ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಹೊರಗಿರುವ ನಟ ದರ್ಶನ್ ಬಂದೂಕಿನ ಪರವಾನಗಿಯನ್ನು ಪೊಲೀಸರು ರದ್ದುಗೊಳಿಸಿದ್ದಾರೆ.
ಬೆಂಗಳೂರು ಪೊಲಿಸ್ ಆಯುಕ್ತ ಬಿ ದಯಾನಂದ್ ಅವರ ಆದೇಶದ ಬೆನ್ನಲ್ಲೇ ದರ್ಶನ್ ಗನ್ ಅನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ತಾತ್ಕಾಲಿಕವಾಗಿ ಗನ್ ಪರವಾನಗಿ ರದ್ದು ಮಾಡಲಾಗಿದೆ. ಪರವಾನಗಿ ರದ್ದು ಮಾಡಿದ್ದ ಬೆನ್ನಲ್ಲೆ ದರ್ಶನ್ಗೆ ಆರ್ ಆರ್ ನಗರ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು.
ನೋಟಿಸ್ ಜಾರಿ ಮಾಡಿದ್ದರೂ ಗನ್ ಜಮೆ ಮಾಡಲು ದರ್ಶನ್ ಹಿಂದೇಟು ಹಾಕಿದ್ದರು. ಇಂದು ಖುದ್ದು ಚೆನ್ನಮ್ಮನಕೆರೆಯ ದರ್ಶನ್ ಮನೆಗೆ ತೆರಳಿ ಪೊಲೀಸರು ಗನ್ ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಈ ಮೊದಲು ಪೊಲೀಸರಿಗೆ ಪತ್ರ ಬರೆದಿದ್ದ ದರ್ಶನ್, ತಮ್ಮ ಬಂದೂಕು ಪರವಾನಗಿಯನ್ನು ರದ್ದು ಮಾಡದಂತೆ ಮನವಿ ಮಾಡಿದ್ದರು. ತಮಗೆ ಭದ್ರತೆಯ ಅವಶ್ಯಕತೆ ಇದ್ದು, ಆ ಕಾರಣಕ್ಕೆ ತಮಗೆ ಬಂದೂಕಿನ ಅಗತ್ಯತೆ ಇದೆಯೆಂದು ಹೇಳಿದ್ದರು. ಆದರೆ ದರ್ಶನ್ ಮನವಿಯನ್ನು ತಿರಸ್ಕರಿಸಿರುವ ಪೊಲೀಸ್ ಇಲಾಖೆ, ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಮುಗಿಯುವವರೆಗೆ ಬಂದೂಕನ್ನು ಇರಿಸಿಕೊಳ್ಳುವಂತಿಲ್ಲ ಎಂದು ಹೇಳಿ ತಾತ್ಕಾಲಿಕವಾಗಿ ಪರವಾನಗಿಯನ್ನು ರದ್ದುಗೊಳಿಸಿದೆ.
ಈ ಸುದ್ದಿ ಓದಿದ್ದೀರಾ? ಬಾಲಿವುಡ್ ನಟ ಸೈಫ್ ಅಲಿ ಖಾನ್ಗೆ ಚಾಕು ಇರಿತ: ರಾತ್ರಿ ಮನೆಗೆ ನುಗ್ಗಿದ್ದ ದುಷ್ಕರ್ಮಿಗಳು
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ಗೆ ಹೈಕೋರ್ಟ್ ನಿಯಮಿತ ಜಾಮೀನು ನೀಡಿದೆ. ದರ್ಶನ್ ಮಾತ್ರವಲ್ಲದೆ ಪ್ರಕರಣದ ಎಲ್ಲ ಆರೋಪಿಗಳಿಗೆ ನೀಡಿರುವ ಜಾಮೀನು ರದ್ದು ಮಾಡಲಾಗಿದೆ. ಆದರೆ ಪೊಲೀಸರು, ದರ್ಶನ್ಗೆ ನೀಡಿರುವ ಜಾಮೀನು ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.
ನಟ ದರ್ಶನ್, ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆ ವೇಳೆ ತಮ್ಮಿಂದ ಪೊಲೀಸರು ವಶಪಡಿಸಿಕೊಂಡಿರುವ 37 ಲಕ್ಷ ರೂ. ರೂಪಾಯಿ ಹಣವನ್ನು ಮರಳಿಸುವಂತೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಪೊಲೀಸರು ವಶಪಡಿಸಿಕೊಂಡಿರುವ 37 ಲಕ್ಷ ರೂಪಾಯಿ ಹಣ ತಮ್ಮದಾಗಿದ್ದು, ಈ ಹಿಂದೆ ವ್ಯಕ್ತಿಯೊಬ್ಬರಿಗೆ ಆ ಮೊತ್ತವನ್ನು ಸಾಲವಾಗಿ ನೀಡಿದ್ದು, ಆ ವ್ಯಕ್ತಿ ಹಣ ಮರಳಿಸಿದ್ದರು. ಅದನ್ನು ಮನೆಯಲ್ಲಿ ಇರಿಸಿಕೊಂಡಿದ್ದೆ ಎಂದು ದರ್ಶನ್ ಹೇಳಿದ್ದಾರೆ. ಆದರೆ ಪೊಲೀಸರು, ದರ್ಶನ್ ಬಳಿಯಿಂದ ವಶಪಡಿಸಿಕೊಂಡಿರುವ ಹಣ, ರೇಣುಕಾ ಸ್ವಾಮಿ ಕೊಲೆ ಪ್ರಕರಣ ಮುಚ್ಚಿ ಹಾಕಲು ಇರಿಸಿಕೊಂಡಿದ್ದ ಹಣವಾಗಿತ್ತು ಎಂದು ಆರೋಪಿಸಿದ್ದಾರೆ.