ಬೆಂಗಳೂರಿನ ಪ್ರಮುಖ ಸಮಾನ ಮನಸ್ಕ ಸಂಘಟನೆಗಳು ಗುರುವಾರ ಸಭೆ ಸೇರಿ ಧರ್ಮಸ್ಥಳ ದೌರ್ಜನ್ಯ ಮತ್ತು ಪರಿಹಾರೋಪಾಯಗಳ ಬಗ್ಗೆ ಚರ್ಚೆ ನಡೆಸಿದವು. ರಾಜ್ಯದ ಸಾಹಿತಿಗಳು, ಚಿಂತಕರು, ವಕೀಲರುಗಳು, ಪತ್ರಕರ್ತರು, ಹೋರಾಟಗಾರರು ಉಪಸ್ಥಿತರಿದ್ದ ಈ ಸಭೆಯಲ್ಲಿ ಈ ಕೆಳಕಂಡ ನಿರ್ಣಯಗಳನ್ನು ಅಂಗೀಕರಿಸಿ ಸರ್ಕಾರದ ಗಮನಕ್ಕೆ ತರಲು ನಿರ್ಧರಿಸಲಾಯಿತು.
ಪ್ರಮುಖ ನಿರ್ಣಯಗಳು
ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳಿಂದ (2005 ರಿಂದ 2025) ದಾಖಲಾದ ಅಸಹಜ ಸಾವು, ಅತ್ಯಾಚಾರ, ಹಲ್ಲೆ, ಕೊಲೆ, ಶವ ಹೂತಿಟ್ಟ ಪ್ರಕರಣ, ನೂರಾರು ಹುಡುಗಿಯರ ನಾಪತ್ತೆ ಪ್ರಕರಣವನ್ನು ಭೇದಿಸಲು ರಾಜ್ಯ ಸರ್ಕಾರವು ಎಸ್ಐಟಿ ರಚಿಸಿರುವುದನ್ನು ಸ್ವಾಗತಿಸಲಾಯಿತು. ಎಸ್ಐಟಿ ರಚನೆಯ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಇರುವಂತೆಯೇ ಕಳೆದ 20 ವರ್ಷಗಳಲ್ಲಿ ಧರ್ಮಸ್ಥಳದಲ್ಲಿ ನಡೆದಿರುವ ಅಸಹಜ ಸಾವು, ಕೊಲೆ, ನಾಪತ್ತೆ ಪ್ರಕರಣಗಳ ಜೊತೆಗೆ ರಾಜ್ಯದ ಯಾವುದೇ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದಾಖಲಾದ ಪ್ರಕರಣಗಳ ತನಿಖೆಯನ್ನು ಎಸ್ಐಟಿ ನಡೆಸುತ್ತಿದೆ ಎಂದು ಪ್ರಜ್ಞಾವಂತರಾದ ನಾವು ನಂಬಿಕೆ ಇರಿಸಿಕೊಂಡಿದ್ದೇವೆ. ಎಸ್ಐಟಿಯಲ್ಲಿರುವ ಅಧಿಕಾರಿಗಳ ಕಾರಣಕ್ಕಾಗಿ SIT ತನಿಖೆಯ ಕುರಿತು ನಾಡಿನ ಜನತೆಗೆ ನಂಬಿಕೆ ಹಾಗು ನಿರೀಕ್ಷೆಗಳಿವೆ. ಹಾಗಿದ್ದಾಗ್ಯೂ ಬಿಜೆಪಿ ಹಾಗು ಪಟ್ಟಭದ್ರ ಶಕ್ತಿಗಳು SIT ತನಿಖೆಯನ್ನು ಸ್ಥಗಿತಗೊಳಿಸಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. SITಯನ್ನು ಒತ್ತಡಕ್ಕೆ ಒಳಪಡಿಸಲು, ದೂರುದಾರರು, ಸಾಕ್ಷಿದಾರರನ್ನು ಬೆದರಿಸುವ, ತೇಜೋವಧೆ ನಡೆಸಿ ಹಿಮ್ಮಟ್ಟಿಸುವ ಯತ್ನವೂ ಆಗುತ್ತಿದೆ.
