ಆರಾಧ್ಯ ಸಾವನ್ನಪ್ಪಿದ್ದಾರೆಂದು ವದಂತಿ ಹರಡಿದ್ದ ಯುಟ್ಯೂಬ್ ಮಾಧ್ಯಮಗಳು
ಯುಟ್ಯೂಬ್ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿಗಳು
ಬಾಲಿವುಡ್ನ ಸ್ಟಾರ್ ದಂಪತಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ಮಗಳು ಆರಾಧ್ಯ, ತಮ್ಮ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಹರಡಿದ ಯುಟ್ಯೂಬ್ ಮಾಧ್ಯಮಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದೆಹಲಿ ಹೈಕೋರ್ಟ್ನಲ್ಲಿ ಮನವಿ ಸಲ್ಲಿಸಿದ್ದಾರೆ. ಗುರುವಾರ ಅರ್ಜಿ ವಿಚಾರಣೆ ನಡೆಸಿರುವ ದೆಹಲಿ ಹೈಕೋರ್ಟ್ನ ನ್ಯಾಯಮೂರ್ತಿ ಸಿ ಹರಿಶಂಕರ್, ಯುಟ್ಯೂಬ್ ಮಾಲೀಕತ್ವ ಹೊಂದಿರುವ ಗೂಗಲ್ ಸಂಸ್ಥೆಯ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡಿದ್ದು, ಸುಳ್ಳು ಸುದ್ದಿ ಹರಡಿದ ನಿರ್ದಿಷ್ಟ ಯುಟ್ಯೂಬ್ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಿದ್ದಾರೆ.
ನೆಟ್ಟಿಗರ ಗಮನ ಸೆಳೆಯುವ ಸಲುವಾಗಿ 11 ವರ್ಷದ ಆರಾಧ್ಯ ಬಚ್ಚನ್ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿದೆ ಎಂದು ಕೆಲ ಯುಟ್ಯೂಬ್ ಮಾಧ್ಯಮಗಳು ಸುಳ್ಳು ಮಾಹಿತಿಯನ್ನು ಹರಿಬಿಟ್ಟಿವೆ. ಇನ್ನು ಕೆಲವು ಯುಟ್ಯೂಬ್ ಮಾಧ್ಯಮಗಳು ಅನಾರೋಗ್ಯದಿಂದ ಬಳಲುತ್ತಿದ್ದರಿಂದ ಆರಾಧ್ಯ ಸಾವನ್ನಪ್ಪಿದ್ದಾರೆ ಎಂದು ವದಂತಿಯನ್ನು ಹಬ್ಬಿದ್ದವು. ಬಚ್ಚನ್ ಕುಟುಂಬಸ್ಥರ ಬಗ್ಗೆಯೂ ಸುಳ್ಳು ಮಾಹಿತಿಯನ್ನು ಆಧರಿಸಿದ ವಿಡಿಯೋಗಳನ್ನು ಒಂದಷ್ಟು ಯುಟ್ಯೂಬ್ ಮಾಧ್ಯಮಗಳು ಹಂಚಿಕೊಂಡಿದ್ದವು. ಈ ಹಿನ್ನೆಲೆ ತಮ್ಮ ಖಾಸಗಿತನಕ್ಕೆ ಧಕ್ಕೆಯುಂಟು ಮಾಡುವಂತಹ ಸುಳ್ಳು ಸುದ್ದಿ ಆಧರಿಸಿದ ವಿಡಿಯೋಗಳನ್ನು ಯುಟ್ಯೂಬ್ನಿಂದ ತೆಗೆದು ಹಾಕುವಂತೆ ಕೋರಿ ಆರಾಧ್ಯ ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ ಹರಿಶಂಕರ್ ಆರಂಭದಲ್ಲೇ ಯುಟ್ಯೂಬ್ ಸಂಸ್ಥೆಯ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. “ಸಮಾಜದಲ್ಲಿ ಸುಳ್ಳು ಸುದ್ದಿಗಳನ್ನು ಹರಡುವ ಭಾಗವಾಗಿ ಯುಟ್ಯೂಬ್ ವೇದಿಕೆ ಕೆಲಸ ಮಾಡುತ್ತಿದೆಯೇ? ನೀವು ʼಕಂಟೆಂಟ್ ಕ್ರಿಯೆಟರ್ʼಗಳಿಗೆ ವೇದಿಕೆ ಕಲ್ಪಿಸುತ್ತೀರಿ, ಅವರು ಅಪ್ಲೋಡ್ ಮಾಡುವ ನೀವು ಕೂಡ ಹಣ ಗಳಿಸುತ್ತೀರಿ ಅಲ್ಲವೇ? ಹೀಗಿರುವಾಗ ಅವರು ಅಪ್ಲೋಡ್ ಮಾಡುವ ವಿಡಿಯೋಗಳ ಬಗ್ಗೆ ನೀವು ಗಮನ ಹರಿಸಿ, ನಿಯಂತ್ರಿಸಬೇಕಲ್ಲವೇ?” ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
