ಪಹಲ್ಗಾಮ್ ಭಯೋತ್ಪಾದಕ ದಾಳಿ ಘಟನೆ, ಆಪರೇಷನ್ ಸಿಂಧೂರದ ಬಳಿಕ ರಾಜ್ಯದಲ್ಲಿ ಕೋಮುವಾದಿ ಶಕ್ತಿಗಳು ದ್ವೇಷ ಹರಡುವುದರಲ್ಲಿ ನಿರತರಾಗಿದ್ದು, ಅವರನ್ನು ನಿಯಂತ್ರಿಸುವ ತುರ್ತು ಅವಶ್ಯಕತೆಯಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಆಗ್ರಹಿಸಿದೆ.
ಇತ್ತೀಚೆಗೆ ನಡೆದ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಘಟಕದ ರಾಜ್ಯ ಸಲಹಾ ಸಮಿತಿಯಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು, ಕೆಲವೊಂದ ಠರಾವುಗಳು ಅಂಗೀಕೃತವಾಗಿರುವುದಾಗಿ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ತಿಳಿಸಿದೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಘಟಕವು, ರಾಜ್ಯ ಸಲಹಾ ಸಮಿತಿಯು ರಾಜ್ಯದಲ್ಲಿ ಸಾಮಾಜಿಕ ಪರಿಸ್ಥಿತಿಯು ಸ್ಪಲ್ಪ ಮಟ್ಟಿಗೆ ಸುಧಾರಿಸಿರುವುದರ ಕುರಿತು ಸಂತೋಷ ವ್ಯಕ್ತಪಡಿಸುತ್ತದೆ. ಜಾತಿ ಮತ್ತು ಧರ್ಮದ ಆಧಾರದಲ್ಲಿ ನಡೆಯುತ್ತಿರುವ ಸಂಘರ್ಷಗಳು ಸದ್ಯದಲ್ಲಿ ನಿಯಂತ್ರಣದಲ್ಲಿದೆ. ಈ ವಿಷಯವಾಗಿ ಸರ್ಕಾರ ಮತ್ತು ಆಡಳಿತ ವ್ಯಸಸ್ಥೆಯ ಶ್ರಮ ಪ್ರಶಂಸನೀಯ. ಜೊತೆಗೆ, ವಿವಿಧ ಧರ್ಮದ ನಾಯಕರ ಮತ್ತು ಸಾಮಾಜಿಕ ಮುಖ್ಯಸ್ಥರ ಕೊಡುಗೆಗಳು ಇಲ್ಲಿ ಅಭಿನಂದನಾರ್ಹವಾಗಿದೆ. ಆದರೆ, ಅನೈತಿಕತೆ, ಭ್ರಷ್ಟಾಚಾರ, ಮಹಿಳೆಯರ ಮೇಲೆ ಅತ್ಯಾಚಾರಗಳು, ಮಾದಕ ದ್ರವ್ಯಗಳಿಂದಾಗಿ ಸಮಾಜದಲ್ಲಿ ಅನ್ಯಾಯ ಮತ್ತು ಅಪರಾಧ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಆದ್ದರಿಂದ ಶಿಕ್ಷಣ ಮತ್ತು ತರಬೇತಿ ವ್ಯವಸ್ಥೆಯಲ್ಲಿ ಪರಿಣಾಮಕಾರಿಯಾದ ಸುಧಾರಣಾ ಪ್ರಯತ್ನಗಳನ್ನು ತರಲು ರಾಜ್ಯ ಸರ್ಕಾರ ಮತ್ತು ಧಾರ್ಮಿಕ ಸಂಸ್ಥೆಗಳು ವಿಶೇಷ ಗಮನವನ್ನು ಹರಿಸುವ ಅಗತ್ಯವಿದೆ. ನೈತಿಕ ಮತ್ತು ಆಧ್ಯಾತ್ಮಿಕ ಉನ್ನತಿಯ ಹೊರತು, ಭೌತಿಕ ಪ್ರಗತಿ ಮತ್ತು ಸಮೃದ್ಧಿಗೆ ಯಾವುದೇ ಅರ್ಥವಿಲ್ಲ ಎಂದು ತಿಳಿಸಿದೆ.
