ಬಿಹಾರದಲ್ಲಿ ಆಗಸ್ಟ್ 17ರಿಂದ ಆರಂಭಗೊಳ್ಳುವ ‘ಮತದಾರ ಅಧಿಕಾರ ಯಾತ್ರೆ’ ಮೂಲಕ ದೇಶವ್ಯಾಪಿ “ಮತದಾನ ಕಳ್ಳತನ” ವಿರುದ್ಧ ನೇರ ಹೋರಾಟಕ್ಕೆ ಇಳಿಯುತ್ತಿದ್ದೇವೆ ಎಂದು ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಘೋಷಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ರಾಹುಲ್ ಗಾಂಧಿ ವಿಡಿಯೋ ಸಂದೇಶ ಹಂಚಿಕೊಂಡಿದ್ದು, ‘ಆಗಸ್ಟ್ 17ರಿಂದ ನಾವು ಬಿಹಾರದ ನೆಲದಲ್ಲಿ ಮತ ಕಳ್ಳತನದ ವಿರುದ್ಧ ನೇರ ಹೋರಾಟಕ್ಕಿಳಿಯಲಿದ್ದೇವೆ’ ಎಂದು ಹೇಳಿದ್ದಾರೆ.
“ಇದು ಕೇವಲ ಚುನಾವಣೆಯ ವಿಷಯವಲ್ಲ. ಪ್ರಜಾಪ್ರಭುತ್ವ ಸಂವಿಧಾನ ಹಾಗೂ ‘ಒಬ್ಬ ವ್ಯಕ್ತಿ – ಒಂದು ಮತ’ ತತ್ವವನ್ನು ರಕ್ಷಿಸಲು ನಡೆಯುತ್ತಿರುವ ನಿರ್ಣಾಯಕ ಹೋರಾಟ” ಎಂದು ತಿಳಿಸಿದ್ದಾರೆ.
“ದೇಶಾದ್ಯಂತ ಮತದಾರರ ಪಟ್ಟಿಯಲ್ಲಿನ ಶುದ್ದೀಕರಣವೇ ಈ ಅಭಿಯಾನದ ಪ್ರಮುಖ ಗುರಿ. ಯುವಕರು, ಕಾರ್ಮಿಕರು, ರೈತರು ಸೇರಿದಂತೆ ದೇಶದ ಪ್ರತಿಯೊಬ್ಬ ನಾಗರಿಕರು ಈ ಹೋರಾಟದಲ್ಲಿ ಭಾಗವಹಿಸಬೇಕು. ಬಿಹಾರದ ಮಣ್ಣಿನಿಂದ ಪ್ರಾರಂಭವಾಗುವ ಈ ಯಾತ್ರೆ ಸೆಪ್ಟೆಂಬರ್ 1ರಂದು ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆಯುವ ಮಹಾ ರ್ಯಾಲಿಯೊಂದಿಗೆ ಮುಕ್ತಾಯಗೊಳ್ಳಲಿದೆ. ಈ ಬಾರಿ, ಮತ ಕಳ್ಳರ ಸೋಲು – ಜನರ ಮತ್ತು ಸಂವಿಧಾನದ ಗೆಲುವು” ಎಂದು ಗಾಂಧಿ ಹೇಳಿದ್ದಾರೆ.
“ದೇಶದ ಪ್ರತಿಯೊಂದು ಮತದಾರರ ಪಟ್ಟಿಯೂ ಸರಿಯಾಗುವವರೆಗೂ ನಾವು ಹೋರಾಟವನ್ನು ನಿಲ್ಲಿಸುವುದಿಲ್ಲ. ಯುವಕರು, ಕಾರ್ಮಿಕರು, ರೈತರು ಮತ್ತು ಪ್ರತಿಯೊಬ್ಬ ನಾಗರಿಕರೂ ಈ ಹೋರಾಟದಲ್ಲಿ ಕೈಜೋಡಿಸಬೇಕು” ಎಂದು ಮನವಿ ಮಾಡಿದ್ದಾರೆ.