ರಾಮನಗರ ಜಿಲ್ಲೆಯ ಬಿಡದಿ ಸಮೀಪದ ಟಯೋಟ ಕಾರ್ಖಾನೆ ಸ್ಥಾಪನೆಗಾಗಿ ಭೂಮಿ ನೀಡಿ ಭೂ ಪರಿಹಾರಕ್ಕಾಗಿ 25 ವರ್ಷಗಳ ಕಾಲ ಅಲೆದಾಡಿದ್ದ ವಯೋವೃದ್ಧರಿಗೆ ಕೊನೆಗೂ ಕೆಐಎಡಿಬಿ ಪರಿಹಾರ ಮಂಜೂರು ಮಾಡಿದೆ.
ಆದರೆ ಪರಿಹಾರದ ಸವಿಯುಣ್ಣಬೇಕಿದ್ದ ರೈತರಲ್ಲಿ ಇದೀಗ ಬದುಕುಳಿದಿರುವುದು ಕೇವಲ ಇಬ್ಬರು ಮಾತ್ರ. ಪರಿಹಾರದ ಕನಸಿನೊಂದಿಗೆ ಉಳಿದವರು ಮಣ್ಣಾಗಿದ್ದಾರೆ. 84 ವರ್ಷದ ಬೋಜ ತಿಮ್ಮಯ್ಯ, 81 ವರ್ಷದ ಪತ್ತಿ ಕುಮಾರಸ್ವಾಮಿ ಜೀವಂತವಾಗಿದ್ದಾರೆ. ಪರಿಹಾರಕ್ಕಾಗಿ ಪರಿತಪಿಸಿ ಇಹಲೋಕ ತ್ಯಜಿಸಿದ ಕೃಷಿಕ ಸ್ನೇಹಿತರನ್ನು ನೆನೆದು ಇಂದು ಕೆಐಎಡಿಬಿ ಕಚೇರಿಗೆ ಬಂದಿದ್ದ ಈ ವಯೋವೃದ್ಧರು ಗದ್ಗದಿತರಾದರು.
ಹೈಕೋರ್ಟ್, ಸುಪ್ರೀಂ ಕೋರ್ಟ್ ಒಳಗೊಂಡಂತೆ ಬಹುತೇಕ ಎಲ್ಲ ನ್ಯಾಯಾಲಯಗಳು ತಕ್ಷಣವೇ ಪರಿಹಾರ ನೀಡುವಂತೆ ನೀಡಿದ ಆದೇಶಗಳಿಗೆ ಕೆಐಎಡಿಬಿ ಈವರೆಗೆ ಕ್ಯಾರೆ ಎಂದಿರಲಿಲ್ಲ. ಕೆಐಎಡಿಬಿ ಜಪ್ತಿ ಆದೇಶ ನೀಡುತ್ತಿದ್ದಂತೆ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಪರಿಹಾರ ಬಿಡುಗಡೆ ಮಾಡಿದೆ.
ಪರಿಹಾರ ನೀಡುವಂತೆ ರಾಮನಗರ ಜಿಲ್ಲಾ ನ್ಯಾಯಾಲಯ, ಹೈಕೋರ್ಟ್, ಸುಪ್ರೀಂಗಳು ನೀಡಿದ ಆದೇಶಗಳು ಜಾರಿಯಾಗಿರಲಿಲ್ಲ. ಎರಡು ತಿಂಗಳ ಹಿಂದೆ ಸುಪ್ರೀಂ ಕೋರ್ಟ್ ಮತ್ತೊಮ್ಮೆ ಖಡಕ್ ಆದೇಶ ನೀಡಿ ಎರಡು ತಿಂಗಳೊಳಗಾಗಿ ಪರಿಹಾರದ ಮೊತ್ತವನ್ನು ನ್ಯಾಯಾಲಯದಲ್ಲಿ ಠೇವಣಿ ಇಡುವಂತೆ ಸೂಚಿಸಿತ್ತು. ಪರಿಹಾರ ವಿಳಂಬವಾದ ಕಾರಣ ಮಹಾರಾಣಿ ಕಾಲೇಜು ಪಕ್ಕದಲ್ಲಿರುವ ಕೆಐಎಡಿಬಿ ಕಚೇರಿಯನ್ನು ಜಪ್ತಿ ಮಾಡುವಂತೆ ಆದೇಶಿಸಿತ್ತು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಸೊಕ್ಕು-ಸರ್ವಾಧಿಕಾರ-ಮೆದು ಹಿಂದುತ್ವದ ದಾರಿಯನ್ನು ತೊರೆಯುವರೇ ಕೇಜ್ರೀವಾಲ್?