ಸರ್ಕಾರ ಮತ್ತು ಇತರ ಸಂಘ ಸಂಸ್ಥೆಗಳು ಈ ಕ್ಷೇತ್ರಗಳಲ್ಲಿ ಪರಿಣಾಮಕಾರಿಯಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಸಂಘಟನೆಯು ಈ ವಿಷಯವಾಗಿ ಸಂಪೂರ್ಣವಾಗಿ ಸಹಕರಿಸಲು ಪ್ರಯತ್ನಿಸುತ್ತದೆ. ಆದರೂ ಪರಿಸ್ಥಿತಿಯನ್ನು ಹದಗೆಡಿಸಲು ನಿರಂತರವಾಗಿ ಪ್ರಯತ್ನಿಸುವ ಕೋಮುವಾದಿ ಶಕ್ತಿಗಳನ್ನು ನಿಯಂತ್ರಿಸುವ ತುರ್ತು ಅವಶ್ಯಕತೆಯಿದೆ ಎಂದು ಒತ್ತಾಯಿಸಿದೆ.
ಪಹಲ್ಗಾಮ್ ಘಟನೆಯ ಹಿನ್ನೆಲೆಯಲ್ಲಿ, ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧವು ತಕ್ಷಣವೇ ನಿಂತುಹೋದ ಬಗ್ಗೆ ರಾಜ್ಯ ಸಮಿತಿಯು ಸಂತೃಪ್ತಿಯನ್ನು ವ್ಯಕ್ತಪಡಿಸುತ್ತದೆ. ಪಹಲ್ಗಾಮ್ ಘಟನೆಯಲ್ಲಿ ಪ್ರಾಣ ಕಳೆದುಕೊಡವರ ಬಗ್ಗೆ ಆಳವಾದ ಸಹಾನುಭೂತಿಯನ್ನು ವ್ಯಕ್ತಪಡಿಸುತ್ತದೆ. ದುಃಖ ಮತ್ತು ಸಂಕಷ್ಟದ ಸಂದರ್ಭದಲ್ಲೂ ಮೃತರ ಕುಟುಂಬಸ್ಥರು ವಿವೇಕ ಮತ್ತು ವಾಸ್ತವಿಕತೆಯಿಂದ ವ್ಯವಹರಿಸಿರುವುದು ಎಲ್ಲರಿಗೂ ಮಾದರಿಯಾಗಿದೆ. ತಮ್ಮ ಪ್ರೀತಿಪಾತ್ರರನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಆದ ವೈಫಲ್ಯಗಳ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿರುವುದರ ಜತೆಗೆ ತಮ್ಮ ಜೀವವನ್ನು ಲೆಕ್ಕಿಸದೆ ಪೀಡಿತರಿಗೆ ಸಹಾಯ ಮಾಡುವಲ್ಲಿ ಮುಂದಾದ ಕಾಶ್ಮೀರಿಗಳ ಪ್ರಯತ್ನ ಕೂಡ ಶ್ಲಾಘನೀಯ ಎಂದು ಜಮಾಅತೆ ಇಸ್ಲಾಮೀ ಹಿಂದ್ ತಿಳಿಸಿದೆ.
