ಯೂನಿವರ್ಸಿಟಿ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು (ಯುವಿಸಿಇ) ಮೊದಲಿನಂತೆಯೇ ಬೆಂಗಳೂರು ವಿಶ್ವವಿದ್ಯಾನಿಲಯದ ಅಧೀನಕ್ಕೆ ಒಳಪಡಬೇಕು, ಸ್ವಾಯತ್ತತೆಯನ್ನು ತೆಗೆದುಹಾಕಬೇಕು ಎಂದು ಹೋರಾಡುತ್ತಿರುವ ವಿದ್ಯಾರ್ಥಿಗಳು ಮಂಗಳವಾರ ಮತ್ತೊಮ್ಮೆ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ್ದಾರೆ.
ಸ್ವಾಯತ್ತ ವಿವಿಯ ಬೋರ್ಡ್ ಆಫ್ ಗವರ್ನಿಂಗ್ ಕೌನ್ಸಿಲ್ ಅಧ್ಯಕ್ಷರ ನಿಯೋಗವು ವಿವಿಗೆ ಭೇಟಿಯಾಗುತ್ತಿರುವ ಹಿನ್ನೆಲೆಯಲ್ಲಿ ವಿರೋಧ ವ್ಯಕ್ತಪಡಿಸಿರುವ ಬೆಂಗಳೂರು ವಿವಿ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟದ ಪದಾಧಿಕಾರಿಗಳು ಸಿವಿಲ್ ಇಂಜಿನಿಯರಿಂಗ್ ವಿಭಾಗದ ಎದುರು ಸೇರಿ ಆಕ್ರೋಶ ಹೊರಹಾಕಿದರು.
ಈ ಸಂದರ್ಭದಲ್ಲಿ ‘ಈದಿನ.ಕಾಂ’ ಜೊತೆಯಲ್ಲಿ ಮಾತನಾಡಿದ ಒಕ್ಕೂಟದ ಗೌರವಾಧ್ಯಕ್ಷ ಲೋಕೇಶ್ ರಾಮ್, “ಯುವಿಸಿಇ ಸ್ವಾಯತ್ತ ಸಂಸ್ಥೆಯಾಗಬಾರದು. ಬೆಂಗಳೂರು ವಿವಿಯಲ್ಲಿಯೇ ಮುಂದುವರಿಯಬೇಕು. ಅಂದು ಬ್ರಿಟಿಷರ ವಿರುದ್ಧ ’ಗೋ ಬ್ಯಾಕ್ ಸೈಮನ್ ಕಮಿಷನ್’ ಎಂದಂತೆ ಇಂದು ’ಗೋ ಬ್ಯಾಕ್ ಅಟಾನೊಮಾಸ್ ಬೋರ್ಡ್ ಆಫ್ ಗವರ್ನಿಂಗ್ ಕೌನ್ಸಿಲ್’ ಎಂದಿದ್ದೇವೆ” ಎಂದು ಹೇಳಿದರು.

“ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳು ಕಡಿಮೆ ವೆಚ್ಚದಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡಲು ಯುವಿಸಿಇ ಅನುಕೂಲ ಮಾಡಿಕೊಟ್ಟಿತ್ತು. ಆದರೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಯುವಿಸಿಇ ಕಾಲೇಜನ್ನು ಸ್ವಾಯತ್ತ ಸಂಸ್ಥೆಯನ್ನಾಗಿ ಮಾಡಲಾಯಿತು. ಅಂದಿನ ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ಥನಾರಾಯಣ ಅವರು ಮಾಡಿದ ತಪ್ಪನ್ನೇ ಇಂದು ಕಾಂಗ್ರೆಸ್ ಸರ್ಕಾರವೂ ಮುಂದುವರಿಸಿದೆ” ಎಂದು ಟೀಕಿಸಿದರು.
“ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗಿಯವರಿಗೆ ನೀಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಕಾಂಗ್ರೆಸ್ನವರು ಆಕ್ರೋಶ ವ್ಯಕ್ತಪಡಿಸುತ್ತಾರೆ. ಈಗಿನ ರಾಜ್ಯ ಸರ್ಕಾರವೂ ಅದೇ ಕೆಲಸವನ್ನು ಮಾಡುತ್ತಿದೆ. ಏರ್ಲೈನ್ಸ್, ಬಿಎಸ್ಎನ್ಎಲ್ ಸಂಸ್ಥೆಗಳನ್ನು ಬಿಜೆಪಿ ದುರ್ಬಲಗೊಳಿಸಿದೆ ಎನ್ನುವ ಕಾಂಗ್ರೆಸ್ ಪಕ್ಷವೂ ರಾಜ್ಯದಲ್ಲಿ ಅದೇ ರೀತಿಯ ತಪ್ಪನ್ನು ಮಾಡುತ್ತಿದೆ” ಎಂದು ದೂರಿದರು.