ಸರಕಾರ ಇಂತಹ ಪಿತೂರಿ, ಒತ್ತಡಕ್ಕೆ ಒಳಗಾಗದೆ SIT ಅದರ ವ್ಯಾಪ್ತಿಯಲ್ಲಿ ಪೂರ್ಣ ಪ್ರಮಾಣದಲ್ಲಿ ತನಿಖೆ ನಡೆಸಲು ಅನುವು ಮಾಡಿಕೊಡಬೇಕು. ಸಾಕ್ಷಿ/ದೂರುದಾರರ ಆರೋಪ ಪ್ರತ್ಯೇಕ ಪ್ರಕರಣವಾಗಿದ್ದು, ಆ ದೂರುದಾರರಿಗೂ, ಅವರ ದೂರಿಗೂ ಜನ ಚಳವಳಿಗಳಿಗೂ ಯಾವುದೇ ಸಂಬಂಧ ಇರುವುದಿಲ್ಲ. ಆದರೆ, ಅವರ ದೂರು, ಆರೋಪದ ಕುರಿತು ಪ್ರಾಮಾಣಿಕ ತನಿಖೆಯಾಗಬೇಕು ಎಂಬುದು ನಮ್ಮ ಆಗ್ರಹವಾಗಿದೆ. ದೂರುದಾರರಿಗೆ ಈ ನಿಟ್ಟಿನಲ್ಲಿ ಜಾತ್ಯತೀತ, ಜನಪರ ಸಂಘಟನೆಗಳ ನೈತಿಕ ಬೆಂಬಲ ಇರುತ್ತದೆ. ಅದೇ ಸಂದರ್ಭ ಈ ಹಿಂದಿನಿಂದಲೂ ಚಳವಳಿಗಳು ಆಗ್ರಹಿಸುತ್ತಾ ಬಂದಿರುವ ಬೇಡಿಕೆಗಳ ಮೇಲೆ ಪ್ರಬಲ ಒತ್ತಾಯವನ್ನು ಈ ಸಂದರ್ಭದಲ್ಲಿ ಸರಕಾರದ ಮುಂದೆ ಸ್ಪಷ್ಟವಾಗಿ ಮುಂದಿಡುತ್ತದೆ, ಹೋರಾಟವನ್ನು ಮುಂದುವರಿಸುತ್ತದೆ.
ಪದ್ಮಲತಾ ಪ್ರಕರಣ
ಧರ್ಮಸ್ಥಳ ಗ್ರಾಮದ ಸಿಪಿಐಎಂ ಶಾಖಾ ಕಾರ್ಯದರ್ಶಿ ಎಂ ಕೆ ದೇವಾನಂದರ ಹದಿಹರೆಯದ ಪುತ್ರಿಯನ್ನು1986 ಡಿಸೆಂಬರ್ ತಿಂಗಳಲ್ಲಿ ಅಪಹರಿಸಿ ತಿಂಗಳ ತರುವಾಯ ನೆರಿಯಾ ಹೊಳೆಗೆ ಎಸೆದ ಪ್ರಕರಣದಲ್ಲಿ ಈವರೆಗೂ ನ್ಯಾಯ ಒದಗಿಸಿಲ್ಲ. ಆ ಸಂದರ್ಭ ಹೋರಾಟಗಳು ನಡೆದು ಸಿಐಡಿ ತನಿಖೆಗೆ ಪ್ರಕರಣವನ್ನು ಒಪ್ಪಿಸಿದರೂ, ಪ್ರಭಾವಗಳಿಗೆ ಮಣಿದು “ಪತ್ತೆಹಚ್ಚಲಾಗದ ಪ್ರಕರಣ ಎಂದು ವರದಿ ನೀಡಿ ಸಿಐಡಿ ಪ್ರಕರಣವನ್ನು ಮುಕ್ತಾಯಗೊಳಿಸಿತ್ತು. ಎಂ ಕೆ ದೇವಾನಂದರು ಹಲವರ ಹೆಸರು ಉಲ್ಲೇಖಿಸಿ ದೂರು ನೀಡಿದ್ದರೂ ಆ ನಿಟ್ಟಿನಲ್ಲಿ ತನಿಖೆ, ವಿಚಾರಣೆ ನಡೆದಿಲ್ಲ ಎಂಬುದು ಪದ್ಮಲತಾ ಕುಟುಂಬದ ಆರೋಪ.
ಪದ್ಮಲತಾ ತಂದೆ ಎಂ ಕೆ ದೇವಾನಂದರು ಸ್ಥಳೀಯ ಫ್ಯೂಡಲ್ ಶಕ್ತಿಗಳ ಅಲಿಖಿತ ನಿಯವನ್ನು ಮುರಿದು ಮಂಡಲ ಪಂಚಾಯತ್ ಗೆ ಚುನಾವಣೆಗೆ ಸ್ಪರ್ಧಿಸಿದ್ದು, ಮಲೆಕುಡಿಯರ ಒಕ್ಕಲೆಬ್ಬಿಸುವಿಕೆಯ ವಿರುದ್ಧ ಚಳವಳಿ ಕಟ್ಟಿದ್ದು ಮಗಳ ಕೊಲೆಗೆ ಕಾರಣ ಎಂದು ದಿವಂಗತ ದೇವಾನಂದರು ಕೊನೆಯವರೆಗೂ ಹೇಳುತ್ತಾ ಬಂದಿರುತ್ತಾರೆ.
