ಭಾರತದ ಬೆಳವಣಿಗೆಯ ಯಶೋಗಾಥೆಯಲ್ಲಿ ಕರ್ನಾಟಕ ನಿರಂತರವಾಗಿ ಸಕ್ರಿಯ ಪಾಲ್ಗೊಳ್ಳುವ ಮೂಲಕ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ. ಈ ವಿಚಾರದಲ್ಲಿ ನಾವು ಮುಂಚೂಣಿಯಲ್ಲಿದ್ದೇವೆ. ನಾವೀನ್ಯತೆ, ಪ್ರತಿಭೆ ಹಾಗೂ ತಂತ್ರಜ್ಞಾನದಲ್ಲಿನ ನಾಯಕತ್ವಕ್ಕಾಗಿ ಜಗತ್ತು ನೋಡುವ ಸ್ಥಳವಾಗಿ ಕರ್ನಾಟಕವನ್ನು ಮಾಡುವುದು ನಮ್ಮ ಧ್ಯೇಯವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಏಷ್ಯಾದ ಅತಿ ದೊಡ್ಡ ತಂತ್ರಜ್ಞಾನ ಶೋ 28ನೇ ಆವೃತ್ತಿಯ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ ಘೋಷಣೆಯಲ್ಲಿ ಮಾತನಾಡಿ, “1997ರಲ್ಲಿ ಭಾರತದ ಮೊದಲ ಐಟಿ ನೀತಿಯನ್ನು ಜಾರಿಗೆ ತರುವುದರಿಂದ ಹಿಡಿದು 2024 ರಲ್ಲಿ ಕ್ವಾಂಟಮ್ ತಂತ್ರಜ್ಞಾನ ರೋಡ್ಮ್ಯಾಪ್ ಅನ್ನು ಪರಿಚಯಿಸುವ ಮೂಲಕ ಈ ಕ್ಷೇತ್ರದಲ್ಲಿ ಇಂತಹ ದಿಟ್ಟ ಹೆಜ್ಜೆ ಇಟ್ಟ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮೂಲಕ ನಾವು ನಿರಂತರವಾಗಿ ಭವಿಷ್ಯದ ಬೆಳವಣಿಗೆಯನ್ನು ನಿರೀಕ್ಷಿಸಿದ್ದೇವೆ ಮತ್ತು ಅದಕ್ಕೆ ತಕ್ಕಂತೆ ನೀತಿಗಳನ್ನು ಸಿದ್ಧಪಡಿಸಿದ್ದೇವೆ” ಎಂದರು.
“ಭಾರತದ ಸಾಫ್ಟ್ವೇರ್ ರಫ್ತಿನ ಶೇ.44 ರಷ್ಟು ನಮ್ಮ ಪಾಲಿದ್ದು, 18,300 ಕ್ಕೂ ಹೆಚ್ಚು ಸ್ಟಾರ್ಟಪ್ಗಳು, 875+ ಜಾಗತಿಕ ಸಾಮರ್ಥ್ಯ ಕೇಂದ್ರಗಳು ಮತ್ತು ದೇಶದ ಸುಮಾರು ಅರ್ಧದಷ್ಟು ಎಐ ಪ್ರತಿಭೆಗಳೊಂದಿಗೆ ನಾವು ಕೇವಲ ಉದಯೋನ್ಮುಖ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿಲ್ಲ. ಇದರ ಬದಲಿಗೆ ಅವುಗಳನ್ನು ವ್ಯಾಖ್ಯಾನಿಸುತ್ತಿದ್ದೇವೆ” ಎಂದು ಹೇಳಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, “ನಾವು