ಕನ್ನಡ ಮಾತನಾಡಲು ನಿರಾಕರಿಸಿದ್ದ ಬೆಂಗಳೂರಿನ ಚಂದಾಪುರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಅಧಿಕಾರಿಯೊಬ್ಬರನ್ನು ವರ್ಗಾವಣೆ ಮಾಡಲಾಗಿದೆ. ಆ ಬಗ್ಗೆ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ‘ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ’ ಎಂದು ಉದ್ದದ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆದರೆ, ಕ್ಷಣಾರ್ಧದಲ್ಲಿಯೇ ಆ ಪೋಸ್ಟ್ಅನ್ನು ಡಿಲೀಟ್ ಮಾಡಿದ್ದು, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಲ್ಲದೆ, ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಆಗುತ್ತಿದ್ದು, ಕುಮಾರಸ್ವಾಮಿ ಅವರು ಪ್ರಧಾನಿ ಮೋದಿಗೆ ಹೆದರಿ ಪೋಸ್ಟ್ ಡಿಲೀಟ್ ಮಾಡಿದರಾ ಎಂಬ ಪ್ರಶ್ನೆಗಳೂ ವ್ಯಕ್ತವಾಗುತ್ತಿವೆ.
ಚಂದಾಪುರದ ಎಸ್ಬಿಐ ಶಾಖೆಗೆ ಗ್ರಾಹಕರೊಬ್ಬರು ಭೇಟಿ ನೀಡಿದ್ದಾಗ, ಅಲ್ಲಿನ ಮಹಿಳಾ ಅಧಿಕಾರಿ ಕನ್ನಡದಲ್ಲಿ ಮಾತನಾಡಲು ನಿರಾಕರಿಸಿದ್ದರು. ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಧಿಕಾರಿಯ ನಡೆ, ಧೋರಣೆಯ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ, ಆ ಅಧಿಕಾರಿಯನ್ನು ಎಸ್ಬಿಐ ವರ್ಗಾವಣೆ ಮಾಡಿದೆ.
ಅಧಿಕಾರಿಯ ವರ್ಗಾವಣೆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಎಚ್ಡಿ ಕುಮಾರಸ್ವಾಮಿ, “ಚಂದಾಪುರ ಎಸ್ಬಿಐ ಅಧಿಕಾರಿಯೊಬ್ಬರು ಕನ್ನಡ ಮಾತನಾಡಲು ನಿರಾಕರಿಸಿದ್ದನ್ನು ನಾನು ಬಲವಾಗಿ ಖಂಡಿಸುತ್ತೇನೆ. ಕನ್ನಡ ಭಾಷೆಗೆ ಗೌರವ ನೀಡುವುದು ಕನ್ನಡಿಗರಿಗೆ ಗೌರವ ನೀಡುವುದಕ್ಕೆ ಸಮಾನವಾಗಿದೆ. ಈ ದುರ್ವರ್ತನೆಗೆ ಕಾರಣರಾದ ಅಧಿಕಾರಿಯನ್ನು ವರ್ಗಾಯಿಸಿದ ಎಸ್ಬಿಐನ ಕ್ರಮವನ್ನು ನಾವು ಸ್ವಾಗತಿಸುತ್ತೇವೆ. ಇಂತಹ ಘಟನೆ ಮತ್ತೆ ಮರುಕಳಿಸಬಾರದು. ಬ್ಯಾಂಕ್ ನೌಕರರು ತಾವು ಸೇವೆ ಸಲ್ಲಿಸುವ ಕಚೇರಿಯಲ್ಲಿ ಭಾಷೆ ಮತ್ತು ಸಂಸ್ಕೃತಿಯನ್ನು ಗೌರವಿಸುವುದು ಬಹಳ ಮುಖ್ಯ. ಸ್ಥಳೀಯ ಭಾಷೆಯನ್ನು ಅಗೌರವಿಸುವುದು ಸಾರ್ವಜನಿಕ ಸೇವೆಯ ಮನೋಭಾವವನ್ನು ಉಲ್ಲಂಘಿಸುತ್ತದೆ” ಎಂದಿದ್ದರು.
