“ಜುಲೈ 25ಕ್ಕೆ ಭಾರತದ ದಿಕ್ಕನ್ನೇ ಬದಲಾಯಿಸಿದ ಬಾಬಾ ಸಾಹೇಬರ ಶಿಕ್ಷಣ- ಸಂಘಟನೆ- ಹೋರಾಟದ ಕರೆಗೆ ನೂರು ವರ್ಷ ತುಂಬುತ್ತಿದೆ. ದಲಿತ ಸಂಘರ್ಷ ಸಮಿತಿ ಐವತ್ತು ವರ್ಷ ದಾಟಿ ಐವತ್ತೊಂದನೇ ವರ್ಷಕ್ಕೆ ಕಾಲಿಡುತ್ತಿದೆ. ಬಾಬಾ ಸಾಹೇಬರ ಕರೆಯನ್ನು ಅನುವಾದಿಸಿಕೊಂಡು, ಅಳವಡಿಸಿಕೊಂಡು ಅದರ ಪ್ರತಿಧ್ವನಿ ಕರ್ನಾಟಕದಲ್ಲಿ ಹಬ್ಬುವಂತೆ ಮಾಡಿದವರು ಪ್ರೊ ಬಿ ಕೃಷ್ಣಪ್ಪನವರು” ಎಂದು ಹಿರಿಯ ವಿಮರ್ಶಕ ನಟರಾಜ್ ಹುಳಿಯಾರ್ ಹೇಳಿದರು.
ಸೋಮವಾರ ದಲಿತ ಮುಖಂಡ ಪ್ರೊ ಬಿ ಕೃಷ್ಣಪ್ಪ ಅವರ ಜನ್ಮದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
“ಕೃಷ್ಣಪ್ಪ ಅವರು ಬಿತ್ತಿದ ಬೀಜ ಈಗ ಗಿಡವಾಗಿ, ಮರವಾಗಿ ನಾವೆಲ್ಲ ಇಲ್ಲಿ ಸೇರಿದ್ದೇವೆ. ಕರ್ನಾಟಕ ದಲಿತ ಚಳವಳಿಯ ಅದೃಷ್ಟ ಏನೆಂದರೆ ಒಬ್ಬ ಪ್ರೊಫೆಸರ್ ಈ ಚಳವಳಿಯನ್ನು ಮುನ್ನಡೆಸಲು ನಮಗೆ ಸಿಕ್ಕಿದ್ರು. ರೈತ ಚಳವಳಿಗೆ ಪ್ರೊ. ನಂಜುಂಡಸ್ವಾಮಿ ಸಿಕ್ಕಿದ್ರು. ಈ ಇಬ್ಬರು ಪ್ರೊಫೆಸರ್ಗಳ ಸಂಗಮ ಆಗಿದ್ದು ಸಮಾಜವಾದ ಯುವಜನ ಸಭಾದಲ್ಲಿ. ಕರ್ನಾಟಕದ ದಲಿತ ಚಳವಳಿ ವಿಭಿನ್ನ ಯಾಕೆ ಎಂದರೆ ಭಾರತೀಯ ಸಮಾಜವಾದ ಮತ್ತು ಅಂಬೇಡ್ಕರ್ವಾದ ಎರಡನ್ನೂ ಬೆಸೆದು ದಲಿತ ಚಳವಳಿಯನ್ನು ಕಟ್ಟಿ ನಮಗೆ ತೋರಿಸಿದ್ರು. ʼಎಜುಕೇಟ್ʼ ಎಂಬ ಕಲ್ಪನೆಯನ್ನು ತಮಗೆ ತಾವೇ ವಿವರಿಸಿಕೊಂಡಿದ್ದರು. ಬಿ ಕೃಷ್ಣಪ್ಪ ಅವರು ಪ್ರಿನ್ಸಿಪಾಲ್ ಆಗಿದ್ದರು. ಒಂದು ಕಾಲಕ್ಕೆ ಅನೇಕ ದಲಿತ ಸಂಸ್ಥೆಗಳನ್ನು ಕಟ್ಟಲು ಯಾಕೆ ಅವಕಾಶ ಸಿಕ್ಕಿತು ಎಂದರೆ ಅಂಬೇಡ್ಕರ್ ಅವರ ಎಜುಕೇಟ್ ಎಂಬ ಕಲ್ಪನೆ ಶಿಕ್ಷಣ ಸಂಸ್ಥೆಗಳಲ್ಲೂ ಮುಂದುವರಿಯಬೇಕಾಗಿತ್ತು. ಕೃಷ್ಣಪ್ಪ ಅವರು ಮುಂದೆ ನಿಂತು ಒಬ್ಬ ಟೀಚರ್ ಆಗಿ ಚಳವಳಿಯನ್ನು ಹೇಗೆ ಮುನ್ನಡೆಸಬೇಕು, ವಿದ್ಯಾರ್ಥಿಗಳ ಮುಂದೆ ಹೇಗೆ ಕೊಂಡೊಯ್ಯಬೇಕು, ಕನ್ನಡ ಸಾಹಿತ್ಯ ವಿಮರ್ಶೆ ಹೇಗಿರಬೇಕು ಎಂದು ತೋರಿಸಿದ್ರು. ಕನ್ನಡ ದಲಿತ ಸಾಹಿತ್ಯ ವಿಮರ್ಶೆಯ ಫೌಂಡರ್ ಕೂಡಾ ಬಿ ಕೃಷ್ಣಪ್ಪ ಅವರು. ದೇವಯ್ಯ ಹರವೆ ಅವರ ಆರಂಭದ ಲೇಖನಗಳನ್ನು ಬಿಟ್ಟರೆ, ಕೃಷ್ಣಪ್ಪ ಅವರು ಯಾವಾಗ ಕುವೆಂಪು ಅವರ ಬಗೆಗೆ ಕೆಲವು ಪ್ರಶ್ನೆಗಳು ಎತ್ತಿದರೋ ಅದು ದಲಿತ ವಿಮರ್ಶೆಯ ಬಹಳ ದೊಡ್ಡ ತಳಹದಿಯಾಗಿ ನಮ್ಮ ಎದುರಿಗಿದೆ” ಎಂದರು.
