ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ, ಅಪೌಷ್ಟಿಕತೆ ಮತ್ತು ರಕ್ತಹೀನತೆಯನ್ನು ಹೋಗಲಾಡಿಸುವುದು, ದೇವದಾಸಿಯರ ಸಮೀಕ್ಷೆ, ಶುದ್ಧ ಕುಡಿಯುವ ನೀರಿನ ಪೂರೈಕೆ, ತಾಯಿ ಶಿಶುಮರಣ ತಡೆಯುವುದು, ನಿರ್ಗತಿಕರಿಗೆ ಬಿಪಿಎಲ್ ಪಡಿತರ ಚೀಟಿ ಮುಂತಾದ ಹತ್ತು ಹಲವು ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯು 2025 ಜನವರಿ 25ರಿಂದ ರಾಯಚೂರಿನ ಸ್ಟೇಡಿಯಂ ಆವರಣದಲ್ಲಿ ಅನಿರ್ದಿಷ್ಟಾವಧಿ ಸತ್ಯಾಗ್ರಹವನ್ನು ಪ್ರಾರಂಭಿಸಲು ನಿರ್ಧರಿಸಿದೆ. 20,000ಕ್ಕೂ ಹೆಚ್ಚು ಕಾರ್ಮಿಕರು, ಮುಖ್ಯವಾಗಿ ಮಹಿಳೆಯರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಸಂಘಟನೆ ಮುಖ್ಯಸ್ಥರು ತಿಳಿಸಿದ್ದಾರೆ.
ಕಳೆದ ಒಂದೂವರೆ ವರ್ಷಗಳಲ್ಲಿ ಹಲವಾರು ಪ್ರತಿಭಟನೆಗಳನ್ನು ಸಂಘಟನೆಯ ನೇತೃತ್ವದಲ್ಲಿ ಮಾಡಲಾಗಿದೆ. ಆಗ ಕರ್ನಾಟಕ ಸರ್ಕಾರದ ಶಾಸಕರು ಮತ್ತು ಸಚಿವರು ನಮಗೆ ಕಾಲಮಿತಿಯಲ್ಲಿ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದರು. ಆದರೆ ಅವರು ಜನರ ಬೇಡಿಕೆಗಳನ್ನು ಇಡೇರಿಸುವಲ್ಲಿ ವಿಫಲಗೊಂಡಿದ್ದಾರೆ ಎಂಬುದು ಸಂಘಟನೆಯ ಆರೋಪ.
ಪ್ರಮುಖ ಬೇಡಿಕೆಗಳು
ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಣೆ: ಸುಮಾರು 1/3 ಭಾಗದಷ್ಟು ಮಕ್ಕಳು (ಮುಖ್ಯವಾಗಿ SC-ST ಹಿನ್ನೆಲೆಯುಳ್ಳ) ತಮ್ಮ ತರಗತಿಯ ಸರಳ ಕನ್ನಡ, ಗಣಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಕ್ರಿಯಾ ಯೋಜನೆಯನ್ನು ರೂಪಿಸಬೇಕು. ಕಲ್ಯಾಣ ಕರ್ನಾಟಕದಲ್ಲಿ ಸಾವಿರಾರು ಶಿಕ್ಷಕರ ಹುದ್ದೆಗಳು ಖಾಲಿಯಿವೆ ಹಾಗೂ ತರಗತಿವಾರು/ವಿಷಯವಾರು ಶಿಕ್ಷಕ/ಶಿಕ್ಷಕಿಯರನ್ನು ಕೂಡಲೇ ನೇಮಿಸಬೇಕು. ಪ್ರತಿ ಶಾಲೆಗೆ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಮನೆ ಪಾಠ ಮಾಡುವವರನ್ನು ನೇಮಿಸಬೇಕು. ಹಿ.ಪ್ರಾ.ಶಾ.ಕಿ.ಪ್ರಾ.ಶಾ (HPS-LPS)ಗಳ ಕ್ಲಸ್ಟರ್ ವಿಧಾನವನ್ನು ಸುಧಾರಣೆಗೆ ಮಾದರಿಯಾಗಿ ಬಳಸಬೇಕು. ಪ್ರತಿ ಶಾಲೆಗೆ ಕನಿಷ್ಠ ಒಬ್ಬ ಅರೆಕಾಲಿಕ ಜವಾನ (Peon) ನೀಡಬೇಕು. ಸರ್ಕಾರಿ ಶಾಲೆಗಳಲ್ಲಿ ಭೌತಿಕ ಮತ್ತು ಮಾನವ ಮೂಲಸೌಕರ್ಯವನ್ನು ಸುಧಾರಿಸಬೇಕು.
