17, ಬೆಂಗಳೂರು ಉತ್ತರದಲ್ಲಿ ಶೇ.52.27 ಮತದಾನವಾಗಿದೆ.
ಬೆಂಗಳೂರಿನಲ್ಲಿ ಮತದಾನದ ವೇಳೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರೊಂದಿಗೆ ಕೆಲವು ಅಹಿತಕರ ಘಟನೆ ನಡೆದಿರುವುದು ಕೆಲವೆಡೆ ವರದಿಯಾಗಿವೆ. ಕೆಲವೆಡೆ ಬೇರೆ ರಾಜ್ಯಗಳಿಂದ, ಬೇರೆ ಬೇರೆ ದೇಶಗಳಿಂದ ನಗರಕ್ಕೆ ಬಂದು ಮತದಾನ ಮಾಡಿ, ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನೂ ಅಮೇರಿಕಾದಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮತ ಹಾಕಲು ಬಂದವರೂ, ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದ ಕಾರಣ ಮತ ಹಾಕದೆ ನಿರಾಸೆಯಿಂದ ಮನೆ ಕಡೆ ಹೆಜ್ಜೆ ಹಾಕಿದ್ದಾರೆ.
ಮತದಾನದ ಹಕ್ಕು ಚಲಾಯಿಸಲು ಜಯನಗರ ಕ್ಷೇತ್ರದ ವ್ಯಾಪ್ತಿಯಲ್ಲಿ ಜೆ.ಪಿ.ನಗರ 5ನೇ ಹಂತದಲ್ಲಿರುವ ಸಂವೇದ್ ಶಾಲೆಯ ಮತಗಟ್ಟೆಗೆ ಬಂದ ಒಂದೇ ಕುಟುಂಬದ ಮೂವರಿಗೆ ನಿರಾಸೆಯಾಗಿದೆ. ಮತದಾರರ ಪಟ್ಟಿಯಲ್ಲಿ ಅವರ ಹೆಸರು ಇಲ್ಲದೆ, ಮತ ಚಲಾಯಿಸಲಾಗದೇ ಪರದಾಡುವಂತಾಗಿದೆ.
ಬೆಂಗಳೂರು ದಕ್ಷಿಣ ವಿಧಾನಸಭೆಯ ದೊಡ್ಡನಾಗಮಂಗಲ ಮತಗಟ್ಟೆ ಕೇಂದ್ರದಲ್ಲಿ ಸರತಿ ಸಾಲಿನಲ್ಲಿ ನಿಂತು ಬೇಸತ್ತ ಮತದಾರರು ಮತದಾನ ಮಾಡದೇ ಮನೆಗೆ ವಾಪಸಾಗಿರುವ ಘಟನೆ ನಡೆದಿದೆ. ಸುಮಾರು ಎಂಟು ಸಾವಿರ ಮತದಾರರಿಗೆ ಒಂದೇ ಮತಕೇಂದ್ರ ನಿಗದಿಯಾಗಿರುವುದೇ ಈ ನೂಕುನುಗ್ಗಲಿಗೆ ಕಾರಣ ಎಂದು ಮತದಾರರು ದೂರಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮತದಾನಕ್ಕೆ ತೆರೆ | ರಾಜ್ಯದಲ್ಲಿ 65.69% ಮತದಾನ
ಮತದಾನದ ಪ್ರಮಾಣ ಹೆಚ್ಚಸಲು ಜಿಲ್ಲಾ ಚುನಾವಣಾಧಿಕಾರಿ ಕಸರತ್ತು
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ಹಾಗೂ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಅವರು ಜನರಲ್ಲಿ ಮತದಾನದ ಅರಿವು ಮೂಡಿಸುವ ಸಲುವಾಗಿ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಜಾಥಾ, ಬೀದಿ ನಾಟಕ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಒಂದು ತಿಂಗಳಿಂದ ಸತತವಾಗಿ ಮತದಾನದ ಜಾಗೃತಿ ಮೂಡಿಸಿದರೂ ನಿರೀಕ್ಷಿತ ಪ್ರಮಾಣದಲ್ಲಿ ಮತದಾನ ಮಾಡದೆ ನಗರದ ಮತದಾರರು ವಿಫಲರಾಗಿದ್ದಾರೆ.
ನಗರದಲ್ಲಿ ಕಳೆದ ಬಾರಿಗಿಂತ ಕಡಿಮೆ ಪ್ರಮಾಣದಲ್ಲಿ ಮತದಾನವಾಗಿದೆ. ಬುಧವಾರ ಸಂಜೆ 6ರಂತೆ ಬಿಡುಗಡೆಯಾಗಿರುವ ಪ್ರಕಟಣೆಯಂತೆ ಶೇ 54.53ರಷ್ಟು ಮತದಾನವಾಗಿದ್ದು, ಕಳೆದ ಬಾರಿಗಿಂತ ಶೇ 0.59ರಷ್ಟು ಕಡಿಮೆಯಾಗಿದೆ.
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು(ಕೆಎಸ್ಟಿಡಿಸಿ) ಕೂಡಾ ತಮ್ಮ ಉಸ್ತುವಾರಿಯಲ್ಲಿರುವ ಮಯೂರ ಹೋಟೆಲ್ಗಳಲ್ಲಿ ಉಳಿದುಕೊಳ್ಳಲು ಶೇಕಡಾ 50 ರಷ್ಟು ರಿಯಾಯಿತಿಯನ್ನ ಘೋಷಿಸಿತ್ತು.
ಇನ್ನೂ ಮತದಾನದ ಉತ್ತೇಜನಕ್ಕಾಗಿ ಮತದಾನ ಮಾಡಿದವರಿಗೆ ನಿಸರ್ಗ ಗ್ರ್ಯಾಂಡ್ ಮತ್ತು ಚಾಣಕ್ಯ ಹೋಟೆಲ್ಗಳು ಬೆಣ್ಣೆ ಖಾಲಿ ದೋಸೆ, ಮೈಸೂರು ಪಾಕ್ ಮತ್ತು ತಂಪು ಪಾನಕವನ್ನು ಉಚಿತವಾಗಿ ನೀಡಿದೆ.