ಕಳೆದ ಜೂನ್ 20ರಂದು ಮಲಯಾಳಂ OTT ಪ್ಲಾಟ್ಫಾರ್ಮ್ ಸೈನಾ ಪ್ಲೇನಲ್ಲಿ ಸ್ಟ್ರೀಮಿಂಗ್ ಆರಂಭಿಸಿರುವ ವಿಭಿನ್ನ ಕಥಾ ಹಂದರವಿರುವ ಮಕ್ಕಳ ಚಿತ್ರವೊಂದು ಚಿತ್ರಪ್ರೇಮಿಗಳ ಗಮನಸೆಳೆಯುತ್ತಿದೆ. ಹೆಸರು ‘ಸ್ಥಾನಾರ್ಥಿ ಶ್ರೀಕುಟ್ಟನ್’. ಶಾಲಾ ಮಕ್ಕಳ ಬದುಕಿನ ಸಣ್ಣ ಕ್ಷಣಗಳನ್ನು ಹಿಡಿದಿಟ್ಟುಕೊಂಡು, ಸಾಮಾಜಿಕ ಸಮಾನತೆ ಹಾಗೂ ಮಕ್ಕಳೊಳಗಿನ ಅಸಮಾನತೆಯ ವಿರುದ್ಧ ಸಣ್ಣ ಸಿಬಿರೇಳಿಸುವ ಯತ್ನ ಮಾಡಲಾಗಿದೆ. ಈ ಚಿತ್ರ ಈಗ ಶಾಲಾ ಅಧ್ಯಾಪನ ಶೈಲಿಯಲ್ಲಿಯೇ ಬದಲಾವಣೆಗೆ ಕಾರಣವಾಗಿದೆ. ಹೊಸ ಯುಗ ಆರಂಭಿಸಿದೆ. ಕೇರಳದ ಶಾಲೆಗಳು ಈ ಚಿತ್ರದಿಂದ ಪ್ರೇರೇಪಣೆಗೊಂಡು ಪರಂಪರಾಗತವಾಗಿ ಬಂದಿದ್ದ ತರಗತಿಯಲ್ಲಿ ಹಿಂದೆ-ಮುಂದೆ ಕೂರುವ ವ್ಯವಸ್ಥೆಯನ್ನು ಬದಲಾಯಿಸಿಕೊಂಡಿವೆ.
ಕಣ್ಣೂರಿನ ಪಪ್ಪಿನಿಶ್ಸೇರಿ ವೆಸ್ಟ್ ಎಲ್ಪಿ, ಅಂಡೂರ್ ಎಎಲ್ಪಿ, ತ್ರಿಶೂರಿನ ಆರ್ಸಿಸಿ ಎಲ್ಪಿಎಸ್ ಈಸ್ಟ್ ಮಂಗಡ್, ಪಾಲಕ್ಕಾಡಿನ ಥೋಳನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳೂ ಈ ಅರ್ಧ ವೃತ್ತಾಕಾರದ ಸೀಟಿಂಗ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ.
ವಿನೇಶ್ ವಿಶ್ವನಾಥ್ ಅವರ ಚೊಚ್ಚಲ ನಿರ್ದೇಶನದ ಈ ಚಿತ್ರ ಶಾಲಾ ಚುನಾವಣೆಯ ಸುತ್ತ ಕೇಂದ್ರೀಕೃತವಾಗಿದ್ದು, ಮಕ್ಕಳು ಪ್ರಜಾಪ್ರಭುತ್ವ, ವರ್ಗ ಮತ್ತು ಗುರುತಿನ ಪರಿಕಲ್ಪನೆಗಳೊಂದಿಗೆ ಹೇಗೆ ತೊಡಗಿಸಿಕೊಳ್ಳುತ್ತಾರೆ ಎಂಬುದನ್ನು ಅನ್ವೇಷಿಸುತ್ತದೆ. “ಚಿತ್ರ ಬಿಡುಗಡೆಗೊಂಡ ನಂತರ ಕನಿಷ್ಠ ಆರು ಶಾಲೆಗಳು ಈ ವ್ಯವಸ್ಥೆ ಅಳವಡಿಸಿಕೊಂಡಿವೆ. ಇನ್ಸ್ಟಾಗ್ರಾಮ್ನಲ್ಲಿ ನಮ್ಮನ್ನು ಟ್ಯಾಗ್ ಮಾಡಿದಾಗಲೇ ನಮಗೆ ಗೊತ್ತಾದದ್ದು” ಎನ್ನುತ್ತಾರೆ ಕಥೆಯನ್ನೂ ಬರೆದಿರುವ ವಿನೇಶ್.
ಮುಂದುವರೆದು, “ಈ ಸೀಟಿಂಗ್ ಪದ್ಧತಿಯನ್ನು ಮೊದಲು ಅಳವಡಿಸಿಕೊಂಡ ಶಾಲೆ ಕೊಲ್ಲಂ ಜಿಲ್ಲೆಯ ವಲಕೊಂನ ಆರ್ವಿವಿ ಎಚ್ಎಸ್ಎಸ್ (RVV HSS). ಈ ಶಾಲೆಯನ್ನು ಕೇರಳ ಸಾರಿಗೆ ಸಚಿವರೂ ಆಗಿರುವ ಮಲಯಾಳಂ ನಟ ಕೆ ಬಿ ಗಣೇಶ್ ಕುಮಾರ್ ನಿರ್ವಹಿಸುತ್ತಿದ್ದಾರೆ. “ಚಿತ್ರ ಥಿಯೇಟರ್ಗೆ ಹೋಗುವುದಕ್ಕೂ ಮುಂಚೆಯೇ ಅವರಿಗೆ ತೋರಿಸಿದ್ದೆವು. ಅವರಿಗೆ ಇಷ್ಟವಾಯಿತು. ಆದರೆ ಅವರು ಸೀಟಿಂಗ್ ಪದ್ಧತಿಯನ್ನು ತಮ್ಮ ಶಾಲೆಯಲ್ಲಿ ಅಳವಡಿಸಿಕೊಂಡಿರುವ ಬಗ್ಗೆ ಹೇಳಿರಲಿಲ್ಲ. ಅವರ ಸಂಬಂಧಿಗಳ ಮೂಲಕ ಗೊತ್ತಾಯಿತು. ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಈ ದೃಶ್ಯ ಇದ್ದದ್ದರಿಂದ ಬಿಡುಗಡೆಯಾಗುವವರೆಗೆ ನಾವು ಈ ವಿಷಯವನ್ನು ಬಹಿರಂಗಪಡಿಸಿರಲಿಲ್ಲ” ಎನ್ನುತ್ತಾರೆ ನಿರ್ದೇಶಕ ವಿನೇಶ್.
2024ರ ನವೆಂಬರ್ನಲ್ಲಿ ಬಿಡುಗಡೆಯಾಗಿದ್ದರೂ OTTಗೆ ಬಂದ ಮೇಲೆಯೇ ಚಿತ್ರ ಹೆಚ್ಚು ಗಮನಸೆಳೆಯುತ್ತಿದೆ. ಪ್ರೀತಿ, ಕುಟುಂಬ ಮತ್ತು ಸಮಾಜದಲ್ಲಿ ಸಮಾನ ಸ್ವೀಕಾರಕ್ಕಾಗಿ ಹಂಬಲಿಸುವ ಒಬ್ಬ ಸಾಧಾರಣ ಹುಡುಗ- ಶ್ರೀಕುಟ್ಟನ್ ನ ಸುತ್ತ ಕಥೆ ಸುತ್ತುತ್ತದೆ. ಜಗತ್ತಿನಲ್ಲಿ ಅವನ ಸ್ಥಾನವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಅವನ ಆಂತರಿಕ ಸಂಘರ್ಷಗಳನ್ನು ಕಥೆ ಎತ್ತಿ ತೋರಿಸುತ್ತದೆ.
ವಿನೇಶ್ ಜೊತೆಗೆ ಆನಂದ್ ಮನ್ಮಧನ್, ಮುರಳಿ ಕೃಷ್ಣನ್ ಮತ್ತು ಕೈಲಾಶ್ ಎಸ್. ಭವನ ಸ್ಕ್ರೀನ್ಪ್ಲೇ ಬರೆದಿದ್ದಾರೆ. ಶ್ರೀರಂಗ್ ಶೈನ್, ಅಜು ವರ್ಗೀಸ್, ಸೈಜು ಕುರುಪ್, ಜಾನಿ ಆಂಟೋನಿ, ಆನಂದ್ ಮನ್ಮಧನ್, ಕಣ್ಣನ್ ನಾಯರ್, ಅಜಿಶಾ ಪ್ರಭಾಕರನ್ ಮುಖ್ಯ ಭೂಮಿಕೆಯಲ್ಲಿದ್ದಾರೆ.
ಶಾಲೆಗಳಲ್ಲಿ ಸೀಟಿಂಗ್ (ಮಕ್ಕಳು ಕುಳಿತುಕೊಳ್ಳುವ ಸಾಲು ಪದ್ಧತಿ) ಆಲೋಚನೆಯೇ ಈ ಚಿತ್ರದ ಮುಖ್ಯಪಾತ್ರಧಾರಿ ಎನ್ನಬಹುದು. ಯಾವಾಗಲೂ ತಡವಾಗಿ ಬರುವ ಮಕ್ಕಳನ್ನು ಬ್ಯಾಕ್ ಬೆಂಚಿನಲ್ಲಿ ಕುಳ್ಳಿರಿಸುವ ಪದ್ಧತಿ ಗೊತ್ತಿರಬಹುದು. ಈ ಚಿತ್ರದಲ್ಲೂ ಶ್ರೀಕುಟ್ಟನ್ ಶ್ರೇಷ್ಠ ಬ್ಯಾಕ್ಬೆಂಚರ್. ಕಾಲಗಳಿಂದಲೂ ನಡೆದುಕೊಂಡುಬಂದಿರುವ ಈ ವ್ಯವಸ್ಥೆ, ಉತ್ತಮವಾಗಿ ಓದುತ್ತಿರುವ ವಿದ್ಯಾರ್ಥಿಗಳನ್ನು ಮುಂದಿನ ಮತ್ತು ತುಂಟ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಹಿಂಬದಿಗೆ ಕೂರಿಸುವ ಈ ಪದ್ಧತಿಯು ವ್ಯವಸ್ಥೆಯನ್ನು ಪ್ರಶ್ನಿಸುವಂತೆ ಮಾಡುತ್ತದೆ.
ಇದನ್ನೂ ಓದಿ: ಶಿವರಾಜ್ ಜನ್ಮದಿನ | ಶಿವಪುಟ್ಟಸ್ವಾಮಿಯಿಂದ ಶಿವಣ್ಣನವರೆಗೆ ಸಿನಿಪಯಣ
ಇದೇನೂ ಹೊಸ ಕಲ್ಪನೆಯಲ್ಲ. ಕೇಂದ್ರ ಸರ್ಕಾರ 1994ರಲ್ಲಿ ಆರಂಭಿಸಿದ ಜಿಲ್ಲಾ ಪ್ರಾಥಮಿಕ ಶಿಕ್ಷಣ ಯೋಜನೆ (DPEP) ಸಮಯದಲ್ಲಿಯೇ ಈ ರೀತಿಯ ಸೀಟಿಂಗ್ ಪದ್ಧತಿಯ ಬಗ್ಗೆ ಪ್ರಸ್ತಾಪಿಸಿತ್ತು. ಆದರೆ ಹೆಚ್ಚಿನ ಶಾಲೆಗಳು ಹಳೆಯ ಸಾಲು ಸೀಟಿಂಗ್ ಪದ್ಧತಿಯನ್ನೇ ಮುಂದುವರೆಸಿದವು.
ಆದರೆ ಈ ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಪ್ರಯೋಗ ಮಾಡಿರುವ, ʼಅರ್ಧವೃತ್ತಾಕಾರದಲ್ಲಿ ಮಕ್ಕಳನ್ನು ಕೂರಿಸಿ ನಡುವಲ್ಲಿ ಮೇಷ್ಟ್ರು ಪಾಠ ಮಾಡುವ ದೃಶ್ಯʼವೊಂದು ಇಂಥದ್ದೊಂದು ದೊಡ್ಡ ಬದಲಾವಣೆಗೆ ಕಾರಣವಾಗಿದೆ. ಸಿನಿಮಾ ಎಂಬ ಮಾಧ್ಯಮ ಅದನ್ನು ಜನರೆದೆಗೆ ದಾಟಿಸಿದೆ, ಪ್ರಭಾವಶಾಲಿ ಮಾಧ್ಯಮವೆಂಬುದು ಮತ್ತೊಮ್ಮೆ ಸಾಬೀತಾಗಿದೆ.