ಕನ್ನಡ ಸಂವೇದನೆಯ ಭಾಗವಾಗಿರುವ ಕನ್ನಡ ಬಾವುಟ ಕನ್ನಡಿಗರೆಲ್ಲರ ಮನಸ್ಸುಗಳಲ್ಲಿ ಶಾಶ್ವತ ಸ್ಥಾನವನ್ನು ಗಳಿಸಿಕೊಂಡಿದೆ. ನವೆಂಬರ್ 01ರ ಕನ್ನಡ ರಾಜ್ಯೋತ್ಸವ ದಿನದಂದು ನಾವು ಗಲ್ಲಿ-ಗಲ್ಲಿಗಳಲ್ಲಿ ಹಾರಿಸುವ ಕನ್ನಡದ ಬಾವುಟಕ್ಕೆ ಸಲ್ಲಿಸಬೇಕಾದ ಗೌರವಗಳನ್ನು ಮನನ ಮಾಡಿಕೊಳ್ಳುವ ಸಂದರ್ಭ ಇದಾಗಿದೆ. ಕನ್ನಡ ರಾಜ್ಯೋತ್ಸವವನ್ನು ನಾವು ಹೇಗೆ ಆಚರಿಸಬಹುದು? ಹೇಗೆ ಗೌರವಿಸಬಹುದು? ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕೆಲವು ಸಲಹೆಗಳನ್ನು ನೀಡಿದೆ. ಅವು ಹೀಗಿವೆ!
- ಕನ್ನಡ ಬಾವುಟ ಹಳದಿ ಮತ್ತು ಕೆಂಪು ಬಣ್ಣದ್ದಾಗಿರಬೇಕು. ಹಳದಿ ಬಣ್ಣ ಮೇಲೆ ಹಾಗೂ ಕೆಂಪು ಬಣ್ಣ ಕೆಳಗೆ ಬರುವಂತೆ ಬಾವುಟವು ಹಾರಬೇಕು.
- ಬಾವುಟವು ಕೈಮಗ್ಗ/ ಖಾದಿ ಉತ್ಪನ್ನದ್ದಾಗಿದ್ದರೆ ಚೆನ್ನ.
- ರಾಷ್ಟ್ರಧ್ವಜದ ಅಳತೆಗಳ ಆಧಾರದಲ್ಲಿ ಕನ್ನಡ ಧ್ವಜವು ಇರಬೇಕು. ವಿವಿಧ ಅಳತೆಯ ರಾಷ್ಟ್ರಧ್ವಜಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಈ ಪೈಕಿ ಅವಶ್ಯಕತೆಗೆ ಅನುಗುಣವಾದ ಅಳತೆಯ ಧ್ವಜವನ್ನು ಹಾರಿಸಬೇಕು.
- ನಾಡಧ್ವಜವನ್ನು ರಾಜ್ಯೋತ್ಸವದ ದಿನ ೯ ಗಂಟೆಯ ಒಳಗೆ ಹಾರಿಸಬೇಕು. ಹಾರಿಸಿದ ನಂತರ ಕಾರ್ಯಕ್ರಮ ಅಂದೇ ಮುಗಿದಲ್ಲಿ ಸೂರ್ಯ ಮುಳುಗುವ ಮುನ್ನ ಎಲ್ಲ ಗೌರವಗಳೊಂದಿಗೆ ಅದನ್ನು ಕೆಳಗಿಳಿಸಿ ಸಂರಕ್ಷಿಸುವ ಕೆಲಸವಾಗಬೇಕು. ಯಾವುದೇ ಕಾರಣಕ್ಕೂ ನಾಡಧ್ವಜವನ್ನು ಅನಿರ್ದಿಷ್ಟ ಅವಧಿಗೆ ಕಂಬಗಳ ಮೇಲೆ ಹಾಗೆಯೇ ಬಿಡತಕ್ಕದ್ದಲ್ಲ.
- ಧ್ವಜದ ಮೇಲೆ ಯಾವುದೇ ಚಿತ್ರಗಳು ಮೂಡಿಸತಕ್ಕದ್ದಲ್ಲ.
- ಧ್ವಜಸ್ತಂಭವನ್ನು ವರ್ಷಪೂರ್ತಿ ಶುಚಿಯಾಗಿ ಕಾಪಾಡಿಕೊಳ್ಳುವ ಜವಾಬ್ದಾರಿಯನ್ನು ಸ್ಥಳೀಯ ಸಂಘ ಸಂಸ್ಥೆಗಳು/ ವ್ಯಕ್ತಿಗಳು ಕಾಳಜಿಯಿಂದ ನಿರ್ವಹಿಸಬೇಕು.
