ಒಳಮೀಸಲಾತಿ ಜಾರಿಗೆ ತರಲು ನಮ್ಮ ಸರ್ಕಾರ ಬದ್ಧವಾಗಿದೆ. ಒಳಮೀಸಲಾತಿಗೆ ಒಳಪಡುವ ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಮೂರು ತಿಂಗಳೊಳಗೆ ಮಹತ್ವದ ನಿರ್ಧಾರವನ್ನು ಪ್ರಕಟಿಸಲಿದ್ದಾರೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ ಹೆಚ್ ಮುನಿಯಪ್ಪ ಭರವಸೆ ವ್ಯಕ್ತಪಡಿಸಿದರು.
ಒಳಮೀಸಲಾತಿ ಅನುಷ್ಠಾನ ಕುರಿತು ಸೋಮವಾರ ಕೆ ಹೆಚ್ ಮುನಿಯಪ್ಪ ಅವರ ನೇತೃತ್ವದಲ್ಲಿ ಪರಿಶಿಷ್ಟ ಜಾತಿಯ ಎಲ್ಲ ಸಚಿವರು ಹಾಗೂ ಶಾಸಕರು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.
“ಸಮಾಜ ಕಲ್ಯಾಣ ಇಲಾಖೆ ಸಚಿವರ ಗೃಹ ಕಚೇರಿಯಲ್ಲಿ ಪರಿಶಿಷ್ಠ ಜಾತಿಯ ಸಚಿವರಾದ ಡಾ. ಜಿ. ಪರಮೇಶ್ವರ್, ಹೆಚ್.ಸಿ. ಮಹದೇವಪ್ಪ, ಆರ್.ಬಿ. ತಿಮ್ಮಾಪೂರ, ಪ್ರಿಯಾಂಕ್ ಖರ್ಗೆ, ಶಿವರಾಜ ತಂಗಡಗಿ ಮತ್ತು ಶಾಸಕರಾದ ಅಭಯ್ಯ ಪ್ರಸಾದ್, ನರೇಂದ್ರಸ್ವಾಮಿ, ರೂಪಕಲಾ.ಎಂ, ಎ.ಆರ್. ಕೃಷ್ಣಮೂರ್ತಿ, ನಯಾನ ಮೋಟಮ್ಮ, ಕೆ.ಎಸ್. ಬಸವಂತಪ್ಪ, ಎ.ಸಿ ಶ್ರೀನಿವಾಸ್, ದರ್ಶನ್ ಧ್ರುವನಾರಾಯಣ, ಡಾ. ತಿಮ್ಮಯ್ಯ, ಸುಧಾಮ ದಾಸ್ ಮುಂತಾದ ನಾಯಕರು ಸಭೆ ಸೇರಿ ಒಳಮೀಸಲಾತಿ ಜಾರಿಗೆ ಗೊಳಿಸಲು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ್ದೇವೆ” ಎಂದು ಸ್ಪಷ್ಟಪಡಿಸಿದರು.
“ಕೆಲವು ಹೋರಾಟಗಾರರು ಹಾಗೂ ವಿರೋಧ ಪಕ್ಷಗಳು ರಾಜಕೀಯ ಲಾಭಕ್ಕಾಗಿ ನಮ್ಮ ಸರ್ಕಾರದ ವಿರುದ್ಧ ಭ್ರಾಂತಿ ಮೂಡಿಸುವ ಹಾಗೂ ತಪ್ಪು ಮಾಹಿತಿ ಹರಡುವ ಕೆಲಸ ಮಾಡುತ್ತಿರುವುದು ವಿಷಾದಕರವಾಗಿದೆ. ನಮ್ಮ ನಾಯಕರ ವಿರುದ್ಧ ಅಪಮಾನಕಾರಕ ಶಬ್ದಗಳನ್ನು ಬಳಸುವುದು ಸೂಕ್ತವಲ್ಲ. ಸಮುದಾಯದ ಸಂಘಟನೆಗಳು ಹಾಗೂ ಸಂಘ – ಸಂಸ್ಥೆಗಳು ಯಾವುದೇ ರೀತಿಯ ಅಶಾಂತಿ ಮೂಡಿಸುವ ಹೋರಾಟಗಳಿಂದ ದೂರವಿರಬೇಕು ಎಂದು ಮನವಿ ಮಾಡುವೆ” ಎಂದರು.