ಎಲ್ಲರನ್ನೂ ಒಳಗೊಳ್ಳುವಿಕೆ, ಸಬಲೀಕರಣ ಮತ್ತು ಹಂಚಿಕೆಯ ಸಮೃದ್ಧಿಯಲ್ಲಿ ನೆಲೆಯೂರಿರುವ ಕರ್ನಾಟಕವನ್ನು ನಿರ್ಮಾಣ ಮಾಡುತ್ತಿದ್ದೇವೆ. ನೀತಿಗಳನ್ನೂ ಮೀರಿದ ನಮ್ಮ ಗಮನ ನಂಬಿಕೆ, ಸಹಯೋಗ ಮತ್ತು ನೈಜ ಫಲಿತಾಂಶಗಳ ಮೇಲಿದೆ. ನಮ್ಮ ಮೆಟ್ರೋ ಮತ್ತು ಉಪನಗರ ರೈಲು ವಿಸ್ತರಣೆಯಿಂದ ಹಿಡಿದು ಎಲಿವೇಟೆಡ್ ಕಾರಿಡಾರ್ಗಳು ಮತ್ತು ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ಗಳನ್ನು ಅಭಿವೃದ್ಧಿಪಡಿಸುವುದರತ್ತ ನಮ್ಮ ಚಿತ್ತ ಹರಿದಿದೆ. ವ್ಯಾಪಾರ ಮಾಡಲು ಸುಲಭವಾದ ಸುಧಾರಣೆಗಳು ಮತ್ತು ಕೌಶಲ್ಯ ಉಪಕ್ರಮಗಳ ಜೊತೆಗೆ ಜನರನ್ನು ಉದ್ದೇಶಗಳಿಗೆ ಸಂಪರ್ಕಿಸುವುದು ಮತ್ತು ಬೆಂಗಳೂರು ನಗರವನ್ನು ವಿಶ್ವ ಮಟ್ಟದಲ್ಲಿ ಅತ್ಯುತ್ತಮ ವಾಸಯೋಗ್ಯ ನಗರವನ್ನಾಗಿ ಮಾಡುವ ಗುರಿಯನ್ನು ಹೊಂದಿದ್ದೇವೆ. ಈ ಮೂಲಕ ಕರ್ನಾಟಕವನ್ನು ಪ್ರತಿಭೆ, ಹೂಡಿಕೆ ಮತ್ತು ನಾವೀನ್ಯತೆಯಲ್ಲಿ ಜಾಗತಿಕ ಕೇಂದ್ರವನ್ನಾಗಿಸುವುದು ನಮ್ಮ ಪ್ರಮುಖ ಧ್ಯೇಯ ಮತ್ತು ಗುರಿಯಾಗಿದೆ’’ ಎಂದು ಅಭಿಪ್ರಾಯಪಟ್ಟರು.
ಮಾಹಿತಿ ತಂತ್ರಜ್ಞಾನ & ಜೈವಿಕ ತಂತ್ರಜ್ಞಾನ ಮತ್ತು ಆರ್ಡಿಪಿಆರ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಏಷ್ಯಾದ ಅತಿ ದೊಡ್ಡ ತಂತ್ರಜ್ಞಾನ ಶೋ 28ನೇ ಆವೃತ್ತಿಯ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯನ್ನು ಘೋಷಣೆ ಮಾಡಿ ಮಾತನಾಡಿ, “ಈ ಶೃಂಗಸಭೆಯು ಬೆಂಗಳೂರಿನ 2025 ರ ನವೆಂಬರ್ 18 ರಿಂದ 20 ರವರೆಗೆ ನಡೆಯಲಿದೆ. ಈ ಬಿಟಿಎಸ್ 2025 ಮೂಲಕ ಬೆಂಗಳೂರು ನಗರ ಮತ್ತೊಮ್ಮೆ ಜಾಗತಿಕ ತಂತ್ರಜ್ಞಾನ ನಾವೀನ್ಯತೆ ಮತ್ತು ಸಹಭಾಗಿತ್ವದ ಮುಂಚೂಣಿ ಸ್ಥಾನದಲ್ಲಿ ನಿಲ್ಲಲಿದೆ” ಎಂದರು.
