“ರೈತರ ಸಂಕೇತವಾದ ಹಸಿರು ಶಾಲು ಈಗ ಇಡೀ ದೇಶದ ರೈತರ ಸಂಕೇತವಾಗಿದೆ.ಇದು ಕರ್ನಾಟಕದ ಬಹುದೊಡ್ಡ ಕೊಡುಗೆ. ಕರ್ನಾಟಕ ಮತ್ತು ತಮಿಳುನಾಡಿನ ರೈತರು ಹಾಕುತ್ತಿದ್ದ ಪ್ರತಿಭಟನೆಯ ಸಮಯದಲ್ಲಿ ಬಳಸುತ್ತಿದ್ದ ಹಸಿರು ಶಾಲು ಈಗ ದೇಶದ ಎಲ್ಲ ರೈತರ ಹೆಗಲೇರಿದೆ. ರೈತರ ದೊಡ್ಡ ಸಂಕೇತವಾಗಿದೆ, ರೈತರ ಹೆಸರಿನಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಲ್ಲಿ ರಾಜಕೀಯ ಪಕ್ಷಗಳೂ ಹಸಿರು ಶಾಲು ಬಳಸುತ್ತಿವೆ” ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡ ರಾಕೇಶ್ ಟಿಕಾಯತ್ ಶ್ಲಾಘಿಸಿದರು.
ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಬೆಂಗಳೂರಿನಲ್ಲಿ ಆಯೋಜಿಸಿದ್ದ”ನಮ್ಮ ಎಂಡಿಎಂ, ನಿದ್ರೆಗೆ ಜಾರದ ಸಮಾಜವಾದಿ ಪ್ರಜ್ಞೆ” ಪ್ರೊ ನಂಜುಂಡಸ್ವಾಮಿ ಅವರ 88ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಪ್ರೊ ನಂಜುಂಡಸ್ವಾಮಿ ಅವರು ದಕ್ಷಿಣ ಮತ್ತು ಉತ್ತರ ಭಾರತ ರೈತ ಚಳವಳಿಯನ್ನು ಭಾವನಾತ್ಮಕವಾಗಿ ಬೆಸೆದವರು. ಅವರಿಗೆ ಹಿಂದಿ ಬರುತ್ತಿರಲಿಲ್ಲ, ಟಿಕಾಯತ್ ಅವರಿಗೆ ಕನ್ನಡ -ಇಂಗ್ಲಿಷ್ ಬರುತ್ತಿರಲಿಲ್ಲ. ಆದರೆ ಅಂತರರಾಷ್ಟ್ರೀಯ ಮಟ್ಟದ ಕೃಷಿ ನೀತಿಗಳ ಬಗ್ಗೆ ಜ್ಞಾನ ಇದ್ದವರಾಗಿದ್ದರು. 1993ರಲ್ಲಿ ದೆಹಲಿಯಲ್ಲಿ WTO ಒಪ್ಪಂದದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಆನಂತರ ಟಿಕಾಯತ್ ಮತ್ತು ಪ್ರೊಫೆಸರ್ ಹಲವು ಪ್ರತಿಭಟನೆಗಳನ್ನು ಜೊತೆಯಾಗಿ ಹಮ್ಮಿಕೊಂಡಿದ್ದರು” ಎಂದು ಸ್ಮರಿಸಿದರು.