ವೇದವಲ್ಲಿ ಪ್ರಕರಣ
1979 ರಲ್ಲಿ ಧರ್ಮಸ್ಥಳ ಎಸ್ ಡಿ ಎಮ್ ಅನುದಾನಿತ ಹೈಸ್ಕೂಲಿನಲ್ಲಿ ಅಧ್ಯಾಪಕಿಯಾಗಿದ್ದ ವೇದವಲ್ಲಿ ಅವರ ಅನುಮಾನಾಸ್ಪದ ಸಾವು ಸಂಭವಿಸುತ್ತದೆ. ನ್ಯಾಯಯುತವಾಗಿ ದೊರಕಬೇಕಾದ ಮುಖ್ಯೋಪಾಧ್ಯಾಯಿನಿ ಹುದ್ದೆಗೆ ಹಕ್ಕು ಮಂಡಿಸಿದ್ದಕ್ಕಾಗಿ ಊರಿನ ಫ್ಯೂಡಲ್ ಶಕ್ತಿಗಳು ವೇದವಲ್ಲಿಯವರನ್ನು ಬೆಂಕಿ ಹಚ್ಚಿ ಕೊಲೆ ನಡೆಸಿದರು ಎಂಬುದಾಗಿ ಆಕೆಯ ಕುಟುಂಬಸ್ಥರ ಆರೋಪ. ಆದರೆ, ಬಲಾಢ್ಯ ಶಕ್ತಿಗಳ ಪ್ರಭಾವದಿಂದಾಗಿ ಹೆಂಡತಿಯ ಕೊಲೆಗೆ ನ್ಯಾಯ ದೊರಕಬೇಕು ಎಂದು ಆಗ್ರಹಿಸಿದ ವೇದವಲ್ಲಿಯವರ ಪತಿ ಡಾ. ಹರಳೆಯರ ಮೇಲೆಯೇ ಸುಳ್ಳು ಆರೋಪ ಹೊರಿಸಿ ಜೈಲಿಗೆ ಹಾಕುವ ವಿಫಲ ಸಂಚು ನಡೆಸಲಾಗಿತ್ತು. ಆ ಬಳಿಕ ವೇದವಲ್ಲಿ ಕೊಲೆ ಪ್ರಕರಣವನ್ನು ಆ ಮೂಲಕ ಮುಚ್ಚಿ ಹಾಕಲಾಯಿತು.
ಮಾವುತ ನಾರಾಯಣ, ಸೋದರಿ ಯಮುನಾ ಕೊಲೆ
2012 ಸೆಪ್ಟಂಬರ್ ನಲ್ಲಿ ಧರ್ಮಸ್ಥಳದಲ್ಲಿ ಆನೆ ಮಾವುತ ಆಗಿದ್ದ ನಾರಾಯಣ ಹಾಗು ಅವರ ಸಹೋದರಿಯನ್ನು ಕಲ್ಲಿನಿಂದ ಜಜ್ಜಿ ಕೊಲೆ ನಡೆಸಲಾಗುತ್ತದೆ. ಆ ಕೊಲೆ ಪ್ರಕರಣವನ್ನು ಪೊಲೀಸ್ ಇಲಾಖೆ ಪತ್ತೆಯಾಗದ ಪ್ರಕರಣ ಎಂದು ವರದಿ ನೀಡಿ ಮುಚ್ಚಿಹಾಕುತ್ತದೆ.
ಆನೆ ಮಾವುತ ನಾರಾಯಣ ವಾಸ ಇದ್ದ ಜಮೀನಿನ ಮೇಲೆ ಊರಿನ ಪ್ರಭಾವಿಗಳಿಗೆ ಆಸಕ್ತಿ ಇತ್ತು. ಪ್ರಭಾವಿಗಳ ಒತ್ತಡಕ್ಕೆ ಮಣಿಯದ ಕಾರಣ ಈ ಜೋಡಿ ಕೊಲೆ ನಡೆದಿದೆ ಎಂದು ನಾರಾಯಣ ಕುಟುಂಬ ಅಂದಿನಿಂದಲೂ ಆರೋಪಿಸುತ್ತಾ ಬಂದಿದೆ. ಮಾವುತ ನಾರಾಯಣ ವಾಸ ಇದ್ದ ಜಮೀನಿನಲ್ಲಿ ಈಗ ಪ್ರಭಾವಿಗಳ ಭವ್ಯ ಕಟ್ಟಡ ತಲೆ ಎತ್ತಿರುವುದು ಆ ಆರೋಪವನ್ನು ಪುಷ್ಟೀಕರಿಸುತ್ತದೆ.
ಸೌಜನ್ಯ ಕೊಲೆ
2012 ರಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಪ್ರಕರಣದಲ್ಲಿ ಸಿಬಿಐ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಆರೋಪಿಯಾಗಿದ್ದ ಸಂತೋಷ್ ರಾವ್ ಅವರನ್ನು ನ್ಯಾಯಾಲಯ ನಿರಪರಾಧಿ ಎಂದು ಬಿಡುಗಡೆಗೊಳಿಸಿದೆ. ಆ ಮೂಲಕ ಸೌಜನ್ಯ ಕುಟುಂಬ ಹಾಗು ಜನಾಭಿಪ್ರಾಯಕ್ಕೆ ನ್ಯಾಯಾಲಯದಲ್ಲಿ ಮನ್ನಣೆ ದೊರಕಿದೆ. ಅಂದಿನಿಂದ ಸೌಜನ್ಯ ಕುಟುಂಬ ಹಾಗು ಜನ ಚಳವಳಿಗಳು, ನಾಗರಿಕ ಸಮಾಜ ಸೌಜನ್ಯ ಪ್ರಕರಣದ ಮರು ತನಿಖೆಗೆ ಬಲವಾದ ಆಗ್ರಹ ಮಾಡುತ್ತಲೇ ಬಂದಿವೆ.