ಯಾದಗಿರಿ-ರಾಯಚೂರು-ಕೊಪ್ಪಳದಲ್ಲಿ ಅಪೌಷ್ಟಿಕತೆ ಮತ್ತು ರಕ್ತಹೀನತೆಯನ್ನು ಹೋಗಲಾಡಿಸುವುದು: ಸಾಕ್ಷರತಾ ಮಾದರಿಯ ಅಭಿಯಾನವನ್ನು ನಡೆಸಲು ಸರ್ಕಾರದಿಂದ ಹೆಚ್ಚುವರಿ ಹಣವನ್ನು ಮೀಸಲಿಡಬೇಕು. ಇದು ನಾಗರಿಕ ಸಮಾಜ, ಜನಪ್ರತಿನಿಧಿಗಳು ಮತ್ತು ಆಡಳಿತವನ್ನು ಒಳಗೊಂಡಿರಬೇಕು. ಈ ವಿಷಯದಲ್ಲಿ ಕರ್ನಾಟಕವನ್ನು ಬಿಹಾರ, ಜಾರ್ಖಂಡ, ಛತ್ತೀಸ್ಗಢ, ರಾಜಸ್ಥಾನದಂತಹ ರಾಜ್ಯಗಳ ಪಟ್ಟಿಯಿಂದ ತೆಗೆದುಹಾಕುವ ಯೋಜನೆಯನ್ನು ಹೊಂದಿರಬೇಕು. ಕರ್ನಾಟಕದಂತಹ ಪ್ರಗತಿಪರ ರಾಜ್ಯ ಇಂತಹ ರಾಜ್ಯಗಳ ವರ್ಗಕ್ಕೆ ಸೇರಿರುವುದು ನಾಚಿಕೆಗೇಡಿನ ಸಂಗತಿ. ಮಹತ್ವಾಕಾಂಕ್ಷೆಯ ಜಿಲ್ಲೆಗಳಿಗೆ ಕೇಂದ್ರ ಸರ್ಕಾರದಿಂದ ಹಣ ಮತ್ತಿತರ ಲಭ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ನಾವು ಸರಿಯಾಗಿ ಬಳಸಬೇಕು.
ದೇವದಾಸಿಯರ ಮರು ಸಮೀಕ್ಷೆಯನ್ನು ತಕ್ಷಣ ಮಾಡಬೇಕು: ಮಹಿಳೆಯರಿಗೆ ಪಿಂಚಣಿ ಮತ್ತು ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ನಿಯಮಿತವಾಗಿ ನೀಡಬೇಕು. ಕರ್ನಾಟಕ ಸರ್ಕಾರವು ಈಗಾಗಲೇ ಬಜೆಟ್ನಲ್ಲಿ ಇದಕ್ಕಾಗಿ ಹಣವನ್ನು ಮೀಸಲಿಟ್ಟಿದೆ. ಆದರೆ ಕೆಎಸ್ಡಬ್ಲ್ಯುಡಿಸಿ ಮತ್ತು ಮಹಿಳಾ-ಮಕ್ಕಳ ಅಭಿವೃದ್ಧಿ ಇಲಾಖೆ ಕಳೆದ 9 ತಿಂಗಳಿಂದ ಈ ಕೆಲಸವನ್ನು ಕೈಗೆತ್ತಿಕೊಂಡಿಲ್ಲ. ಒಂಟಿ ಮಹಿಳೆಯರ ಪಿಂಚಣಿ ವಯೋಮಿತಿಯನ್ನು 21 ವರ್ಷಕ್ಕೆ ಇಳಿಸಬೇಕು. ಇದರಿಂದ ಗಂಡನಿಂದ ಪರಿತ್ಯಕ್ತರಾಗಿರುವ ಎಲ್ಲಾ ಮಹಿಳೆಯರು ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಮತ್ತು ತಮ್ಮ ಚಿಕ್ಕ ಮಕ್ಕಳನ್ನು ಬೆಳೆಸಲು ಸರ್ಕಾರ ಬೆಂಬಲಿಸಿದಂತಾಗುತ್ತದೆ.