“ಹೆಚ್ಚುತ್ತಿರುವ ಬೇಡಿಕೆ ಮತ್ತು ಪ್ರಮಾಣವನ್ನು ಪೂರೈಸುವ ದೃಷ್ಟಿಯಿಂದ ಇದೇ ಮೊದಲ ಬಾರಿಗೆ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರ (ಬಿಐಇಸಿ)ದಲ್ಲಿ ಈ ಶೃಂಗಸಭೆಯನ್ನು ಆಯೋಜಿಸಲಾಗುತ್ತಿದೆ. ಇಲ್ಲಿ ವಿಶ್ವ ದರ್ಜೆಯ ಮೂಲಸೌಕರ್ಯ, ವಿಸ್ತಾರವಾದ ಪ್ರದರ್ಶನ ಸಭಾಂಗಣಗಳು, ಅತ್ಯಾಧುನಿಕ ಸಮ್ಮೇಳನ ಸೌಲಭ್ಯಗಳು ಇರಲಿವೆ ಮತ್ತು ನಮ್ಮ ಮೆಟ್ರೋ ಮೂಲಕ ತಡೆರಹಿತವಾದ ಸಂಪರ್ಕವನ್ನು ಹೊಂದಿದೆ. ಇದು ಪರಿಸರ ಕಾಳಜಿಯನ್ನು ಹೊಂದಿರುವ ತಾಣವಾಗಿದ್ದು, ಮಹತ್ವಾಕಾಂಕ್ಷೆಯ ಬಿಟಿಎಸ್ಗೆ ನೆಚ್ಚಿನ ತಾಣವಾಗಿದೆ” ಎಂದು ಹೇಳಿದರು.
“ಈ ಶೃಂಗಸಭೆಯಲ್ಲಿ 20,000+ ಸ್ಟಾರ್ಟಪ್ಗಳ ಸಂಸ್ಥಾಪಕರು, 1000+ ಹೂಡಿಕೆದಾರರು, 15,000+ ಪ್ರತಿನಿಧಿಗಳು, 600+ ಭಾಷಣಕಾರರು ಮತ್ತು 1,200+ ಪ್ರದರ್ಶಕರು ಸೇರಿದಂತೆ 1,00,000 ಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈ ಕಾರ್ಯಕ್ರಮದಲ್ಲಿ 100 ಕ್ಕೂ ಹೆಚ್ಚು ಜ್ಞಾನಾಧಾರಿತ ಉಪನ್ಯಾಸಗಳು, 5,000+ ಕ್ಯುರೇಟೆಡ್ ಸಭೆಗಳು ಮತ್ತು 60+ ದೇಶಗಳು ಮತ್ತು ಭಾರತದ ಎಲ್ಲಾ 36 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ” ಎಂದು ವಿವರಿಸಿದರು.
ಕರ್ನಾಟಕ ಸರ್ಕಾರದ ಐಟಿ & ಎಲೆಕ್ಟಾçನಿಕ್ಸ್ ವಿಷನ್ ಗ್ರೂಪ್ನ ಅಧ್ಯಕ್ಷ ಎಸ್.ಗೋಪಾಲಕೃಷ್ಣನ್ (ಕ್ರಿಸ್), ಸ್ಟಾರ್ಟಪ್ಸ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್, ಸ್ಪೇಸ್ ವಿಷನ್ ಗ್ರೂಪ್ ಅಧ್ಯಕ್ಷ ಡಾ.ಎ.ಎಸ್.ಕಿರಣ್ ಕುಮಾರ್ ಸೇರಿದಂತೆ ವಿವಿಧ ವಿಷನ್ ಗ್ರೂಪ್ಗಳ ಮುಖ್ಯಸ್ಥರು ಈ ಸಂದರ್ಭದಲ್ಲಿ ಮಾತನಾಡಿ ಪ್ರಸ್ತುತ ವಿವಿಧ ವಲಯಗಳ ಲ್ಯಾಂಡ್ಸ್ಕೇಪ್, ಅವಕಾಶಗಳು ಮತ್ತು ಕಾರ್ಯತಂತ್ರದ ನಿರ್ದೇಶನಗಳ ಕುರಿತು ಮೌಲ್ಯಯುತವಾದ ಒಳನೋಟಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕಿಯೋನಿಕ್ಸ್ ಅಧ್ಯಕ್ಷರಾದ ಶರತ್ ಕುಮಾರ್ ಬಚ್ಚೇಗೌಡ ಮತ್ತು ಕೆಡಿಇಎಂ ಅಧ್ಯಕ್ಷರಾದ ಬಿವಿ ನಾಯ್ದು ಉಪಸ್ಥಿತರಿದ್ದರು.
