ಭಾರತದ ಹುಲಿ ಮೀಸಲು ಪ್ರದೇಶಗಳಲ್ಲಿ ‘ಹಿಂಸೆ ಮತ್ತು ಬಲವಂತ’ದಿಂದ ಆದಿವಾಸಿಗಳನ್ನು ಒಕ್ಕಲೆಬ್ಬಿಸುವ ಕೃತ್ಯವನ್ನು ಅರಣ್ಯ ಇಲಾಖೆ ನಡೆಸುತ್ತಲೇ ಇದೆ. ಈ ಬಗ್ಗೆ ಆದಿವಾಸಿ ಜನರು, ಸಾಮಾಜಿಕ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಕೊಡಗು ಮತ್ತು ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಸಮೀಪವಿರುವ ಕರಡಿಕಲ್ಲು ಪ್ರದೇಶದಲ್ಲಿ ‘ಸಂರಕ್ಷಿತ ಪ್ರದೇಶಗಳ ವಿರುದ್ಧ ಸಮುದಾಯ ಜಾಲ’ (CNAPA) ಸಂಘಟನೆ ಆನ್ಲೈನ್ ಸಭೆ ನಡೆಸಿದೆ. ಸಭೆಯಲ್ಲಿ ಭಾಗಿಯಾಗಿದ್ದ ಆದಿವಾಸಿ ಜನರು ಮತ್ತು ಸಾಮಾಜಿಕ ಕಾರ್ಯಕರ್ತರು ಸರ್ಕಾರಗಳ ಬಲವಂತದ ತೆರವು ಕಾರ್ಯಾಚರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಮೀಸಲು ಅರಣ್ಯ ಪ್ರದೇಶಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು 1990ರ ದಶಕದಲ್ಲಿ ರೂಪಿಸಿದ ಸ್ಯಾಟಲೈಟ್ ನಕ್ಷಗಳನ್ನು ತೋರಿಸಿ, ನಮ್ಮ ಮೇಲೆ ದರ್ಪ ತೋರುತ್ತಿದ್ದಾರೆ. ಆದರೆ, ಆ ನಕ್ಷ ಸಿದ್ದವಾಗುವುದಕ್ಕೂ ಮೊದಲೇ 1985ರಲ್ಲಿ ನಮ್ಮನ್ನು ಬಲವಂತವಾಗಿ ಅರಣ್ಯ ಪ್ರದೇಶದಿಂದ ಹೊರಹಾಕಲಾಗಿತ್ತು. ಈಗ ನಮ್ಮ ಪರಿಸ್ಥಿತಿ ದುಸ್ಥರವಾಗಿದೆ” ಎಂದು ಹೇಳಿಕೊಂಡಿದ್ದಾರೆ.
ಸಭೆಯಲ್ಲಿ ಮಾತನಾಡಿದ , ನಾಗರಹೊಳೆಯ ಕರಡಿಕಲ್ಲು ಗ್ರಾಮ ಪಂಚಾಯತಿ ಅಧ್ಯಕ್ಷ ಶಿವು ಜೆ.ಎ, “ಸರ್ಕಾರದ ಸಂರಕ್ಷಣಾ ಮಾದರಿಯು ಆದಿವಾಸಿ ಕುಟುಂಬಗಳನ್ನು ಒಕ್ಕಲೆಬ್ಬಿಸಲು ಕಾರಣವಾಗಿದೆ” ಎಂದು ಹೇಳಿದ್ದಾರೆ.
“ಹಲವಾರು ದಶಕಗಳಿಂದ ನಮ್ಮ ಪೂರ್ವಜನರು ಅತ್ತೂರು ಕರಡಿಕಲ್ ಹಾಡಿಯಲ್ಲಿ ವಾಸವಾಗಿದ್ದರು. ಆದರೆ,1980ರ ದಶಕದಲ್ಲಿ ಅಲ್ಲಿಂದ ನಮ್ಮನ್ನು ಹೊರಹಾಕಲಾಗಿದೆ. ನಾವು ನಮ್ಮ ಪೂರ್ವಜರ ಭೂಮಿಗೆ ಮರಳಲು ಬಯಸುತ್ತೇವೆ. ನಾನು ಮಾತ್ರವಲ್ಲ, ನಮ್ಮದೊಂದಿಗಿರುವ 52 ಕುಟುಂಬಗಳು ನಮ್ಮ ಸ್ವಂತ ನೆಲೆ ಕರಡಿಕಲ್ ಹಾಡಿಗೆ ಮರಳಬಯಸುತ್ತೇವೆ. ನಮ್ಮ ಹಾಡಿಯಿದ್ದ ಪ್ರದೇಶವನ್ನು ಹುಲಿ ಮೀಸಲು ಪ್ರದೇಶವೆಂದು ಹೊರಡಿಸಿರುವ ಅಧಿಸೂಚನೆಯು ಕಾನೂನುಬಾಹಿರವಾಗಿದೆ. ತಲೆಮಾರುಗಳಿಂದ ಕಾಡುಗಳ ಒಳಗೆ ವಾಸಿಸುವ ಜನರೊಂದಿಗೆ ಯಾವುದೇ ಸಮಾಲೋಚನೆ ನಡೆಸದೆ, ಅಭಿಪ್ರಾಯ ಪಡೆಯದೆ ಏಕಪಕ್ಷೀಯವಾಗಿ ನಿರ್ಧರಿಸಿ, ಅಧಿಸೋಚನೆ ಹೊರಡಿಸಿ, ಬಲವಂತವಾಗಿ ನಮ್ಮನ್ನು ಹೊರದಬ್ಬಿಸಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವರದಿ ಓದಿದ್ದೀರಾ?: ಗುಲಬರ್ಗಾ ವಿವಿ ಕರ್ಮಕಾಂಡ; ಸಿಒಡಿ ತನಿಖೆಗೆ ಸಿಂಡಿಕೇಟ್ ನಿರ್ಧಾರ
ಕಳೆದ ಕೆಲವು ತಿಂಗಳುಳಿಂದ ತಮ್ಮ ಭೂಮಿಯನ್ನು ಮರಳಿ ಪಡೆಯಲು ನಾಗರಹೊಳೆಯ ಆದಿವಾಸಿಗಳು ಪ್ರಯತ್ನಿಸುತ್ತಿದ್ದಾರೆ. ಅವರ ಪ್ರಯತ್ನವನ್ನು ‘ಸಿಎನ್ಎಪಿಎ’ ಸಂಘಟನೆಯ ಪ್ರಣಬ್ ಡೋಲೆ ಶ್ಲಾಘಿಸಿದ್ದಾರೆ. ಜನರು ಹೊಸ ಹಾದಿಯನ್ನು ತುಳಿದಿದ್ದಾರೆ. ಮೊದಲ ಬಾರಿಗೆ, ಒಂದು ಸಮುದಾಯವು ನಮಗೆ ಮುಂದಿನ ದಾರಿಯನ್ನು ತೋರಿಸುತ್ತಿದೆ ಎಂದು ಹೇಳಿದ್ದಾರೆ.
“ಸಂರಕ್ಷಣೆ ಹೆಸರಿನ ಕೋಟೆ ಮಾದರಿಯು ಸ್ಥಳೀಯ ಪ್ರದೇಶಗಳನ್ನು ಹೆಚ್ಚು ಮಿಲಿಟರೀಕೃತ ಪ್ರಾದೇಶಿಕ ರಕ್ಷಣೆಗೆ ಒಳಪಡಿಸುತ್ತವೆ. ಆದಿವಾಸಿಗಳು ತಮ್ಮ ಸಾಮಾನ್ಯ ಸ್ಥಳಗಳು ಅಥವಾ ಪವಿತ್ರ ಸ್ಥಳಗಳನ್ನು ಬಳಸದಂತೆ ನಿಷೇಧಿಸಲಾಗಿದೆ. ಇದು ಪ್ರತಿಯೊಂದು ಮೀಸಲು ಪ್ರದೇಶದಲ್ಲಿಯೂ ನಡೆಯುತ್ತಿದೆ” ಎಂದು ಅವರು ಹೇಳಿದ್ದಾರೆ.
ಅರಣ್ಯವನ್ನು ಸಂರಕ್ಷಿಸಲು ಜನರನ್ನು ತಮ್ಮ ಕಾಡುಗಳಿಂದ ಹೊರಹಾಕುವುದು ಸೇರಿದಂತೆ ಕೆಲವು ಮುಖ್ಯವಾಹಿನಿಯ ವಾದಗಳು ಮತ್ತು ಪ್ರಯೋಗಗಳು ಹುಟ್ಟಿಕೊಂಡಿವೆ. ಇಂತಹ ವಾದಗಳ ಕುರಿತು ಉಲ್ಲಾಸ್ ಕಾರಂತ್ ಅವರು ನಾಗರಹೊಳೆಯಲ್ಲಿ ಸಂಶೋಧನೆ ಮಾಡಿದ್ದಾರೆ. ಕಳೆದ ಎರಡು ದಶಕಗಳಲ್ಲಿ ನಾವು ನೋಡಿರುವ ಈ ಮಾದರಿಗಳಲ್ಲಿ ಹಲವು ವಿಫಲವಾಗಿವೆ ಎಂದು ರಾಜಕೀಯ ಪರಿಸರ ತಜ್ಞ ನಿತಿನ್ ಡಿ ರೈ ಹೇಳಿದ್ದಾರೆ.
“ಬ್ರಿಟಿಷರು ಆದಿವಾಸಿಗಳನ್ನು ಹೇಗೆ ಶೋಷಿಸಿದರು ಮತ್ತು ಹೊರಹಾಕಿದರು ಎಂಬುದನ್ನು ಸಮಾಜಶಾಸ್ತ್ರಜ್ಞರು ಈಗಾಗಲೇ ಸಂಶೋಧಿಸಿದ್ದಾರೆ. ಹುಲಿಗಳ ಸಂಖ್ಯೆಯಲ್ಲಿನ ಹೆಚ್ಚಳವನ್ನು ಸರ್ಕಾರಗಳು ಕ್ರಮಗಳು ಮತ್ತು ಪರಿಸರ ನಿಯಮಗಳನ್ನು ದುರ್ಬಲಗೊಳಿಸುವಿಕೆಯನ್ನು ಸಮರ್ಥಿಸಿಕೊಳ್ಳಲು ಬಳಸಲಾಗುತ್ತಿದೆ” ಎಂದು ಅವರು ಹೇಳಿದ್ದಾರೆ.