ಮೇಲ್ಕಾಣಿಸಿದ ಎಲ್ಲಾ ಅಪಹರಣ, ಅತ್ಯಾಚಾರ, ಕೊಲೆ ಪ್ರಕರಣಗಳನ್ನು ಈಗ ರಚಿಸಿರುವ SIT ತನಿಖೆಯ ವ್ಯಾಪ್ತಿಗೆ ತರಬೇಕು. ಅದು ಸಾಧ್ಯವಿಲ್ಲದಿದ್ದರೆ ಪತ್ತೆಯಾಗದ ಈ ಪ್ರಕರಣಗಳ ತನಿಖೆಗೆ ಪ್ರತ್ಯೇಕ ತನಿಖಾ ತಂಡ ರಚಿಸಬೇಕು ಎಂದು ನಾವು ಆಗ್ರಹಿಸುತ್ತೇವೆ.
ದಲಿತ ಕಾರ್ಮಿಕರ ಮನೆ ಹಕ್ಕು ಮತ್ತು ಸಂಬಳ
ಧರ್ಮಸ್ಥಳದಲ್ಲಿ ನೂರಾರು ದಲಿತರು ಸ್ವಚ್ಚತಾ ಕಾರ್ಮಿಕರಾಗಿ ತಲೆತಲಾಂತರಗಳಿಂದ ದುಡಿಯುತ್ತಿದ್ದಾರೆ. ಈ ರೀತಿ ದುಡಿಯುವ ಸ್ವಚ್ಚತಾ ಕಾರ್ಮಿಕರಿಗೆಂದೇ ಧರ್ಮಸ್ಥಳದಲ್ಲಿ ಅಶೋಕ ನಗರ ದಲಿತ ಕಾಲನಿಯನ್ನು ನಿರ್ಮಿಸಲಾಗಿದೆ. ರಾಜ್ಯಸಭಾ ಸಂಸದರೂ ಆಗಿರುವ ವೀರೇಂದ್ರ ಹೆಗ್ಗಡೆಯವರ ಬೀಡು ಮನೆಯ ಸನಿಹವೇ ಇರುವ ಈ ದಲಿತ ಕಾಲನಿಯ ನಿವಾಸಿಗಳ ಸಂಕಷ್ಟ ಹೇಳತೀರದು. ತಲೆತಲಾಂತರಗಳಿಂದ ಅಶೋಕನಗರದಲ್ಲೇ ವಾಸಿಸುತ್ತಿದ್ದರೂ ಇನ್ನೂ ಮನೆಯ ಅಡಿಸ್ಥಳವನ್ನು ದಲಿತರ ಹೆಸರಿಗೆ ಹಕ್ಕು ಪತ್ರ ನೀಡಲಾಗಿಲ್ಲ. ಸ್ವಚ್ಚತಾ ಕಾರ್ಮಿಕರು ಕುಸಿದಿರುವ, ತೂತು ಬಿದ್ದಿರುವ ಮನೆಗಳಲ್ಲಿ ಹೀನಾಯ ಸ್ಥಿತಿಯಲ್ಲಿ ವಾಸಿಸುತ್ತಿದ್ದಾರೆ. ನಮ್ಮ ಸಂಸ್ಥೆಯಲ್ಲಿ 75 ಸಾವಿರ ನೌಕರರು ಇದ್ದಾರೆ ಎಂದು ನ್ಯಾಯಾಲಯಗಳಲ್ಲಿ ಘೋಷಿಸಿಕೊಂಡಿರುವ ಟ್ರಸ್ಟ್, ಸ್ವಚ್ಚತಾ ಕಾರ್ಯ ಮಾಡುವ ದಲಿತರಿಗೆ ಮಾತ್ರ ಕಾರ್ಮಿಕ ಕಾಯ್ದೆಯ ಪ್ರಕಾರ ಕನಿಷ್ಠ ಸಂಬಳವನ್ನೂ ನೀಡುತ್ತಿಲ್ಲ. ಟ್ರಸ್ಟ್ ನ್ಯಾಯಾಲಯದಲ್ಲಿ ಘೋಷಿಸಿರುವ 75 ಸಾವಿರ ಕಾರ್ಮಿಕರು ಮತ್ತು ಸ್ವಚ್ಚತಾ ಕಾರ್ಮಿಕರಿಗೆ ಕಾರ್ಮಿಕ ಕಾಯ್ದೆಯಂತೆ ಸಂಬಳ ನೀಡಲಾಗುತ್ತಿದೆಯೇ ಎಂಬುದನ್ನು ಖಾತರಿಪಡಿಸಬೇಕು. ಹಾಗಾಗಿ, ಧರ್ಮಸ್ಥಳ ಅಶೋಕನಗರದ 128 ದಲಿತ ಕುಟುಂಬಗಳು, ಮುಂಡ್ರುಪಾಡಿಯ 42 ದಲಿತ ಕುಟುಂಬಗಳು ಮತ್ತು ಗ್ರಾಮದ ಇತರ ದಲಿತ ಕುಟುಂಬಗಳಿಗೆ ತಲಾ ಒಂದು ಎಕ್ರೆ ಸರಕಾರಿ ಭೂಮಿಯನ್ನು ಸರ್ಕಾರ ಕೊಡಿಸಬೇಕು. ದಲಿತರ ಮೀಸಲು ಭೂಮಿಯೂ ಸೇರಿದಂತೆ ನೂರಾರು ಎಕ್ರೆ ಸರಕಾರಿ ಭೂಮಿಯನ್ನು ಟ್ರಸ್ಟ್ ಅತಿಕ್ರಮಿಸಿದ್ದು, ಇದನ್ನು ತೆರವುಗೊಳಿಸಿ ಭೂಮಂಜೂರಾತಿ ಕಾಯ್ದೆ ಪ್ರಕಾರವೇ ದಲಿತರಿಗೆ ಕೊಡಬೇಕು. ಈ ಬಗ್ಗೆ ನಿರಂತರ ಹೋರಾಟ ನಡೆಸುತ್ತಿರುವ ‘ದಲಿತರ ಭೂಹಕ್ಕೊತ್ತಾಯ ಸಮಿತಿ’ಯ ಜೊತೆ ನಾವಿದ್ದೇವೆ.
