ರಾಜ್ಯ ಸರ್ಕಾರದಿಂದ ಕೊಡಮಾಡುವ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಗಳನ್ನು ಅರ್ಜಿಗಳಿಂದ ಮುಕ್ತಗೊಳಿಸಿ ಸರ್ಕಾರದಿಂದಲೇ ನೇರವಾಗಿ ಅರ್ಹ ಸಾಧಕರನ್ನು ಆಯ್ಕೆ ಮಾಡುವ ಪದ್ಧತಿ ಜಾರಿಗೆ ಚಿಂತನೆ ನಡೆದಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ರವೀಂದ್ರ ಕಲಾ ಕ್ಷೇತ್ರದಲ್ಲಿ ಸೋಮವಾರ ಆಯೋಜಿಸಿದ್ದ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ವಿತರಣೆ ಬಳಿಕ ಸಚಿವರು ಮಾತನಾಡಿದರು.
“ಪ್ರಶಸ್ತಿಗಳನ್ನು ಕೇಳಿ ಪಡೆಯುವಂತೆ ಆಗಬಾರದು. ಅರ್ಹರನ್ನು ಗುರುತಿಸಿ, ಅವರ ಮನೆ ಬಾಗಿಲಿಗೆ ಪ್ರಶಸ್ತಿ ನೀಡಿ ಗೌರವಿಸುವಂತಾಗಬೇಕು. ಇದರಿಂದ ಪ್ರಶಸ್ತಿಯ ಮೌಲ್ಯವೂ ಹೆಚ್ಚಾಗುತ್ತದೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳನ್ನು ಇನ್ನು ಮುಂದೆ ಅರ್ಜಿಗಳನ್ನು ಸ್ವೀಕರಿಸದೆ, ಗಣ್ಯರ ಸಾಧನೆಯನ್ನು ಗುರುತಿಸಿ ಅರ್ಹರಿಗೆ ಪ್ರಶಸ್ತಿ ನೀಡುವ ಅಗತ್ಯವಿದೆ” ಎಂದು ಅಭಿಪ್ರಾಯಪಟ್ಟರು.
“ಜಿಲ್ಲಾ ಪ್ರವಾಸಕ್ಕೆ ಹೋದರೆ ಪ್ರಶಸ್ತಿ ಅಪೇಕ್ಷಿತರ ಅರ್ಜಿ ಹಾಗೂ ದಾಖಲೆಗಳನ್ನು ಇಟ್ಟುಕೊಳ್ಳಲು ಜೊತೆಯಲ್ಲಿ ಹೆಚ್ಚುವರಿ ಕಾರನ್ನು ತೆಗೆದುಕೊಂಡು ಹೋಗುವ ಪರಿಸ್ಥಿತಿ ಇದೆ. ಕಳೆದ ಬಾರಿ ಅರ್ಜಿ ಹಾಕದ ಅಂದಾಜು 25ಕ್ಕೂ ಹೆಚ್ಚು ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಉದಾಹರಣೆಗೆ, ಕೊಪ್ಪಳ ಜಿಲ್ಲೆಯ ವೃದ್ಧೆ ಹುಚ್ಚವ್ವ ಎಂಬವರು ತಮ್ಮ ಕೋಟ್ಯಂತರ ರೂಪಾಯಿ ಬೆಲೆಬಾಳುವ ಎರಡು ಎಕರೆ ಜಾಗವನ್ನು ಶಾಲೆಗೆಂದು ನೀಡಿ ಔದಾರ್ಯತೆ ಮೆರೆದಿದ್ದರು. ಇಂತಹವರನ್ನು ಗುರುತಿಸಿ ಪ್ರಶಸ್ತಿ ನೀಡಿದ ತೃಪ್ತಿ ಇದೆ” ಎಂದು ಹೇಳಿದರು.
ಉತ್ತಮ ಸಲಹೆಗಳು ಬರಲಿ
“ಅರ್ಜಿ ಸ್ವೀಕರಿಸದೆ ರಾಜ್ಯೋತ್ಸವ ಪ್ರಶಸ್ತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ನಾಡಿನ ಸಾಹಿತಿಗಳು ಸಮ್ಮತಿಸಿದ್ದು, ಈ ಬಗ್ಗೆ ಇನ್ನಷ್ಟು ಉತ್ತಮ ಸಲಹೆಗಳು ಬರಲಿ. ಈ ವಿಚಾರ ಸಾರ್ವಜನಿಕವಾಗಿ ಚರ್ಚೆಯಾಗಲಿ. ಇನ್ನು ಪ್ರಶಸ್ತಿ ನೀಡಿಕೆ ವಿಷಯದಲ್ಲಿ ನಮ್ಮ ಸರ್ಕಾರ ಸಾಮಾಜಿಕ ನ್ಯಾಯ ಪರಿಪಾಲನೆ ಮಾಡುತ್ತಿದೆ. ಅದನ್ನೇ ಮುಂದೆಯೂ ಕೂಡ ಮುಂದುರೆಸಲಾಗುವುದು” ಎಂದು ತಿಳಿಸಿದರು.
ಸಮಾರಂಭದಲ್ಲಿ 2023ನೇ ಸಾಲಿನ ವರ್ಷದ ಗೌರವ ಪ್ರಶಸ್ತಿಯನ್ನು ಡಾ.ಸಿ.ವೀರಣ್ಣ, ಡಾ.ಶ್ರೀರಾಮ ಇಟ್ಟಣ್ಣನವರ, ಜಾಣಗೆರೆ ವೆಂಕಟರಾಮಯ್ಯ, ಎ.ಎಂ.ಮದರಿ ಹಾಗೂ ಡಾ.ಸಬಿಹಾ ಭೂಮಿಗೌಡ ಅವರಿಗೆ ಸಚಿವರು ಪ್ರದಾನ ಮಾಡಿದರು.
2023ನೇ ಸಾಲಿನ ವರ್ಷದ ”ಸಾಹಿತ್ಯ ಶ್ರೀ” ಪ್ರಶಸ್ತಿಯನ್ನು ಡಾ.ಎಂ.ಎಸ್.ಶೇಖರ್, ಜಿ.ಎನ್.ಮೋಹನ್, ಡಾ.ಟಿ.ಎಸ್.ವಿವೇಕಾನಂದ, ಡಾ.ಜಯಶ್ರೀ ಕಂಬಾರ, ಪ್ರೊ.ನಿಜಲಿಂಗಪ್ಪ ಯಮನಪ್ಪ ಮಟ್ಟಿಹಾಳ, ಡಾ.ಬಾಲಗುರುಮೂರ್ತಿ, ಪ್ರೊ.ಶಿವಗಂಗಾ ರುಮ್ಮಾ, ಡಾ.ರೀಟಾ ರೀನಿ, ಡಾ.ಕಲೀಂ ಉಲ್ಲಾ, ಡಾ.ವೆಂಕಟಕಗಿರಿ ದಳವಾಯಿ ಅವರಿಗೆ ಪ್ರದಾನ ಮಾಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಡಾ.ಹಂಪ ನಾಗರಾಜಯ್ಯ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್, ಇಲಾಖೆ ನಿರ್ದೇಶಕರಾದ ಗಾಯತ್ರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.