ಮೃತರ ಕುಟುಂಬಸ್ಥರ ಈ ಮಾದರಿಯೋಗ್ಯ ನಡವಳಿಕೆಯನ್ನು ರಾಜ್ಯ ಸಲಹಾ ಸಮಿತಿಯು ಅತ್ಯಂತ ಗೌರವದಿಂದ ಕಾಣುತ್ತದೆ. ದೇಶದಾದ್ಯಂತ ವಿಶೇಷವಾಗಿ ಗಡಿಭಾಗಗಳಲ್ಲಿ ಹೆಚ್ಚಿನ ಮಿಲಿಟರಿ ಮತ್ತು ಪೊಲೀಸ್ ಉಪಸ್ಥಿತಿ ಹಾಗೂ ಬಲವಾದ ಗುಪ್ತಚರ ವ್ಯವಸ್ಥೆಯ ಹೊರತಾಗಿಯೂ, ಈ ಘಟನೆ ನಡೆಯಲು ಕಾರಣ ಏನು ಎಂಬುವುದರ ಕುರಿತಾಗ ಗಂಭೀರ ಅವಲೋಕನ ನಡೆಸುವ ಅಗತ್ಯ ಇದೆ. ವೈಫಲ್ಯಗಳು ಎಲ್ಲಿ ಸಂಭವಿಸಿವೆ ಮತ್ತು ಯಾರು ಜವಾಬ್ದಾರರು ಎಂಬುದರ ಕುರಿತು ಸಂಪೂರ್ಣ ತನಿಖೆ ನಡೆಸಬೇಕು ಮತ್ತು ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದೆ.
ದೇಶದ ಹೆಚ್ಚಿನ ಭಾಗಗಳಲ್ಲಿ, ವಿಶೇಷವಾಗಿ ಪಹಲ್ಗಾಮ್ ಘಟನೆಯ ನೆಪದಲ್ಲಿ, ಕಾಶ್ಮೀರಿಗಳ ಮೇಲೆ ನಡೆದ ದ್ವೇಷ ಮತ್ತು ಹಿಂಸಾಚಾರದ ವಿರುದ್ಧ ಎದ್ದಿರುವ ಧ್ವನಿಗಳು ನಿಜವಾಗಿಯೂ ಮಾನವೀಯತೆ ಜೀವಂತವಾಗಿದೆ ಎಂಬುವುದಕ್ಕೆ ಸಾಕ್ಷಿಯಾಗಿದೆ. ರಾಜ್ಯ ಸಲಹಾ ಸಮಿತಿಯು ಅಂತಹ ಧ್ವನಿಗಳನ್ನು ಅತ್ಯಂತ ಗೌರವದಿಂದ ಕಾಣುತ್ತದೆ. ಈ ವಿಷಯವಾಗಿ ಕೇಂದ್ರ ಸರಕಾರದ ನಿಗೂಢ ಮೌನವು ಕಳವಳಕಾರಿಯಾಗಿದೆ. ಮಾತ್ರವಲ್ಲ ಈ ವಿಷಯವಾಗಿ ಬೇಜವಾಬ್ದಾರಿಯುತವಾಗಿ ವರ್ತಿಸಿದ ಕೆಲವು ಮಾಧ್ಯಮ ಸಂಸ್ಥೆಗಳ ನಡೆ ಅತ್ಯಂತ ಆಘಾತಕಾರಿಯಾಗಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಘಟಕ ಖಂಡಿಸಿದೆ.

ದೇಶದ ಗಡಿಗಳನ್ನು ಸಂರಕ್ಷಿಸುವುದು ಎಷ್ಟು ಮುಖ್ಯವೋ, ದೇಶದ ಆಂತರಿಕ ಸುವ್ಯವಸ್ಥೆ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ ಮತ್ತು ಅದು ಸರ್ಕಾರದ ಮೂಲಭೂತ ಜವಾಬ್ದಾರಿಯಾಗಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ರಾಜ್ಯ ಸಮಿತಿಯು ದೇಶದ ಶಾಂತಿ ಮತ್ತು ಸುಭದ್ರತೆಯನ್ನು ಖಚಿತಪಡಿಸಿಕೊಳ್ಳುವ ಪ್ರಯತ್ನಗಳಿಗೆ ಆದ್ಯತೆ ನೀಡಬೇಕೆಂದು ಸರಕಾರ ಮತ್ತು ಮಾಧ್ಯಮ ಸಂಸ್ಥೆಗಳ ಹೊಣೆಗಾರರೊಂದಿಗೆ ಆಗ್ರಹಿಸಿದೆ.
ಫೆಲೆಸ್ತೀನ್ನಲ್ಲಿ ಸುಮಾರು ಒಂದೂವರೆ ವರ್ಷಗಳಿಂದ ನಡೆಯುತ್ತಿರುವ ಇಸ್ರೇಲಿ ಕ್ರೂರತೆಯು ನ್ಯಾಯ ಮತ್ತು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಜಾಗತಿಕ ಸಂಸ್ಥೆಗಳ ಉದಾಸೀನತೆ ಮತ್ತು ಮುಸ್ಲಿಮ್ ರಾಷ್ಟ್ರಗಳ ನಿಷ್ಕ್ರಿಯತೆಯು ಇತಿಹಾಸದಲ್ಲಿ ಒಂದು ನಾಚಿಕೆಗೇಡಿನ ಅಧ್ಯಾಯವನ್ನೇ ರೂಪಿಸಿದೆ. ಆದಾಗ್ಯೂ, ಪಾಶ್ಚಿಮಾತ್ಯ ದೇಶಗಳು ಮತ್ತು ಇಸ್ರೇಲ್ನಲ್ಲಿಯೂ ಸಹ ಈ ಅಪರಾಧಗಳನ್ನು ಖಂಡಿಸಿ ಬಹಳಷ್ಟು ಧ್ವನಿಗಳು ಏಳುತ್ತಿವೆ. ಈ ಅನ್ಯಾಯದ ವಿರುದ್ಧ ಬುದ್ಧಿಜೀವಿಗಳು, ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳ ಹೋರಾಟ ಗಮನಾರ್ಹ.ಆದರೆ, ಈ ಧ್ವನಿಗಳನ್ನು ಹತ್ತಿಕ್ಕಲು ಮತ್ತು ಅವುಗಳ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಕೆಲವು ಸರ್ಕಾರಗಳು ತೆಗೆದುಕೊಂಡ ಕ್ರಮಗಳು ಅತ್ಯಂತ ಖಂಡನೀಯವಾಗಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ತಿಳಿಸಿದೆ.
ಫೆಲೆಸ್ತೀನಿನಲ್ಲಿ ನಡೆಯುತ್ತಿರುವ ದಬ್ಬಾಳಿಕೆ ಮತ್ತು ಕ್ರೌರ್ಯದ ವಿರುದ್ಧ ತನ್ನ ರಾಜತಾಂತ್ರಿಕ ಸಂಪನ್ಮೂಲಗಳನ್ನು ಬಳಸುವಂತೆ ಮತ್ತು ಫೆಲೆಸ್ತೀನಿಗೆ ಸಂಬಂಧಿಸಿದಂತೆ ದೇಶದ ದೀರ್ಘಕಾಲೀನ ನೀತಿಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವಂತೆ ರಾಜ್ಯ ಸಲಹಾ ಸಮಿತಿಯು ಭಾರತ ಸರ್ಕಾರವನ್ನು ಮನವಿ ಮಾಡಿದ್ದು, ಅದೇ ರೀತಿ, ಮುಸ್ಲಿಮ್ ರಾಷ್ಟ್ರಗಳು ತಮ್ಮ ಸ್ವಂತ ಹಿತಾಸಕ್ತಿಗಳನ್ನು ಮೀರಿ ಅಸಹಾಯಕ ಫೆಲೆಸ್ತೀನ್ ಸಹೋದರರಿಗೆ ಸಹಾಯ ಮಾಡಲು ಮತ್ತು ದಬ್ಬಾಳಿಕೆಯನ್ನು ತಡೆಯಲು ಮುಂದೆ ಬರಬೇಕೆಂದು ಒತ್ತಾಯಿಸಿದೆ. ಈ ಸಮಿತಿ ದೃಢಚಿತ್ತತೆ ಮತ್ತು ಸಹನೆಯಿಂದ ವ್ಯವಹರಿಸುತ್ತಿರುವ ಫೆಲೆಸ್ತೀನ್ ಜನರಿಗೆ ಅಭಿನಂದನೆಯನ್ನು ಸಲ್ಲಿಸುತ್ತದೆ. ಅತ್ಯಂತ ಪ್ರತಿಕೂಲ ಪರಿಸ್ಥಿತಿಯಲ್ಲೂ ಮಹಿಳೆಯರು ಮತ್ತು ಮಕ್ಕಳೂ ಸೇರಿ ತಮ್ಮ ಪ್ರೀತಿಪಾತ್ರರನ್ನು ಕಳದುಕೊಂಡರೂ ಹಾಗೂ ಅಸಂಖ್ಯಾತ ಜನರು ಹುತಾತ್ಮರಾದರೂ ದೃಢನಿಶ್ಚಯದಿಂದ ಮುಂದುವರಿಯುತ್ತಿರುವ ಫೆಲೆಸ್ತೀನ್ ಜನೆತೆಯ ಹೋರಾಟವು ಜಗತ್ತಿಗೆ ಮಾದರಿ ಎಂದು ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಘಟಕ ತಿಳಿಸಿದೆ.