ಭೂಕಬಳಿಕೆ
ಧರ್ಮಸ್ಥಳ ಹಾಗು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಕಬಳಿಕೆ ಪ್ರಕರಣಗಳು ವ್ಯಾಪಕವಾಗಿ ನಡೆದಿರುವ ಆರೋಪ ನಾಲ್ಕೈದು ದಶಕಗಳಿಂದ ವ್ಯಾಪಕವಾಗಿ ಕೇಳಿ ಬರುತ್ತಿದೆ. ಅಲ್ಲಿ ನಡೆದಿರುವ ಕೊಲೆ ಸಹಿತ ಅಪರಾಧ ಪ್ರಕರಣಗಳನ್ನು ಭೂ ಹಗರಣಗಳಿಂದ ಪ್ರತ್ಯೇಕಿಸಿ ನೋಡಲು ಸಾಧ್ಯವಾಗದು. ಸರಕಾರಿ ಜಮೀನುಗಳ ಕಬಳಿಕೆ, ದಲಿತರು, ಆದಿವಾಸಿಗಳು, ಹಿಂದುಳಿದವರು ಸಹಿತ ದುರ್ಬಲ ವಿಭಾಗದ ಜನರನ್ನು ಬಲವಂತವಾಗಿ ಒಕ್ಕಲೆಬ್ಬಿಸಿದ, ಅವರ ಜಮೀನು ಸ್ವಾಧೀನಪಡಿಸಿದ ಆರೋಪಗಳು ಹಲವಾರು ಇವೆ. ಹಾಗೆಯೇ, ಜಮೀನು ಹೊಂದಿರುವ ಹಲವರು ಭಯದಿಂದ ಕೃಷಿ ಚಟುವಟಿಕೆಯನ್ನು ಕೈ ಬಿಟ್ಟು ಊರಿನಿಂದಲೇ ದೂರ ಉಳಿದಿರುವ ಮಾತುಗಳು ಕೇಳಿ ಬರುತ್ತಿವೆ. ಧರ್ಮಸ್ಥಳ ಹಾಗು ಆಸುಪಾಸಿನ ಗ್ರಾಮದಲ್ಲಿ ನಾಲ್ಕೈದು ದಶಕದಲ್ಲಿ ನಡೆದಿರುವ ಜಮೀನು ಪರಭಾರೆಯನ್ನೂ ಸೇರಿಸಿ, ಭೂಕಬಳಿಕೆ ಆರೋಪಗಳನ್ನು ಸಮಗ್ರವಾದ ತನಿಖೆಗೆ ಒಳಪಡಿಸಬೇಕಿದೆ.
ದಲಿತರ ಮೀಸಲು ಭೂಮಿ ಕಬಳಿಕೆ
ಧರ್ಮಸ್ಥಳದ ಪ್ರಭಾವಿಗಳ ಟ್ರಸ್ಟ್ ನಡೆಸುತ್ತಿರುವ ಲಾಭದಾಯಕ ಶಿಕ್ಷಣ ಸಂಸ್ಥೆಗಳಿಗೆ ದಲಿತರಿಗೆ ಮೀಸಲಾಗಿರುವ ಡೀಸಿ ಮನ್ನ (DEPRESSED CLASS RESERVE) ಜಮೀನನ್ನು ಸರ್ಕಾರ ನೀಡಿದೆ. ಉಜಿರೆ ಗ್ರಾಮದಲ್ಲಿ ವಿವಿಧ ಸರ್ವೆ ನಂಬರ್ಗಳಲ್ಲಿ 43.90 ಎಕ್ರೆ ಡಿ.ಸಿ ಮನ್ನಾ(ತುಳಿತಕ್ಕೊಳಗಾದ ವರ್ಗಕ್ಕೆ ಮೀಸಲು) ಭೂಮಿಯನ್ನು ಧರ್ಮಸ್ಥಳ ಎಜುಕೇಷನಲ್ ಟ್ರಸ್ಟ್ ಮತ್ತು ಸಿದ್ಧವನ ಗುರುಕುಲಕ್ಕೆ ನೀಡಲಾಗಿದೆ. ಈ ಬಗ್ಗೆ ಪದೇ ಪದೇ ವಿವಿಧ ದಲಿತ ಸಂಘಟನೆಗಳು, ಎಡ ಸಂಘಟನೆಗಳು ಒತ್ತಾಯಿಸುತ್ತಾ ಬಂದಿವೆ. ಆ ಭೂಮಿಯನ್ನು ತಕ್ಷಣ ದಲಿತ ಸಮುದಾಯಕ್ಕೆ ನೀಡಬೇಕು. ಒಂದು ವೇಳೆ ಅದೇ ಭೂಮಿಯನ್ನು ನೀಡಲು ಅಸಾಧ್ಯವಾದರೆ ಬದಲಿ ಯೋಗ್ಯ ಭೂಮಿಯನ್ನು ಸರ್ಕಾರವು ಸಂಸ್ಥೆಯಿಂದ ವಶಕ್ಕೆ ಪಡೆದು ದಲಿತ ಸಮುದಾಯಕ್ಕೆ ಹಂಚುವ ವ್ಯವಸ್ಥೆ ಮಾಡಬೇಕು. ಉಜಿರೆಯ ಮುಖ್ಯರಸ್ತೆಯಲ್ಲಿರುವ ವಿವಿಧ ಸರ್ವೆ ನಂಬರ್ಗಳಲ್ಲಿ 42.05 ಎಕ್ರೆ ಸರ್ಕಾರಿ ಭೂಮಿಯನ್ನು ಶ್ರೀ ಧರ್ಮಸ್ಥಳ ಎಜುಕೇಷನ್ ಟ್ರಸ್ಟ್ಗೆ 2000ನೇ ವರ್ಷದಿಂದ 2020ರವರೆಗೆ ಅಂದರೆ 30 ವರ್ಷದ ಲೀಸ್ಗೆ ಎಕರೆಯೊಂದರ ವಾರ್ಷಿಕ ರೂ.420/-ರಂತೆ ಲೀಸ್ಗೆ ನೀಡಲಾಗಿದೆ. ಎಕರೆಗೆ 25 ಲಕ್ಷ ರೂ. ನೀಡಿದರೂ ಜಮೀನು ಸಿಗದ ಮುಖ್ಯರಸ್ತೆಯ ಬದಿಯ ಭೂಮಿಯನ್ನು ಪುಕ್ಕಟೆ ದರಕ್ಕೆ ನೀಡಲಾಗಿದ್ದು, ಅವಧಿಪೂರ್ವ ಈ ಒಪ್ಪಂದವನ್ನು ರದ್ದುಗೊಳಿಸಿ, ಅರ್ಹ ಭೂರಹಿತರಿಗೆ ಭೂಮಿಯನ್ನು ಹಂಚಬೇಕು.
ಮೈಕ್ರೊ ಫೈನಾನ್ಸ್ ಹಗರಣಗಳ ತನಿಖೆ
ಗ್ರಾಮೀಣಾಭಿವೃದ್ದಿ ಯೋಜನೆಯ ಹೆಸರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಅಪರಾಧ ನಡೆದಿರುವುದು, ಮೈಕ್ರೊ ಫೈನಾನ್ಸ್ ನಡೆಸಿರುವ ಆರೋಪಗಳು ವ್ಯಾಪಕವಾಗಿದೆ. ಸಾಲ ನೀಡಿಕೆ, ವಸೂಲಾತಿ ವಿಧಾನದಲ್ಲಿ ಕಾನೂನು, ನಿಯಮಗಳನ್ನು ಉಲ್ಲಂಘಿಸುವುದು, ತೀರಾ ಅವಮಾನಕಾರಿಯಾಗಿ, ಅಮಾನವೀಯವಾಗಿ ವಸೂಲಾತಿ ನಡೆಸುವ ದೂರುಗಳು ರಾಜ್ಯದ ಹಲವು ಭಾಗಗಳಲ್ಲಿ ಕೇಳಿಬಂದಿವೆ. ವಸೂಲಾತಿಯ ಸಂದರ್ಭದ ಅಪಮಾನ, ಹಿಂಸೆ ಭರಿಸಲಾಗದೆ ಆತ್ಮಹತ್ಯೆಗಳು ಘಟಿಸಿರುವುದು, ಮರ ಮಟ್ಟು ಸಹಿತ ಅವರ ಸ್ವತ್ತುಗಳನ್ನು ಬಲವಂತವಾಗಿ ಸ್ವಾಧೀನಪಡಿಸಿರುವ ಪ್ರಕರಣಗಳು ಹತ್ತಾರು ಸಂಖ್ಯೆಯಲ್ಲಿ ನಡೆದಿದೆ. ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.
ಇವು ಗಂಭೀರವಾದ ಆರ್ಥಿಕ ಅಪರಾಧಗಳಾಗಿವೆ. ಗ್ರಾಮೀಣ ಭಾಗದಲ್ಲಿ ಶ್ರಮಿಕ ಜನರ, ಕೂಲಿಕಾರರ, ಸಣ್ಣ ರೈತರು ಸೇರಿದಂತೆ ಜನ ಸಾಮಾನ್ಯರ ನೆಮ್ಮದಿಗೆ ಭಂಗ ತಂದಿದೆ. ಈ ಕುರಿತು ಸರಿಯಾದ ತನಿಖೆ ಅಗತ್ಯ ಇದೆ.
