ರಾಜ್ಯದಲ್ಲಿ ಡೆಂಘೀ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ, ಡೆಂಘೀ ಜ್ವರವನ್ನು ಸಾಂಕ್ರಾಮಿಕ ರೋಗವೆಂದು ಘೋಷಿಸಿ ಅಧಿಸೂಚನೆ ಹೊರಡಿಸಿದೆ.
ಸೊಳ್ಳೆಗಳ ಸಂತಾನೋತ್ಪತ್ತಿ ನಿಯಂತ್ರಿಸಲು ವಿಫಲವಾಗುವವರಿಗೆ ದಂಡ ವಿಧಿಸಲಾಗುತ್ತದೆ. ಕಟ್ಟಡ ಅಥವಾ ಜಮೀನಿನ ಮಾಲೀಕರು, ಬಾಡಿಗೆದಾರರು ತಮ್ಮ ವಾಸಸ್ಥಳಗಳಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿಯಾಗದಂತೆ ನೋಡಿಕೊಳ್ಳಬೇಕು. ಕಟ್ಟಡ, ಜಮೀನಿನಲ್ಲಿ ನೀರು ಶೇಖರಣೆ, ಅನುಪಯುಕ್ತ ಟ್ಯಾಂಕ್ಗಳು ಇಲ್ಲದಂತೆ ಎಚ್ಚರವಹಿಸಬೇಕು ಎಂದು ಸೂಚಿಸಲಾಗಿದೆ.
ಜಮೀನು, ಕಟ್ಟಡ, ನೀರಿನ ಟ್ಯಾಂಕ್ಗಳು, ಉದ್ಯಾನ, ಆಟದ ಮೈದಾನ ಸೇರಿದಂತೆ ಇತರೆ ಸ್ವತ್ತುಗಳ ಮಾಲೀಕರು, ಸ್ವಾಧೀನಾನುಭವದಲ್ಲಿ ಇರುವವರು ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು ಅಗತ್ಯ ಕ್ರಮ ಕೈಗೊಳ್ಳುವುದು ಕಡ್ಡಾಯ. ನೀರಿನ ಶೇಖರಣಾ ಪಾತ್ರೆಗಳು, ಸಂಪ್ ಮತ್ತು ಓವರ್ಹೆಡ್ ಟ್ಯಾಂಕ್ಗಳನ್ನು ಸುರಕ್ಷಿತವಾಗಿ ಮುಚ್ಚಿರುವುದನ್ನು ಖಚಿತಪಡಿಸಿಕೊಂಡು ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಬೇಕು ಎಂದು ಹೇಳಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೂರು ಪಕ್ಷಗಳಿಂದಲೂ ಕುಟುಂಬ ಅಭ್ಯರ್ಥಿಗಳ ದುರಂತ ರಾಜಕಾರಣ
ಡೆಂಘೀ ನಿಯಂತ್ರಣಾ ಕ್ರಮಗಳನ್ನು ಜಾರಿಗೆ ತರುವುದು, ಕಾಲ ಕಾಲಕ್ಕೆ ಅದನ್ನು ಪರಿಶೀಲಿಸುವ ಜತೆಗೆ ನಿಯಮ ಉಲ್ಲಂಘನೆ ಮಾಡುವವರಿಗೆ ದಂಡ ವಿಧಿಸಲು ಬಿಬಿಎಂಪಿ ಮುಖ್ಯ ಆಯುಕ್ತರು ಮತ್ತು ಬೆಂಗಳೂರು ಹೊರತುಪಡಿಸಿ, ಉಳಿದ ಜಿಲ್ಲೆಗಳ ಅಧಿಕಾರ ವ್ಯಾಪ್ತಿಗೆ ಮಾತ್ರ ಸಕ್ಷಮ ಪ್ರಾಧಿಕಾರ ರಚಿಸಲಾಗುತ್ತದೆ. ಸಕ್ಷಮ ಪ್ರಾಧಿಕಾರ ಜಾರಿಗೊಳಿಸುವ ನಿಯಮಗಳನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು. ಪಾಲನೆ ಮಾಡದಿದ್ದರೆ, ಅಂಥವರಿಗೆ ದಂಡ ಹಾಕುವ ಅಧಿಕಾರ ಪ್ರಾಧಿಕಾರಕ್ಕಿದೆ.
ನಿಯಮ ಪಾಲಿಸದಿದ್ದರೆ ದಂಡ
ಸೊಳ್ಳೆಗಳ ಸಂತಾನೋತ್ಪತ್ತಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಕುಟುಂಬಗಳಿಗೆ ಕ್ರಮವಾಗಿ 800 ರೂ. ಮತ್ತು 400 ರೂ., ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿನ ವಾಣಿಜ್ಯ ಸಂಸ್ಥೆಗಳು, ಕಚೇರಿಗಳು, ಶಾಲಾ-ಕಾಲೇಜುಗಳು, ಆರೋಗ್ಯ ಸೇವಾ ಕ್ಷೇತ್ರಗಳಿಗೆ ಕ್ರಮವಾಗಿ 2 ಸಾವಿರ ಮತ್ತು 1,500 ರೂ., ಪ್ರಗತಿಯಲ್ಲಿರುವ ಅಥವಾ ಸ್ಥಗಿತಗೊಂಡ ನಿರ್ಮಾಣ ಸ್ಥಳಗಳು, ಖಾಲಿ ಜಾಗಗಳಿಗೆ ಕ್ರಮವಾಗಿ 4 ಸಾವಿರ ರೂ. ಮತ್ತು 2 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಸಕ್ಷಮ ಪ್ರಾಧಿಕಾರವು ಸೂಚನೆ ನೀಡಿದ ನಂತರವೂ ನಿಯಮ ಪಾಲಿಸದಿದ್ದರೆ ಹೆಚ್ಚುವರಿಯಾಗಿ ಶೇ 50ರಷ್ಟು ದಂಡ ಹಾಕಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಡೆಂಘೀ ಪ್ರಕರಣಗಳ ಸಂಖ್ಯೆ
ಆರೋಗ್ಯ ಇಲಾಖೆಯ ನೀಡಿರುವ ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿ ಈವರೆಗೆ 30,719 ಜನರಲ್ಲಿ ಡೆಂಘೀ ಜ್ವರ ಪತ್ತೆಯಾಗಿದ್ದು, ಆ ಪೈಕಿ 30,336 ಮಂದಿ ಗುಣಮುಖರಾಗಿದ್ದಾರೆ. ಸದ್ಯ, ರಾಜ್ಯಾದ್ಯಂತ 367 ಸಕ್ರಿಯ ಪ್ರಕರಣಗಳಿವೆ. ಒಟ್ಟು 16 ಜನರು ಮೃತಪಟ್ಟಿದ್ದಾರೆ.