ಗ್ರಾಮಗಳಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿ: ಕೆಟ್ಟು ನಿಂತ ಕುಡಿಯುವ ನೀರಿನ ಘಟಕಗಳ ದುರಸ್ತಿ ಮಾಡಲು ಕೂಡಲೇ ಹಣ ಬಿಡುಗಡೆ ಮಾಡಬೇಕು. ಸರ್ಕಾರವು ಮೊದಲು ಬೃಹತ್ ವೆಚ್ಚದಲ್ಲಿ ಘಟಕಗಳನ್ನು ಸ್ಥಾಪಿಸುತ್ತದೆ ಮತ್ತು ಈಗ ಅವುಗಳನ್ನು ಸ್ಕ್ರ್ಯಾಪ್ ಆಗಲು ಅನುಮತಿಸುತ್ತದೆ. ಈ ಘಟಕಗಳನ್ನು ಸ್ಥಾಪಿಸಿದ ಗುತ್ತಿಗೆದಾರರ ಮೇಲೆ ಯಾವುದೇ ಹೊಣೆಗಾರಿಕೆ ಇಲ್ಲ. ಆರ್ಒ ಪ್ಲಾಂಟ್ಗಳನ್ನು ನಿರ್ವಹಣೆ ಮಾಡಲು ಸರ್ಕಾರವು ಯಾವುದೇ ಯೋಜನೆಗಳನ್ನು ಹೊಂದಿಲ್ಲ. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು.
“ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚುತ್ತಿರುವ ತಾಯಿ ಮತ್ತು ಮಕ್ಕಳ ಸಾವಿನ ಬಗ್ಗೆ ಸರ್ಕಾರಗಳ ನಿರಾಸಕ್ತಿಯನ್ನೂ ನಾವು ಖಂಡಿಸುತ್ತೇವೆ. ಈ ಬಗ್ಗೆ ಸರ್ಕಾರದ ಕ್ರಿಯಾಶೀಲ ಕ್ರಮಗಳು ನಮಗೆ ಕಾಣುತ್ತಿಲ್ಲ. “ಮಹಿಳೆಯರಿಗೆ ಅಧಿಕಾರ”ಎಂಬ ಘೋಷಣೆಯೊಂದಿಗೆ ಅಧಿಕಾರಕ್ಕೆ ಬಂದ ಸರ್ಕಾರ ಈ ರೀತಿ ವರ್ತಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ತಮಿಳುನಾಡಿನಂತೆ ಕರ್ನಾಟಕದಲ್ಲಿ ಪಾರದರ್ಶಕ ಔಷಧ ಖರೀದಿ ನೀತಿ ಏಕೆ ಸಾಧ್ಯವಿಲ್ಲ?
ನಿರ್ಗತಿಕರಿಗೆ ಬಿಪಿಎಲ್ ಪಡಿತರ ಚೀಟಿ ಸಿಗದ ರೀತಿಯನ್ನು ನಾವು ಖಂಡಿಸುತ್ತೇವೆ. ಕರ್ನಾಟಕದಲ್ಲಿ ಲಕ್ಷಾಂತರ ಅಕ್ರಮ ಪಡಿತರ ಚೀಟಿಗಳು ಇರುವುದು ಅವರ ಸಮಸ್ಯೆಯಲ್ಲ. ಸರಕಾರ ಕಾಲಮಿತಿಯಲ್ಲಿ ವಿಷಯಗಳನ್ನು ಸರಿಪಡಿಸಬೇಕು. ಬಡವರಿಗೆ ರಾಗಿ, ಜೋಳ, ತೊಗರಿಬೇಳೆಯನ್ನು ಪಡಿತರದಲ್ಲಿ ನೀಡುತ್ತೆವೆಂಬ ಭರವಸೆಯನ್ನು ಈಡೇರಿಸಬೇಕು. ಜನರು ರಾಯಚೂರಿನಲ್ಲಿ ಸುಮಾರು 1000 ದಿನಗಳಿಂದ ಏಮ್ಸ್ ಬೇಕೆಂದು ಹೋರಾಟ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಕೇಂದ್ರ ಸರ್ಕಾರದ ಮೇಲೆ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗಾಗಿ ಕ್ರಮ ಜರುಗಿಸಲು ಒತ್ತಾಯಿಸಬೇಕು. ಸುಳ್ಳು ಆಶ್ವಾಸನೆಗಳನ್ನು ನೀಡದೆ, ಈ ವಿಷಯಗಳ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳುವವರೆಗೆ ನಾವು ಸತ್ಯಾಗ್ರಹವನ್ನು ಹಿಂಪಡೆಯುವುದಿಲ್ಲ“ ಎಂದು ಸಂಘಟನೆ ಹೇಳಿದೆ.