ಮುಂದುವರೆದು, “ಸಾರ್ವಜನಿಕರೊಂದಿಗೆ ವ್ಯವಹರಿಸುವ ನೌರರು ಪ್ರಜಾಪ್ರಭುತ್ವದಲ್ಲಿ, ಗ್ರಾಹಕರು ಸರ್ವೋಚ್ಛರು ಮತ್ತು ಸ್ಥಳೀಯ ಭಾಷೆಯಲ್ಲಿ ಸಂವಹನ ನಡೆಸುವುದು ಕೇವಲ ಸೌಜನ್ಯವಲ್ಲ – ಅದು ಒಂದು ಜವಾಬ್ದಾರಿ ಎಂಬುದನ್ನು ನೆನಪಿನಲ್ಲಿಡಬೇಕು. ಇಂತಹ ಘಟನೆಗಳನ್ನು ಹಗುರವಾಗಿ ಪರಿಗಣಿಸಬಾರದು. ಎಸ್ಬಿಐ ಸೇರಿದಂತೆ ಎಲ್ಲ ರಾಷ್ಟ್ರೀಕೃತ ಬ್ಯಾಂಕ್ಗಳು ಭಾಷಾ ಗೌರರವನ್ನು ಎತ್ತಿಹಿಡಿಯಲು ಮತ್ತು ಅಂತಹ ನಡವಳಿಕೆ ಪುನರಾವರ್ತನೆಯಾಗದಂತೆ ತಮ್ಮ ಸಿಬ್ಬಂದಿಗೆ ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಬೇಕು. ‘ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮ’!!” ಎಂದು ಹೇಳಿದ್ದರು.
ಆದರೆ, ಈ ಪೋಸ್ಟ್ಅನ್ನು ಕೆಲವೇ ನಿಮಿಷಗಳಲ್ಲಿ ಕುಮಾರಸ್ವಾಮಿ ಅವರು ಅಳಿಸಿಹಾಕಿದ್ದಾರೆ. ಕನ್ನಡ ಭಾಷಾ ಸ್ವಾಭಿಮಾನದ ಬಗ್ಗೆ ಗಟ್ಟಿ ದನಿಯಂತೆ ಧ್ವನಿಸುವ ಪದಗಳಲ್ಲಿ ಪೋಸ್ಟ್ ಬರೆದಿದ್ದ ಕುಮಾರಸ್ವಾಮಿ ಅವರು ತುಸು ಹೊತ್ತಿನಲ್ಲೇ ಪೋಸ್ಟ್ಅನ್ನು ಡಿಲೀಟ್ ಮಾಡಿದ್ದಾರೆ.
ಕುಮಾರಸ್ವಾಮಿ ಅವರ ನಡೆ ಕನ್ನಡಿಗರ ಅಸಮಾಧಾನಕ್ಕೆ ಕಾರಣವಾಗಿದೆ. ಬಿರುಸಿದ ದನಿಯ ಪೋಸ್ಟ್ ಹಾಕಿದ್ದ ಕುಮಾರಸ್ವಾಮಿ ಅವರು ಗಟ್ಟಿ ದನಿ ನಿಮಿಷಗಳಲ್ಲೇ ಹುದುಗಿ ಹೋಗಿತೇ ಎಂದು ಕನ್ನಡಿಗರು ಪ್ರಶ್ನಿಸಿದ್ದಾರೆ.
ದಕ್ಷಿಣದ ರಾಜ್ಯಗಳ ಮೇಲೆ ಹಿಂದಿ ಹೇರಿಕೆ ಮಾಡಲು ಹವಣಿಸುತ್ತಿರುವ ಪ್ರಧಾನಿ ಮೋದಿ ಅವರಿಗೆ ಹೆದರಿ ಕುಮಾರಸ್ವಾಮಿ ಅವರು ತಮ್ಮ ಪೋಸ್ಟ್ಅನ್ನು ಡಿಲೀಟ್ ಮಾಡಿದ್ದಾರೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ಅಧಿಕಾರದ ಲಾಲಸೆಗಾಗಿ ಕುಮಾರಸ್ವಾಮಿ ಅವರು ಮೋದಿ, ಬಿಜೆಪಿ ಎದುರು ಮಂಡಿಯೂರಿದ್ದಾರೆ. ಅವರ ಕನ್ನಡ ಸ್ವಾಭಿಮಾನ ಮೋದಿ ಎದುರು ಬೆನ್ನುಬಾಗಿದೆ. ಮೋದಿಗೆ ಹೆದರಿ ಕನ್ನಡ ಕುರಿತಾದ ಪೋಸ್ಟ್ಅನ್ನು ಕುಮಾರಸ್ವಾಮಿ ಡಿಲೀಟ್ ಮಾಡಿದ್ದಾರೆ” ಎಂದು ಆಕ್ರೋಶ ವ್ಯಕ್ತವಾಗಿದೆ.
“ಅಬ್ಯಾಸ ಬಲದಿಂದ ಕುಮಾರಣ್ಣ ರೊಚ್ಚಿಗೆದ್ದಿದ್ದಾರೆ ಆಮೇಲೆ ಸ್ವಲ್ಪ ಹೊತ್ತಿಗೆ ಪಿಕಾಕ್ ಚಾಮಿಯವರು ಕಣ್ಣು ಮುಂದೆ ಬಂದು ಪೋಸ್ಟ್ ಡಿಲಿಟ್ ಮಾಡಿದ್ದಾರೆ” ಎಂದು ಟ್ರೋಲ್ಗೂ ಗುರಿಯಾಗಿದ್ದಾರೆ.