ಅಕಾಡೆಮಿ ಆಯೋಜಿಸಿದ ಸಿನೆಮಾ ಕಾರ್ಯಾಗಾರಗಳು, ಸಂವಾದಗಳು, ಪತ್ರಿಕಾಗೋಷ್ಠಿಗಳು ಉತ್ತಮವಾಗಿದ್ದವು. ಕಾರ್ಯಾಗಾರಗಳು, ಸಂವಾದಗಳಿಗೆ ಸಿನೆಮಾಸಕ್ತರು ಹೆ್ಚ್ಚಿನ ಸಂಖ್ಯೆಯಲ್ಲಿದ್ದರು. ಪತ್ರಿಕಾಗೋಷ್ಠಿಗಳಲ್ಲಿಯೂ ಇವರ ಹಾಜರಿ ಗಮನಾರ್ಹ ಸಂಖ್ಯೆಯಲ್ಲಿತ್ತು. ಇವುಗಳಲ್ಲಿ ಭಾಗವಹಿಸಿದ ಸಿನೆಮಾರಂಗದವರು, ಇತರ ಕ್ಷೇತ್ರಗಳವರು ಉತ್ತಮ ಮಾಹಿತಿ ನೀಡಿದರು.
ನಿಗದಿತ ದಿನಾಂಕದಂದು ಆರಂಭವಾಗುವುದಿಲ್ಲ. ತರಾತುರಿಯ ಆಯೋಜನೆ, ನೋಂದಣಿ ಮಾಡಿಕೊಂಡ ಎಲ್ಲರಿಗೂ ಬ್ಯಾಗುಗಳು, ಸಿನೆಮಾ ಕೈಪಿಡಿಗಳು ದೊರಕಿಲ್ಲ ಎಂಬ ದೂರುಗಳು, ಸರ್ವ ಜನಾಂಗದ ಶಾಂತಿಯ ತೋಟ ಪರಿಕಲ್ಪನೆಗೆ ವಿರುದ್ಧವಾದ ಸಿನೆಮಾ ಆಯ್ಕೆ ಆಗಿದೆ, ಆಯ್ಕೆ ಸಮಿತಿ ನಮ್ಮ ಸಿನೆಮಾ ನೋಡಿಲ್ಲ ಎಂಬ ಆರೋಪಗಳ ನಡುವೆ ಮಾರ್ಚ್1, 2025ರಿಂದ ಆರಂಭವಾಗಿ ಮಾರ್ಚ್ 8, 2025ರ ತನಕ ಆಯೋಜಿತವಾಗಿದ್ದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚತ್ರೋತ್ಸವ ಯಶಸ್ವಿಯಾಗಿ ಪೂರ್ಣಗೊಂಡಿದೆ.
“ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ವ್ಯವಸ್ಥೆ ಉತ್ತಮ, ಮಾರ್ಚ್ 2ಕ್ಕೆ ಒರಾಯನ್ ಮಾಲ್ ಗೆ ಬಂದ ನೋಂದಣಿದಾರರಿಗೆ ವಿಳಂಬ ಇಲ್ಲದೇ ಪಾಸ್, ಕೆಟಲಾಗ್ ದೊರೆಯಿತು. ಸ್ವಯಂ ಸೇವಕರು, ಮಲ್ಟಿಫ್ಲೆಕ್ಸ್ ಸಿಬ್ಬಂದಿಯೂ ಸೌಹಾರ್ದಯುತವಾಗಿ ಸಹಕರಿಸಿದರು” ಎಂದು ಬ್ಯಾಂಕಿಂಗ್ ಕ್ಷೇತ್ರದ ನಿವೃತ್ತ ಹಿರಿಯ ಅಧಿಕಾರಿ, ಸಿನೆಮಾ ವಿಮರ್ಶಕ ಎಂ. ನಾಗರಾಜ ಶೆಟ್ಟಿ ಪ್ರಶಂಸಿದರು.