“ಈಗಲೂ ಚುಕ್ಕಿ ನಂಜುಂಡಸ್ವಾಮಿಯಂತವರು ಅದೇ ರೀತಿಯ ಆಶಯ ಹೊತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಘಟನೆ ಮಾಡುತ್ತಿದ್ದಾರೆ. ಭಾರತದಲ್ಲಿ ನೂರಾರು ಸಂಘಟನೆಗಳಿವೆ. ಪ್ರೊಫೆಸರ್ ಅವರು ಪಂಜಾಬ್, ಹರಿಯಾಣ, ಉತ್ತರಪ್ರದೇಶದ ರೈತ ಸಂಘಟನೆಗಳನ್ನು ಒಂದು ಗೂಡಿಸಿ ಸಮನ್ವಯ ಸಮಿತಿಯ ಅರ್ಥದಲ್ಲಿ ಕೆಲಸ ಮಾಡಿದ್ದಾರೆ. ಈಗಲೂ ನಂಜುಂಡಸ್ವಾಮಿಯವರ ಆಶಯದಂತೆ ಎಲ್ಲ ಕಡೆ ಸಂಘಟನೆ ನಡೆಯುತ್ತಿದೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಸಂಯುಕ್ತ ಕಿಸಾನ್ ಮೋರ್ಚಾದ ಬೃಹತ್ ಪ್ರತಿಭಟನೆ ನಂಜುಂಡಸ್ವಾಮಿ ಅವರ ಆಶಯದಂತೆ, ಮಾರ್ಗದರ್ಶನದಂತೆಯೇ ನಡೆದಿದೆ.
ಈಗಲೂ ದೇಶದಲ್ಲಿ ಬಹಳ ಸಮಸ್ಯೆಗಳಿವೆ. ದಕ್ಷಿಣ ಭಾರತದಲ್ಲಿ ತೆಂಗು ಬೆಳೆಗಾರರ ಸಮಸ್ಯೆ, ಶ್ರೀನಗರದಲ್ಲಿ ಸೇಬು ಬೆಳೆಗಾರರ ಸಮಸ್ಯೆ ಇದೆ. ನಿರುದ್ಯೋಗ ಹೆಚ್ಚುತ್ತಿದೆ, ಆದಾಯ ಕಡಿಮೆಯಾಗುತ್ತಿದೆ. ದೇಹಲಿಯಲ್ಲಿ ನಡೆದ ಕಿಸಾನ್ ಆಂದೋಲನ ರೀತಿಯ ಆಂದೋಲನ ಮತ್ತೆ ಆಗಬೇಕಿದೆ. ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ರೈತರಿಗೆ ಪರಿಹಾರ ಸಿಕ್ಕಿಲ್ಲ. ಬೆಂಬಲ ಬೆಲೆ, ಫಸಲ್ಭಿಮಾ ಯೋಜನೆ ಸೇರಿದಂತೆ ಹಲವು ಸಮಸ್ಯೆಗಳಿವೆ” ಎಂದು ವಿವರಿಸಿದರು.
“ಇದೇ 21ರಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ಪ್ರತಿಭಟನೆಗೆ ಕರೆ ಕೊಟ್ಟಿದ್ದೇವೆ. ಹಿಂದೆ ಬಸ್ ಮತ್ತು ರೈಲಿನಲ್ಲಿ ಜನ ಸೇರಿಸುತ್ತಿದ್ದೆವು. ಈಗ ನಮ್ಮ ಟ್ರ್ಯಾಕ್ಟರ್ನಲ್ಲೇ ಜನ ಸೇರಿಸುತ್ತೇವೆ. ಈಗ ವಿದೇಶದ ಜನರೂ ನಮ್ಮ ರೀತಿ ಟ್ರ್ಯಾಕ್ಟರ್ ಪ್ರತಿಭಟನೆ ಮಾಡುತ್ತಿದ್ದಾರೆ. ಒಂದು ಗ್ರಾಮದಿಂದ ಒಂದು ಟ್ರ್ಯಾಕ್ಟರ್ನಲ್ಲಿ ಹತ್ತು-ಹದಿನೈದು ಜನ ಕರೆತರುವುದು ನಮ್ಮ ಫಾರ್ಮುಲಾ. ಆಂದೋಲನದಲ್ಲಿ ರೈತರಿಗೆ ಭಾಗವಹಿಸಲು ಸಹಾಯವಾಗುವಂಥ ಫಾರ್ಮುಲಾ ಇದಾಗಿದೆ” ಎಂದು ಮಾಹಿತಿ ನೀಡಿದರು.