ಚಿತ್ರದುರ್ಗ: ಇಲ್ಲಿನ ಬಸವಮೂರ್ತಿ ಮಾದರ ಚನ್ನಯ್ಯ ಪೀಠದ ಪಕ್ಕದ ಮೈದಾನದಲ್ಲಿ ಇಂದು (ಜನವರಿ 28) ನಡೆಯಲಿರುವ ’ಶೋಷಿತರ ಜಾಗೃತಿ ಸಮಾವೇಶ’ಕ್ಕಾಗಿ ವೇದಿಕೆ ಸಜ್ಜಾಗಿದೆ.
ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಆಯೋಜಿಸಿರುವ ಈ ಬೃಹತ್ ಸಮಾವೇಶದಲ್ಲಿ ಲಕ್ಷಾಂತರ ಜನರು ಸೇರುವ ನಿರೀಕ್ಷೆ ಇದೆ.
ಕಾಂತರಾಜ ಆಯೋಗ ವರದಿಯನ್ನು ಬಿಡುಗಡೆ ಮಾಡಿ ಜಾರಿಗೆ ತರಬೇಕು, ಇಡಬ್ಲ್ಯುಎಸ್ ಮೀಸಲಾತಿಯನ್ನು ರದ್ದುಗೊಳಿಸಬೇಕು, ಕೇಂದ್ರ ಸರ್ಕಾರವು ಜಾತಿವಾರು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ನಡೆಸಬೇಕು ಸೇರಿದಂತೆ ಹಲವು ಮಹತ್ವದ ಆಗ್ರಹಗಳನ್ನು ಈ ಸಮಾವೇಶ ಮಾಡುತ್ತಿದೆ.
ಸಂವಿಧಾನ, ಸಾಮಾಜಿಕ ನ್ಯಾಯ, ಸಹಬಾಳ್ವೆ ಮತ್ತು ಸ್ವಾಭಿಮಾನದ ಸಂರಕ್ಷಣೆಗಾಗಿ ಈ ಜಾಗೃತಿ ಸಮಾವೇಶ ನಡೆಯುತ್ತಿದ್ದು, ಶನಿವಾರ ರಾತ್ರಿಯಿಂದಲೇ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಮೂಲಗಳ ಪ್ರಕಾರ, ಇಬ್ಬರು ಐಜಿಗಳು, ಎಸ್ಪಿ- ಎಎಸ್ಪಿ ಸೇರಿ ಎಂಟು ಮಂದಿ, 72 ಮಂದಿ ಇನ್ಸ್ಪೆಕ್ಟರ್, 189 ಸಬ್ಇನ್ಸ್ಪೆಕ್ಟರ್, 387 ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್, ಕಾನ್ಸ್ಸ್ಟೆಬಲ್, ಹೆಡ್ ಕಾನ್ಸ್ಸ್ಟೆಬಲ್ ಸೇರಿ 3,000 ಮಂದಿ, 600 ಮಂದಿ ಹೋಮ್ ಗಾರ್ಡ್ಸ್, 10 ಕೆಎಸ್ಆರ್ಪಿ ನಿಯೋಜನೆ ಮಾಡಲಾಗಿದೆ.
ಶನಿವಾರ ಸಂಜೆ ಸ್ಥಳ ವೀಕ್ಷಣೆಗೆ ಬಂದಿದ್ದ ವೇಳೆ ‘ಈದಿನ.ಕಾಂ’ ಜೊತೆಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, “ನಮ್ಮ ಮುಖ್ಯಮಂತ್ರಿಯವರು, ಉಪಮುಖ್ಯಮಂತ್ರಿಯವರು ಆಗಮಿಸಲಿದ್ದಾರೆ. ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿದೆ. ಕಾಂತರಾಜ ಆಯೋಗದ ವರದಿ ಸರ್ಕಾರದ ಮುಂದೆ ಇದೆ. ಎಲ್ಲ ಸಮಾಜಗಳು ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿವೆ. ಶೋಷಿತ ಸಮುದಾಯಗಳು ವರದಿ ಜಾರಿಗಾಗಿ ಆಗ್ರಹಿಸುತ್ತಿವೆ. ಈ ಕುರಿತು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರು ತೀರ್ಮಾನ ಮಾಡಲಿದ್ದಾರೆ” ಎಂದು ತಿಳಿಸಿದರು.