ಈ ಬಾರಿ “ಸರ್ವ ಜನಾಂಗದ ಶಾಂತಿಯ ತೋಟ” ಎಂಬ ಥೀಮ್ ಅಡಿಯಲ್ಲಿ ಫೆಸ್ಟಿವಲ್ ನಡೆದಿದೆ. ಆದರೆ ಆಯ್ಕೆಯಾದ ಎಲ್ಲ ಸಿನೆಮಾಗಳು ಅದರ ಪ್ರಕಾರವೇ ಇರಬೇಕು ಎಂದು ನಿರೀಕ್ಷಿಸುವುದು ಕಷ್ಟ. ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದ ಸಿನೆಮಾಗಳೂ ಕೆಲವೊಮ್ಮೆ ಅದಕ್ಕೆ ಬದ್ಧವಾಗಿರುವುದಿಲ್ಲ. ಹೀಗೆಂದು ಥೀಮ್ ಬೇಡ ಎಂದು ಹೇಳಲು ಆಗುವುದಿಲ್ಲ. ನಿರ್ದಿಷ್ಟ ಪರಿಕಲ್ಪನೆಯಡಿ ಫಿಲ್ಮ್ ಫೆಸ್ಟಿವಲ್ ಆಯೋಜಿತವಾಗುವುದು ಸೂಕ್ತ. ಮುಖ್ಯವಾಗಿ ಗೋವಾ ಫಿಲ್ಮ್ ಫೆಸ್ಟಿವಲ್ ಮಾದರಿ ನಿರ್ದಿಷ್ಟ ದಿನಾಂಕ, ತಿಂಗಳಿನಂದು ಇಲ್ಲಿಯೂ ಫೆಸ್ಟಿವಲ್ ಆಗಬೇಕು” ಎಂದು ನಾಗರಾಜ ಶೆಟ್ಟಿ ಸಲಹೆ ನೀಡಿದರು.
“ಚಲನಚಿತ್ರೋತ್ಸವದ ಥೀಮ್ ಸಾಂಗಿಗೆ ಮಾಡಿರುವ ದೃಶ್ಯೀಕರಣ ಮತ್ತು ಅದರ ಆಯ್ಕೆ ಸೂಕ್ತವಾಗಿರಲಿಲ್ಲ. ಸ್ಮಾರಕಗಳನ್ನು ಅಷ್ಟೇ ತೋರಿಸಿದ್ದಾರೆ. ಇದರ ಬದಲು ‘ಸರ್ವ ಜನಾಂಗದ ಶಾಂತಿಯ ತೋಟ’ ಪರಿಕಲ್ಪನೆಗೆ ಅನುಗುಣವಾಗಿ ಹ್ಯೂಮನ್ ಕ್ಯಾರೆಕ್ಟರ್ಸ್ ಇರಬೇಕಿತ್ತು” ಎಂದು ಬ್ಯಾಂಕಿಂಗ್ ಕ್ಷೇತ್ರದ ನಿವೃತ್ತ ಹಿರಿಯ ಅಧಿಕಾರಿ, ಸಿನೆಮಾ ವಿಮರ್ಶಕ ಮುರಳಿಕೃಷ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
“ಫಿಲ್ಮ್ ಫೆಸ್ಟಿವಲ್ಗೆ ಆಯ್ಕೆಗೊಳ್ಳುವ ಸಿನೆಮಾಗಳ ಬಗ್ಗೆ ಸಾಮಾನ್ಯವಾಗಿ ಅಪಸ್ವರ ಇರುತ್ತವೆ. ಆದರೆ ಆಯ್ಕೆ ಸಮಿತಿ ಉತ್ತಮ ಸಿನೆಮಾಗಳ ಆಯ್ಕೆಗೆ ಶ್ರಮಿಸಿದ್ದಾರೆ. ಆದರೆ ಉತ್ಕೃಷ್ಟ ಎನ್ನುವಂಥ ಸಿನೆಮಾಗಳು ಕಾಣಲಿಲ್ಲ” ಎಂದೂ ಹೇಳುವ ಮುರಳಿಕೃಷ್ಣ ಸಿನೆಮಾ ಕೈಪಿಡಿ ರೂಪಿಸಿದವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. “ಅಲ್ಫಾಬಿಟಿಕಲ್ ಮಾದರಿ ಸಿನೆಮಾಗಳ ಪರಿಚಯ ನೀಡಬೇಕಿತ್ತು. ಹೀಗೆ ಇರದೇ ಇದ್ದಿದ್ದರಿಂದ ಸಿನೆಮಾ ಕಿರು ಪರಿಚಯ ಹುಡುಕುವುದಕ್ಕೆ ಕಷ್ಟವಾಗುತ್ತದೆ” ಎನ್ನುವುದು ಮುರಳಿಕೃಷ್ಣ ಮಾತು.
