ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಬಾಕಿ ಪ್ರಕರಣಗಳ ವಿಲೇವಾರಿಯಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಹೈಕೋರ್ಟ್ ನ್ಯಾಯಮೂರ್ತಿಯಾಗಿ ಮಂಗಳವಾರಕ್ಕೆ (ನವೆಂಬರ್ 26) ಐದು ವರ್ಷ ಪೂರ್ಣಗೊಂಡ ಬೆನ್ನಲ್ಲೇ ಅವರು ಈವರೆಗೂ 16 ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಹಿಂದೆ ಒಂದೇ ದಿನ ಬರೋಬ್ಬರಿ 600 ಪ್ರಕರಣಗಳ ವಿಚಾರಣೆ ನಡೆಸಿ ಮಹತ್ವದ ಮೈಲುಗಲ್ಲು ಸಾಧಿಸಿದ್ದರು. ಆ ಮೂಲಕ ಈ ಹಿಂದಿನ ತಮ್ಮದೇ ದಾಖಲೆಯನ್ನು ಮುರಿದಿದ್ದರು.
2023 ರ ಜೂ.12 ರಂದು ಒಂದೇ ದಿನ 522 ಪ್ರಕರಣಗಳ ವಿಚಾರಣೆ ನಡೆಸಿದ್ದರು. 2023 ರ ಡಿ.20 ರಂದು ಒಂದೇ ದಿನ 50 ತೀರ್ಪುಗಳನ್ನು ಪ್ರಕಟಿಸಿದ್ದರು. ಕೆಲ ತಿಂಗಳ ಹಿಂದೆ ಒಂದೇ ದಿನ 480 ಪ್ರಕರಣಗಳ ಪಟ್ಟಿ ಮಾಡಿಸಿ ಅಷ್ಟೂ ಪ್ರಕರಣಗಳ ವಿಚಾರಣೆ ನಡೆಸಿದ್ದರು. ಬಾಕಿ ಪ್ರಕರಣಗಳ ವಿಲೇವಾರಿಯಲ್ಲಿ ಮಹತ್ವದ ಪಾತ್ರ ವಹಿಸಿರುವ ನ್ಯಾಯಮೂರ್ತಿಗಳು ಪ್ರಕರಣವನ್ನು ಶೀಘ್ರವಾಗಿ ಗ್ರಹಿಸಿ ತಕ್ಷಣ ಆದೇಶ ಪ್ರಕಟಿಸುವುದರಲ್ಲಿ ಸಿದ್ದಹಸ್ತರೆಂದು ಹೈಕೋರ್ಟ್ ವಕೀಲರ ವಲಯದಲ್ಲಿ ಖ್ಯಾತಿ ಗಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಉಪಸಮರದ ಗೆಲುವು– ಈಗಲಾದರೂ ಎಚ್ಚೆತ್ತುಕೊಳ್ಳುತ್ತಾ ಕಾಂಗ್ರೆಸ್ ಸರ್ಕಾರ?
ನಾಗಪ್ರಸನ್ನ ಅವರು 1971ರ ಮಾರ್ಚ್ 23ರಂದು ಜನಿಸಿದ್ದು, 2019ರ ನವೆಂಬರ್ 26ರಂದು ಹೈಕೋರ್ಟ್ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡು 2021ರ ಸೆಪ್ಟಂಬರ್ 8ರಂದು ಕಾಯಂಗೊಂಡಿದ್ದಾರೆ.
ಹೈಕೋರ್ಟ್ನಲ್ಲಿ ಇತರೆ ನ್ಯಾಯಮೂರ್ತಿಗಳ ವಿಲೇವಾರಿ ಪ್ರಮಾಣ ವರ್ಷವೊಂದಕ್ಕೆ ಸರಾಸರಿ 750 ಅರ್ಜಿಗಳಷ್ಟಿದೆ ಎಂಬ ಅಂದಾಜಿಸಲಾಗಿದೆ. ಹಲವು ಮಹತ್ವದ ತೀರ್ಪುಗಳನ್ನು ನೀಡಿರುವ ನ್ಯಾಯಮೂರ್ತಿ ನಾಗಪ್ರಸನ್ನ ಅವರು ಬೆಂಗಳೂರು, ಧಾರವಾಡ ಮತ್ತು ಕಲಬುರ್ಗಿ ಪೀಠಗಳಲ್ಲಿ ವಿಚಾರಣೆ ನಡೆಸಿ ಈತನಕ ಒಟ್ಟು 16,500 ಪ್ರಕರಣಗಳ ವಿಲೇವಾರಿ ಮಾಡಿದ್ದಾರೆ. ಇವುಗಳಲ್ಲಿ ವಿಭಾಗೀಯ ಪೀಠದಲ್ಲಿ ಭಾಗಿಯಾಗಿ ವಿಲೇವಾರಿ ಮಾಡಿದ ಪ್ರಕರಣಗಳನ್ನು ಹೊರತುಪಡಿಸಲಾಗಿದೆ ಎಂದು ಹೈಕೋರ್ಟ್ ಮೂಲಗಳು ತಿಳಿಸಿರುವುದಾಗಿ ಬಾರ್ & ಬೆಂಚ್ ವರದಿ ಮಾಡಿದೆ.