ವಕ್ಫ್ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸಲು ಒತ್ತಾಯಿಸಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಪ್ರಧಾನಿ ನರೇಂದ್ರ ಮೊದಿ ಅವರಿಗೆ ಪತ್ರ ಬರೆದಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ‘ವಕ್ಫ್ ಮಂಡಳಿಯು ದೇಶದಾದ್ಯಂತ ರೈತರು, ಭೂಮಾಲೀಕರು, ದೇವಸ್ಥಾನಗಳು, ಟ್ರಸ್ಟ್ಗಳು ಮತ್ತು ಮಠಗಳ ಜಮೀನುಗಳ ಮೇಲೆ ಹಕ್ಕು ಸಾಧಿಸುವ ಅನಿಯಂತ್ರಿತ, ಸ್ಪಷ್ಟ ಉಲ್ಲಂಘನೆಯನ್ನು ಗಮನದಲ್ಲಿಟ್ಟುಕೊಂಡು ವಕ್ಫ್ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸಲು ಪ್ರಧಾನಿ ನರೇಂದ್ರ ಮೋದಿಜಿ ಅವರಿಗೆ ಪತ್ರ ಬರೆದಿದ್ದೇನೆ. ದೇಶದ ಎಲ್ಲ ಪ್ರಜೆಗಳಿಗೂ ಭೂಮಿಯ ಮೇಲೆ ಸಮಾನ ಹಕ್ಕಿದೆ. ವಕ್ಫ್ನ ಉದ್ದೇಶವು ಕಲ್ಯಾಣ ಮತ್ತು ಸಮಾಜ ಸೇವೆಯಾಗಿದ್ದರೆ, ಭಾರತವು ಜಾತ್ಯತೀತ ರಾಷ್ಟ್ರವಾಗಿರುವುದರಿಂದ ಪಕ್ಷಪಾತ ಮತ್ತು ಧಾರ್ಮಿಕ ತಾರತಮ್ಯವಿಲ್ಲದೆ ಇದನ್ನು
ಮಾಡಬೇಕಾಗಿದೆ. ದೇಶದ ಸಂಪನ್ಮೂಲ ಯಾವುದೇ ಸೀಮಿತ ಕೋಮಿಗೆ ಸೇರುವುದು ಜಾತ್ಯತೀತ ತತ್ವದ ವಿರುದ್ಧವಾಗಿರುತ್ತದೆ. ಆದ್ದರಿಂದ, ಅದನ್ನು ಸದ್ಬಳಕೆ ಮಾಡುವ ಸದುದ್ದೇಶದಿಂದ ಪ್ರಧಾನಿ ಅವರಿಗೆ ಮನವಿ ಸಲ್ಲಿಸಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬೇಲೆಕೇರಿ ಬಹುಕೋಟಿ ಹಗರಣದತ್ತ ಮಾಧ್ಯಮಗಳ ಮೌನವೇಕೆ?
ಈ ಹಿಂದೆ ಸಂಸದ ತೇಜಸ್ವಿ ಸೂರ್ಯ ಅವರು ವಿಜಯಪುರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳ ರೈತರ ಜಮೀನನ್ನು ವಕ್ಫ್ ಆಸ್ತಿಗೆ ಸೇರಿಸಲು ಬಂದಿರುವ ನೋಟಿಸ್ಗಳ ಕುರಿತು ವಕ್ಫ್ ತಿದ್ದುಪಡಿ ವಿಧೇಯಕದ ಜಂಟಿ ಸದನ ಸಮಿತಿ ಮುಖ್ಯಸ್ಥ ಜಗದಾಂಬಿಕಾ ಪಾಲ್ ಅವರಿಗೆ ಪತ್ರ ಬರೆದಿದ್ದರು.
‘ನೋಟಿಸ್ಗಳ ಹೊರತಾಗಿಯೂ ಹಲವರ ಆರ್ಟಿಸಿ, ಪಹಣಿಗಳಲ್ಲಿಯೂ ಯಾವುದೇ ಸಮರ್ಪಕ ಕಾನೂನುಗಳನ್ನು ಪಾಲಿಸದೇ ವಕ್ಫ್ ಆಸ್ತಿಗಳೆಂದು ತಿದ್ದುಪಡಿ ಮಾಡಲಾಗಿದ್ದು, ಈ ರೀತಿ ತೊಂದರೆಗೆ ಒಳಗಾಗಿರುವ ರೈತರ ನಿಯೋಗವನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಬೇಕು. ಇದರಿಂದ ವಕ್ಫ್ನಿಂದ ಆಗಿರುವ ಭೂಮಿ ಅತಿಕ್ರಮಣದ ನೇರಮಾಹಿತಿ ದೊರಕಲಿದೆ’ ಎಂದು ಮನವಿ ಮಾಡಿದ್ದರು.