“ಕರ್ನಾಟಕ ಚಲನಚಿತ್ರ ಅಕಾಡೆಮಿ ಸದ್ಯಕ್ಕೆ ಫಿಲ್ಮ್ ಫೆಸ್ಟಿವಲ್ ಆಯೋಜನೆಗೆ ಮಾತ್ರ ಸೀಮಿತಗೊಂಡಿದೆ. ಇನ್ನೂ ಉತ್ತಮವಾಗಿ ಆಯೋಜನೆ ಮಾಡುವ ಅವಕಾಶಗಳಿವೆ. ಅದನ್ನು ಅಕಾಡೆಮಿ ಬಳಸಿಕೊಳ್ಳುತ್ತಿಲ್ಲ. ಕರ್ನಾಟಕದಲ್ಲಿ ಚಲನಚಿತ್ರೋತ್ಸವದ ಭಾಗವಾಗಿಯೂ ಹೆಚ್ಚೆಚ್ಚು ಸಂಖ್ಯೆಯಲ್ಲಿ ಉತ್ತಮ ಸಿನೆಮಾಗಳು ನಿರ್ಮಾಣಗೊಳ್ಳುವ ವಾತಾವರಣವನ್ನು ನಿರ್ಮಿಸಬಹುದು. ಬರ್ಲಿನ್ ಫಿಲ್ಮ್ ಫೆಸ್ಟಿವಲ್ ಮಾದರಿಯಲ್ಲಿ ಉತ್ತಮ ಚಿತ್ರಕಥೆಗೆ, ಸಿನೆಮಾ ನಿರ್ಮಾಣಕ್ಕೆ ಹಣ ಕೊಡುವ ಮಾದರಿ ಇಲ್ಲಿಯೂ ಕೊಡಬಹುದು” ಎಂಬ ಸಲಹೆಯನ್ನೂ ನೀಡಿದರು.

ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಒರಾಯನ್ ಮಾಲ್ ನಲ್ಲಿ ಸಿನೆಮಾಸಕ್ತರ ಸಂಖ್ಯೆ ಗಣನೀಯವಾಗಿ ಕಡಿಮೆ ಇತ್ತು. ಮಾರ್ಚ್ 2, ಭಾನುವಾರ, ಅಂದೂ ಆಸಕ್ತರ ಸಂದಣಿ ಇರಲಿಲ್ಲ. ಮಾರ್ಚ್ 8ರಂದು ಮಾತ್ರ ಭಾರಿ ಸಂದಣಿ ಇತ್ತು. ಇಲ್ಲಿ ಪ್ರದರ್ಶನಗೊಂಡ ಸಿನೆಮಾಗಳಲ್ಲಿ ಕೆಲವು ಈಗಾಗಲೇ ಆನ್ಲೈನ್ ನಲ್ಲಿ ವೀಕ್ಷಣೆಗೆ ದೊರಕಿದ್ದು, ಅದೇ ವಾರದಲ್ಲಿ ಕ್ರಿಕೆಟ್ ಚಾಂಪಿಯನ್ ಶಿಪ್ ಪಂದ್ಯಾವಳಿ ಇದ್ದದ್ದೂ ನಿರೀಕ್ಷೆಯ ಸಂಖ್ಯೆಯಲ್ಲಿ ವೀಕ್ಷಕರು ಬಾರದಿರಲು ಕಾರಣವಾಗಿರಬಹುದು.
ನಿಗದಿತ ವೇಳೆಗೆ ಸಿನೆಮಾಗಳ ಪ್ರದರ್ಶನ, ಸ್ವಯಂ ಸೇವಕರ ಮಾರ್ಗದರ್ಶನ, ಉತ್ತಮ ಸಹಕಾರದಿಂದ ಎಲ್ಲಿಯೂ ಗದ್ದಲ – ಗಲಾಟೆಗಳಾಗಲಿಲ್ಲ. ವೀಕ್ಷಣೆಗೆ ಅಧಿಕ ಬೇಡಿಕೆ ಇದ್ದ ಸಿನೆಮಾಗಳು ಮರು ಪ್ರದರ್ಶನಗೊಂಡವು. ಮುಖ್ಯವಾಗಿ ಪರ್ಷಿಯನ್ ಸಿನೆಮಾಗಳಿಗೆ ಹೆಚ್ಚು ಬೇಡಿಕೆ ಇತ್ತು. ಇವುಗಳು ಪ್ರದರ್ಶನಗೊಂಡ ಸ್ಕ್ರೀನ್ ಗಳ ಮುಂದೆ ಪ್ರತಿಬಾರಿಯೂ ದೀರ್ಘ ಸರತಿ ಸಾಲು ಇತ್ತು.