“ಒಳಮೀಸಲಾತಿಗಾಗಿ ಸುದೀರ್ಘ 30 ವರ್ಷಗಳ ಹೋರಾಟ ನಡೆದಿದೆ. ನಮಗೆ ನಿಜವಾದ ಸ್ವಾತಂತ್ರ್ಯ ಸಿಕ್ಕೇ ಇಲ್ಲ. ಸಮುದಾಯದ ಹಲವು ಸಂಘ –ಸಂಸ್ಥೆಗಳ ಹೋರಾಟಕ್ಕೆ ಸುಪ್ರೀಂ ಕೋರ್ಟ್ ಆದೇಶ ನಿಟ್ಟುಸಿರು ಬಿಡುವಂತಾಗಿದೆ. ಒಳಮೀಸಲಾತಿ ಜಾರಿಗಾಗಿ ಮುಂದಿನ ಮೂರು ತಿಂಗಳವರೆಗೂ ಶಾಂತಿಯಿಂದ ಇರಬೇಕು” ಎಂದು ವಿನಂತಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಭಾರತಕ್ಕೆ ಬೇಕಿರುವುದು ಬಣ್ಣಗಳ ಸಂಗಮ, ಸಂಘರ್ಷದ ಸಂಭ್ರಮವಲ್ಲ!
“ಸಚಿವ ಸಂಪುಟದಲ್ಲಿ ಒಳಮೀಸಲಾತಿ ಜಾರಿಗೆ ತಾತ್ವಿಕ ಒಪ್ಪಿಗೆಯನ್ನು ನೀಡಿದ್ದು, ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಏಕ ಸದಸ್ಯ ಆಯೋಗ ರಚಿಸಲಾಗಿದೆ. ಈ ಆಯೋಗ ಮೂರು ತಿಂಗಳೊಳಗೆ ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಲು ಸೂಚಿಸಲಾಗಿದ್ದು, ಅದರಂತೆ ಪ್ರಕ್ರಿಯೆ ಮುಂದುವರಿಯುತ್ತಿದೆ. ಒಳಮೀಸಲಾತಿ ಜಾರಿಗೆ ಬರುವವರೆಗೂ ಸರ್ಕಾರದ ಎಲ್ಲಾ ಹೊಸ ನೇಮಕಾತಿಯ ಅಧಿಸೂಚನೆ ಹೊರಡಿಸದಿರಲು ಸರ್ಕಾರ ತೀರ್ಮಾನಿಸಿದೆ” ಎಂದು ವಿವರಿಸಿದರು.
“ಒಳಮೀಸಲಾತಿಯ ಕುರಿತು ಎಸ್.ಎಂ. ಕೃಷ್ಣ ಅವರ ಅವಧಿಯಲ್ಲಿ 2005ರಲ್ಲಿ ಕಾಂಗ್ರೆಸ್ ಸರ್ಕಾರವು ಸದಾಶಿವ ಆಯೋಗವನ್ನು ರಚಿಸಿತು. ಆಯೋಗವು 2012ರಲ್ಲಿ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು. ಆದರೆ, ಕಾನೂನಿನ ತೊಡಕಿನಿಂದಾಗಿ ಸಂವಿಧಾನದ 341 ಮತ್ತು 341(A) ತಿದ್ದುಪಡಿ ಅವಶ್ಯಕತೆ ಎದುರಾಯಿತು. ಕರ್ನಾಟಕದಲ್ಲಿ 2023ರ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಸದಾಶಿವ ಆಯೋಗದ ಶಿಫಾರಸ್ಸುಗಳನ್ನು ಜಾರಿಗೆ ತರುವುದಾಗಿ ಕಾಂಗ್ರೆಸ್ ಸರ್ಕಾರ ಘೋಷಿಸಿತ್ತು. ಆದರೆ ಮಾದುಸ್ವಾಮಿ ನೇತೃತ್ವದ ಬಿಜೆಪಿ ಸರ್ಕಾರವು ಸದಾಶಿವ ಆಯೋಗವನ್ನು ರದ್ದುಪಡಿಸಿ, ಅವೈಜ್ಞಾನಿಕ ವರ್ಗೀಕರಣ ಮಾಡಿ ಶೋಷಿತ ಸಮುದಾಯದ ಹಕ್ಕುಗಳಿಗೆ ಧಕ್ಕೆ ತಂದಿತ್ತು” ಎಂದರು.
