ದ್ವಿಭಾಷಾ ಸೂತ್ರವೇ ನನ್ನ ಅಭಿಪ್ರಾಯ; ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ

Date:

Advertisements

“ದ್ವಿಭಾಷಾ ಸೂತ್ರವೇ ನನ್ನ ಅಭಿಪ್ರಾಯವಾಗಿದೆ. ನನ್ನ ಅಭಿಪ್ರಾಯವೇ ಸರ್ಕಾರದ ಅಭಿಪ್ರಾಯ ಆಗುವಂತೆ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.

ಜನ‌ ಪ್ರಕಾಶನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ ಬರಗೂರು ರಾಮಚಂದ್ರಪ್ಪ ಅವರ ಸಂಪಾದಕತ್ವದ ಕುವೆಂಪು ವಿಚಾರ ಕ್ರಾಂತಿ ಕೃತಿಯನ್ನು ಜನಾರ್ಪಣೆಗೊಳಿಸಿ ಅವರು ಮಾತನಾಡಿದರು.

ಕುವೆಂಪು ಅವರ ಪ್ರಖರ ವೈಚಾರಿಕತೆ ಸಮಾಜದಲ್ಲಿ ಜಾತಿ ಅಸಮಾನತೆ ಇರುವವರೆಗೂ ಪ್ರಸ್ತುತವಾಗಿರುತ್ತದೆ. ವೈಚಾರಿಕತೆ, ವೈಜ್ಞಾನಿಕತೆಯ ಬಗ್ಗೆ ಕುವೆಂಪು ಅವರಿಗೆ ಸ್ಪಷ್ಟ ದೃಷ್ಟಿಕೋನ ಇತ್ತು. ಜಾತಿ ತಾರತಮ್ಯ ಇಲ್ಲದ ಸಮಾಜ ಕುವೆಂಪು ಅವರ ಆಶಯವಾಗಿತ್ತು. ಆದರೆ, ಇಂದು ಶಿಕ್ಷಣ ಹೆಚ್ಚಾದಷ್ಟೂ ಮೌಢ್ಯ, ಕಂದಾಚಾರ ಹೆಚ್ಚಾಗಿ ವೈಜ್ಞಾನಿಕ ಪ್ರಜ್ಞೆ ಕಡಿಮೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

Advertisements

ನಮ್ಮ ಸಂವಿಧಾನದಲ್ಲಿ ಕುವೆಂಪು, ಬಸವಣ್ಣ ಅವರ ಆಶಯಗಳೂ ಅಡಕವಾಗಿವೆ. ಆದರೆ ಸಂವಿಧಾನದ ಮೌಲ್ಯ ಮತ್ತು ಮಹತ್ವ ಅರಿಯುವ ಕೆಲಸ ಹೆಚ್ಚಾಗಬೇಕು. ಈ ಉದ್ದೇಶದಿಂದಲೇ ಸಂವಿಧಾನ ಓದು, ಸಂವಿಧಾನ ಪೀಠಿಕೆ ಅಭಿಯಾನವನ್ನು ನಾವು ನಡೆಸುತ್ತಿದ್ದೇವೆ. ಎಲ್ಲ ಶಾಲೆಗಳಲ್ಲಿ ಸಂವಿಧಾನದ ಪೀಠಿಕೆ ಓದುವುದನ್ನು ಕಡ್ಡಾಯ ಮಾಡಿದ್ದೇವೆ ಎಂದರು.

ರಾಜಕಾರಣಿಯಾಗಿ ನನಗೆ ಕೆಲವು ಮಿತಿಗಳು ಇರುತ್ತವೆ. ಸಮಾಜದ ನಂಬಿಕೆಗಳ ಜೊತೆಗೂ ನಾವು ಕೆಲವೊಮ್ಮೆ ನಡೆಯಬೇಕಾಗುತ್ತದೆ. ನಾನು ದೇವಸ್ಥಾನಕ್ಕೆ ಹೋದಾಗ ಕುಂಕುಮ ಇಡುತ್ತಾರೆ. ಕುಂಕುಮ ಇಟ್ಟಿದ್ದಕ್ಕೂ ಕತೆ ಕಟ್ಟುತ್ತಾರೆ. ನಾವು ಗ್ರಾಮೀಣ ಭಾಗಕ್ಕೆ ಹೋದಾಗ ದೇವಸ್ಥಾನಗಳಿಗೆ ಹೋಗದಿದ್ದರೆ ನಮ್ಮ ಬಗ್ಗೆ ಬೇರೆಯದೇ ರೀತಿಯ ಕತೆ ಕಟ್ಟುತ್ತಾರೆ. ಈ ಕತೆಯನ್ನು ಕೆಲವು ಜನರೂ ನಂಬುವುದರಿಂದ ನಮಗೆ ಮತಗಳೇ ಬರುವುದಿಲ್ಲ. ಆ ಕಾರಣಕ್ಕೆ ನಾನು ದೇವಸ್ಥಾನಗಳಿಗೆ ಹೋಗಲೇಬೇಕಿದೆ ಎಂದು ವಿವರಿಸಿದರು.