“ದಲಿತೇತರರ ಕೃತಿಗಳನ್ನು ಹೇಗೆ ನೋಡಬೇಕು ಎಂದು ಹೇಳಿಕೊಟ್ಟರು. ಕಾಲೇಜಿನ ಒಳಗೆ ಚರ್ಚಾಸ್ಪರ್ದೆ, ಡ್ರಾಮಾ ಹೇಗಿರಬೇಕು, ಸಂವಾದ ಹೇಗಿರಬೇಕು, ಟೀಚಿಂಗ್ ಹೇಗಿರಬೇಕು ಎಂಬುದಕ್ಕೆ ಮಾದರಿಯಾಗಿದ್ದರು. ನಮಗೆಲ್ಲ ಪಾಠ ಮಾಡಲು ಆ ಮಾದರಿ ಎದುರಿಗಿತ್ತು. ಇದು ದಲಿತ ಚಳವಳಿ ಕರ್ನಾಟಕಕ್ಕೆ ಕೊಟ್ಟ ಶಿಕ್ಷಣದ ಮಾದರಿ. ಅದೇ ಸಂದರ್ಭದಲ್ಲಿ ಬಿ ಕೃಷ್ಣಪ್ಪ ಅವರು ನವ್ಯ ಸಾಹಿತ್ಯ ಕೃತಿಗಳನ್ನು ಬಹಳ ಚೆನ್ನಾಗಿ ವಿಮರ್ಶೆ ಮಾಡಿದರು” ಎಂದು ನೆನಪು ಮಾಡಿಕೊಂಡರು.
“ದಲಿತರಿಗೆ ಬಜೆಟ್ ಹೇಗಿರಬೇಕು ಎಂಬ ಕಲ್ಪನೆ ಬಿ ಕೃಷ್ಣಪ್ಪ ಅವರಿಗಿತ್ತು. ಅದರ ಪರಿಣಾಮವಾಗಿ ಕಾಂಗ್ರೆಸ್ ಸರ್ಕಾರ ದಲಿತರ ಜನಸಂಖ್ಯೆಗೆ ಆಧರಿಸಿ ಬಜೆಟ್ ಮೀಸಲಿಡುತ್ತಿದೆ ಎಂದರು. ಆದರೂ ಬಿ ಕೃಷ್ಣಪ್ಪನವರ ತರ ದಲಿತ ಚಳವಳಿ ಯಾಕಿಲ್ಲ ಎಂದು ವಿಷಾದದಿಂದ ನಾವು ಮಾತನಾಡುತ್ತಿದ್ದೇವೆ. ಒಂದು ಕಾಲದಲ್ಲಿ ದಲಿತ ಚಳವಳಿಯ ಜೊತೆ ಸಾಹಿತಿಗಳು, ಕಲಾವಿದರು, ರಾಜಕಾರಣಿಗಳು, ವಕೀಲರು ಇರುತ್ತಿದ್ದರು. ಆದರೆ ಕ್ರಮೇಣ ಕಡಿತಗೊಂಡಿದೆ. ಆದರೆ ಜನಸಂಖ್ಯೆ ಹೆಚ್ಚಾಗಿದೆ. ಮತ್ತೆ ದಲಿತ ಚಳವಳಿಯ ಜೊತೆಗೆ, ಬರಹಗಾರರು, ಶಿಕ್ಷಕರು, ಎಲ್ಲ ವರ್ಗಗಳ ಜನ ನಿಲ್ಲಬೇಕು” ಎಂದರು.
ಅಂಬೇಡ್ಕರ್ ಅಂಬೇಡ್ಕರ್ ಅನ್ನೋದು ಕೆಲವರಿಗೆ ವ್ಯಸನವಾಗಿದೆ ಎಂಬ ಅಮಿತ್ ಶಾ ಅವರ ಹೇಳಿಕೆಗೆ ಪ್ರತಿರೋಧವಾಗಿ ನಟರಾಜ್ ಹುಳಿಯಾರ್ ಬರೆದಿರುವ “ಅಂಬೇಡ್ಕರ್ ಅನ್ನೋಣ…” ಎಂಬ ಹಾಡನ್ನು ಶಿವ ವೆಂಕಟಯ್ಯ ತಂಡದವರು ಪ್ರಸ್ತುತಪಡಿಸಿದರು.
ಇಂದಿರಾ ಕೃಷ್ಣಪ್ಪ, ಮಾವಳ್ಳಿ ಶಂಕರ್, ಸಚಿವ ಎಚ್ ಸಿ ಮಹಾದೇವಪ್ಪ, ರೈತ ಮುಖಂಡ ವೀರಸಂಗಯ್ಯ, ನೆಲ್ಲಿಕುಂಟೆ ವೆಂಕಟೇಶ್, ಡಾ ವಸುಂಧರಾ ಭೂಪತಿ, ಸುಬ್ಬು ಹೊಲೆಯಾರ್ ಸೇರಿದಂತೆ ಹಲವು ಸಾಹಿತಿಗಳು, ಹೋರಾಟಗಾರರು ಭಾವಹಿಸಿದ್ದರು.