ಶೂಟಿಂಗ್ ಸೆಟ್ನಲ್ಲಿ ಲೈಟ್ ಬಾಯ್ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಯೋಗರಾಜ್ ಭಟ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ನಿರ್ದೇಶಕ ಯೋಗರಾಜ್ ಭಟ್ ಅವರು ‘ಮನದ ಕಡಲು’ ಎಂಬ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಈ ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗಿದೆ. ಸೆ.3ರಂದು ಮಾದನಾಯಕನಹಳ್ಳಿ ಸಮೀಪದ ವಿಆರ್ಎಲ್ ಅರೇನಾ ಬಳಿ ನಡೆಯುತ್ತಿದ್ದ ಶೂಟಿಂಗ್ ವೇಳೆ 30 ಅಡಿ ಎತ್ತರದ ಏಣಿಯಿಂದ ಬಿದ್ದು ಲೈಟ್ ಬಾಯ್ ಮೋಹನ್ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಗೊರಗುಂಟೆ ಪಾಳ್ಯದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೋಹನ್ ಗುರುವಾರ (ಸೆ.5) ಸಾವನ್ನಪ್ಪಿದ್ದಾರೆ. ಈ ಘಟನೆ ಬೆಂಗಳೂರಿನ ಮಾದನಾಯಕನ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಚಿತ್ರೀಕರಣದ ವೇಳೆ ಮುನ್ನೆಚ್ಚರಿಕೆ ಕೈಗೊಳ್ಳದ ಕಾರಣ ಯೋಗರಾಜ್ ಭಟ್, ಪ್ರೊಡಕ್ಷನ್ ಮ್ಯಾನೇಜರ್ ಸುರೇಶ್ ಸೇರಿ ಮೂವರ ವಿರುದ್ಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಸುದ್ದಿ ಓದಿದ್ದೀರಾ? ಬಡವರಿಗೆ 10%; ಶ್ರೀಮಂತರಿಗೆ 5% ಬಡ್ಡಿ; ಇದೇ ಮೋದಿ ನ್ಯಾಯ?
ಮೃತ ಮೋಹನ್ ತುಮಕೂರು ಜಿಲ್ಲೆಯ ಕೊರಟಗೆರೆ ಮೂಲದವರಾಗಿದ್ದು, ತಮ್ಮ ಸಹೋದರನ ಜೊತೆಗೆ ಬೆಂಗಳೂರಿನ ಬಡಾವಣೆಯೊಂದರಲ್ಲಿ ವಾಸ ಮಾಡುತ್ತಿದ್ದರು. ಸಹೋದರಿಬ್ಬರು ಕೂಡ ಚಿತ್ರರಂಗದಲ್ಲಿ ಲೈಟ್ ಬಾಯ್ಗಳಾಗಿ ಕೆಲಸ ಮಾಡುತ್ತಿದ್ದರು. ಸೆ.3ರಂದು ಚಿತ್ರೀಕರಣದ ವೇಳೆ ಲೈಟ್ ಬಿಚ್ಚುವುದಕ್ಕೆ ಮೋಹನ್ 30 ಅಡಿ ಎತ್ತರದ ಏಣಿಯನ್ನು ಏರಿದ್ದರು. ಆದರೆ ಅದರ ಮೇಲಿಂದ ಆಯಾತಪ್ಪಿ ಬಿದ್ದ ಮೋಹನ್, ತೀವ್ರವಾಗಿ ಗಾಯಗೊಂಡಿದ್ದರು. ನಂತರ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.
ಶೂಟಿಂಗ್ ವೇಳೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಲೈಟ್ ಮ್ಯಾನ್ ಮೋಹನ್ ಕುಮಾರ್ಗೆ ಸುರಕ್ಷತಾ ಸಾಧನಗಳನ್ನು ನೀಡಿರಲಿಲ್ಲ. ಆದ್ದರಿಂದಲೇ ಇಂತಹ ದುರ್ಘಟನೆ ಸಂಭವಿಸಿದೆ ಎಂಬ ಆರೋಪ ಕೇಳಿಬಂದಿದೆ.