“ಮಾದಿಗ ದಂಡೋರ, ಮಾದಿಗ ಮೀಸಲಾತಿ ಹೋರಾಟ ಸಮಿತಿಗಳು, ಹಾಗೂ ದಲಿತ ಸಂಘಟನೆಗಳು ಕಳೆದ ಮೂರು ದಶಕಗಳಿಂದ ಒಳಮೀಸಲಾತಿಯ ಬಗ್ಗೆ ಹೋರಾಟ ಮಾಡುತ್ತಾ ಹಲವು ಹೋರಾಟಗಾರರ ಜೀವ ತೆತ್ತಿದ್ದಾರೆ. ಅವರ ಅವಿರತ ಹೋರಾಟದ ಫಲವಾಗಿ ಇವತ್ತು ಸುಪ್ರೀಂ ಕೋರ್ಟ್ ನಿಂದ ಆದೇಶ ಹೊರಬಂದಿದೆ. ಸುಪ್ರೀಂ ಕೋರ್ಟ್ ಏಳು ಸದಸ್ಯರ ಪೀಠವು 2024 ಆಗಸ್ಟ್ 1ರಂದು ಮಹತ್ವದ ತೀರ್ಪು ನೀಡಿದ್ದು, ಆಯಾ ರಾಜ್ಯಗಳಿಗೆ ಒಳಮೀಸಲಾತಿ ಜಾರಿಗೆ ತರುವ ಅಧಿಕಾರ ನೀಡಿದೆ. ಈ ಐತಿಹಾಸಿಕ ತೀರ್ಪಿನಿಂದ 30 ವರ್ಷಗಳ ಹೋರಾಟದಲ್ಲಿ ಶೋಷಿತ ಸಮುದಾಯಗಳಿಗೆ ನ್ಯಾಯ ದೊರಕಿದ್ದು, ಅವರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ” ಎಂದು ಹೇಳಿದರು.
“ತೆಲಂಗಾಣ ರಾಜ್ಯದ ಕಾಂಗ್ರೆಸ್ ಸರ್ಕಾರ ಈಗಾಗಲೇ ಒಳಮೀಸಲಾತಿ ಜಾರಿಗೆ ಕ್ರಮ ಕೈಗೊಂಡಿದ್ದು, ನಮ್ಮ ರಾಜ್ಯದಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಒಳಮೀಸಲಾತಿ ಜಾರಿಗೆ ತರಲು ಎಲ್ಲ ಕ್ರಮಗಳನ್ನು ಕೈಗೊಂಡಿದೆ” ಎಂದರು.
ಅಬಕಾರಿ ಸಚಿವರಾದ ಆರ್ ಬಿ ತಿಮ್ಮಾಪೂರ, ಮಾಜಿ ಸಚಿವ ಹೆಚ್.ಆಂಜನೇಯ, ಮಾಜಿ ರಾಜ್ಯ ಸಭಾ ಸದಸ್ಯರಾದ ಎಲ್. ಹನುಮಂತಯ್ಯ, ಮಾಜಿ ಸಂಸದ ಚಂದ್ರಪ್ಪ, ಶಾಸಕರಾದ ಬಸವಂತಪ್ಪ ,ವಿಧಾನ ಪರಿಷತ್ತಿನ ಸದಸ್ಯರಾದ ವಸಂತಕುಮಾರ್, ಹಾಗೂ ಸಮುದಾಯದ ಪ್ರಮುಖ ನಾಯಕರು ಉಪಸ್ಥಿತರಿದ್ದರು.