ನೂರಾರು ಅಸಹಜ ಸಾವು, ಕೊಲೆಯ ಶವಗಳ ಅಕ್ರಮ ದಫನ
ಧರ್ಮಸ್ಥಳ ವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳಲ್ಲಿ ನೂರಾರು ಅಸಹಜ ಸಾವುಗಳು, ಆತ್ಮಹತ್ಯೆಗಳು, ಕೊಲೆಗಳು ನಡೆದಿವೆ ಎಂದು ಚರ್ಚೆಗಳು ನಡೆಯುತ್ತಿದ್ದಂತೆ, ಧರ್ಮಸ್ಥಳ ಗ್ರಾಮ ಪಂಚಾಯತ್ ನೀಡಿರುವ ಮಾಹಿತಿ ಹಕ್ಕು ದಾಖಲೆಗಳು ನಮ್ಮ ಆತಂಕವನ್ನು ಇಮ್ಮಡಿಗೊಳಿಸಿದೆ.
15 ವರ್ಷದ ಹೆಣ್ಣು ಮಗುವಿನ ಶವ ದೇವಸ್ಥಾನದ ಸ್ನಾನಘಟ್ಟದಲ್ಲಿ ಪತ್ತೆಯಾದ ದಿನವೇ ಪೋಸ್ಟ್ಮಾರ್ಟಂ ನಡೆಸಿ ದಫನ ಮಾಡಲು ಗ್ರಾಮ ಪಂಚಾಯತ್ಗೆ ಪೊಲೀಸರು ಸೂಚಿಸಿದ್ದಾರೆ. ಮೃತ ಹೆಣ್ಣು ಮಗುವಿನ ಪೊಷಕರ ಪತ್ತೆಗೆ ಪೊಲೀಸರು ಕಾನೂನಿನ ಯಾವ ಕ್ರಮವನ್ನೂ ಕೈಗೊಳ್ಳದೇ, ಕನಿಷ್ಠ ಒಂದೆರಡು ದಿನ ಕಾಯುವ ವ್ಯವದಾನವೂ ಇಲ್ಲದೇ ಶವ ಪತ್ತೆಯಾದ ದಿನವೇ ತರಾತುರಿಯಲ್ಲಿ ಕಾನೂನು ಮೀರಿ ದಫನ ಮಾಡಿರುವ ದಾಖಲೆ ಹಲವು ಅನುಮಾನಗಳನ್ನೂ, ಅಮಾನವೀಯತೆಯ ಬಗೆಗಿನ ಆಕ್ರೋಶವನ್ನೂ ತರಿಸುತ್ತದೆ. ಇನ್ನೊಂದು ದಾಖಲೆ ಹೇಳುವ ಪ್ರಕಾರ, ಸುಮಾರು 45 ವರ್ಷದ ಮಹಿಳೆಯನ್ನು ಧರ್ಮಸ್ಥಳ ದೇವಸ್ಥಾನದ ಶರಾವತಿ ಲಾಡ್ಜ್ನಲ್ಲಿ ಕೊಲೆ ಮಾಡಲಾಗಿದ್ದು, ಪೊಲೀಸರು ಆ ಮಹಿಳೆಯನ್ನು ಅಪರಿಚಿತೆ ಎಂದು ಘೋಷಿಸಿದ್ದಾರೆ. ವಸತಿಗೃಹದಲ್ಲಿ ಪತ್ತೆಯಾದ ಮಹಿಳೆಯ ಅಪರಿಚಿತೆ ಆಗಲು ಹೇಗೆ ಸಾಧ್ಯ? ಅದಲ್ಲದೇ, ಪತ್ತೆಯಾದ ಬಹುತೇಕ ಎಲ್ಲಾ ಶವಗಳನ್ನು ಹೂಳಲು ಸೂಚಿಸಿರುವ ಪೊಲೀಸರು, ಹೂಳಲೇಬೇಕಾದ ಕೊಲೆಯಾದ ಮಹಿಳೆಯ ಶವವನ್ನು ದಹನ ಮಾಡಲು ಸೂಚಿಸುತ್ತಾರೆ. ಗ್ರಾಮ ಪಂಚಾಯತ್ನವರು ಸಹಜವೆಂಬಂತೆ ಹೂತು ಹಾಕಬಹುದು ಎಂಬ ಕಾರಣಕ್ಕಾಗಿ ಪೊಲೀಸರು ದಫನ ಎಂದು ಬರೆದು ಆವರಣದಲ್ಲಿ ಸ್ಪಷ್ಟವಾಗಿ ದಹನ ಎಂದು ಬರೆಯುವ ಮೂಲಕ ಶವದ ಸಾಕ್ಷ್ಯ ನಾಶಮಾಡಿದ್ದಾರೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇಂತಹ ಹಲವು ದಾಖಲೆಗಳು ಆರ್ಟಿಐ ಮೂಲಕ ಅಧಿಕೃತವಾಗಿ ಲಭ್ಯವಾಗಿದ್ದು, ಎಸ್ಐಟಿ ರಚನೆಯ ಸಂಬಂಧ ಹೊರಡಿಸಲಾದ ಆದೇಶದಲ್ಲಿರುವ ನಿಯಮಗಳಂತೆ ಇವೆಲ್ಲವೂ ತನಿಖೆಯಾಗಬೇಕಿದೆ.