ಅಕಾಡೆಮಿ ಆಯೋಜಿಸಿದ ಸಿನೆಮಾ ಕಾರ್ಯಾಗಾರಗಳು, ಸಂವಾದಗಳು, ಪತ್ರಿಕಾಗೋಷ್ಠಿಗಳು ಉತ್ತಮವಾಗಿದ್ದವು. ಕಾರ್ಯಾಗಾರಗಳು, ಸಂವಾದಗಳಿಗೆ ಸಿನೆಮಾಸಕ್ತರು ಹೆ್ಚ್ಚಿನ ಸಂಖ್ಯೆಯಲ್ಲಿದ್ದರು. ಪತ್ರಿಕಾಗೋಷ್ಠಿಗಳಲ್ಲಿಯೂ ಇವರ ಹಾಜರಿ ಗಮನಾರ್ಹ ಸಂಖ್ಯೆಯಲ್ಲಿತ್ತು. ಇವುಗಳಲ್ಲಿ ಭಾಗವಹಿಸಿದ ಸಿನೆಮಾರಂಗದವರು, ಇತರ ಕ್ಷೇತ್ರಗಳವರು ಉತ್ತಮ ಮಾಹಿತಿ ನೀಡಿದರು.
ಫಿಲ್ಮ್ ಫೆಸ್ಟಿವಲ್ ಮಾಧ್ಯಮ ಕೋಶದ ನಿರ್ವಹಣೆ ಉತ್ತಮವಾಗಿರಲಿಲ್ಲ. ಬಹುಶಃ ವಾಟ್ಸ್ಯಾಪ್ ನಲ್ಲಿ ಮರುದಿನದ ಮತ್ತು ಆಯಾದಿನದ ಕಾರ್ಯಕ್ರಮ ಪಟ್ಟಿ ಹಾಕಿದರಷ್ಟೇ ತಮ್ಮ ಜವಾಬ್ದಾರಿ ಮುಗಿಯಿತು ಎಂದು ಅವರು ಭಾವಿಸಿರಬಹುದು! ಮಾಧ್ಯಮ ಸಂಸ್ಥೆಗಳು ಸಾಮಾನ್ಯವಾಗಿ ಓರ್ವ ಪ್ರತಿನಿಧಿಯನ್ನಷ್ಟೇ ನಿಯೋಜಿಸುತ್ತಾರೆ. ಇವರು ಚಲನಚಿತ್ರೋತ್ಸವ ಆಯೋಜನೆ ಅವಧಿಯಲ್ಲಿ ನಿಯೋಜಿತ ಎಲ್ಲ ಪತ್ರಿಕಾಗೋಷ್ಠಿಗಳು, ಕಾರ್ಯಾಗಾರಗಳನ್ನು ಅಟೆಂಡ್ ಮಾಡುವುದು ಸಾಧ್ಯವಾಗುವುದಿಲ್ಲ. ಇಂಥ ಸಂದರ್ಭದಲ್ಲಿ ಮಾಧ್ಯಮ ಕೋಶ ಮುಖ್ಯವಾಗುತ್ತದೆ. ಪ್ರೆಸ್ನೋಟ್ ನೀಡಬೇಕಾಗುತ್ತದೆ. ಈ ಕಾರ್ಯ ಆಗಲಿಲ್ಲ. ಈ ಕೊರತೆ ನಡುವೆಯೂ ಅಕಾಡೆಮಿಯು ಫಿಲ್ಮ್ ಫೆಸ್ಟಿವಲ್ ನಡೆಯುತ್ತಿದ್ದ ದಿನಗಳಲ್ಲಿ ಪ್ರತಿದಿನವೂ ಪ್ರಕಟಿಸುತ್ತಿದ್ದ “ಬೆಳ್ಳಿರೇಖೆ” ಹಿಂದಿನ ದಿನದ ಮುಖ್ಯ ಕಾರ್ಯಕ್ರಮಗಳ ಅಂಶಗಳ ಬಗ್ಗೆ ಮಾಹಿತಿ ನೀಡುತ್ತಿತ್ತು. ಮರುದಿನ ಬಹಳ ಬೇಗನೆ ದೊರೆಯುತ್ತಿತ್ತು. ಇದನ್ನು ನಿರ್ವಹಣೆ ಮಾಡುತ್ತಿದ್ದವರ ಬಗ್ಗೆ ಪ್ರಶಂಸೆಯೂ ವ್ಯಕ್ತವಾಯಿತು.