ಇಂದು ಕೋರ್ಟ್ ಅಮೀನ್ ಅವರ ಜೊತೆ ಬಿಡದಿ ರೈತರು ಕಚೇರಿ ಜಪ್ತಿಗೆ ಮುಂದಾದಾಗ 38 ರೈತರಿಗೆ 18.47 ಕೋಟಿ ರೂಪಾಯಿ ಪರಿಹಾರವನ್ನು ನ್ಯಾಯಾಲಯದಲ್ಲಿ ಠೇವಣಿ ಇಟ್ಟಿರುವುದಾಗಿ ದಾಖಲೆಗಳನ್ನು ಒದಗಿಸಿದರು. ಇದರಿಂದ ಕಚೇರಿ ಜಪ್ತಿ ಮಾಡಲು ಮುಂದಾಗಿದ್ದ ರೈತರು ಕೆಐಎಡಿಬಿ ಆದೇಶ ಪ್ರತಿ ಪಡೆದು ವಾಪಸ್ ಆದರು.
ರೈತರಿಗೆ ಪರಿಹಾರ ಒದಗಿಸಲೇಬೇಕೆಂದು ಹಠತೊಟ್ಟು ಎರಡೂವರೆ ದಶಕಗಳಿಂದ ತ್ರಿವಿಕ್ರಮನಂತೆ ಹೋರಾಟ ನಡೆಸಿದ್ದ ಕೋಟೆ ಶಿವಣ್ಣ 8 ತಿಂಗಳ ಹಿಂದೆ ಮೃತಪಟ್ಟಿದ್ದರು. ಅವರ ಪುತ್ರ ಗಿರೀಶ್ ಶಿವಣ್ಣ ಇದೀಗ ಹೋರಾಟದ ನೇತೃತ್ವ ವಹಿಸಿಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಗಿರೀಶ್ ಶಿವಣ್ಣ, ನಮ್ಮ ತಂದೆ ಬದುಕಿದ್ದಾಗ ಪರಿಹಾರದ ಹಣ ದೊರೆತಿದ್ದರೆ ಹೋರಾಟ ಸಾರ್ಥಕವಾಗುತ್ತಿತ್ತು. ಹೃದಯ ಶೂನ್ಯ ಅಧಿಕಾರಿಗಳು ಮತ್ತು ಹೃದಯಹೀನ ಸರ್ಕಾರ ಪರಿಹಾರ ನೀಡುವುದನ್ನು ವಿಳಂಬ ಮಾಡಿದೆ ಎಂದರು.
ಕೆಐಎಡಿಬಿ 1998 ರಲ್ಲಿ ಭೂ ಸ್ವಾಧೀನಮಾಡಿಕೊಂಡಿತ್ತು. ಶಾನಮಂಗಲ, ಬಾನಂದೂರು, ಅಬ್ಬಿನಕುಂಟೆ ಗ್ರಾಮಗಳ ಬಹುತೇಕ ಸಣ್ಣ ಮತ್ತು ಅತಿ ಸಣ್ಣ ರೈತರು ಕಾರ್ಖಾನೆ ಸ್ಥಾಪನೆಗೆ ಭೂಮಿ ನೀಡಿದ್ದರು. 2003 ರ ಆಗಸ್ಟ್ 26 ರಂದು ಹೈಕೋರ್ಟ್ ರೈತರಿಗೆ ಪರಿಹಾರ ನೀಡುವಂತೆ ಸ್ಪಷ್ಟವಾಗಿ ನಿರ್ದೇಶನ ನೀಡಿತ್ತು. ಆದರೆ ಕೆಐಎಡಿಬಿ ಸಬೂಬುಗಳನ್ನು ಹೇಳುತ್ತಿತ್ತು.
ಆದರೆ ಸುಪ್ರೀಂ ಕೋರ್ಟ್ ಬಡ್ಡಿಸಮೇತ ಪರಿಹಾರ ನೀಡುವಂತೆ ನೀಡಿದ ಆದೇಶದ ನಂತರ ಎಚ್ಚೆತ್ತುಕೊಂಡ ಕೆಐಎಡಿಬಿ ಅಧಿಕಾರಿಗಳು ಪರಿಹಾರ ಮೊತ್ತವನ್ನು ನ್ಯಾಯಾಲಯದಲ್ಲಿ ಠೇವಣಿ ಇರಿಸಿದೆ. ತಬರನ ಕಥೆಯಂತಾಗಿದ್ದ ಕೃಷಿಕರ ಗೋಳು ಇದೀಗ ತಾರ್ಕಕ ಅಂತ್ಯಕ್ಕೆ ತಲುಪಿದೆ.