ಸಂಸತ್ತಿನಲ್ಲಿ ಅಂಗೀಕರಿಸಲಾದ ವಕ್ಫ್ ತಿದ್ದುಪಡಿ ಕಾನೂನು ದೇಶದ ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗಿದೆ. ನ್ಯಾಯವನ್ನು ಪ್ರೀತಿಸುವ ನಾಗರಿಕರು ಮತ್ತು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಮುಂದೆ ಇದನ್ನು ಬಹಿರಂಗವಾಗಿ ವಿರೋಧಿಸಿ ತಮ್ಮ ವಾದಗಳನ್ನು ಮಂಡಿಸಿದೆ. ಸಂಸತ್ತಿನ ಎರಡೂ ಸದನಗಳ ಅನೇಕ ಗೌರವಾನ್ವಿತ ಸದಸ್ಯರು, ವಿಶೇಷವಾಗಿ ವಿರೋಧ ಪಕ್ಷದ ಗೌರವಾನ್ವಿತ ನಾಯಕರು, ಅದರ ಸಾಂವಿಧಾನಿಕತೆಯ ಬಗ್ಗೆ ತಾರ್ಕಿಕ ಚರ್ಚೆಗೆ ಗ್ರಾಸವಾಯಿತು. ಇದರ ಹೊರತಾಗಿಯೂ, ಆಡಳಿತ ಪಕ್ಷವು ತನ್ನ ಬಹುಮತದ ಆಧಾರದ ಮೇಲೆ ಕಾನೂನನ್ನು ಅಂಗೀಕರಿಸುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ ಅತ್ಯಂತ ಕಳವಳಕಾರಿ ಅಂಶವೆಂದರೆ ಈ ಮೂಲಕ ದೇಶದಾಧ್ಯಂತ ದ್ವೇಷದ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ. ರಾಜ್ಯ ಸಲಹಾ ಸಮಿತಿಯು ಈ ವಕ್ಫ್ ಕಾನೂನನ್ನು ರದ್ದುಗೊಳಿಸುವಂತೆ ಒತ್ತಾಯಿಸಿದೆ.
ಇದನ್ನು ಓದಿದ್ದೀರಾ? ಬೆಳಗಾವಿ | ಪವಿತ್ರ ಕುರ್ಆನ್ ಪ್ರತಿಗಳನ್ನು ಸುಟ್ಟು ಹಾಕಿದ ಘಟನೆ: ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಖಂಡನೆ
ಈಗಾಗಲೇ ದೇಶವು ಅನೇಕ ಸವಾಲುಗಳನ್ನು ಎದರಿಸುತ್ತಿವೆ ಅದರ ನಡುವೆ ಮತ್ತೊಂದು ಸಮಸ್ಯೆಯನ್ನು ಎಳೆದು ತರುವುದು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದಿರುವ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ, ಈ ಕಾನೂನಿನ ವಿರುದ್ಧ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಹೋರಾಟವನ್ನು ರಾಜ್ಯ ಸಲಹಾ ಸಮಿತಿಯು ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ಪ್ರಕಟಣೆಯಲ್ಲಿ ತಿಳಿಸಿದೆ.