“ಮೊದಲ ಬಾರಿಗೆ ಸಿನೆಮಾ ಫೆಸ್ಟಿವಲ್ ನಲ್ಲಿ ಭಾಗವಹಿಸಿದೆ. ಸಿನೆಮಾಗಳ ಆಯ್ಕೆ, ಆಯೋಜನೆಯೂ ಉತ್ತಮವಾಗಿತ್ತು. ಇಲ್ಲಿಗೆ ವರದಿಗಾಗಿ ಆಯೋಜನೆಗೊಂಡ ಮಾಧ್ಯಮ ಪ್ರತಿನಿಧಿಗಳಲ್ಲಿ ಎಲ್ಲರಿಗೂ ಮಾಲ್ ನಲ್ಲಿ ದುಬಾರಿ ಬೆಲೆ ತೆತ್ತು ಊಟ ಮಾಡಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಮಾಲ್ ಹೊರಗೆ ಹೋಗಿ ಬರುವುದರಿಂದ ಸಮಯ ವ್ಯರ್ಥವಾಗುತ್ತಿತ್ತು. ಅಕಾಡೆಮಿ ಕನಿಷ್ಠ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡುವುದರಿಂದ ಸಮಯ ಉಳಿತಾಯವಾಗುತ್ತದೆ. ಈ ಬಗ್ಗೆ ಮುಂದಿನ ಬಾರಿಯಾದರೂ ಗಮನಹರಿಸಬೇಕು” ಎಂದು ದೊಡ್ಡಬಳ್ಳಾಪುರದ ಪತ್ರಕರ್ತ ರಾಘವೇಂದ್ರ ಹೆಚ್.ಎ. ಅಭಿಪ್ರಾಯ ವ್ಯಕ್ತಪಡಿಸಿದರು.
ಉತ್ತಮ ಸಿನೆಮಾಗಳನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಿರುವುದು ಗಮನಾರ್ಹ ಅಂಶ. ಏಷ್ಯನ್ ಸಿನೆಮಾ ವಿಭಾಗದ “ಇನ್ ದ ಲ್ಯಾಂಡ್ ಆಫ್ ಬ್ರದರ್ಸ್, ರೀಡಿಂಗ್ ಲೋಲಿತ ಇನ್ ಟೆಹ್ರಾನ್, ಸಭಾ, ಫೆಮಿನಿಚಿ ಫಾತಿಮಾ, ಪೇರೆ, ಭಾರತೀಯ ಸಿನೆಮಾ ವಿಭಾಗದಲ್ಲಿ ಹ್ಯೂಮನ್ಸ್ ಇನ್ ದ ಲೂಪ್, ಲೆವೆಲ್ ಕ್ರಾಸ್, ಸ್ವಾಹ, ಕನ್ನಡ ಸಿನೆಮಾ ವಿಭಾಗದಲ್ಲಿ ಮಿಕ್ಕ ಬಣ್ಣದ ಹಕ್ಕಿ, (ಕನ್ನಡ), ಪಿದಾಯಿ (ತುಳು), ದಸ್ಕತ್ (ತುಳು), ಲಚ್ಚಿ (ಕನ್ನಡ) ಇವುಗಳು ವೀಕ್ಷಕರಿಂದಲೂ ವಿಮರ್ಶಕರಿಂದಲೂ ಪ್ರಶಂಸೆಗೆ ಪಾತ್ರವಾಗಿವೆ.
ಕರ್ನಾಟಕ ಚಲನಚಿತ್ರ ಅಕಾಡೆಮಿ, ಫಿಲ್ಮ್ ಫೆಸ್ಟಿವಲ್ ಸಂದರ್ಭ ನೀಡುವ ಜೀವಮಾನ ಸಾಧನೆ ಪ್ರಶಸ್ತಿ ಶಬಾನಾ ಆಝ್ಮಿ ಅವರಿಗೆ ಸಂದಿದೆ. ಅರ್ಹರೇ ಆಯ್ಕೆಯಾಗಿದ್ದಾರೆ. ಅದರಲ್ಲಿ ಎರಡು ಮಾತಿಲ್ಲ. ಈ ಪ್ರಶಸ್ತಿಗೆ ಕನ್ನಡ ಚಿತ್ರರಂಗದಲ್ಲಿ ಸಾಧನೆ ಮಾಡಿದವರನ್ನು ಆಯ್ಕೆ ಮಾಡುವುದು ಸೂಕ್ತ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ

ಕುಮಾರ ರೈತ
ಪತ್ರಕರ್ತ, ಕೃಷಿ ಇವರ ಆಸಕ್ತಿಯ ಕ್ಷೇತ್ರ. ಹಲವು ಪತ್ರಿಕೆಗಳಿಗೆ ಕೃಷಿ ಲೇಖನಗಳನ್ನು ಬರೆಯುತ್ತಿದ್ದಾರೆ