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದೇ ಹೋದರೆ ಕೇವಲ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ. ಈ ಕಾರಣಕ್ಕೇ ಮೌಢ್ಯ ನಿಷೇಧ ಕಾಯ್ದೆ ಪರಿಣಾಮಕಾರಿ ಆಗುವುದಿಲ್ಲ. ನಾವು ಏನೇ ಕಾನೂನು, ನಿಯಮ ಮಾಡಿದರೂ ಸಂವಿಧಾನದ ಚೌಕಟ್ಟಿಗೇ ಒಳಪಟ್ಟರಬೇಕು ಎಂದರು.

ಗುಡಿ, ಚರ್ಚು, ಮಸೀದಿಗಳ ಬಿಟ್ಟು ಬನ್ನಿ. ಬಡತನದ ಬೇರುಗಳ ಬುಡ ಸಮೇತ ಕಿತ್ತು ಹಾಕಲು ಬನ್ನಿ ಎಂದು ಕುವೆಂಪು ಅವರು ಕರೆ ನೀಡಿದ್ದರು. ಈ ಕರೆಯನ್ನು ಸಮಾಜ ಪಾಲಿಸಿದರೆ ಅಸಮಾನತೆಯ ಸಮಾಜ ಸಮಾನತೆಯ ಕಡೆ ಚಲಿಸುತ್ತದೆ. ಕುವೆಂಪು ಅವರ ಆಶಯ ಮತ್ತು ಮೌಲ್ಯಗಳು ಇಡೀ ವಿಶ್ವಕ್ಕೇ ಅನ್ವಯ ಆಗುವುದರಿಂದ ಜಗತ್ತಿನ ಇತರೆ ಭಾಷೆಗಳಿಗೂ ಈ ಕೃತಿ ಅನುವಾದವಾಗಲಿ ಎಂದು ಆಶಿಸಿದರು.

ನ್ಯಾ.ಹೆಚ್.ಎನ್.ನಾಗಮೋಹನ್ ದಾಸ್ ಸಂವಿಧಾನ ಕುರಿತು ಮಾತನಾಡಿದರು. ನಾಡೋಜ ಡಾ. ಹಂ.ಪ.ನಾಗರಾಜಯ್ಯ, ವಿಶ್ರಾಂತ ಕುಲಪತಿ ಡಾ.ಚಿದಾನಂದಗೌಡ, ಪ್ರೊ.ಬರಗೂರು ರಾಮಚಂದ್ರಪ್ಪ ಹಾಗೂ ಜನ ಪ್ರಕಾಶನದ ಬಿ.ರಾಜಶೇಖರಮೂರ್ತಿ, ಹೆಚ್.ಎನ್.ಹರಿ, ಎ.ವಿ.ಶ್ರೀಹರಿ ಉಪಸ್ಥಿತರಿದ್ದರು. ಹಲವು ಜಿಲ್ಲೆಗಳಿಂದ ಕುವೆಂಪು ಅಭಿಮಾನಿಗಳು, ಬರಗೂರು ಅವರ ಅಭಿಮಾನಿಗಳು ಬಂದಿದ್ದು ಸಭಾಂಗಣ ತುಂಬಿ, ಹೊರಗೂ ಜನ ನೆರೆದಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಶಮಿತಾ ಮಲ್ನಾಡು ಕುವೆಂಪು ಗೀತೆಗಳನ್ನು ಹಾಡಿದರು.

WhatsApp Image 2025 07 05 at 8.24.43 PM
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X