- ಧ್ವಜವನ್ನು ಯಾವುದೇ ಪ್ರತಿಮೆ ವ್ಯಕ್ತಿಗಳನ್ನು ಮುಚ್ಚಲು ಬಳಸತಕ್ಕದ್ದಲ್ಲ.
- ಧ್ವಜವನ್ನು ನೆಲದ ಮೇಲೆ ಇಡತಕ್ಕದ್ದಲ್ಲ.
- ಯಾವುದೇ ಕಟ್ಟಡವನ್ನು ಮುಚ್ಚಲು ಬಳಸತಕ್ಕದ್ದಲ್ಲ.
- ಹರಿದ ಧ್ವಜವನ್ನು ಯಾವುದೇ ಸಂದರ್ಭದಲ್ಲಿಯೂ ಬಳಸತಕ್ಕದ್ದಲ್ಲ.
- ರಾಷ್ಟ್ರಧ್ವಜದೊಂದಿಗೆ ನಾಡಧ್ವಜವನ್ನು ಹಾರಿಸಬಹುದು. ರಾಷ್ಟ್ರಧ್ವಜಕ್ಕಿಂತ ಎತ್ತರದಲ್ಲಿ ಕನ್ನಡ ಧ್ವಜವನ್ನು ಹಾರಿಸುವುದು ಸರಿಯಲ್ಲ.
- ಕಾಗದದಲ್ಲಿ ಮಾಡಲಾದ ಧ್ವಜಗಳನ್ನು ಅಲಂಕಾರಕ್ಕೆ ಬಳಸಿಕೊಂಡ ಸಂದರ್ಭದಲ್ಲಿ ಕಾರ್ಯಕ್ರಮ ಮುಗಿದ ನಂತರ ಅದನ್ನು ಚೆಲ್ಲಾಪಿಲ್ಲಿಯಾಗಿಸದೆ ಗೌರವಪೂರ್ವಕವಾಗಿ ವಿಲೇವಾರಿ ಮಾಡತಕ್ಕದ್ದು.
- ವಾಹನಗಳ ಮೇಲೆ ಬಾವುಟವನ್ನು ಅಳವಡಿಸಿಕೊಂಡು ಚಲಿಸುವ ಸಂದರ್ಭದಲ್ಲಿಯೂ ಬಾವುಟಕ್ಕೆ ಸಿಗಬೇಕಾದ ಗೌರವವನ್ನು ಕಳೆಯತಕ್ಕದ್ದಲ್ಲ. ವಾಹನದ ಮಧ್ಯದಲ್ಲಿ ಅಥವಾ ಬಲಗಡೆ ಮಾತ್ರ ಬಾವುಟವನ್ನು ಅಳವಡಿಸಿಕೊಳ್ಳತಕ್ಕದ್ದು.
- ಯಾವುದೇ ಮೆರವಣಿಗೆಗಳಲ್ಲಿ ಬಾವುಟವನ್ನು ಕೊಂಡೊಯ್ಯುವ ಸಂದರ್ಭದಲ್ಲಿ ಅದನ್ನು ಕೊಂಡೊಯ್ಯುವ ವ್ಯಕ್ತಿಯು ತಂಡದ ಮುಂದೆ ಅಥವಾ ಬಲಗಡೆ ಇರತಕ್ಕದ್ದು. ಬಾವುಟವನ್ನು ಕೊಂಡೊಯ್ಯುವ ವ್ಯಕ್ತಿಯು ಬಾವುಟವನ್ನು ಬಗ್ಗಿಸಿ ಬೇರಾವುದೇ ಗಣ್ಯರಿಗೆ ನಮಸ್ಕರಿಸತಕ್ಕದ್ದಲ್ಲ.
ಇವು ನಾಡಧ್ವಜಕ್ಕೆ ನೀಡಬೇಕಾದ ಕನಿಷ್ಠ ಗೌರವಗಳಾಗಿವೆ. ವಸ್ತುಸ್ಥಿತಿಯ ಆಧಾರದಲ್ಲಿ ಆಯೋಜಕರು ಧ್ವಜಕ್ಕೆ ದೊರಕಬೇಕಾದ ಎಲ್ಲಾ ಗೌರವವಗಳನ್ನು ಸಮರ್ಪಕವಾಗಿ ನೀಡುವ ಮೂಲಕ ಕನ್ನಡದ ಪ್ರಜ್ಞೆಯನ್ನು ಮೆರೆಯಬೇಕು. ಇದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿ ಎಂದಿದೆ ಪ್ರಾಧಿಕಾರ.