ಸ್ಥಳಕ್ಕೆ ಆಗಮಿಸಿದ್ದ ಮಾಜಿ ಸಚಿವರಾದ ಎಚ್.ಆಂಜನೇಯ ಅವರು ‘ಈದಿನ.ಕಾಂ’ ಜೊತೆಯಲ್ಲಿ ಮಾತನಾಡಿ, “ನೂರು ಎಕರೆ ಪ್ರದೇಶದಲ್ಲಿ ಹಾಕಿರುವ ಪೆಂಡಲ್ನಲ್ಲಿ ಲಕ್ಷಾಂತರ ಜನರು ಬಂದು ಸಮಾವೇಶಗೊಳ್ಳಲಿದ್ದಾರೆ. ಎಲ್ಲಾ ಜಾತಿಗಳಲ್ಲೂ ಶೋಷಿತರಿದ್ದಾರೆ. ನಾನು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಸಚಿವನಾಗಿದ್ದ ಸಮಯದಲ್ಲಿ 2015ರಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮಾಡಲಾಯಿತು. ಅದಕ್ಕೆ ಜಾತಿ ಗಣತಿ ಎಂಬ ಹಣೆಪಟ್ಟಿ ಕೂಡ ಹಚ್ಚಿದ್ದಾರೆ. ಮನೆಮನೆಗೂ ಹೋಗಿ ಎಲ್ಲ ಮಾಹಿತಿ ಪಡೆದಿದ್ದೇವೆ. ಅತ್ಯುತ್ತಮ ವರದಿ ಅದಾಗಿದೆ. ಇಡೀ ದೇಶಕ್ಕೆ ಮಾದರಿಯಾಗಿದೆ. ರಾಜ್ಯದಲ್ಲಿ ಎಂಟುನೂರು ಜಾತಿಗಳಿವೆ. ಎಷ್ಟೋ ಜಾತಿಗಳು ಪಟ್ಟಿಯಲ್ಲೇ ಇರಲಿಲ್ಲ. ಕಾಂತರಾಜ ಆಯೋಗದ ವರದಿ ಅಂತಹ ಜಾತಿಗಳನ್ನು ಪಟ್ಟಿ ಮಾಡಿದೆ” ಎಂದು ಮಾಹಿತಿ ನೀಡಿದರು.

“ಎಲ್ಲರ ಆರ್ಥಿಕ, ಶೈಕ್ಷಣಿಕ ಸ್ಥಿತಿಗಳಳನ್ನು ತಿಳಿಯಸಲಾಗಿದೆ. ಈ ರಾಜ್ಯದಲ್ಲಿ ಬಡವರು ಎಷ್ಟು ಮಂದಿ ಇದ್ದಾರೆ, ಎಷ್ಟು ಜನರಿಗೆ ಭೂಮಿ ಇಲ್ಲ, ಎಷ್ಟು ಜನರಿಗೆ ಮನೆ ಇಲ್ಲ ಎಂಬುದೆಲ್ಲ, ಉಳ್ಳವರು ಇದ್ದಾರೆ ಎಂಬುದನ್ನು ನಿಖರವಾದ ಮಾಹಿತಿಯು ಸಿಗುತ್ತದೆ. ಈ ವರದಿಯನ್ನು ಕೆಲವರು ವಿರೋಧ ಮಾಡುತ್ತಿದ್ದಾರೆ. ವಿರೋಧ ಮಾಡುವ ಅಗತ್ಯವಿಲ್ಲ. ವರದಿ ಹೊರಗೆ ಬಂದ ಮೇಲೆ ಬೇಕಾದರೆ ಲೋಷವಿದ್ದರೆ ಎತ್ತಿ ಹೇಳಿ, ಸರಿಪಡಿಸಿಕೊಳ್ಳಲು ಸಾಧ್ಯವಾಗುತ್ತದೆ.
‘ಒಳಮೀಸಲಾತಿ’ ಕುರಿತು ಪ್ರತಿಕ್ರಿಯಿಸಿದ ಅವರು, “ಮಾದಿಗರು ಅಸ್ಪೃಶ್ಯರಲ್ಲೇ ಅಸ್ಪೃಶ್ಯರು. ಪ್ರತ್ಯೇಕವಾದ ಮೀಸಲಾತಿ ಕೊಡಿ ಎಂದು ದಶಕದಿಂದ ಅಗ್ರಹ ಮಾಡುತ್ತಿದ್ದಾರೆ. ಎಲ್ಲರನ್ನೂ ಮನವೊಲಿಸಿ ಒಳಮೀಸಲಾತಿಗೆ ಒಪ್ಪಿಸಿ ಸಂವಿಧಾನಿಕ ತಿದ್ದುಪಡಿ ತರಬೇಕೆಂದು ಕೇಂದ್ರ ಸರ್ಕಾರಕ್ಕೆ ಕೋರಲಾಗಿದೆ. ಈಗ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಬೇಕಿದೆ” ಎಂದರು.