ಕಲಬುರಗಿಯ ಕೇಂದ್ರ ಕಾರಾಗೃಹದ ಅಧೀಕ್ಷಕಿ ಅನಿತಾ ಅವರ ಕಾರನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ಪ್ರಕರಣ ಸಂಬಂಧ ಇಬ್ಬರು ಮಹಿಳೆಯರು ಸೇರಿ 9 ಕೈದಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮುಸ್ತಫಾ, ನಸೀರ್, ಬಚ್ಚನ್, ಅಲ್ತಾಫ್, ದೇವರಾಜ್, ನಾಗರಾಜ್, ಶ್ರೀಕಾಂತ್ ಸೇರಿ 9 ಕೈದಿಗಳ ವಿರುದ್ಧ ಅಧೀಕ್ಷಕಿ ಅನಿತಾ ಅವರು ಎಫ್ಐಆರ್ ದಾಖಲಿಸಿದ್ದಾರೆ.
ಜೈಲಿನಲ್ಲಿ ಬೀಡಿ, ಗುಟ್ಕಾ ಸಿಗರೇಟ್ ಬಂದ್ ಮಾಡಿದ್ದಕ್ಕೆ ಅನಿತಾ ವಿರುದ್ಧ ಕೈದಿಗಳು ಪ್ರತಿಭಟನೆ ನಡೆಸಿದ್ದರು. ಆ ಬಳಿಕ ದುಷ್ಕರ್ಮಿಯೊಬ್ಬನಿಂದ ಆಡಿಯೋ ರೂಪದಲ್ಲಿ ಬೆದರಿಕೆ ಸಂದೇಶ ಬಂದಿತ್ತು. ಇದನ್ನು ಜೈಲಿನಲ್ಲಿರುವ ಕೈದಿಗಳೇ ಕಳುಹಿಸಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿತ್ತು. ಇದೀಗ ಈ ಪ್ರಕರಣದ ಹಿಂದೆ 9 ಜನ ಕೈದಿಗಳ ಕೈವಾಡ ಇರುವುದಾಗಿ ಎಫ್ಐಆರ್ನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | 1991ರ ಕಾನೂನನ್ನು ಕಡೆಗಣಿಸುತ್ತವೆ ಧಾರ್ಮಿಕ ಸ್ಥಳಗಳ ಸಮೀಕ್ಷೆ ಮತ್ತು ದಾವೆಗಳು
ಕಲಬುರಗಿ ಸೆಂಟ್ರಲ್ ಜೈಲಿನ ಅಧೀಕ್ಷಕಿ ಅನಿತಾ ಅವರ ಕಾರನ್ನು ಸ್ಫೋಟಿಸುವುದಾಗಿ ದುಷ್ಕರ್ಮಿಯೊಬ್ಬ ಆಡಿಯೋ ಸಂದೇಶ ಕಳುಹಿಸಿದ್ದ ಪ್ರಕರಣ ಇದೇ ನವೆಂಬರ್ 28ರಂದು ಬೆಳಕಿಗೆ ಬಂದಿತ್ತು. ಅನಾಮಧೇಯ ವ್ಯಕ್ತಿಯಿಂದ ಕಲಬುರಗಿ ನಗರದ ಪೊಲೀಸ್ ಇನ್ಸೆಪೆಕ್ಟರ್ ಮೊಬೈಲ್ಗೆ ಬೆದರಿಕೆ ಸಂದೇಶ ಬಂದಿತ್ತು. ಈ ಮಾಹಿತಿಯನ್ನು ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಇದರಿಂದ ಅಲರ್ಟ್ ಆದ ಅಧಿಕಾರಿಗಳು ಕಾರನ್ನು ಸಿಸಿಟಿವಿ ಇರುವೆಡೆ ಮಾತ್ರ ಪಾರ್ಕ್ ಮಾಡುವಂತೆ ಕಾರು ಚಾಲಕನಿಗೆ ಸೂಚಿಸಿದ್ದರು.
ಕಳೆದ ಒಂದೂವರೆ ತಿಂಗಳ ಹಿಂದೆಯಷ್ಟೆ ಕಲಬುರಗಿ ಜೈಲಿಗೆ ಅನಿತಾ ಅವರು ವರ್ಗಾವಣೆಯಾಗಿ ಬಂದಿದ್ದರು. ಜೈಲಿನಲ್ಲಿ ಅಧಿಕಾರ ವಹಿಸಿಕೊಂಡ ದಿನವೆ ಕೈದಿಗಳ ವಿಲಾಸಿ ಜೀವನ ಅನಾವರಣ ಆಗಿತ್ತು. ಇದನ್ನು ಗಂಭೀರವಾಗಿ ಅವರು ಪರಿಗಣಿಸಿದ್ದರು. ಇದಾದ ಬಳಿಕ ಕಾರಾಗೃಹ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿತ್ತು. ಜೈಲಿನಲ್ಲಿ ಬೀಡಿ, ಗುಟ್ಕಾ ಸಿಗರೇಟ್ ಬಂದ್ ಮಾಡಿದ್ದರು. ಇದರಿಂದ ಕೆರಳಿದ ಕೈದಿಗಳು ಅನಿತಾ ವಿರುದ್ಧ ಪ್ರತಿಭಟನೆ ಮಾಡಿದ್ದರು.