ಸರ್ಕಾರ ಯಾವುದೇ ಪ್ರಭಾವಿಗಳ ಒತ್ತಡಕ್ಕೆ ಮಣಿಯಬಾರದು. ವಿರೋಧ ಪಕ್ಷವಾಗಿರುವ ಬಿಜೆಪಿಯು ಬಹಿರಂಗವಾಗಿ ಎಸ್ಐಟಿ ತನಿಖೆ ಮತ್ತು ಸಾಕ್ಷಿ/ದೂರುದಾರರಿಗೆ ಬೆದರಿಕೆ ಒಡ್ಡುತ್ತಿದ್ದು ಅದನ್ನು ನಿಲ್ಲಿಸಲು ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಸಂತ್ರಸ್ತರ ಪರವಾಗಿ ಕೆಲಸ ಮಾಡುವುದು ಸರ್ಕಾರದ ಸಾಂವಿಧಾನಿಕ ಕರ್ತವ್ಯವಾಗಿದೆ. ಸರ್ಕಾರ ಮಾಡಬೇಕಿರುವ ಕೆಲಸವನ್ನು ಜನಪರ ಹೋರಾಟಗಾರರು ಮಾಡುತ್ತಿದ್ದಾರೆ. ಆದರೆ ಸರ್ಕಾರದ ಕೆಲ ಪ್ರಭಾವಿಗಳು ಮತ್ತು ಪೊಲೀಸರು ಹೋರಾಟಗಾರರ ವಿರುದ್ಧ ಪ್ರಕರಣ ದಾಖಲಿಸುವ ಬೆದರಿಕೆ ಒಡ್ಡುವ ಮೂಲಕ ದೂರುದಾರರ, ಸಂತ್ರಸ್ತರ ಧ್ವನಿ ಅಡಗಿಸಲು ಪ್ರಯತ್ನಿಸುತ್ತಿದ್ದಾರೆ. ಇವೆಲ್ಲವನ್ನೂ ನಿಯಂತ್ರಿಸಿ, ಎಸ್ಐಟಿ ತನಿಖೆ ಪ್ರಾಮಾಣಿಕ, ಪಾರದರ್ಶಕವಾಗಿ ನಡೆಯುವಂತೆ ಕ್ರಮ ವಹಿಸಬೇಕು. ದೂರುದಾರನ ಹೇಳಿಕೆಯಷ್ಟು ಅಸ್ತಿಪಂಜರ ಸಿಕ್ಕಿಲ್ಲ ಎನ್ನುವ ಕಾರಣಕ್ಕಾಗಿ ಎಸ್ಐಟಿ ತನಿಖೆಯನ್ನು ನಿಧಾನಿಸಕೂಡದು. 20 ವರ್ಷಗಳ ಅಸಹಜ ಸಾವು ಪ್ರಕರಣಗಳನ್ನು ಠಾಣೆ, ಗ್ರಾಮ ಪಂಚಾಯತ್ ದಾಖಲೆಗಳ ಆಧಾರದಲ್ಲಿ ತನಿಖೆಯನ್ನು ತೀವ್ರಗೊಳಿಸಬೇಕು.
ಇದನ್ನೂ ಓದಿ ಧರ್ಮಸ್ಥಳ ಪ್ರಕರಣಗಳ ಸಮಗ್ರ ತನಿಖೆಗೆ ಎಡಪಕ್ಷಗಳ ಒತ್ತಾಯ
ಹೀಗಾಗಿ ಕಳೆದ 20 ವರ್ಷಗಳ ಅತ್ಯಾಚಾರ, ಅಸಹಜ ಸಾವು, ಕೊಲೆ ಪ್ರಕರಣಗಳನ್ನು ಎಸ್ಐಟಿ ರಚನೆಯ ಸಂಬಂಧ ಹೊರಡಿಸಲಾದ ಆದೇಶದಲ್ಲಿ ಇರುವಂತೆಯೇ ಪರಿಪೂರ್ಣವಾದ ತನಿಖೆಗೆ ಒಳಪಡಿಸಬೇಕು. ಪದ್ಮಲತಾ, ವೇದವಲ್ಲಿ, ಮಾವುತ ನಾರಾಯಣ, ಯಮುನ, ಸೌಜನ್ಯ ಕೊಲೆ ಪ್ರಕರಣಗಳು, ಭೂಕಬಳಿಕೆ, ಮೈಕ್ರೊ ಫೈನಾನ್ಸ್ ದೌರ್ಜನ್ಯಗಳು, ದಲಿತರ ಮೀಸಲು ಭೂಮಿ ಕಬಳಿಕೆ, ಆರ್ಥಿಕ ಅಪರಾಧದ ಆರೋಪದ ಪ್ರಕರಣಗಳನ್ನು ಈಗ ರಚಿಸಲಾಗಿರುವ SIT ವಹಿಸಲು ಸಮಸ್ಯೆಗಳಿದ್ದಲ್ಲಿ ಪ್ರತ್ಯೇಕವಾದ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಪಡಿಸುತ್ತೇವೆ.