“ಈಗ ಸ್ವಾಯತ್ತ ಸ್ಥಾನಮಾನ ನೀಡಲಾಗಿದೆ. ಮುಂದೆ ಈ ಕಾಲೇಜನ್ನು ಖಾಸಗಿಯವರಿಗೆ ಹಸ್ತಾಂತರಿಸಲಾಗುತ್ತದೆ. ಯುವಿಸಿಇನಲ್ಲಿ ಬಡವರ ಮಕ್ಕಳು, ಶೋಷಿತರ ಮಕ್ಕಳು ಕೇವಲ ಎರಡು ಲಕ್ಷದೊಳಗೆ ವ್ಯಾಸಂಗ ಮುಗಿಸುತ್ತಿದ್ದರು. ಆದರೆ ಈಗ ವರ್ಷಕ್ಕೆ ಮೂರು ಲಕ್ಷ ರೂಪಾಯಿ ಶುಲ್ಕ ಕಟ್ಟಬೇಕಾಗಿದೆ. ತಕ್ಷಣವೇ ಸ್ವಾಯತ್ತ ಸ್ಥಾನಮಾನ ತೆಗೆದುಹಾಕಿ ವಿಶ್ವವಿದ್ಯಾನಿಲಯಕ್ಕೆ ಕಾಲೇಜನ್ನು ವಿಲೀನಗೊಳಿಸಬೇಕು. ಈ ವಿಷಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಂಭೀರವಾಗಿ ತೆಗೆದುಕೊಳ್ಳಬೇಕು. ರಾಜ್ಯಪಾಲರೂ ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು” ಎಂದು ಒತ್ತಾಯಿಸಿದರು.
“ಯುವಿಸಿಇಯಿಂದ ಬೆಂಗಳೂರು ವಿವಿಗೆ ಸಾಕಷ್ಟು ಅನುಕೂಲವಾಗುತ್ತಿತ್ತು. ಸಾಕಷ್ಟು ಪೇಟೆಂಟ್ಗಳು ಯುವಿಸಿಇನಲ್ಲಿ ಆಗುತ್ತಿದ್ದವು. ಆ ಮೂಲಕ ಸಂಪನ್ಮೂಲದ ಕೊರತೆಯನ್ನೂ ತುಂಬಲಾಗುತ್ತಿತ್ತು. ಇಂತಹ ಕಾಲೇಜನ್ನು ವಿಶ್ವವಿದ್ಯಾನಿಲಯದಿಂದ ಹೊರಗಿಟ್ಟರೆ ವಿವಿಗೆ ಅಪಾರ ನಷ್ಟವಾಗುತ್ತದೆ” ಎಂದು ಎಚ್ಚರಿಸಿದರು.
‘ಸೇವ್ ಯುವಿಸಿಇ’ ಅಭಿಯಾನದ ಅಧ್ಯಕ್ಷ ದೀಪಕ್ ಜಿ. ಅಪ್ಪಾಜಿ ಅವರು ’ಈದಿನ.ಕಾಂ’ ಜೊತೆಯಲ್ಲಿ ಮಾತನಾಡಿ, “ಈ ಕಾಲೇಜಿಗೆ ನೂರು ವರ್ಷಗಳ ಇತಿಹಾಸವಿದೆ. ಇಂತಹ ಸಂಸ್ಥೆಯನ್ನು ಸರ್ಕಾರದಿಂದ ಕಿತ್ತುಕೊಂಡು ಸ್ವಾಯತ್ತ ಮಾಡಿಕೊಳ್ಳಲು ಷಡ್ಯಂತ್ರ ಮಾಡಲಾಯಿತು. ಅಂತೆಯೇ ಬೇರ್ಪಡಿಸಲಾಯಿತು. ಈ ವಿದ್ಯಮಾನ ಬಡವಿದ್ಯಾರ್ಥಿಗಳಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ” ಎಂದು ಬೇಸರ ವ್ಯಕ್ತಪಡಿಸಿದರು.

“ಸಿಇಟಿ ರ್ಯಾಂಕಿಂಗ್ನಲ್ಲಿ ನಮ್ಮ ಕಾಲೇಜು ಮೊದಲ ಸ್ಥಾನದಲ್ಲಿ ಇರುತ್ತದೆ. ಇಲ್ಲಿ ಓದಿದವರಿಗೆ ಪ್ಲೇಸ್ಮೆಂಟ್ಗಳಾಗಿವೆ. ಎನ್ಇಪಿ ಬಂದ ಮೇಲೆ ಇದನ್ನು ಸ್ವಾಯತ್ತ ಕಾಲೇಜಾಗಿ ಮಾಡಿದರು. ಇದು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಿದೆ. ಹಳೆಯ ವಿದ್ಯಾರ್ಥಿಗಳಿಗೆ ಅಂಕಪತ್ರವೂ ಸಿಗುತ್ತಿಲ್ಲ. ನಮಗೂ ನಿಮಗೂ ಸಂಬಂಧವಿಲ್ಲ ಎಂದು ಕಾಲೇಜಿನ ಆಡಳಿತ ಮಂಡಳಿ ಹೇಳಿರುವ ಉದಾಹರಣೆಗಳೂ ಇವೆ” ಎಂದು ತಿಳಿಸಿದರು.
ಸ್ನಾತಕೋತ್ತರ ವಿದ್ಯಾರ್ಥಿ ಸಿ.ಕೆ.ಗಂಗಾಧರ್, ಸಂಶೋಧನಾ ವಿದ್ಯಾರ್ಥಿಗಳಾದ ಗುರು ರಾಘವೇಂದ್ರ, ಗಿರೀಶ್ ನಾಯ್ಕ್, ಲಾಯರ್ ಗುರುಮೂರ್ತಿ ಮೊದಲಾದವರು ಹಾಜರಿದ್ದರು.