ಈ ಸುದ್ದಿ ಓದಿದ್ದೀರಾ? ʼಪುಷ್ಪ-2ʼ ನಿರ್ದೇಶಕ, ನಿರ್ಮಾಪಕರ ಮನೆ ಮೇಲೆ ಐಟಿ ದಾಳಿ
“ಸೆಲೆಬ್ರಿಟಿಗಳ ಮಕ್ಕಳಾಗಲಿ ಅಥವಾ ಜನ ಸಾಮನ್ಯರ ಮಕ್ಕಳೇ ಆಗಿರಲಿ ಘನತೆ ಮತ್ತು ಗೌರವದಿಂದ ಬದುಕುವ ಎಲ್ಲರಿಗೂ ಇದೆ. ಈ ರೀತಿ ಅಪ್ರಾಪ್ತ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ವದಂತಿಯನ್ನು ಹಬ್ಬಿಸುತ್ತಿರುವುದ ಇದು ಮೊದಲೇನಲ್ಲ. ನ್ಯಾಯಾಲಯ ರೀತಿಯ ಬೆಳವಣಿಗೆಯನ್ನು ಹಸಿಸುವುದಿಲ್ಲ. ಯುಟ್ಯೂಬ್ ಮಾಲೀಕತ್ವ ಹೊಂದಿರುವ ಗೂಗಲ್ ಸಂಸ್ಥೆಯೂ ಜನರ ಖಾಸಗಿತನಕ್ಕೆ ಧಕ್ಕೆ ತರದಂತೆ ತನ್ನ ನಿಯಮಗಳನ್ನು ಇನ್ನಷ್ಟು ಗಟ್ಟಿಗೊಳಿಸಬೇಕು. ಜೊತೆಗೆ ಸುಳ್ಳು ಸುದ್ದಿಗಳನ್ನು ಹರಿಬಿಟ್ಟ ಯುಟ್ಯೂಬ್ ಮಾಧ್ಯಮಗಳಲ್ಲಿ ಯಾವುದೇ ವಿಡಿಯೋಗಳನ್ನು ಅಪ್ಲೋಡ್ ಮಾಡದಂತೆ ನಿರ್ಬಧಿಸಬೇಕು. ದೂರುದಾರರಾದ ಆರಾಧ್ಯ ಅವರ ಕುರಿತ ಸುಳ್ಳು ಸುದ್ದಿ ಆಧಾರಿಸಿದ ವಿಡಿಯೋಗಳನ್ನು ಕೂಡಲೇ ಯುಟ್ಯೂಬ್ನಿಂದ ತೆಗೆದು ಹಾಕಬೇಕು. ಅದೇ ರೀತಿ ಯುಟ್ಯೂಬ್ ವೇದಿಕೆಯಲ್ಲಿ ಬೇರೆ ವ್ಯಕ್ತಿಗಳ ಖಾಸಗಿತನಕ್ಕೂ ಧಕ್ಕೆ ತರುವ ವಿಡಿಯೋಗಳ ಪ್ರಸಾರಕ್ಕೆ ನಿರ್ಬಂಧ ಹೇರಬೇಕು. ನೀವು ಯುಟ್ಯೂಬ್ ವೇದಿಕೆಯನ್ನು ಧರ್ಮಕ್ಕಾಗಿ ನಡೆಸುತ್ತಿಲ್ಲ, ಕೇವಲ ಲಾಭಕ್ಕಾಗಿ ಈ ವೇದಿಕೆ ಕೆಲಸ ಮಾಡುತ್ತಿದೆ. 2021ರ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅನ್ವಯ ಜನರ ಖಾಸಗಿ ತನಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಸಂಸ್ಥೆಯ ಜವಾಬ್ದಾರಿ” ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಆರಾಧ್ಯ ಅವರ ಅರ್ಜಿಯನ್ನು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ನ್ಯಾಯಮೂರ್ತಿಗಳು ಒಂದು ವಾರದ ನಂತರ ಎರಡನೇ ಸುತ್ತಿನ ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ. ಸುಳ್ಳು ಸುದ್ದಿ ಹರಡಿದ 10 ಯುಟ್ಯೂಬ್ ಮಾಧ್ಯಮಗಳ ಪ್ರತಿನಿಧಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ.