ಬಹು ಪ್ರಮುಖ ವಿಷಯ ಎಂದರೆ ಯಾವ ಉದ್ದೇಶಕ್ಕೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಶುರುವಾಗಿದೆ ಎಂಬ ಸ್ಪಷ್ಟತೆ ರಾಜ್ಯ ಸರ್ಕಾರದ ಚುಕ್ಕಾಣಿ ಹಿಡಿಯುತ್ತಾ ಬಂದವರಿಗೆ ಇಲ್ಲ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗಂತೂ ಇದರ ಪರಿವೆಯೇ ಇಲ್ಲ. ಇನ್ನು ರಾಜಕೀಯ ನೇಮಕಗಳ ಮೂಲಕ ಬರುವ ಹೆಚ್ಚಿನ ಅಧ್ಯಕ್ಷರಿಗೆ ತಾವು ಯಾಕಾಗಿ ಅಕಾಡೆಮಿಗೆ ನೇಮಕಗೊಂಡಿದ್ದೇವೆ ಎಂಬ ಚಿಂತನೆಯೂ ಇದ್ದಂತಿಲ್ಲ.
ಬೆಂಗಳೂರು ಅಂತರರಾಷ್ಟ್ರೀಯ 16ನೇ ಚಲನಚಿತ್ರೋತ್ಸವ ಮಾರ್ಚ್ 1,2025ರಿಂದ ಆರಂಭವಾಗುತ್ತದೆ. ದಿನಗಣನೆ ಆರಂಭವಾಗಿದೆ. ಈ ಹೊತ್ತಿನಲ್ಲಿ ಕರ್ನಾಟಕ ಫಿಲ್ಮ್ ಅಕಾಡೆಮಿ ಮೂಲ ಉದ್ದೇಶ ಮರೆತಿದೆಯೇ ಅಥವಾ ಉದ್ದೇಶಗಳೇ ಇಲ್ಲವೇ? ಇಂಥದ್ದೊಂದು ಪ್ರಶ್ನೆ ನನ್ನನ್ನೂ ಸೇರಿ ಅನೇಕರನ್ನು ಕಾಡುತ್ತಿದೆ. ಆ ಕಾರಣದಿಂದಲೇ ಚಲನಚಿತ್ರ ಅಕಾಡೆಮಿಯ ಸ್ವರೂಪ-ಧ್ಯೇಯೋದ್ದೇಶ ಮತ್ತು ಕಾರ್ಯಾಚರಣೆಗಳ ಬಗ್ಗೆ ಈ ಲೇಖನಮಾಲೆ ಶುರುವಾಗಿದೆ. ಮುಖ್ಯವಾಗಿ ಕರ್ನಾಟಕವನ್ನು ಗುರಿಯಾಗಿಸಿಕೊಳ್ಳಲಾಗಿದೆ. ಇದರೊಂದಿಗೆ ದೇಶದ ಬೇರೆ ರಾಜ್ಯಗಳಲ್ಲಿ ಇದರ ಸ್ವರೂಪ ಹೇಗಿದೆ ಎಂಬ ವಿವರವನ್ನೂ ನಿಮ್ಮ ಮುಂದೆ ಇಡಲಾಗುವುದು.
ಬಹು ಪ್ರಮುಖ ವಿಷಯ ಎಂದರೆ ಯಾವ ಉದ್ದೇಶಕ್ಕೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಶುರುವಾಗಿದೆ ಎಂಬ ಸ್ಪಷ್ಟತೆ ರಾಜ್ಯ ಸರ್ಕಾರದ ಚುಕ್ಕಾಣಿ ಹಿಡಿಯುತ್ತಾ ಬಂದವರಿಗೆ ಇಲ್ಲ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗಂತೂ ಇದರ ಪರಿವೆಯೇ ಇಲ್ಲ. ಇನ್ನು ರಾಜಕೀಯ ನೇಮಕಗಳ ಮೂಲಕ ಬರುವ ಹೆಚ್ಚಿನ ಅಧ್ಯಕ್ಷರಿಗೆ ತಾವು ಯಾಕಾಗಿ ಅಕಾಡೆಮಿಗೆ ನೇಮಕಗೊಂಡಿದ್ದೇವೆ ಎಂಬ ಚಿಂತನೆಯೂ ಇದ್ದಂತಿಲ್ಲ.
ಫಿಲಂ ಫೆಸ್ಟಿವಲ್ ಮಾಡುವುದೊಂದೇ ಗುರಿಯೇ ?
ಸುಚಿತ್ರಾ ಫಿಲ್ಮ್ ಸೊಸೈಟಿ, ಆರಂಭದ ಕೆಲವು ವರ್ಷ ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಫಿಲಂ ಫೆಸ್ಟಿವಲ್ ನಡೆಸಿತು. ಐದಾರು ಉತ್ಸವಗಳ ನಂತರ ಈ ಸೊಸೈಟಿಯು ಸೇರಿದಂತೆ ಸಿನಿಮಾಸಕ್ತರ ಗುಂಪು ಒತ್ತಡ ಹೇರಿದ ಪರಿಣಾಮ ಕರ್ನಾಟಕ ಸರ್ಕಾರವು ಫೆಸ್ಟಿವಲ್ ನಡೆಸುವ ಜವಾಬ್ದಾರಿ ಹೊತ್ತುಕೊಂಡಿತು.

ಪ್ರತಿವರ್ಷ ಫಿಲ್ಮ್ ಫೆಸ್ಟಿವಲ್ ನಡೆಸುವ ಜವಾಬ್ದಾರಿ ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ವಹಿಸಲಾಯಿತು. ಅಲ್ಲಿಂದಾಚೆಗೆ ಫೆಸ್ಟಿವಲ್ ಬಂದಾಗಷ್ಟೆ ಅಕಾಡೆಮಿ ಇದೆ ಎಂಬ ವಿಚಾರ ಗೊತ್ತಾಗುತ್ತದೆ. ತನ್ನ ಅಧೀನದಲ್ಲಿ ಇಂಥದ್ದೊಂದು ಸಂಸ್ಥೆ ಇದೆ ಎನ್ನುವುದು ಸರ್ಕಾರದ ಗಮನಕ್ಕೆ ಬರುವುದು ಕೂಡ ಅಕಾಡೆಮಿಯಿಂದ ಫೆಸ್ಟಿವಲ್ ನಡೆಸಲು ಹಣ ಕೋರಿ ಪತ್ರ ಬಂದಾಗಲೇ!! ಹೀಗಾಗಿ ಫಿಲ್ಮ್ ಅಕಾಡೆಮಿ ಎಂದರೆ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಎಂದಷ್ಟೆ ಆಗಿದೆ. ಇದರ ಆಚೆ ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಬೇರೆ ಜವಾಬ್ದಾರಿಗಳಿಲ್ಲವೇ? ಖಂಡಿತ ಇದೆ. ಬಹಳ ಪ್ರಮುಖ ಜಬಾಬ್ದಾರಿಗಳ ಸರಮಾಲೆಯೇ ಇದೆ. ಅದರಲ್ಲಿ ಚಲನಚಿತ್ರೋತ್ಸವ ನಡೆಸುವುದೂ ಒಂದಷ್ಟೆ. ಆದರೆ ಅಕಾಡೆಮಿ ಸ್ಟಿಯರಿಂಗ್ ಹಿಡಿದವರಲ್ಲಿ ಒಬ್ಬಿಬ್ಬರನ್ನು ಬಿಟ್ಟು ಉಳಿದವರು ಆ ಜವಾಬ್ದಾರಿಗಳ ಬಗ್ಗೆ ಚಿಂತನೆ ನಡೆಸಿಲ್ಲ.
“ಚಲನಚಿತ್ರ ಅಕಾಡೆಮಿಯ ಮೂಲ ಉದ್ದೇಶವೇನು ಎಂದು ಕರ್ನಾಟಕ ಸರ್ಕಾರವೂ ಆಲೋಚಿಲ್ಲ. ಅಧ್ಯಕ್ಷರಾದವರು ಯೋಚಿಸಲು ಹೋಗಿಲ್ಲ. ಇದರ ಸಂಸ್ಥಾಪಕ ಅಧ್ಯಕ್ಷರು ಚಲನಚಿತ್ರ ನಿರ್ದೇಶಕ ನಾಗಾಭರಣ. ಅವರು ಕಾರ್ಯಾಗಾರಗಳು ಸೇರಿದಂತೆ ಒಂದಷ್ಟು ಕೆಲಸ ಮಾಡಲು ಹೊರಟರು. ಅದ್ಹೇಕೋ ಅದು ಅಲ್ಲಿಗಲ್ಲಿಗೆ ನಿಂತಿತು. ಫಿಲಂ ಫೆಸ್ಟಿವಲ್ ಬಿಟ್ಟು ಬೇರೆ ಏನು ಮಾಡಬಹುದು, ಮಾಡಬೇಕು ಎಂಬ ಹೊಳಹುಗಳೂ ಇಲ್ಲ. ತಿಳಿದುಕೊಳ್ಳುವ ಆಸಕ್ತಿಯೂ ಇಲ್ಲ” ಎಂದು ಹಿರಿಯ ಪತ್ರಕರ್ತರು, ಖ್ಯಾತ ಸಿನೆಮಾ ನಿರ್ದೇಶಕರೂ ಆದ ಎನ್.ಎಸ್. ಶಂಕರ್ ವಿಷಾದ ವ್ಯಕ್ತಪಡಿಸುತ್ತಾರೆ.
“ಸಿನೆಮಾ ನಿರ್ಮಾಣ, ಹಂಚಿಕೆ ಇತ್ಯಾದಿ ಹೊರತುಪಡಿಸಿ ಅಕಾಡೆಮಿ ಮಾಡಬೇಕಾದ ಹಲವು ಕೆಲಸಗಳಿವೆ. ಅವುಗಳ ಮೂಲಕ ಕನ್ನಡ ಚಿತ್ರರಂಗ ಬೆಳೆಯಲು ಒತ್ತಾಸೆಯಾಗಿ ನಿಲ್ಲಬಹುದು. ಆದರೆ ಇದನ್ನು ಅಕಾಡೆಮಿ ಮಾಡುತ್ತಿಲ್ಲ” ಎಂದು ಶಂಕರ್ ಹೇಳುತ್ತಾರೆ.
ಅಕಾಡೆಮಿ ಏನೆಲ್ಲ ಮಾಡಬಹುದು ಎಂದು ಸಿನೆಮಾ ವಲಯದಲ್ಲಿ ಗುರುತಿಸಿಕೊಂಡ ಬೇರೆ ಬೇರೆ ಪ್ರಮುಖರು ಹೇಳುವುದನ್ನು ಮುಂದಿನ ಸಂಚಿಕೆಗಳಲ್ಲಿ ಗಮನಿಸೋಣ. ಇದಕ್ಕೂ ಮೊದಲು ಇದರ ಪರಿಕಲ್ಪನೆ ಹೇಗೆ ಬಂತು ಎನ್ನುವುದು ಬಹಳ ಆಸಕ್ತಿ ವಿಷಯ. ಚಿತ್ರರಂಗದ ರಜತ ಮಹೋತ್ಸವ, ವಜ್ರ ಮಹೋತ್ಸವನ್ನು ಚಿತ್ರರಂಗದವರೇ ಆಚರಿಸುವುದು ಸಾಮಾನ್ಯ. ಆದರೆ ಕನ್ನಡ ಚಿತ್ರರಂಗದ ವಜ್ರ ಮಹೋತ್ಸವವನ್ನು ಕನ್ನಡ ಸಿನೆಮಾ ಪತ್ರಕರ್ತರೇ ಆಚರಿಸಿದರು ಎಂಬ ಆಸಕ್ತಿಕರ ವಿಷಯದತ್ತ ಹಿರಿಯ ಪತ್ರಕರ್ತ ಬಾ.ನಾ. ಸುಬ್ರಹ್ಮಣ್ಯ (ಬಾನಾಸು) ಬೆಳಕು ಚೆಲ್ಲುತ್ತಾರೆ.

ಹಿರಿಯ ಪತ್ರಕರ್ತ ವಿ.ಎನ್. ಸುಬ್ಬರಾವ್ ಅವರ ನೇತೃತ್ವದಲ್ಲಿ ಕನ್ನಡ ಚಿತ್ರರಂಗದ ವಜ್ರ ಮಹೋತ್ಸವ ಆಚರಣೆ ಆರಂಭವಾಯಿತು. ಉದ್ಘಾಟನೆಗೆ ಅಂದಿನ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ಬಂದಿದ್ದರು. ಪ್ರಸ್ತಾವಿಕ ಮಾತುಗಳಲ್ಲಿ ಸುಬ್ಬರಾವ್ ಅವರು ಅಂದಿನ ಸಂದರ್ಭದ ಕನ್ನಡ ಚಿತ್ರರಂಗವನ್ನು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಹೇಳಿದರು (ಇಂದಿಗೂ ಅವೇ ಸಮಸ್ಯೆಗಳೇ ಇವೆ). ಇದನ್ನು ಮೊಯ್ಲಿ ಗಂಭೀರವಾಗಿ ಪರಿಗಣಿಸಿದರು. ಕೆಲವೇ ದಿನಗಳಲ್ಲಿ ಸುಬ್ಬರಾವ್ ನೇತೃತ್ವದಲ್ಲಿ ಅಧ್ಯಯನ ಸಮಿತಿ ರಚನೆಯಾಯಿತು.
ನಾಳೆಯ ಸಂಚಿಕೆಯಲ್ಲಿ: ಸಮಿತಿ ರಚನೆಯಾಯಿತು, ಆದರೆ ಅಕಾಡೆಮಿ ಕಥೆ ಏನಾಯ್ತು

ಕುಮಾರ ರೈತ
ಪತ್ರಕರ್ತ, ಕೃಷಿ ಇವರ ಆಸಕ್ತಿಯ ಕ್ಷೇತ್ರ. ಹಲವು ಪತ್ರಿಕೆಗಳಿಗೆ ಕೃಷಿ ಲೇಖನಗಳನ್ನು ಬರೆಯುತ್ತಿದ್ದಾರೆ